"ಆ ವ್ಯಕ್ತಿ ದೂರಾದಾಗ ಕೆಟ್ಟ ನಿರ್ಧಾರ ಕೈಗೊಂಡು ಆಸ್ಪತ್ರೆ ಸೇರಿದ್ದೆ"; ಅನುಪಮಾ ಗೌಡ
ನಟಿ, ನಿರೂಪಕಿ ಅನೂಪಮಾ ಗೌಡ ಇತ್ತೀಚೆಗೆ ಆರ್ಜೆ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಭಾಗಿ ಆಗಿದ್ದರು. ತಮ್ಮ ವೈಯಕ್ತಿಕ ಜೀವನ, ಸಿನಿಮಾ-ಕಿರುತೆರೆ ಎಲ್ಲದರ ಬಗ್ಗೆಯೂ ಮಾತನಾಡಿದ್ದರು. ಇದೇ ವೇಳೆ ತಮ್ಮ ಲವ್ ಬ್ರೇಕಪ್ ಬಗ್ಗೆ ಕೂಡ ಮೌನ ಮುರಿದಿದ್ದಾರೆ. ಆ ವ್ಯಕ್ತಿ ಯಾರು ಎಂದು ಹೇಳದೇ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ.
"ನಾನು 'ಅಕ್ಕ' ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದೆ. ಅದರಲ್ಲಿ ಒಂದು ನೆಗೆಟಿವ್ ರೋಲ್. ಅದು ನನ್ನನ್ನು ಬಹಳ ಪ್ರಭಾವಿಸಿತ್ತು. ಅದೇ ರೀತಿ ನಾನು ನಿಜಜೀವನದಲ್ಲಿ ಆಡಲು ಆರಂಭಿಸಿದೆ. ಆ ವ್ಯಕ್ತಿ ಇಲ್ಲದೇ ನನ್ನ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದುಕೊಂಡಿದ್ದೆ. ಹಾಗಾಗಿ ಆತ ದೂರಾದಾಗ ಖಿನ್ನತೆಗೆ ಜಾರಿ ಬಹಳ ನೋವು ಅನುಭವಿಸಿದೆ" ಎಂದು ಅನುಪಮಾ ಗೌಡ ನೆನಪಿಸಿಕೊಂಡಿದ್ದಾರೆ.

ಮಾತು ಮುಂದುವರೆಸಿರುವ ಅನುಪಮಾ "ನಮ್ಮ ರಿಲೇಷನ್ಶಿಪ್ ಬಹಳ ಟಾಕ್ಸಿಕ್ ಎನಿಸೋಕೆ ಶುರುವಾಗಿತ್ತು. ಇಬ್ಬರೂ ಬಹಳ ಕಿರಚಾಡುವುದು, ಅದರು ಅತಿರೇಕಕ್ಕೆ ಹೋಗಿತ್ತು. ಪದೇ ಪದೆ ಜಗಳ ನಡೆದು ಬಳಿಕ ಒಂದಾಗುತ್ತಿದ್ದೆವು. ಮನೆಯ ಕಷ್ಟ, ಡೇಟ್ಸ್ ಸಮಸ್ಯೆ, ಹಣಕಾಸಿನ ಸಮಸ್ಯೆ ಎಲ್ಲಾ ಗೊಂದಲದ ನಡುವೆ ನಮ್ಮ ರಿಲೇಷನ್ಶಿಪ್ ಹಾಳಾಯಿತು. ಈಗ ಅದು ಒಳ್ಳೆಯದೇ ಆಯಿತು ಎನಿಸುತ್ತದೆ" ಎಂದಿದ್ದಾರೆ.
ಒಬ್ಬ ವ್ಯಕ್ತಿಯನ್ನು ಪ್ರೀತಿಸಿದಾಗ ಯಾವುದೇ ಕಾರಣಕ್ಕೂ ಅವರನ್ನು ದ್ವೇಷಿಸಬಾರದು. ನಾನಂತೂ ಆ ತಪ್ಪು ಮಾಡಲ್ಲ. ಯಾವುದೋ ಕಾರಣಕ್ಕೆ ದೂರಾದರೂ ಅವರನ್ನು ಹೇಗೆ ದ್ವೇಷಿಸೋಕೆ ಸಾಧ್ಯ? ಮುಂದೆ ಇಬ್ಬರೂ ಸ್ನೇಹಿತರಾಗಿ ಇರೋಕೆ ಸಾಧ್ಯವಿಲ್ಲ, ಆದರೂ ದ್ವೇಷಿಸೋದು ಹೇಗೆ? ಎಂದು ಅನುಪಮಾ ಪ್ರಶ್ನಿಸಿದ್ದಾರೆ.
