Dr.Lavanya: "ಎಲ್ರೂ ಎರಡು ದೋಣಿಯಲ್ಲಿ ಕಾಲಿಡಬೇಡ ಅಂದ್ರು.. ಅದೇ ಸವಾಲಾಗಿ ಸ್ವೀಕರಿಸಿದ್ದೇನೆ"- ಡಾ.ಲಾವಣ್ಯ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ವೈಷ್ಣವ್ ತಂಗಿ ವಿಧಿಯಾಗಿ ಅಭಿನಯಿಸುತ್ತಿರುವ ಡಾ.ಲಾವಣ್ಯ ಇದೀಗ ಮನೆ ಮೆಚ್ಚಿದ ಸಹೋದರಿಯೂ ಹೌದು. ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನಡೆದಿದ್ದು ಅದರಲ್ಲಿ ಮನೆ ಮೆಚ್ಚಿದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಡಾ. ಲಾವಣ್ಯ.
"ಅನುಬಂಧ ಅವಾರ್ಡ್ಸ್ ನಲ್ಲಿ ಮನೆ ಮೆಚ್ಚಿದ ಸಹೋದರಿ ಪ್ರಶಸ್ತಿ ನನಗೆ ದೊರಕಿದೆ. ಖಂಡಿತವಾಗಿಯೂ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಅನುಬಂಧ ಅವಾರ್ಡ್ಸ್ ನಲ್ಲಿ ನನ್ನ ಹೆಸರನ್ನು ಕರೆದಾಗ ಆದ ಸಂತೋಷ ಅಷ್ಟಿಷ್ಟಲ್ಲ" ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ ಡಾ. ಲಾವಣ್ಯ.

"ಅನುಬಂಧ ಎನ್ನುವುದೇ ಒಂದು ಬಹು ದೊಡ್ಡದಾಗಿರುವ ಅನುಭವ. ನಾನು ಮನೆ ಮೆಚ್ಚಿದ ಸಹೋದರಿ ಎಂಬ ಕ್ಯಾಟಗರಿಗೆ ನಾಮಿನೇಟ್ ಆಗಿದ್ದೇನೆ ಎಂದು ತಿಳಿದಾಗಲೇ ನಾನು ಸಂತಸಗೊಂಡಿದ್ದೆ. ವಿಧಿ ಪಾತ್ರ ಪಕ್ಕಾ ಪಾಸಿಟಿವ್ ಆಗಿರದೇ ನೆಗೆಟಿವ್ ರೀತಿಯಿಂದಲೂ ಇರುವ ಕಾರಣ ನಾನು ಪ್ರಶಸ್ರಿ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ವೇದಿಕೆಯಲ್ಲಿ ನನ್ನ ಹೆಸರು ಅನೌನ್ಸ್ ಮಾಡಿದಾಗ ಖುಷಿಯಿಂದ ಕಣ್ಣಿನಲ್ಲಿ ನೀರು ತುಂಬಿತು. ಶಾಕ್, ಸರ್ ಪ್ರೈಸ್ ಎಲ್ಲವೂ ಒಟ್ಟಿಗೆ ಆಯ್ತು. ಖುಷಿಯಿಂದ ಮಾತೇ ಬರಲಿಲ್ಲ" ಎಂದು ಖುಷಿಯಿಂದ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಡಾ. ಲಾವಣ್ಯ.
"ವೃತ್ತಿಯಲ್ಲಿ ವೈದ್ಯೆಯಾಗಿರುವ ನಾನು ಪ್ರವೃತ್ತಿಯಾಗಿ ನಟನೆಯನ್ನು ಸ್ವೀಕರಿಸಿಕೊಂಡಿರುವುದು ನಿಜವಾಗಿಯೂ ಸವಾಲಿನ ಕೆಲಸ. ನಾನು ಎರಡನ್ನು ಸಂಭಾಳಿಸಲು ತೊಡಗಿದಾಗ ಎಲ್ಲರೂ ಎರಡು ದೋಣಿಯ ಮೇಲೆ ಕಾಲಿಡಬೇಡ ಎಂದು ಹೇಳಿದ್ದರು. ಆದರೆ ನಾನು ಅದನ್ನೇ ಇವತ್ತು ಚಾಲೆಂಜ್ ಆಗಿ ಸ್ವೀಕರಿಸಿದೆ. ಇದೀಗ ಅದಕ್ಕೆ ಫಲ ದೊರಕಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ಡಾ. ಲಾವಣ್ಯ.
"ನಾನು ಇಂದು ದಂತವೈದ್ಯೆಯಾಗಿದ್ದೇನೆ ಎಂದರೆ ಅದಕ್ಕೆ ನನ್ನ ಅಪ್ಪ ಅಮ್ಮ ತುಂಬಾ ಕಷ್ಟಪಟ್ಟಿದ್ದಾರೆ. ನಮ್ಮ ಊರಲ್ಲಿ ವಿದ್ಯಾಭ್ಯಾಸಕ್ಕೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಪ್ರಾಥಮಿಕ ಶಾಲೆಯಿಂದಲೇ ನನ್ನನ್ನು ಹಾಸ್ಟೆಲ್ ಗೆ ಕಳಿಸಿ ಓದಿಸಿದರು. ಸಾಕಷ್ಟು ಏರಿಳಿತಗಳನ್ನು ಕಂಡಿರುವ ನನಗೆ ಈ ಪ್ರಶಸ್ತಿ ಸಿಕ್ಕಿರುವುದು ಖುಷಿಯಾಗಿದೆ. ನಾನು ಈ ಪ್ರಶಸ್ತಿಯನ್ನು ನನ್ನ ತಂದೆ ತಾಯಿಗೆ ಅರ್ಪಿಸುತ್ತೇನೆ" ಎಂದು ಡಾ. ಲಾವಣ್ಯ ಹೇಳುತ್ತಾರೆ.

