'ಸೀತಾ ರಾಮ' ಧಾರಾವಾಹಿಯಲ್ಲಿ ಜ್ಯೋತಿ ಕಿರಣ್ ಹೊಸ ವರಸೆ
'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಸೂಜಿ ಎಂದೇ ಖ್ಯಾತಿ ಪಡೆದಿದ್ದ ನಟಿಯನ್ನು ಇಷ್ಟ ಪಡದವರೇ ಇಲ್ಲ. ಆ ಧಾರಾವಾಹಿಯಲ್ಲಿ ಎಲ್ಲಾ ವಿಚಾರಕ್ಕೂ ಮುಗ್ಧತೆಯಿಂದ ಮಾತನಾಡಿ ಎಲ್ಲರನ್ನು ನಗಿಸುತ್ತಿದ್ದ ಪಾತ್ರವದು. ಎರಡು ಜುಟ್ಟು ಹಾಕಿಕೊಂಡು ಆ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದು ನಟಿ ಜ್ಯೋತಿ ಕಿರಣ್. ಹಲವು ವರ್ಷಗಳ ಕಾಲ ದೊಡ್ಡ ಬ್ರೇಕ್ ಪಡೆದಿದ್ದರು.
ಮತ್ತೆ ಕಿರುತೆರೆಗೆ ಜ್ಯೋತಿ ಕಿರಣ್ ವಾಪಸ್ ಆಗಿದ್ದರು. ವಯಸ್ಸಿಗೂ ಮೀರಿದ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿರುವ ಜ್ಯೋತಿ ಕಿರಣ್ ಅವರು ಈಗ ಧಾರಾವಾಹಿಗಳಲ್ಲಿ ಬಹಳ ಬ್ಯುಸಿ ಆಗಿ ಬಿಟ್ಟಿದ್ದಾರೆ. ಮೈಸೂರು ಮೂಲದ ಜ್ಯೋತಿ ಕಿರಣ್, ಈಟಿವಿ ವಾಹಿನಿಯಲ್ಲಿ 'ಪಂಚರಂಗಿ' ಕಾರ್ಯಕ್ರಮಕ್ಕಾಗಿ ಟ್ಯಾಲೆಂಟ್ ಹಂಟ್ ಮಾಡುವಾಗ ಆಡಿಷನ್ನಲ್ಲಿ ಆಯ್ಕೆಯಾದವರು.

'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಸೂಜಿ ಪಾತ್ರದಲ್ಲಿ ಕಾಮಿಡಿ ಮಾಡಿ ಎಲ್ಲರ ಮನ ಗೆದ್ದಿದ್ದರು. ಇದಾದ ಬಳಿಕ 'ಪಾಪ ಪಾಂಡು' ಸೀರಿಯಲ್ ಮೂಲಕವೂ ಎಲ್ಲರನ್ನೂ ನಗಿಸಿದ್ದರು. ಈಗಲೂ ಈ ಎರಡೂ ಧಾರಾವಾಹಿಗಳು ಎಷ್ಟು ಫೇಮಸ್ಸೋ ಅಷ್ಟೇ ಫೇಮಸ್ಸು ಇದರಲ್ಲಿ ನಟಿಸಿದ ಕಲಾವಿದರು. ಇದಾದ ಬಳಿಕ ಮದುವೆ, ಮಗು, ಸಂಸಾರ ಎಂದು ಜ್ಯೋತಿ ಕಿರಣ್ ಬ್ಯುಸಿಯಾದರು. ಈಗ ಐದು ವರ್ಷಗಳ ಹಿಂದೆ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದರು.
