"ಭೂಮಿಗೆ ಬಂದ ಭಗವಂತ ಶುರುವಾಗಲು 3-4 ವರ್ಷ ಬೇಕಾಯ್ತು.. ಭಗವಂತನ ಪಾತ್ರ ಖುಷಿ ಕೊಟ್ಟಿದೆ" ಎಂದ ಕಾರ್ತಿಕ್ ಸಾಮಗ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಭಗವಂತನ ಪಾತ್ರಕ್ಕೆ ಜೀವ ತುಂಬುತ್ತಿರುವ ಕಾರ್ತಿಕ್ ಸಾಮಗ ಕಿರುತೆರೆ ವೀಕ್ಷಕರ ನೆಚ್ಚಿನ ಪೋಷಕ ನಟ ಎಂದರೆ ತಪ್ಪಾಗಲಾರದು. ಜೀ ಕುಟುಂಬ ಅವಾರ್ಡ್ಸ್ ಇತ್ತೀಚೆಗಷ್ಟೇ ನಡೆದಿದ್ದು, ಅದರಲ್ಲಿ ಕಾರ್ತಿಕ್ ಸಾಮಗ ನೆಚ್ಚಿನ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.
"ನೆಚ್ಚಿನ ಪೋಷನ ನಟ ಪ್ರಶಸ್ತಿ ಪಡೆದಿರುವುದಕ್ಕೆ ನನಗಂತೂ ತುಂಬಾ ಖುಷಿಯಾಗಿದೆ. ಈ ಅವಾರ್ಡ್ ನನಗೆ ಬಂದಿದೆ ಎಂದರೆ ಅದಕ್ಕೆ ಮೂಲ ಕಾರಣವಾದವರು ತುಂಬಾ ಜನ ಇದ್ದಾರೆ.

ಮೊದಲಿಗೆ ಜೀ ವಾಹಿನಿಗೆ ಥ್ಯಾಂಕ್ಸ್ ಹೇಳಲು ಇಷ್ಟಪಡುತ್ತೇನೆ. ಯಾಕೆಂದರೆ 'ಭೂಮಿಗೆ ಬಂದ ಭಗವಂತ' ಧಾರಾವಾಹಿ ಶುರುವಾಗುವುದಕ್ಕೆ ಮೂರು ನಾಲ್ಕು ವರ್ಷಗಳು ಬೇಕಾಯಿತು. ಅಷ್ಟು ವರ್ಷದ ಕನಸಿದೆ. ಅಲ್ಲಿಂದಲೂ ಇಲ್ಲಿಯ ತನಕ ಭಗವಂತನ ಪಾತ್ರಕ್ಕೆ ನನ್ನನ್ನೇ ಆಯ್ಕೆ ಮಾಡಿಕೊಂಡು ಅದ್ಭುತವಾದ ಪಾತ್ರ ಕೊಟ್ಟಿದ್ದಾರೆ. ಖುಷಿಯಾಗಿದೆ" ಎಂದು ಹೇಳಿದ್ದಾರೆ.
"ಭಗವಂತನ ಪಾತ್ರ ಕೊಟ್ಟದ್ದಕ್ಕೆ ರಾಘವೇಂದ್ರ ಹುಣಸೂರು ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಇದರ ಜೊತೆಗೆ ಸುಧೀಂದ್ರ ಸರ್, ಉಪ್ಪಿ ಸರ್, ಜಯಂತ್ ಸರ್, ರಾಘು, ನವಿಲುಗರಿ ಸೋಮು ಇವರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಇದರ ನಡುವೆ ಯಾರಾದ್ದಾದರೂ ಹೆಸರು ಬಾಕಿಯಾದರೆ ಕ್ಷಮೆ ಇರಲಿ" ಎಂದು ಕಾರ್ತಿಕ್ ಸಾಮಗ ಸಂತಸವನ್ನು ಹಂಚಿಕೊಂಡಿದ್ದಾರೆ.

ಭಗವಂತನಾಗಿ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಕಾರ್ತಿಕ್ ಸಾಮಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ಶ್ರೀಗುರು ರಾಘವೇಂದ್ರ' ಧಾರಾವಾಹಿಯಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಕಾರ್ತಿಕ್ ಸಾಮಗ ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಗಿಣಿ' ಧಾರಾವಾಹಿಯಲ್ಲಿ ಖಳನಾಯಕನಾಗಿ ಮೋಡಿ ಮಾಡಿದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಕ್ಕ' ಧಾರಾವಾಹಿಯಲ್ಲಿ ಆಕಾಶ್ ಪಾತ್ರದ ಮೂಲಕ ಗಮನ ಸೆಳೆದ ಕಾರ್ತಿಕ್ ಸಾಮಗ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹರಹರ ಮಹಾದೇವ' ಧಾರಾವಾಹಿಯಲ್ಲಿ ಚಂದ್ರನಾಗಿ ಮಿಂಚಿದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶನಿ' ಧಾರಾವಾಹಿಯಲ್ಲಿ 'ಇಂದ್ರ' ಆಗಿ ಅಭಿನಯಿಸಿದ್ದ ಕಾರ್ತಿಕ್ ಅವರು ಇದೀಗ ಭಗವಂತನಾಗಿ ಕಿರುತೆರೆ ವೀಕ್ಷಕರಿಗೆ ಮಗದಷ್ಟು ಹತ್ತಿರವಾಗಿದ್ದಾರೆ.
ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಕಾರ್ತಿಕ್ ಸಾಮಗ ಹದಿನೈದಕ್ಕೂ ಹೆಚ್ಚಿನ ಸಿನಿಮಾಗಳಿಗೆ ಕಂಠದಾನ ಮಾಡಿ ಸೈ ಎನಿಸಿಕೊಂಡಿರುವ ಪ್ರತಿಭೆ ಎನ್ನಬಹುದು. ಇನ್ನು ಭರತನಾಟ್ಯ ಕಲಾವಿದರೂ ಆಗಿರುವ ಇವರು ರಂಗಭೂಮಿಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು ಹೌದು.


Click it and Unblock the Notifications











