'ಶ್ರೀಗೌರಿ'ಗೆ ಖಳನಾಯಕನಾಗಿ ಮತ್ತೆ ಕಿರುತೆರೆಗೆ ಮರಳಿದ 'ಅಗ್ನಿಸಾಕ್ಷಿ'ಯ ರಾಜೇಶ್ ಧ್ರುವ
ರಿಯಾಲಿಟಿ ಶೋಗಳ ಜೊತೆಗೆ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಸಾಲಿಗೆ ಕಲರ್ಸ್ ಕನ್ನಡ ಸೇರಿದೆ. ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಶುರುವಾಗಲಿದೆ.
ಹೌದು, 'ಶ್ರೀಗೌರಿ' ಹೆಸರಿನ ಧಾರಾವಾಹಿಯೊಂದು ನಿನ್ನೆ(ಜನವರಿ 29) ರಾತ್ರಿಯಿಂದ 8.30ಕ್ಕೆ ಶುರುವಾಗಲಿದ್ದು ಅದರಲ್ಲಿ ನಾಯಕನಾಗಿ ಕಾರ್ತಿಕ್ ಅತ್ತಾವರ್ ಹಾಗೂ ನಾಯಕಿಯಾಗಿ ಅಮೂಲ್ಯ ಗೌಡ ನಟಿಸುತ್ತಿದ್ದಾರೆ.

ಇನ್ನು ಇದರ ಜೊತೆಗೆ 'ಶ್ರೀಗೌರಿ' ಧಾರಾವಾಹಿಯಲ್ಲಿ ಮಗದೊಂದು ಪಾತ್ರದ ಮೂಲಕ ರಾಜೇಶ್ ಧ್ರುವ ಗಮನ ಸೆಳೆಯಲಿದ್ದಾರೆ. ನೆಗೆಟಿವ್ ಛಾಯೆಯಿರುವ ಪಾತ್ರದ ಮೂಲಕ ರಾಜೇಶ್ ಧ್ರುವ ಕಿರುತೆರೆಗೆ ಮರಳಲಿದ್ದಾರೆ. 'ಶ್ರೀಗೌರಿ' ಧಾರಾವಾಹಿಯಲ್ಲಿ ಖಳನಾಯಕ ಶರಣ್ ಹೆಗಡೆ ಪಾತ್ರದಲ್ಲಿ ಅಭಿನಯಿಸಲಿರುವ ರಾಜೇಶ್ ಧ್ರುವ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಜೊತೆಗೆ ತಮ್ಮ ಖುಷಿಯನ್ನು ಫಿಲ್ಮಿಬೀಟ್ ಜೊತೆಗೆ ಸಂತಸದಿಂದಲೇ ಹಂಚಿಕೊಂಡಿದ್ದಾರೆ ರಾಜೇಶ್ ಧ್ರುವ.
"ಪರ್ಸನಲಿ ನನಗೆ ಅಭಿನಯಿಸುವುದಕ್ಕೆ ಸಖತ್ ಮಜಾ ಕೊಟ್ಟಿರುವಂತಹ ಪಾತ್ರ. ಯಾವಾಗಲೂ ಹೈಪರ್ ಆ್ಯಕ್ಟೀವ್ ಆಗಿರಬೇಕು. ನಾನು ಈ ಹಿಂದೆ ಈ ತರಹದ ರೋಲ್ ಯಾವ ಧಾರಾವಾಹಿಯಲ್ಲೂ ಮಾಡಿರಲಿಲ್ಲ. ಕಾಸ್ಟ್ಯೂಮ್ ಆಗಿರಲಿ, ಮ್ಯಾನರಿಸಂ ಆಗಲಿ ಎಲ್ಲವೂ ಮಜವಾಗಿದೆ. ನಟನೆ ಮಾಡುವವರಿಗೆ ಎಲ್ಲರಿಗೂ ಈ ತರಹದ ಪಾತ್ರ ಮಾಡುವುದಕ್ಕೆ ಆಸೆ ಇದ್ದೆ ಇರುತ್ತದೆ. ಅದು ನನಗೆ ಸಿಕ್ಕಿದ್ದು ನನ್ನ ಇಷ್ಟು ವರ್ಷದ ಅನುಭವಕ್ಕೆ ಸಿಕ್ಕಂತಹ ಅದೃಷ್ಟ" ಎಂದು ಶರಣ್ ಹೆಗಡೆ ಪಾತ್ರದ ಬಗ್ಗೆ ರಾಜೇಶ್ ಧ್ರುವ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ "ಈ ಧಾರಾವಾಹಿಯಲ್ಲಿ ನನ್ನ ಹಾಗೂ ನಾಯಕ ನಟನ ಮಧ್ಯೆ ಇರುವಂತಹ ಕೆಲವು ಸೀನ್ಗಳಂತೂ ನಿಜವಾಗಿಯೂ ಅದ್ಭುತವಾದುದು. ಆ ಸೀನ್ಗಳು ಒಂದು ಕ್ಷಣಕ್ಕೆ ಮೈ ಜುಮ್ ಅನ್ನಿಸುವ ಹಾಗೆ ಮಾಡುತ್ತದೆ. ನಾನು ಕೂಡಾ ಈ ಧಾರಾವಾಹಿ ಯಾವಾಗ ಪ್ರಸಾರ ಶುರುವಾಗುತ್ತದೋ ಎಂದು ಕಾಯುತ್ತಿದ್ದೆ. ಇದೀಗ ಆ ದಿನ ಬಂದು ಬಿಟ್ಟಿದೆ. ಈಗಾಗಲೇ ಶ್ರೀಗೌರಿ ಪ್ರಸಾರ ಶುರುವಾಗಿದ್ದು ಮತ್ತೊಮ್ಮೆ ನಿಮ್ಮನ್ನು ಭಿನ್ನ ಪಾತ್ರದ ಮೂಲಕ ರಂಜಿಸಲು ನಾನು ತಯಾರಾಗಿದ್ದೇನೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ರಾಜೇಶ್ ಧ್ರುವ ಹೇಳಿಕೊಂಡಿದ್ದಾರೆ.
