BBK13: ಬಿಗ್ಬಾಸ್ ಮನೆಗೆ ಮಾತಿನ ಮಲ್ಲಿ ಅರ್ಚನಾ ಕೊಟ್ಟಿಗೆ? ಫ್ಯಾನ್ಸ್ ಆಸೆ ಈಡೇರಲ್ವಾ?
ಬಿಗ್ಬಾಸ್ ಕನ್ನಡ ಸೀಸನ್ 13 ಶೀಘ್ರದಲ್ಲೇ ಶುರುವಾಗಲಿದೆ. ಯಾರೆಲ್ಲಾ ಈ ಬಾರಿ ದೊಡ್ಮನೆ ಆಟಕ್ಕೆ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ಕಾಮನ್ಮ್ಯಾನ್ ಮನೆಗೆ ಒಳಗೆ ಕಳುಹಿಸುವ ಕರಸತ್ತು ಆರಂಭವಾಗಿದೆ. ಬಿಗ್ಬಾಸ್ ಆಡಿಷನ್ ಶುರುವಾಗಿದೆ. ಮತ್ತೊಂದು ಕಡೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್ ಆಗ್ತಿದೆ. ನಟಿ ಅರ್ಚನಾ ಕೊಟ್ಟಿಗೆ ಕೂಡ ಬಿಗ್ಬಾಸ್ ಮನೆಗೆ ಹೋಗಬೇಕು ಎನ್ನುವುದು ಅಭಿಮಾನಿಹಗಳ ಬಯಕೆಯಾಗಿದೆ.
ಅರ್ಚನಾ ಕೊಟ್ಟಿಗೆ ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ಎರಡು ತಿಂಗಳ ಹಿಂದೆ ಸ್ಟಾರ್ ಕ್ರಿಕೆಟರ್ ಶರತ್ ಬಿಆರ್ ಜೊತೆ ಆಕೆಯ ಮದುವೆ ನಡೆದಿತ್ತು. ಇತ್ತೀಚೆಗೆ Keerthi ENT Clinic ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿಯರಾದ ಖುಷಿ ರವಿ ಹಾಗೂ ಅಮೃತಾ ಅಯ್ಯಂಗಾರ್ ಜೊತೆ ಅರ್ಚನಾ ಕೊಟ್ಟಿಗೆ ಕೂಡ ಭಾಗಿ ಆಗಿದ್ದರು. ತಮ್ಮ ಮಾತು, ಕಾಮಿಡಿ ಮೂಲಕ ಗಮನ ಸೆಳೆದಿದ್ದಾರೆ. ಈ ಸಂದರ್ಶನ ನೋಡಿ ಸಾಕಷ್ಟು ಜನ ಅರ್ಚನಾ ಫ್ಯಾನ್ಸ್ ಆಗಿಬಿಟ್ಟಿದ್ದಾರೆ. ಮೇಡಂ ನೀವು ಬಿಗ್ಬಾಸ್ಗೆ ಹೋಗಬೇಕು. ನೀವು ದೊಡ್ಮನೆ ಒಳಗೆ ಇದ್ರೆ ಮಸ್ತ್ ಮನರಂಜನೆ ಗ್ಯಾರಂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಬಿಗ್ಬಾಸ್ ಮನೆಗೆ ಹೋಗುವ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ನಟಿ ಅರ್ಚನಾ ಕೊಟ್ಟಿಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಗಮನ ಈಗ ಸಿನಿಮಾಗಳ ಮೇಲಿದೆ. ಸದ್ಯಕ್ಕೆ ಬಿಗ್ಬಾಸ್ ಶೋಗೆ ಹೋಗುವ ಆಲೋಚನೆ ನನಗಿಲ್ಲ ಎಂದು ಹೇಳಿ ಅಭಿಮಾನಿಗಳ ಆಸೆಗೆ ಎಳ್ಳುನೀರು ಬಿಟ್ಟಿದ್ದಾರೆ. ಈ ಹಿಂದೆ ಒಮ್ಮೆ ನನ್ನನ್ನು ಕೇಳಿದ್ರು, ನಾನು ಹೋಗಲ್ಲ ಎಂದಿದ್ದೆ. ಯಾವುದಾದರೂ ಸಿನಿಮಾ ಪ್ರಚಾರಕ್ಕಾಗಿ ಬಿಗ್ಬಾಸ್ ಮನೆಗೆ ಹೋಗ್ತೀನಿ, ಆದ್ರೆ ಸ್ಪರ್ಧಿಯಾಗಿ ಹೋಗಲ್ಲ. ಸದ್ಯ ಒಳ್ಳೆ ಸಿನಿಮಾ ಅವಕಾಶಗಳ ನಿರೀಕ್ಷೆಯಲ್ಲಿದ್ದೀನಿ. ಒಂದು ಸಿನಿಮಾ ಮಾತುಕತೆ ನಡೀತಿದೆ ಎಂದು ತಿಳಿಸಿದ್ದಾರೆ.
