ಕಾಶಿ ವಿಶ್ವಾನಾಥನ ಸನ್ನಿಧಿಯಲ್ಲಿ ಭಿಕ್ಷೆ ಬೇಡಿದ ಕಾವ್ಯಾ ಶಾಸ್ತ್ರಿ; ವಿಡಿಯೋ ನೋಡಿ ಕಣ್ಣೀರು ನೆಟ್ಟಿಗರು ಹಾಕಿದ್ದೇಕೆ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜಾನಕಿ ಸಂಸಾರ' ಧಾರಾವಾಹಿಯಲ್ಲಿ ಖಳನಾಯಕಿ ಅನಾಮಿಕಾ ಆಗಿ ಅಭಿನಯಿಸಿದ್ದ ಕಾವ್ಯಾ ಶಾಸ್ತ್ರಿ ಇದೀಗ ಸುದ್ದಿಯಲ್ಲಿದ್ದಾರೆ. ಹೌದು, ನಟನೆಯ ಮೂಲಕ ಕಿರುತೆರೆ, ಸಿನಿಮಾದಲ್ಲಿ ಮನ ಸೆಳೆದಿರುವ ಕಾವ್ಯಾ ಶಾಸ್ತ್ರಿ ದಿನವಿಡೀ ಭಿಕ್ಷೆ ಬೇಡಿ ಊಟ ಮಾಡಿದ್ದಾರೆ.
ಹೌದು, ನಟಿ ಕಾವ್ಯಾ ಶಾಸ್ತ್ರಿ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಭಿಕ್ಷೆ ಬೇಡಿ ಊಟ ಮಾಡಿದ್ದಾರೆ. ಮಾತ್ರವಲ್ಲ ತಾವು ಭಿಕ್ಷೆ ಬೇಡಿದ್ದು ಯಾಕೆ ಎಂಬುದನ್ನು ಕೂಡಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. "ಕೊರೊನಾ ಯಾರನ್ನು ಬಿಟ್ಟಿಲ್ಲ. 2020ರಲ್ಲಿ ನನ್ನ ತಂದೆ ಕೊರೊನಾದಲ್ಲಿ ಇನ್ನೇನು ಕಳೆದೇ ಹೋಗುತ್ತಾರೆ ಎನ್ನುವ ಭಯದಲ್ಲಿ ಸಿಕ್ಕ ಸಿಕ್ಕ ದೇವರಿಗೆ, ಸಿಕ್ಕ ಸಿಕ್ಕ ಹರಕೆ ಹೊತ್ತುಕೊಂಡಿದ್ದೆ. ಅದರಲ್ಲಿ ಒಂದು ಇದು. ಕಾಶಿ ವಿಶ್ವನಾಥ, ಕಾಶಿ ನನ್ನ ತಂದೆಯ ಜೀವದ ಭಿಕ್ಷೆ ಕೊಡು. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ, ಅದರಿಂದ ಬಂದ ಹಣದಲ್ಲಿ ಒಂದಿಡೀ ದಿನದ ಊಟ ಮಾಡ್ತೇನೆ ಅಂತ ಕೇಳಿಕೊಂಡಿದ್ದೆ. ಅದನ್ನು ನೆರವೇರಿಸುವಂತಹ ಸೌಭಾಗ್ಯ ಮೊನ್ನೆ ನಾನು ಹೋದಾಗ ದೊರೆಯಿತು" ಎಂದು ಇನ್ಸ್ಟಾಗ್ರಾಂನಲ್ಲಿ ಕಾವ್ಯಾ ಶಾಸ್ತ್ರಿ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ "ಇದೇನು ಅಂಧ ವಿಶ್ವಾಸ ಎಂದು ನೀವು ಕೇಳ್ಬಹುದು. ಒಂದು ಮಾತು ಹೇಳ್ತೀನಿ ಕೇಳಿ. ಕಷ್ಟದಲ್ಲಿದ್ದಾಗ ಏನು ಬೇಕಾದರೂ ಮಾಡ್ತೀವಿ. ಆ ಕಷ್ಟ ನಿವಾರಣೆ ಆಗಲಿ ಎಂಬ ಪರಿಸ್ಥಿತಿಗೆ ನಾವು ಬಂದ್ಬಿಡ್ತೀವಿ. ಹಿಂದೂ ಧರ್ಮದಲ್ಲಿ ಭಿಕ್ಷಾಟನೆಗೆ ಒಂದು ಪವಿತ್ರವಾದ ಸ್ಥಾನವಿದೆ. ಅದು ನಾನು, ನನ್ನದು ಎನ್ನುವ ಅಹಂಕಾರ, ಮೋಹ ಎಲ್ಲದನ್ನು ಕಳಚಿ ಬಿಡುತ್ತೆ. ಒಬ್ಬರ ಮುಂದೆ ಕೈ ಚಾಚಿ ಭಿಕ್ಷೆ ಕೊಡಿ ಎಂದು ಕೇಳ್ಬೇಕಾದ್ರೆ ದುರಂಹಕಾರ ಎಲ್ಲಾ ಕಳೆದುಹೋಗುತ್ತೆ. ಇದೇ ಭಿಕ್ಷಾಟನೆಯ ಪಾವಿತ್ರತೆ" ಎಂದು ಕಾವ್ಯಾ ಶಾಸ್ತ್ರಿ ಹೇಳಿಕೊಂಡಿದ್ದಾರೆ.
