ಸಾಮಾನ್ಯ ಹುಡುಗನಾಗಿದ್ದ 'ಸುನೀಲ'ನ ಸ್ಫೂರ್ತಿದಾಯಕ 'ಸರಿಗಮಪ' ಜರ್ನಿ
'ಪ್ರಯತ್ನ ಪಟ್ಟರೆ ಯಾರು ಏನನ್ನು ಬೇಕಾದರೂ ಸಾಧಿಸಬಹುದು' ಅಂತ ಮತ್ತೆ ಸಾಬೀತು ಆಗಿದೆ. ಒಬ್ಬ ಸಾಮಾನ್ಯ ಹುಡುಗ ಸುನೀಲ್ ಇಂದು ಸರಿಗಮಪ ಎನ್ನುವ ದೊಡ್ಡ ಕಾರ್ಯಕ್ರಮವನ್ನ ಗೆದ್ದು ತೋರಿಸಿದ್ದಾನೆ.
ಜೀ ಕನ್ನಡದ 'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ಘಟಾನುಘಟಿಗಳ ನಡುವೆ ಒಬ್ಬ ಉತ್ತರ ಕರ್ನಾಟಕದ ಸಣ್ಣ ಹಳ್ಳಿಯ ಹುಡುಗ ಸುನೀಲ್ ವಿಜೇತನಾಗಿದ್ದಾನೆ.
ತಮ್ಮ ಹಳ್ಳಿಯಲ್ಲಿ ಯಾರಿಗೂ ಬೇಡವಾಗಿದ್ದ ಹುಡುಗ ಇವತ್ತು ಸ್ಟಾರ್ ಆಗಿದ್ದಾನೆ. ನನ್ನ ಕೈ ನಲ್ಲಿ ಆಗಲ್ಲ... ಇದೆಲ್ಲ ಮಾಡೋದು ಕಷ್ಟ... ಅಂತ ಕೈ ಕಟ್ಟಿ ಕೂರುವಂತಹ ನೂರಾರೂ ಜನರಿಗೆ ಇಂದು ಈ ಹುಡುಗ ಸ್ಫೂರ್ತಿ ಆಗಿದ್ದಾನೆ.
'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಪಡೆದ ಸುನೀಲ್ ಅವರ ಜರ್ನಿ ಇಲ್ಲಿದೆ ಓದಿ...

ಶಿವಮೊಗ್ಗದಲ್ಲಿ ಆಡಿಷನ್
ಮೊದಲು ತಮ್ಮ ಜಿಲ್ಲೆಯಲ್ಲೇ 'ಸರಿಗಮಪ' ಕಾರ್ಯಕ್ರಮದ ಆಡಿಷನ್ ಇದ್ದರೂ ಸುನೀಲ್ ಅದರಲ್ಲಿ ಭಾಗವಹಿಸಿರಲಿಲ್ಲ. ಆದರೆ ಶಿವಮೊಗ್ಗದಲ್ಲಿ ನಡೆದ ಆಡಿಷನ್ ನಲ್ಲಿ ಸುಮ್ಮನೆ ನೋಡೋಣ ಅಂತ ಹಾಡು ಹೇಳಿ ಬಂದಿದ್ದ.

ಮೊದಲ ಬಾರಿ ಬೆಂಗಳೂರಿಗೆ ಬಂದಿದ್ದು
ಸುನೀಲ್ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದು 'ಸರಿಗಮಪ' ಕಾರ್ಯಕ್ರಮಕ್ಕಾಗಿಯೇ. ಈ ಹಿಂದೆ ನೋಡಿಯೇ ಇರದ ಮಹಾನಗರಕ್ಕೆ ಬಂದು, ಎಲ್ಲಿ ಹೋಗಬೇಕು.. ಏನು ಮಾಡಬೇಕು.. ಅಂತ ತಿಳಿಯದೆ ರಸ್ತೆಯಲ್ಲಿ ಸಿಕ್ಕವರ ಬಳಿ ಅಡ್ರೆಸ್ ಕೇಳಿಕೊಂಡು ಸುನೀಲ್ 'ಜೀ ಕನ್ನಡ' ಸ್ಟುಡಿಯೋ ತಲುಪಿದ್ದ.

ಆರಂಭದಲ್ಲಿ...
ಆರಂಭದಲ್ಲಿ ಸುನೀಲ್ ಹೇಳಿಕೊಳ್ಳುವ ಮಟ್ಟದ ಹಾಡುಗರನಾಗಿರಲಿಲ್ಲ. ಮೆಗಾ ಆಡಿಷನ್ ನಲ್ಲಿ ಸುನೀಲ್ ಆಯ್ಕೆ ಆಗಿದ್ದೇ ಅನಿರೀಕ್ಷಿತವಾಗಿ. ಕಾರ್ಯಕ್ರಮದ ಮೊದಲೆರಡು ವಾರ ಸುನೀಲ್ ಭಯಪಟ್ಟು ಅಷ್ಟೊಂದು ಚೆನ್ನಾಗಿ ಹಾಡುತ್ತಿರಲಿಲ್ಲ.