"ಪೋಷಕ ಪಾತ್ರಗಳ ಮೂಲಕ ಕಿರುತೆರೆಗೆ ಕಾಲಿಟ್ಟ ನಾನು ಅಣ್ಣ ತಂಗಿ ಧಾರಾವಾಹಿಯಲ್ಲಿ ನಾಯಕನ ಸರಿಸಮಾನಾದ ಪಾತ್ರದಲ್ಲಿ ನಟಿಸಿದ್ದೆ. ಒಂದಷ್ಟು ಸಂಚಿಕೆಗಳಲ್ಲಿ ಅಭಿನಯಿಸಿದ್ದ ನಾನು ಮುಂದೆ ಕಾರಣಾಂತರಗಳಿಂದ ಆ ಪಾತ್ರದಿಂದ, ಧಾರಾವಾಹಿಯಿಂದ ಹೊರಬಂದೆ. ತದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ನಾನು ಇದೀಗ ಖಳನಾಯಕನಾಗಿ ಕಮ್ ಬ್ಯಾಕ್ ಮಾಡುತ್ತಿದ್ದೇನೆ. ಮೊದಲ ಬಾರಿಗೆ ಖಳನಾಯಕನ ಪಾತ್ರವನ್ನು ಮಾಡುತ್ತಿದ್ದೇನೆ. ಇಷ್ಟು ದಿನ ಲವರ್ ಬಾಯ್ ಆಗಿ ನನ್ನನ್ನು ತೆರೆ ಮೇಲೆ ನೋಡಿದ್ದೀರಿ. ಇದೀಗ ವಿಲನ್ ಆಗಿ ಅಬ್ಬರಿಸಲಿದ್ದೇನೆ. ಅದಕ್ಕೆ ನೀವು ಸಾಕ್ಷಿಯಾಗಲಿದ್ದೀರಿ" ಎಂದು ಸಂತೋಷವನ್ನು ರಾಜೇಶ್ ಧ್ರುವ ಹಂಚಿಕೊಂಡಿದ್ದಾರೆ.
'ಬದುಕು' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ರಾಜೇಶ್ ಧ್ರುವ ಮುಂದೆ 'ಆಕಾಶದೀಪ', 'ಒಂದೇ ಗೂಡಿನ ಹಕ್ಕಿಗಳು', 'ಮಿಲನ', 'ಪ್ರೀತಿ ಎಂದರೇನು?', 'ಸರಯೂ', 'ಅಗ್ನಿಸಾಕ್ಷಿ', 'ನಂದಿನಿ', 'ಅರಮನೆ ಗಿಳಿ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಕಿರುಚಿತ್ರ ಕ್ಷೇತ್ರದಲ್ಲೂ ರಾಜೇಶ್ ಧ್ರುವ ಮುಂಚೂಣಿಯಲ್ಲಿದ್ದಾರೆ. 'ಅನಿರೀಕ್ಷಿತ', 'ಆಮಂತ್ರಣ', 'ರೌದ್ರಂ', 'ತದ ನಂತರ' ಎಂಬ ಕಿರುಚಿತ್ರಗಳಿಗೆ ರಾಜೇಶ್ ಧ್ರುವ ಅವರೇ ಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಇನ್ನು 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಎನ್ನುವ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ಗೂ ಪಾದಾರ್ಪಣೆ ಕಿರುತೆರೆ ನಟ ರಾಜೇಶ್ ಧ್ರುವ ಮಾಡಿದ್ದರು. ಮಾತ್ರವಲ್ಲದೇ ಈ ಸಿನಿಮಾವನ್ನು ಅವರೇ ನಿರ್ದೇಶನ ಕೂಡ ಮಾಡಿದ್ದರು.


Click it and Unblock the Notifications