ಅರ್ಚನಾ ಪಟ ಪಟ ಮಾತುಗಳ ಮೂಲಕ ಮೋಡಿ ಮಾಡಿದ್ದಾರೆ. ನಿರೂಪಕಿ ಕೀರ್ತಿ ಇಷ್ಟು ದಿನ ಎಲ್ಲಾ ಅತಿಥಿಗಳ ಕಾಲೆಳೆದು ಸಖತ್ ಫನ್ ಕ್ರಿಯೇಟ್ ಮಾಡುತ್ತಿದ್ದರು. ಆದರೆ ಈ ಬಾರಿ ಸಂದರ್ಶನದಲ್ಲಿ ಅರ್ಚನಾ ಮುಂದೆ ಕೀರ್ತಿ ಡಲ್ ಆಗಿಬಿಟ್ಟಿದ್ದಾರೆ. ಸ್ವತಃ ಕೀರ್ತಿ ಕಾಲೆಳೆದು ಮಾತಿನ ಮಲ್ಲಿ ನೋಡುಗರಿಗೆ ಮಸ್ತ್ ಮನರಂಜನೆ ಕೊಟ್ಟಿದ್ದಾರೆ. ಒಂದು ಹಂತದಲ್ಲಿ ಅರ್ಚನಾ ಮಾತಿಗೆ ಕೀರ್ತಿ ಕೂಡ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಬಿಗ್ಬಾಸ್ ಸೀಸನ್ 12ರಲ್ಲಿ ಗಿಲ್ಲಿ ಗೆದ್ದಿದ್ದು ಗೊತ್ತೇಯಿದೆ. ಹರಳು ಉರಿದಂತೆ ಮಾತನಾಡುವ ಮೂಲಕ ಗಿಲ್ಲಿ ವೀಕ್ಷಕರ ಗಮನ ಸೆಳೆದಿದ್ದರು. ಮಾತೇ ಆತನ ಬಂಡವಾಳವಾಗಿತ್ತು. ನೋಡ ನೋಡುತ್ತಾ ಗಿಲ್ಲಿ ಕ್ರೇಜ್ ಹೆಚ್ಚಾಗಿ ಕೊನೆಗೆ ಟ್ರೋಫಿ ಗೆದ್ದು ಬೀಗಿದ್ದು ಗೊತ್ತೇಯಿದೆ. ಕೆಲವೊಮ್ಮೆ ಎಲ್ಲೆ ಮೀರಿದ ಮಾತುಗಳಿಂದ ಗಿಲ್ಲಿ ಟೀಕೆಗೆ ಗುರಿಯಾಗಿದ್ದು ಇದೆ. ಬಳಿಕ ಅದನ್ನೆಲ್ಲಾ ಸರಿಪಡಿಸಿಕೊಂಡು ಕಮಾಲ್ ಮಾಡಿದ್ದರು. ಇತರೆ ಸ್ಪರ್ಧಿಗಳ ಕಾಲೆಳೆಯುತ್ತಾ, ಟಾಂಗ್ ಕೊಡುತ್ತಾ, ರೋಸ್ಟ್ ಮಾಡುತ್ತಾ ಪಳಾರ್ ಗಿಲ್ಲಿ ಜಾದೂ ಮಾಡಿಬಿಟ್ಟಿದ್ದರು.
ಈ ಬಾರಿ ಕೂಡ ಗಿಲ್ಲಿ ರೀತಿ ಒಳ್ಳೆ ಎಂಟರ್ಟೈನರ್ ಇದ್ದರೆ ಚೆನ್ನಾಗಿರುತ್ತದೆ. ಇಡೀ ದಿನ ಜೀವನದ ಜಂಜಾಟದಲ್ಲಿ ಮುಳುಗಿದ ಜನ ಸಂಜೆ ಕೊಂಚ ಹೊತ್ತು ಟಿವಿ ನೋಡಿ ಎಂಜಾಯ್ ಮಾಡುತ್ತಾರೆ. ಅಂತಹವರಿಗೆ ಮನರಂಜನೆ ಬೇಕು. ಗಿಲ್ಲಿ ಮಾಡಿದ್ದು ಅದೇ. ಈ ಬಾರಿ ಅರ್ಚನಾ ಕೊಟ್ಟಿಗೆ ದೊಡ್ಮನೆ ಒಳಗೆ ಹೋದರೆ ಅದೇ ಮಜಾ ಇರುತ್ತದೆ ಎಂದು ಕೆಲವರು ಭಾವಿಸಿದ್ದರು. ಆದರೆ ಅದು ಕಷ್ಟ ಎನ್ನುವಂತಾಗಿದೆ. 'ಡಿಯರ್ ಸತ್ಯಾ', 'ತ್ರಿಬಲ್ ರೈಡಿಂಗ್', 'ವಿಜಯಾನಂದ', 'ಹೊಂದಿಸಿ ಬರೆಯಿರಿ', 'ಫಾರೆಸ್ಟ್' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.


Click it and Unblock the Notifications