ಕೋಡಗಾನ ಕೋಳಿ ನುಂಗಿತ್ತಾ...
ದಿನೇ ದಿನೇ ಸುನೀಲ್ ಹಾಡಿನಲ್ಲಿ ಪಕ್ವತೆ ಹೆಚ್ಚಾಯಿತು. 'ಕೋಡಗಾನ ಕೋಳಿ ನುಂಗಿತ್ತಾ..' ಹಾಡಿನ ಮೂಲಕ ಮೊದಲ ಬಾರಿಗೆ ಸುನೀಲ್ ಎಲ್ಲರ ಗಮನ ಸೆಳೆದ.

ತಾಯಿ-ತಂದೆ ಹಾಡು
ಸುನೀಲ್ ತಮ್ಮ ತಾಯಿಯ ಜೊತೆ ಡಾ.ರಾಜ್ ಹಾಡಿರುವ 'ತಾಯಿ.. ತಾಯಿ..' ಹಾಡನ್ನು ಹಾಡಿದ. ಜೊತೆಗೆ ಮುಂದಿನ ಸಂಚಿಕೆಯಲ್ಲಿ 'ಕೋಟಿಗೊಬ್ಬ 2' ಸಿನಿಮಾದ 'ಪರಪಂಚ ನೀನೇ..' ಅಂತ ತಂದೆಯ ಬಗ್ಗೆ ಹಾಡಿದ. ಈ ಎರಡು ಹಾಡುಗಳು ಸುನೀಲ್ ಜರ್ನಿಯ ಬೆಸ್ಟ್ ಹಾಡುಗಳು ಆಗಿದೆ. ಸುನೀಲ್ ಕಂಠದಲ್ಲಿ ಈ ಹಾಡನ್ನು ಕೇಳಿದವರಿಗೆ ಕಣ್ಣಲ್ಲಿ ನೀರು ಬಂದಿತ್ತು.

ಸೆಮಿ ಫೈನಲ್
ಚೆನ್ನಾಗಿ ಹಾಡುತ್ತಿದ್ದ ಸುನೀಲ್ ಸೆಮಿ ಫೈನಲ್ ಹತ್ತಿರ ಬರುತ್ತಿದ್ದ ಹಾಗೆ ಹಿಂದಿನ ಒಂದು ಸಂಚಿಕೆಯಲ್ಲಿ ಹಾಡುವಾಗ ಸಾಹಿತ್ಯ ಮರೆತು ಬಿಟ್ಟಿದ. ಇನ್ನೂ ಸೆಮಿ ಫೈನಲ್ ನಲ್ಲಿ ಸಿ.ಅಶ್ವಥ್ ಅವರ ಹಾಡು ಹಾಡಿದ್ದ ಸುನೀಲ್ ಫೈನಲ್ ಗೆ ಆಯ್ಕೆ ಆದ ಕೊನೆಯ ಸ್ಪರ್ಧಿ ಆಗಿದ್ದ.

ಫೈನಲ್ ಹಾಡು
ಫೈನಲ್ ನಲ್ಲಿ ಸುನೀಲ್ ಎಲ್ಲ ಸ್ಪರ್ಧಿಗಳಿಂತ ಆರಾಮಾಗಿ ತನ್ನ ಹಾಡನ್ನು ಮನಮುಟ್ಟುವಂತೆ ಹಾಡಿದ. 'ಮುತ್ತಿನ ಹಾರ' ಮತ್ತು 'ಶ್ರೀ ಮಂಜುನಾಥ' ಸಿನಿಮಾದ ಹಾಡನ್ನು ಹಾಡಿ ಸುನೀಲ್ 'ಸರಿಗಮಪ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ.

ಎಲ್ಲರ ಪ್ರೋತ್ಸಾಹ
ಸುನೀಲ್ ಗೆಲುವಿಗೆ ಬಹು ಮುಖ್ಯ ಕಾರಣ ಎಲ್ಲರ ಪ್ರೋತ್ಸಾಹ. ಅದರಲ್ಲಿಯೂ ತೀರ್ಪುಗಾರರಾದ ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಪ್ರತಿ ಹಂತದಲ್ಲಿಯೂ ಸುನೀಲ್ ಹಾಡನ್ನು ತಿದ್ದಿ ಅದ್ಭುತ ಗಾಯಕನಾಗಿ ಮಾಡಿದರು.

ಪ್ರಯತ್ನ ಪಡಿ..
ಏನಾದರೂ ಸಾಧಿಸುತ್ತೇನೇ ಅಂತ ಹೊರಟವನಿಗೆ ಹಣ, ಹೆಸರು, ಅಧಿಕಾರ, ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಪ್ರಯತ್ನ, ಶ್ರಮ, ಛಲ... ಅದೇ ಎಲ್ಲರನ್ನು ಮುಂದೆ ತೆಗೆದುಕೊಂಡು ಹೋಗುವುದು. ಇಂದು ಸುನೀಲ್ ಗೆಲ್ಲುವ ಹಾಗೆ ಮಾಡಿದ್ದು ಕೂಡ ಅದೇ. ಒಳ್ಳೆಯ ಮನಸ್ಸಿನಿಂದ ಪ್ರಯತ್ನ ಪಟ್ಟರೆ ಯಾರು ಏನನ್ನು ಬೇಕಾದರೂ ಗೆಲ್ಲಬಹುದು.


Click it and Unblock the Notifications











