ತೆಲುಗು ಕಿರುತೆರೆಯಲ್ಲಿ 'ಮೇಘ ಸಂದೇಶ' ಸಾರುತ್ತಿರುವ 'ನನ್ನರಸಿ ರಾಧೆ'ಯ ಅಭಿನವ್ ಬಗ್ಗೆ ನಿಮಗೆಷ್ಟು ಗೊತ್ತು?
ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಕೆಲವರು ಹಿರಿತೆರೆಯಲ್ಲಿ ಗುರುತಿಸಿಕೊಂಡರೆ, ಇನ್ನು ಕೆಲವರು ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗುತ್ತಾರೆ. ನಟ ಅಭಿನವ್ ವಿಶ್ವನಾಥನ್ ಅದಕ್ಕೆ ಹೊರತಾಗಿಲ್ಲ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮೇಘ ಸಂದೇಶಂ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿರುವ ಆ ಕನ್ನಡದ ನಟನೇ ಅಭಿನವ್ ವಿಶ್ವನಾಥನ್.
ಹೌದು, ತಮ್ಮ ನಟನೆಯ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅಭಿನವ್ ವಿಶ್ವನಾಥನ್ ಅವರ ನಟನಾ ಪಯಣ ಶುರುವಾಗಿದ್ದು 'ನನ್ನರಸಿ ರಾಧೆ' ಧಾರಾವಾಹಿಯ ಮೂಲಕ. 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯ ರಾಥೋಡ್ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈತ ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ಮೋಡಿ ಮಾಡಿದ್ದರು.

'ನನ್ನರಸಿ ರಾಧೆ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಅಭಿನವ್ ಮತ್ತೆ ಕಾಣಿಸಿಕೊಂಡಿದ್ದು ಪ್ರದ್ಯಮ್ನ ಪಾತ್ರದ ಮೂಲಕ. ಹೌದು, ಸಣ್ಣ ಗ್ಯಾಪ್ನ ನಂತರ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದ ಅಭಿನವ್ ಅಭಿನಯಿಸಿದ್ದು 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ. 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ನಾಯಕ ಪ್ರದ್ಯುಮ್ನನಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಅಭಿನವ್ ಸದ್ಯ ಬ್ಯುಸಿಯಾಗಿರುವುದು ತೆಲುಗು ಕಿರುತೆರೆಯಲ್ಲಿ.
ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮೇಘಸಂದೇಶಂ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ಅಭಿನವ್. ಸಂತಸದ ವಿಚಾರವೆಂದರೆ 'ಮೇಘ ಸಂದೇಶಂ' ಧಾರಾವಾಹಿಯು ಕನ್ನಡಕ್ಕೆ ಡಬ್ ಆಗಿ ಪ್ರಸಾರಗೊಳ್ಳುತ್ತಿದೆ. ಹೌದು, 'ಮೇಘಸಂದೇಶಂ' ಧಾರಾವಾಹಿಯು 'ಮೇಘ ಸಂದೇಶ' ಎನ್ನುವ ಹೆಸರಿನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಅಭಿನವ್ ವಿಶ್ವನಾಥನ್ ಮುಂದೆ ಮಾಡೆಲಿಂಗ್ ಲೋಕದತ್ತ ಮುಖ ಮಾಡಿದ್ದರು. ಅಭಿನವ್ ವಿಶ್ವನಾಥನ್ ಕೆಲವೊಂದು ಫ್ಯಾಷನ್ ಶೋಗಳಲ್ಲಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ. ಮೊದಲಿನಿಂದಲೂ ನಟನಾಗಬೇಕು ಎಂಬ ಕನಸು ಕಂಡಿದ್ದ ಅಭಿನವ್ ಅಗಸ್ತ್ಯ ರಾಥೋಡ್ ಆಗಿ ಕಿರುತೆರೆ ಪಯಣ ಶುರು ಮಾಡಿದರು.
ತದ ನಂತರ 'ತ್ರಿಪುರ ಸುಂದರಿ' ಧಾರಾವಾಹಿಯ ಪ್ರದ್ಯುಮ್ನನಾಗಿ ತೆರೆಯ ಮೇಲೆ ಮಿಂಚಿದ ಅಭಿನವ್ ಇದೀಗ ತೆಲುಗಿನ ಜೊತೆಗೆ ಕನ್ನಡ ಕಿರುತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸುತ್ತಿದ್ದಾರೆ. ಇದರ ಜೊತೆಗೆ ಮುಂದೊಂದು ದಿನ ಅಭಿನವ್ ವಿಶ್ವನಾಥನ್ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರೆ ಆಶ್ಚರ್ಯವಿಲ್ಲ.


Click it and Unblock the Notifications