"ನಾನಿಂದು ಮನೆ ಮೆಚ್ಚಿದ ಸಹೋದರಿ ಪ್ರಶಸ್ತಿ ಪಡೆದುಕೊಂಡಿದ್ದೇನೆ ಎಂದರೆ ಅದಕ್ಕೆ ಮುಖ್ಯ ಕಾರಣ ಕಲರ್ಸ್ ಕನ್ನಡ ವಾಹಿನಿ. ಕಲರ್ಸ್ ಕನ್ನಡ ವಾಹಿನಿಗೆ, ಪ್ರೊಡಕ್ಷನ್ ಟೀಂ ಗೆ, ನಿರ್ದೇಶಕರು, ಮ್ಯಾನೇಜರ್, ಟೆಕ್ನಿಕಲ್ ಟೀಂ, ಕ್ಯಾಮೆರಾ ಮ್ಯಾನ್, ಮೇಕಪ್ ಆರ್ಟಿಸ್ಟ್, ಆಹಾರ ವ್ಯವಸ್ಥೆ ಮಾಡುವವರಿಗೆ ಇವರಿಗೆಲ್ಲಾ ನಾನು ಧನ್ಯವಾದ ಹೇಳುತ್ತೇನೆ. ಇದರ ಜೊತೆಗೆ ನಾನು ನನ್ನ ಸಹ ಕಲಾವಿದರುಗಳಿಗೂ ಕೂಡಾ ಧನ್ಯವಾದ ಹೇಳಲೇ ಬೇಕು. ಯಾಕೆಂದರೆ, ನಾನು ಅವರಿಂದಲೂ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಈಗ ನಾವೊಂದು ಕುಟುಂಬದಂತೆ ಆಗಿದ್ದೇವೆ." ಎಂದು ಹಂಚಿಕೊಳ್ಳುತ್ತಾರೆ ಡಾ.ಲಾವಣ್ಯ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನರಸಿ ರಾಧೆ಼' ಧಾರಾವಾಹಿಯಲ್ಲಿ ಖಳನಾಯಕನ ತಂಗಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಲಾವಣ್ಯ ಇದೀಗ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ವಿಧಿಯಾಗಿ ಮೋಡಿ ಮಾಡುತ್ತಿದ್ದಾರೆ. ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿರುವ ಲಾವಣ್ಯ 'ಕ್ಷೇತ್ರಪತಿ' ಸಿನಿಮಾದ ಮೂಲಕ ಹಿರಿತೆರೆಗೂ ಹಾರಿದ್ದಾರೆ.


Click it and Unblock the Notifications











