ಪ್ರಶಾಂತ್ ಸಂಬರ್ಗಿಯನ್ನು ಹೊರಗಟ್ಟಿ: ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ಪದೇ ಪದೇ ಕನ್ನಡ ಪರ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿಯನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲು ಒಂದು ದಿನದ ಗಡವು ವಿಧಿಸಿರುವ ವಿವಿಧ ಕನ್ನಡ ಪರ ಹೋರಾಟಗಾರರು, ಇನ್ನೋವೇಟಿವ್ ಫಿಲ್ಮ್ ಸಿಟಿ ಸಿಟಿ ಮುಂದೆ ನಡೆಸುತ್ತಿರುವ ಆಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಶನಿವಾರ ಬೆಳಿಗ್ಗೆ 10 ಗಂಟೆ ಒಳಗೆ ಬಿಗ್ ಬಾಸ್ ರಿಯಾಲಿಟಿ ಶೋ ನಿಂದ ಕನ್ನಡ ವಿರೋಧಿ ಪ್ರಶಾಂತ್ ಸಂಬರ್ಗಿಯನ್ನು ಹೋರ ಹಾಕಬೇಕು ಒಂದು ವೇಳೆ ಶೋನಿಂದ ಸಂಬರ್ಗಿಯನ್ನು ಹೊರಹಾಕದಿದ್ದರೆ ಕನ್ನಡ ಹೋರಾಟಗಾರರೇ ಚಿತ್ರೀಕರಣ ನಡೆಯುತ್ತಿರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಒಳಗೆ ನುಗ್ಗಿ ಪ್ರಶಾಂತ್ ಸಂಬರ್ಗಿಗೆ ಬುದ್ಧಿ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆ ಸ್ಥಳಕ್ಕೆ ಕಿಚ್ಚ ಸುದೀಪ್ ಬರಬೇಕು ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಅಲ್ಲದೇ ಪದೇ ಪದೇ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕನ್ನಡ ಹಾಗೂ ಕನ್ನಡ ಪರ ಹೋರಾಟಗಾರ ಬಗ್ಗೆ ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿಸಿದರು ಹೋರಾಟಗಾರರು ಕಾರ್ಯಕ್ರಮ ಮುಖ್ಯಸ್ಥರ ವಿರುದ್ಧ ದಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಎರಡು ದಿನದಿಂದ ಪ್ರತಿಭಟನೆ
ಬಿಗ್ಬಾಸ್ ಮನೆಯ ಸೆಟ್ ಹಾಕಲಾಗಿರುವ ಬಿಡದಿಯ ಇನ್ನೋವೇಟಿವ್ ಫಿಲಂ ಸಿಟಿ ಗೇಟಿನ ಮುಂದೆ ನಿನ್ನೆಯೇ ಪ್ರತಿಭಟನೆ ಆರಂಭಿಸಿರುವ ವಿವಿಧ ಕನ್ನಡಪರ ಸಂಘಟನೆ ಹೋರಾಟಗಾರರು, ಬಿಗ್ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ, ಕನ್ನಡಪರ ಹೋರಾಟಗಾರರ ಬಗ್ಗೆ ಆಡಿರುವ ಮಾತನ್ನು ಖಂಡಿಸಿದ್ದು, ''ಬಗ್ ಬಾಸ್ ಮನೆಯಲ್ಲಿ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಒರ್ವ ಸ್ಪರ್ಧಿಯಾಗುದ್ದಾರೆ. ರಿಯಾಲಿಟಿ ಶೋನ ನಿಯಮಗಳಂತೆ ಆರೋಗ್ಯಕರ ಚರ್ಚೆ ಹಾಗೂ ಆಟಗಳ ಮೂಲಕ ಶೋನಲ್ಲಿ ಗೆಲುವು ಸಾಧಿಸಬೇಕು ಅದರೆ ಸಂಬರ್ಗಿ ಕೇವಲ ಕುಚೇಷ್ಟೆಗಳ ಮೂಲಕ ಕನ್ನಡಿಗರನ್ನು ಕೆಣಕುತ್ತಿದ್ದಾನೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಂಬರ್ಗಿಯನ್ನು ಹೊರಗಟ್ಟಿ: ಹೋರಾಟಗಾರರ ಒತ್ತಾಯ
ನಿನ್ನೆ ಮಾತನಾಡಿದ್ದ ಹೋರಾಟಗಾರ ವಿ.ನರಸಿಂಹಮೂರ್ತಿ ''ವಾಹಿನಿಯವರು, ಪ್ರಶಾಂತ್ ಸಂಬರ್ಗಿ ಯಿಂದ ಕನ್ನಡ ಪರ ಹೋರಾಟಗಾರರ ಕ್ಷಮೆ ಕೇಳಿಸುತ್ತೇವೆ ಎನ್ನುತ್ತಿದ್ದಾರೆ. ಕನ್ನಡ ವಿರೋಧಿ ಪ್ರಶಾಂತ್ ಸಂಬರ್ಗಿಯಿಂದ ಕೇವಲ ಕ್ಷಮೆ ಕೇಳಿಸಿದರೆ ಸಾಲದು ಆತನ್ನು ಬಿಗ್ ಬಾಸ್ ಸ್ಪರ್ದೆಯಿಂದ ಹೊರ ಹಾಕಬೇಕು ಇಲ್ಲವಾದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನೇ ಬ್ಯಾನ್ ಮಾಡುವಂತೆ ಹೋರಾಟ ಮಾಡಬೇಕಾಗುತ್ತದೆ ಎಂದಿದ್ದರು.

ಅಳುತ್ತಾ ಕೈಮಗಿದ ಪ್ರಶಾಂತ್ ಸಂಬರ್ಗಿ
ಇಂದು ಪ್ರಶಾಂತ್ ಸಂಬರ್ಗಿ ಬಿಗ್ಬಾಸ್ ಮನೆಯಿಂದಲೇ ಹೋರಾಟಗಾರರ ಕ್ಷಮೆ ಕೇಳಿದ್ದಾರೆ. ''ಆಟದ ರಭಸದಲ್ಲಿ ನಾನು ಹಾಗೆ ಹೇಳಿದ್ದೇನೆ. ನನ್ನ ಮಾತಿನಿಂದ ಕನ್ನಡ ಹೋರಾಟಗಾರರು, ಕನ್ನಡವನ್ನು ಪ್ರೀತಿ ಮಾಡುವ ಕನ್ನಡಿಗರು, ಅವರಿಗೇನಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಕರ್ನಾಟಕದ ಜನತೆಗೂ ನನ್ನ ಮಾತು, ಒಬ್ಬ ವ್ಯಕ್ತಿಯ ವಿರುದ್ಧವೇ ಹೊರತು, ಇಡೀ ಕನ್ನಡ ಹೋರಾಟಗಾರರ ವಿರುದ್ಧ ಆಗಿರಲಿಲ್ಲ. ದಯವಿಟ್ಟು ಕ್ಷಮೆ ಇರಲಿ. ರಾಜಣ್ಣ ಅವರನ್ನು ಮಾನಸಿಕವಾಗಿ ಕುಗ್ಗಿಸಿ ಮೇಲುಗೈ ಸಾಧಿಸಬೇಕು. ಆದರೆ ನನ್ನ ಮಾತು ಈ ಪರಿಣಾಮ ಬೀರುತ್ತದೆ ಎಂಬುದು ಗೊತ್ತಿರಲಿಲ್ಲ. ಕ್ಷಮಿಸಿ, ನನಗೆ ನನ್ನ ಮಾತಿನ ಬಗ್ಗೆ ಪಶ್ಚಾತಾಪ ಇದೆ. ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಮಾತಿನ ಭರದಲ್ಲಿ ಸಹಜವಾಗಿ ಬಂತು. ನಾನು ಮೇಲೋ, ಅವರು ಮೇಲೋ ಎಂಬ ಭರದಲ್ಲಿ ಮಾತುಕತೆ ನಡೆಯುತ್ತಿತ್ತು, ಆ ಭರದಲ್ಲಿ ಬಂದ ಮಾತುಗಳು ಅವು. ನನ್ನಿಂದ ತಪ್ಪಂದೂ ಆಗಿದೆ. ಅದಕ್ಕೆ ಕ್ಷಮೆ ಕೇಳುತ್ತಿದ್ದೇನೆ'' ಎಂದು ಕಣ್ಣೀರು ಹಾಕುತ್ತಾ ಕೈ ಮುಗಿದು ಕ್ಷಮೆ ಕೇಳಿದ್ದಾರೆ.

