Bigg Boss Kannada 10: ಬಿಗ್ ಬಾಸ್ ಮನೆ ಬಗ್ಗೆ ಸೃಷ್ಟಿಯಾಗಿದ್ದ ಊಹಾಪೋಹಕ್ಕೆ ಬ್ರೇಕ್ ಹಾಕಿದ ನಟ!
ಹೌದು, ನಟ ರಾಜೇಶ್ ಧ್ರುವ ಯಾರಿಗೆ ಗೊತ್ತಿಲ್ಲ ಹೇಳಿ? ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ ತಮ್ಮ ಅಖಿಲ್ ಎನ್ನುವ ಪಾತ್ರವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟವರು. 'ಅಗ್ನಿಸಾಕ್ಷಿ' ಒಂದು ಕಾಲದ ಬಹಳ ಪಾಪುಲರ್ ಧಾರಾವಾಹಿ. ಅದರಲ್ಲಿ ಅಖಿಲ್ ಪಾತ್ರವನ್ನು ಮಾಡಿದ ನಟ ರಾಜೇಶ್ ಧ್ರುವ ಅದಾದ ಮೇಲೆ ಅಖಿಲ್ ಎಂದೇ ಫೇಮಸ್ ಆಗಿದ್ದರು.
ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಣ್ಣ ತಂಗಿ' ಧಾರಾವಾಹಿಯಲ್ಲಿ ನಾಯಕ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ರಾಜೇಶ್ ಧ್ರುವ ಮುಂದೆ ಬಾಲಾಜಿ ಫೋಟೋ ಸ್ಟುಡಿಯೋ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಹಿರಿತೆರೆಗೂ ಇವರು ಕಾಲಿಟ್ಟರು. ಆ ಸಿನಿಮಾದ ನಾಯಕನ ಜೊತೆಗೆ ನಿರ್ದೇಶಕರಾಗಿಯೂ ಇವರು ಕಾಣಿಸಿಕೊಂಡಿದ್ದರು.

ಎಲ್ಲಾ ಕಲಾವಿದರಿಗೂ ಸಿಕ್ಕಂತೆ ಇವರಿಗೂ ಬಿಗ್ ಬಾಸ್ ಮನೆಗೆ ಪ್ರವೇಶಕ್ಕೆ ಆಫರ್ ಬಂದಿತ್ತಂತೆ. ಈ ಬಗ್ಗೆ ಬಹಳಷ್ಟು ಊಹಾಪೋಹಗಳಿವೆ. ನಟ ರಾಜೇಶ್ ಧ್ರುವ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಹೋಗಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದರ ಬಗೆಗಿನ ಎಲ್ಲಾ ಊಹಾಪೋಹಗಳಿಗೆ ಇದೀಗ ರಾಜೇಶ್ ಧ್ರುವ ಅವರೇ ತೆರೆ ಎಳೆದಿದ್ದಾರೆ.
"ಹೌದು ನನಗೂ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಅವಕಾಶ ಸಿಕ್ಕಿದ್ದು ನಿಜ. ಆದರೆ, ನಾನು ಸದ್ಯಕ್ಕೆ ಬೇಡ ಎಂದಿದ್ದೇನೆ. ಏಕೆಂದರೆ ನನಗೆ ಮತ್ತೆ ಕಿರುತೆರೆಯಲ್ಲಿ ಸಕ್ರಿಯವಾಗಲು ಒಂದೊಳ್ಳೆಯ ಪಾತ್ರ ಸಿಕ್ಕಿದೆ. ಆ ಪಾತ್ರವನ್ನು ಕೈಗೆತ್ತಿಕೊಂಡಿದ್ದೇನೆ. ಹಾಗಾಗಿ ಬಿಗ್ ಬಾಸ್ಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ. ಕಿರುತೆರೆಯಿಂದ ಹಿರಿತೆರೆಗೆ ಹೋದ ನನಗೆ ಮತ್ತೆ ಕಿರುತೆರೆಯಲ್ಲಿ ಪ್ರವೇಶ ಸಿಗುತ್ತಿರುವುದು ಖುಷಿಯ ವಿಚಾರ. ಹಾಗಾಗಿ ನಾನು ಬಿಗ್ ಬಾಸ್ಗೆ ನೋ ಎಂದಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ನಟ ರಾಜೇಶ್ ಧ್ರುವ ಬಿಗ್ ಬಾಸ್ ಗೆ ಹೋಗುವುದಿಲ್ಲ ಎಂಬುದು ಅವರಿಂದಲೇ ತಿಳಿದು ಬಂದಿದೆ.
'ಬದುಕು' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ರಾಜೇಶ್ ಧ್ರುವ ಮುಂದೆ 'ಆಕಾಶದೀಪ', 'ಒಂದೇ ಗೂಡಿನ ಹಕ್ಕಿಗಳು', 'ಮಿಲನ', 'ಪ್ರೀತಿ ಎಂದರೇನು?', 'ಸರಯೂ', 'ಅಗ್ನಿಸಾಕ್ಷಿ', 'ನಂದಿನಿ', 'ಅರಮನೆ ಗಿಳಿ', 'ಅಣ್ಣ ತಂಗಿ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಂದಿಗೂ 'ಅಗ್ನಿಸಾಕ್ಷಿ' ಧಾರಾವಾಹಿಯ ಅಖಿಲ್ ಆಗಿಯೇ ಗುರುತಿಸಿಕೊಂಡ ಹ್ಯಾಂಡ್ ಸಮ್ ಹುಡುಗ.

ರಾಜೇಶ್ ಧ್ರುವ ನಟಿಸಿ, ನಿರ್ದೇಶಿಸಿರುವ 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಸಿನಿಮಾ ಪ್ರೇಮಿಗಳ ಗಮನ ಸೆಳೆದಿತ್ತು. ಇಷ್ಟೇ ಅಲ್ಲದೆ 'ಅನಿರೀಕ್ಷಿತ', 'ಆಮಂತ್ರಣ', 'ರೌದ್ರಂ', 'ತದ ನಂತರ' ಎಂಬ ಕಿರುಚಿತ್ರಗಳಿಗೆ ಸ್ವತಃ ತಾವೇ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.


Click it and Unblock the Notifications