ಕಿರುತೆರೆಯಲ್ಲಿ ಬ್ಯುಸಿ
ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಜ್ಯೋತಿ ಅವರು ತಾಯಿ ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು. ಚಿಕ್ಕವಯಸ್ಸಿನ ಜ್ಯೋತಿ ಅವರು ತಾಯಿ ಪಾತ್ರ ಮಾಡುವುದರ ಜೊತೆಗೆ ಈಗ ಸ್ಲಿಮ್ ಕೂಡ ಆದರು. 6 ವರ್ಷಗಳ ಕಾಲ ವರ್ಕೌಟ್, ಡಯಟ್ ಮಾಡಿ ಸ್ಲಿಮ್ ಆದ ಜ್ಯೋತಿ ಕಿರಣ್ ಅವರನ್ನು ಅಭಿಮಾನಿಗಳು ಸಂತೂರ್ ಮಮ್ಮಿ ಎಂದು ಕರೆಯುತ್ತಾರೆ. ಇನ್ನು ಜೆಮಿನಿ ವಾಹಿನಿಯಲ್ಲಿ ಮೂಡಿ ಬಂದ ಉಪ್ಪೆನ ಎಂಬ ಧಾರಾವಾಹಿಯಲ್ಲಿ ನಟಿ ಜ್ಯೋತಿ ಕಿರಣ್ ಅವರು, ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಕಾಮಿಡಿ ರೀಲ್ಸ್ ಮಾಡುವ ಸೂಜಿ
ಸೋಶಿಯಲ್ ಮೀಡಿಯಾದಲ್ಲಿ ಸದಾ ಕಾಮಿಡಿ ರೀಲ್ಸ್ಗಳನ್ನು ಮಾಡುವ ಜ್ಯೋತಿ ಕಿರಣ್ ಅವರು ಕಳೆದ ವರ್ಷ ಬಾರ್ಬಿ ಗರ್ಲ್ನಂತೆ ಫೋಟೋಶೂಟ್ ಮಾಡಿಸಿ ಅಭಿಮಾನಿಗಳನ್ನು ನಿಬ್ಬೆರಗಾಗಿಸಿದ್ದರು. ಆಗ ಎಲ್ಲರೂ ಇವರೇ ನಿಜವಾದ ಸಂತೂರ್ ಮಮ್ಮಿ ಎಂದು ಕಾಂಪ್ಲಿಮೆಂಟ್ ನೀಡಿದ್ದರು. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಅಂತರಪಟ' ಧಾರಾವಾಹಿಯ ನಾಯಕಿ ಆರಾಧನಾಳ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ದುರಾಸೆಯ ಅತ್ತಿಗೆ ಆದ ಜ್ಯೋತಿ
ವಯಸ್ಸಿಗೂ ಮೀರಿದ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಅಂತರಪಟ' ಧಾರಾವಾಹಿಯಲ್ಲಿ ಬಹಳ ಮುಗ್ಧ ಹೆಂಗಸಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗಂಡನ ಎದುರು ಉಸಿರಾಡಲೂ ಹೆದರುತ್ತಾರೆ. ಆದರೆ, ಈ ಧಾರಾವಾಹಿಯ ಜೊತೆಗೆ ಈಗ ಜೀ ಕನ್ನಡಕ್ಕೂ ಎಂಟ್ರಿಕೊಟ್ಟಿದ್ದಾರೆ. ಇದರಲ್ಲಿ ನಾಯಕಿಯ ಅತ್ತಿಗೆ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ದುಡ್ಡಿನ ಆಸೆಗೆ ನಾದಿನಿಯ ಮದುವೆ ಮಾಡಿಸಲು ಮುಂದಾಗಿದ್ದಾಳೆ.
ವಿಭಿನ್ನ ಪಾತ್ರದಲ್ಲಿ ನಟನೆ
ಜೀ ಕನ್ನಡ ವಾಹಿನಿಯಲ್ಲಿ ಕಳೆದ ವಾರ 'ಸೀತಾ ರಾಮ' ಧಾರಾವಾಹಿ ಶುರುವಾಗಿದೆ. ಇದರಲ್ಲಿ ನಾಯಕಿ ಮಗುವಿನ ತಾಯಿ ಆಗಿದ್ದು, ಗಂಡನಿಲ್ಲದೇ ಒಂಟಿಯಾಗಿದ್ದಾಳೆ. ಲಾಯರ್ ಒಬ್ಬ ನಾಯಕಿಯನ್ನು ಇಷ್ಟಪಟ್ಟಿದ್ದಾನೆ. ಹೀಗಾಗಿ ನಾಯಕಿಯ ಅತ್ತಿಗೆ ಈಗ ಹಣದಾಸೆಗೆ ನಾದಿನಿಗೆ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಇಷ್ಟು ದಿನ ಸಾಫ್ಟ್ ಪಾತ್ರಗಳಲ್ಲಿ ನಟಿಸಿದ್ದ ಜ್ಯೋತಿ ಕಿರಣ್ ಅವರು, ಈಗ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ರಿಯಾಕ್ಷನ್ ಹೇಗಿರುತ್ತೆ ಎಂದು ಕಾದು ನೋಡಬೇಕಿದೆ.


Click it and Unblock the Notifications