ಏನೆಂದಿದ್ದರು ಪ್ರಶಾಂತ್ ಸಂಬರ್ಗಿ?
ರೂಪೇಶ್ ರಾಜಣ್ಣ ಬಗ್ಗೆ ಆರ್ಯವರ್ಧನ್ ಗುರೂಜಿ ಬಳಿ ಮಾತನಾಡುತ್ತಾ, 'ನಾನು ಬಹಳ ಕನ್ನಡ ಹೋರಾಟ ಮಾಡಿದ್ದೇನೆ. ಅದಕ್ಕೆಲ್ಲ ನನ್ನ ಬಳಿ ದಾಖಲೆ ಇದೆ. ಪತ್ರಗಳಿವೆ, ಇಮೇಲ್ಗಳಿವೆ. ಎಲ್ಲ ದಾಖಲೆಗಳು ಇವೆ. ರೂಪೇಶ್, ದೊಡ್ಡ ದೊಡ್ಡ ಮಾತುಗಳನ್ನಾಡಿ, ತನ್ನನ್ನು ತಾನು ಬುದ್ಧಿವಂತ ಎಂದುಕೊಂಡಿದ್ದಾನೆ. ಅಂಥಹವರನ್ನೆಲ್ಲ ನಾನು ನೋಡಿದ್ದೇನೆ, ಈಗೇನು ಮಾಡಲ್ಲ, ಹೊರಗೆ ಹೋದ ಮೇಲೆ ನೋಡ್ಕೋತೀನಿ. ನಾನು ನನ್ನ ಜೀವನದಲ್ಲಿ ಎಲ್ಲ ಕನ್ನಡ ಹೋರಾಟಗಾರರಿಗೂ ಬಿಸಿ ಮುಟ್ಟಿಸಿದ್ದೀನಿ. ಒಬ್ಬರನ್ನೂ ಬಿಟ್ಟಿಲ್ಲ, ಸರಿಯಾಗಿ ಬಿಸಿ ಮುಟ್ಟಿಸಿದ್ದೀನಿ'' ' ಎಂದಿದ್ದರು. ಪ್ರಶಾಂತ್ ಸಂಬರ್ಗಿ ಆಡಿದ ಈ ಮಾತು ಎಪಿಸೋಡ್ನಲ್ಲಿ ಸಹ ಪ್ರಸಾರವಾಗಿತ್ತು. ಇದರ ವಿರುದ್ಧ ಈಗ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕನ್ನಡ ಪರ ಹೋರಾಟಗಾರರ ಬಗ್ಗೆ ಪ್ರಶಾಂತ್ ಸಂಬರ್ಗಿ ಆಡಿದ್ದ ಮಾತು ಪ್ರಸಾರವಾಗಿದ್ದ ವಿಡಿಯೋವನ್ನು ಇದೀಗ ವೂಟ್ ಅಪ್ಲಿಕೇಶನ್ನಿಂದ ಡಿಲೀಟ್ ಮಾಡಲಾಗಿದೆ.


Click it and Unblock the Notifications