"ಕೊಡುವವರು ತಮ್ಮ ಪಾಪ ಕಳೆದುಕೊಳ್ಳುತ್ತಾರೆ. ತಗೊಳ್ಳುವವರು ತಮ್ಮ ಅಹಂಕಾರವನ್ನು ಕಳೆದುಕೊಳ್ಳುತ್ತಾರೆ. ಅದಕ್ಕೆ ಹೇಳೋದು, ಈ ದುಡ್ಡು, ಹೆಸರು ಎಲ್ಲಾ ಜೀವದ ಮುಂದೆ ಏನೇನೂ ಇಲ್ಲ. ಈ ಜೀವ ಎನ್ನುವುದೇ ಪರಮಾತ್ಮನ ಭಿಕ್ಷೆ. ಅದನ್ನು ಯಾವತ್ತೂ ಅಹಂಕಾರದಿಂದ ಮರೆಯಬಾರದು. ಒಟ್ಟಿನಲ್ಲಿ ಇವತ್ತು ನಾನು ನನ್ನ ತಂದೆ ತಾಯಿ ಜೊತೆಗೆ ಖುಷಿಯಾಗಿದ್ದೇನೆ. ಎಲ್ಲಾ ಆ ದೇವರ ದಯೆ" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ ಕಾವ್ಯಾ ಶಾಸ್ತ್ರಿ.
ಇನ್ನು ನಟನೆಯ ವಿಚಾರ ಬಂದರೆ "ಜಾನಕಿ ಸಂಸಾರ" ಧಾರಾವಾಹಿಯಲ್ಲಿ ಅನಾಮಿಕಾ ಆಗಿ ಅಭಿನಯಿಸಿದ್ದ ಕಾವ್ಯಾ ಶಾಸ್ತ್ರಿ ಮೊದಲ ಬಾರಿಗೆ ಖಳನಾಯಕಿಯಾಗಿ ನಟಿಸಿ ವೀಕ್ಷಕರ ಮನ ಸೆಳೆದರು. ದುನಿಯಾ ವಿಜಯ್ ಅಭಿನಯದ 'ಯುಗ' ಸಿನಿಮಾದಲ್ಲೂ ನಟಿಸಿದ್ದಾರೆ. ಮೊದಲು ನಟಿಸಿದ್ದು ತೆಲುಗು ಧಾರಾವಾಹಿಯಲ್ಲಿ. ತೆಲುಗಿನ 'ರಾಣಿವಾಸಂ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ ಈಕೆ 'ಶುಭವಿವಾಹ' ಧಾರಾವಾಹಿಯ ಶ್ರದ್ಧಾಳಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟರು.
ಮುಂದೆ 'ಪತ್ತೇದಾರಿ ಪ್ರತಿಭಾ', ತಮಿಳಿನ 'ಮಹಾಲಕ್ಷ್ಮಿ' ಧಾರಾವಾಹಿಯಲ್ಲಿ ಅಭಿನಯಿಸಿರುವ ಕಾವ್ಯಾ ಶಾಸ್ತ್ರಿ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಂದಿನಿ' ಧಾರಾವಾಹಿಯಲ್ಲಿ ದೇವಸೇನಾಳಾಗಿ ಕಾಣಿಸಿಕೊಂಡಿದ್ದರು. ನಂತರ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದಿದ್ದ ಈಕೆ ನಂತರ ಅದೇ ಧಾರಾವಾಹಿಯಲ್ಲಿ ಹೊಸದೊಂದು ಅಧ್ಯಾಯದಲ್ಲಿ ತ್ರಿಶಲಾ ಪಾತ್ರದಲ್ಲಿ ನಟಿಸಿದ್ದರು.
ಅಂದ್ಹಾಗೆ ಕಾವ್ಯಾ ನಟಿಸುತ್ತಿರುವ ಧಾರಾವಾಹಿಯಿಂದ ಹೊರ ಬಂದು ನಂತರ ಅದೇ ಧಾರಾವಾಹಿಯಲ್ಲಿ ಮಗದೊಂದು ಪಾತ್ರದ ಮೂಲಕ ನಟಿಸುವ ಅವಕಾಶ ಪಡೆದುಕೊಂಡಿರುವ ಏಕೈಕ ನಟಿ ಎಂಬ ಹೆಗ್ಗಳಿಕೆಗೂ ಈಕೆ ಪಾತ್ರರಾಗಿದ್ದರು. ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಿಕಾ' ಧಾರಾವಾಹಿಯಲ್ಲಿ ನಾಯಕಿ ರಾಧಿಕಾಳಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿರುವ ಕಾವ್ಯಾ ಶಾಸ್ತ್ರಿ ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಆ್ಯಕ್ಟೀವ್ ಆಗಿದ್ದಾರೆ.
ಸಮಯ ಸಿಕ್ಕಾಗೆಲೆಲ್ಲಾ ರೀಲ್ಸ್ ಮಾಡಿ ಹಂಚಿಕೊಳ್ಳುವ ಈಕೆ ಉಪಯುಕ್ತವಾದ ವಿಚಾರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಕೆ ಹಂಚಿಕೊಂಡಿರುವ ಹೆಚ್ಚಿನ ವಿಡಿಯೋಗಳು ಲಕ್ಷಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ. ಅದರಲ್ಲೂ ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿ ಭಿಕ್ಷಾಟನೆ ಮಾಡಿರುವ ವಿಡಿಯೋವಂತೂ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ.


Click it and Unblock the Notifications