"ಆ ವ್ಯಕ್ತಿ ದೂರಾದಾಗ ನನಗೆ ಒಂದು ಪ್ರಪಂಚವೇ ಕಟ್ ಆದಂತೆ ಆಗಿತ್ತು. ಅಷ್ಟರಮಟ್ಟಿಗೆ ನಾನು ಆ ವ್ಯಕ್ತಿ ಮೇಲೆ ಅವಲಂಬಿತಲಾಗಿದ್ದೆ. ನಾಲ್ಕೈದು ವರ್ಷ ಬಹಳ ಕಷ್ಟ ಅನುಭವಿಸಿದೆ. ಖಿನ್ನತೆಗೆ ಜಾರಿದ್ದೆ. ಅದನ್ನು ನೆನಪಿಸಿಕೊಂಡರೆ ಇವತ್ತಿಗೂ ಭಯವಾಗುತ್ತದೆ. ನನ್ನ ಸ್ನೇಹಿತೆ ನೇಹಾ ಮಾತ್ರ ನನ್ನ ಜೊತೆಗಿದ್ದಳು. ನಾನು ಅತ್ತು ಅತ್ತು ಸುಸ್ತಾಗಿದ್ದೆ. ಜೀವನವೇ ಬೇಡ ಎನಿಸಿಬಿಟ್ಟಿತ್ತು" ಎಂದು ಅನುಪಮಾ ಹೇಳಿದ್ದಾರೆ.
"ಒಂದು ದಿನ ಆ ವ್ಯಕ್ತಿ ಮತ್ತೆ ಸಿಗಲ್ಲ ಎಂದು ಗೊತ್ತಾದಾಗ ವಿಷ ಸೇವಿಸಿಬಿಟ್ಟಿದ್ದೆ. ಆ ವ್ಯಕ್ತಿಯ ಮನೆಯ ಬಳಿ ಹೋಗಿದ್ದೆ. ಸಾಯುವ ಧೈರ್ಯವೂ ಇರಲಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದೆ. ನೇಹಾ ಜೊತೆಗಿದ್ದಳು, ನಮ್ಮ ತಂದೆ-ತಾಯಿಗೂ ಆ ವಿಷಯ ಗೊತ್ತಾಗಲು ಬಿಡಲಿಲ್ಲ. ಗೊತ್ತಾಗಿದ್ದರೆ ನಮ್ಮ ಅಮ್ಮ ಬಂದು ನಿಜವಾಗಿಯೂ ನನಗೆ ವಿಷ ಕುಡಿಸುತ್ತಿದ್ದರು. ಅಷ್ಟಾದರೂ ನನಗೆ ಅರಿವಾಗಲಿಲ್ಲ. ಮತ್ತೆ ಕೆಲ ದಿನ ಅದೇ ರೀತಿ ವರ್ತಿಸಿದೆ. ಅದೇ ಸಮಯದಲ್ಲಿ ಬಿಗ್ಬಾಸ್ ಅವಕಾಶ ಬಂತು" ಎಂದು ಅನುಪಮಾ ವಿವರಿಸಿದ್ದಾರೆ.
"ನಾನು ಆಗ ಒಂದು ಅರ್ಥದಲ್ಲಿ ನಾನು ಮೆಂಟಲ್ ಆಗಿಬಿಟ್ಟಿದ್ದೆ. ಸ್ನೇಹಿತರಿಗೆಲ್ಲಾ ಫೋನ್ ಮಾಡಿ ಅಳುತ್ತಿದ್ದೆ. ನನಗೆ ಇವತ್ತಿಗೂ ಆ ವ್ಯಕ್ತಿ ಮೇಲೆ ಬಹಳ ಗೌರವ ಇದೆ. ಅವರಿಗೂ ಇರುತ್ತದೆ ಅನ್ನಿಸುತ್ತದೆ. ಸಮಯ, ಸಂದರ್ಭ ವರ್ಕ್ ಆಗಲಿಲ್ಲ. ಆಗುತ್ತಲೂ ಇರಲಿಲ್ಲ. ಪ್ರೀತಿಸಿದವರು ಸಿಗಲಿಲ್ಲ ಅಂದರೆ ಬದುಕಲ್ಲ ಅಂತ ಅವತ್ತು ನಾನು ಆ ನಿರ್ಧಾರಕ್ಕೆ ಬಂದಿದ್ದೆ. ಒಂದೇ ಚಾನಲ್ನಲ್ಲಿ ಕೆಲಸ ಮಾಡುವಾಗ ಆ ವ್ಯಕ್ತಿ ಸಿಕ್ಕಾಗ ಹಾಯ್, ಹೇಗಿದ್ದೀಯಾ? ಎಂದು ಮಾತನಾಡಿಸಿದ್ದೇನೆ" ಎಂದು ಅನುಪಮಾ ಅಂತರಾಳ ತೆರೆದಿಟ್ಟಿದ್ದಾರೆ.


Click it and Unblock the Notifications











