"ಸುಧಾರಾಣಿ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದು ನನ್ನ ಪಾಲಿಗೆ ಲೈಫ್ ಟೈಮ್ ಮೂಮೆಂಟ್" - ನಟಿ ಕೃತಿಕಾ ರವೀಂದ್ರ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ನಾಯಕಿ ಗಿರಿಜಾ ಆಗಿ ಅಭಿನಯಿಸುತ್ತಿರುವ ಕೃತಿಕಾ ರವೀಂದ್ರ ವಯಸ್ಸಿಗೂ ಮೀರಿದ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಗಟ್ಟಿಗಿತ್ತಿ ಹೆಣ್ಣುಮಗಳಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಕೃತಿಕಾ ರವೀಂದ್ರ ಇದೀಗ ಕಿರುತೆರೆ ವೀಕ್ಷಕರ ಪಾಲಿಗೆ ನೆಚ್ಚಿನ ನಟಿ ಹೌದು.
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು ಅದರಲ್ಲಿ 'ನೆಚ್ಚಿನ ನಟಿ' ಪ್ರಶಸ್ತಿಯನ್ನು ಕೃತಿಕಾ ರವೀಂದ್ರ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಪ್ರಶಸ್ತಿ ಪಡೆದುಕೊಂಡ ಖುಷಿಯಲ್ಲಿರುವ ಕೃತಿಕಾ ರವೀಂದ್ರ 'ನೆಚ್ಚಿನ ನಟಿ ಪ್ರಶಸ್ತಿ ಬರುತ್ತದೆ ಎಂದು ನಾನು ನಿಜವಾಗಿಯೂ ಅಂದುಕೊಂಡಿರಲಿಲ್ಲ.

ವೇದಿಕೆ ಮೇಲೆ ನೆಚ್ಚಿನ ನಟಿ ಕೃತಿಕಾ ರವೀಂದ್ರ ಅಂತ ಹೆಸರು ಕರೆದಾಗ ನನಗಂತೂ ಆಶ್ಚರ್ಯವಾಯಿತು. "ಹೌದಾ? ನನಗಾ? ಎನ್ನುವ ಹಾಗಾಯಿತು" ಎಂದು ಫಿಲ್ಮಿಬೀಟ್ ಜೊತೆಗೆ ಕಿರುತೆರೆ ನಟಿ ಕೃತಿಕಾ ರವೀಂದ್ರ ಸಂತಸ ಹಂಚಿಕೊಂಡಿದ್ದಾರೆ.
"ಸುಧಾರಾಣಿ ಮೇಡಂ ಅವರ ಜೊತೆಗೆ ಸ್ಟೇಜ್ ಹಂಚಿಕೊಂಡಿರುವುದು ನನಗೆ ತುಂಬಾ ಖುಷಿ ಕೊಟ್ಟ ವಿಚಾರ. ಇದರ ಜೊತೆಗೆ ರವಿಚಂದ್ರನ್ ಅವರ ಕೈಯಿಂದ ಅವಾರ್ಡ್ ತೆಗೆದುಕೊಂಡಿದ್ದು ಕೂಡಾ ಸಂತಸದ ವಿಚಾರ. ಇದೆರಡೂ ನನ್ನ ಪಾಲಿಗೆ ಲೈಫ್ ಟೈಮ್ ಮೂಮೆಂಟ್ ಎನ್ನಬಹುದು. ಬಣ್ಣದ ಬದುಕಿನಲ್ಲಿ 45 ವರ್ಷ ಪೂರೈಸಿರುವ ಸುಧಾರಾಣಿ ಅವರ ಜೊತೆಗೆ ನೆಚ್ಚಿನ ನಟಿ ಪ್ರಶಸ್ತಿಗೆ ನಿಂತುಕೊಳ್ಳುತ್ತೇನೆ ಎನ್ನುವುದು ಒಂದು ದೊಡ್ಡ ವಿಷಯ" ಎಂದು ಹೇಳಿಕೊಂಡಿದ್ದಾರೆ ಕೃತಿಕಾ ರವೀಂದ್ರ.

"ಎಲ್ಲರ ಹೃದಯ ಕದ್ದ ಕ್ರೇಜಿಸ್ಟಾರ್ ಅವರ ಕೈಯಿಂದ ನೆಚ್ಚಿನ ನಟಿ ಅವಾರ್ಡ್ ಅನ್ನು ನಾನು ಪಡೆದುಕೊಂಡೆ ಎನ್ನುವುದೇ ನನಗೆ ಖುಷಿ. ಇನ್ನು ನನ್ನ ಅಮ್ಮ. ನಾನು ಪ್ರಶಸ್ತಿ ಪಡೆದಾಗ ಅವರು ಎದುರಿಗೆ ಕುಳಿತುಕೊಂಡಿದ್ದರು. ನಾನು ಅವಾರ್ಡ್ ಅನ್ನು ಅಮ್ಮನಿಗೆ ತೋರಿಸಿ ದಿಸ್ ಈಸ್ ಫಾರ್ ಯೂ. ಇದು ನಿನಗೆ ಸೇರಬೇಕಾದ್ದು ಎಂದು ಹೇಳಿದೆ. ಇವೆಲ್ಲವೂ ನನ್ನ ಪಾಲಿಗೆ ಒಂದು ರೀತಿಯ ಮ್ಯಾಜಿಕಲ್ ಮೂಮೆಂಟ್ಸ್ ಎನ್ನಬಹುದು" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಕೃತಿಕಾ.
"ಗಿರಿಜಾ ಪಾತ್ರದ ಬಗ್ಗೆ ಹೇಳ್ಬೇಕಾದ್ರೆ ಅದು ಎಲ್ಲರಿಗೂ ಇಷ್ಟವಾಗುವ ಪಾತ್ರ. ಮನೆ ನಡೆಸುವುದು ಹೇಗೆ ಎಂಬುದು ಗಿರಿಜಾ ತೋರಿಸಿಕೊಡುತ್ತಾಳೆ. ನಾನು ಎಲ್ಲಾ ಕಡೆ ಹೇಳುತ್ತಿರುತ್ತೇನೆ - ಹೆಣ್ಮಕ್ಕಳು ನಾನೊಬ್ಳು ಗೃಹಿಣಿ ಅಂಥ ಹೇಳ್ತಾರಷ್ಟೇ. ಆದರೆ, ಅದುವೇ ಗ್ರೇಟೆಸ್ಟ್ ಜಾಬ್ ಎನ್ನಬಹುದು. ಮನೆ ನಡೆಸಿಕೊಳ್ಳುವುದು, ಮನೆ ನೋಡಿಕೊಳ್ಳುವುದು, ಮನೆಯವರನ್ನು ನೋಡಿಕೊಳ್ಳುವುದು ಎಲ್ಲಕ್ಕಿಂತ ದೊಡ್ಡ ಕೆಲಸ. ಅದನ್ನು ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳಿ ಎನ್ನುತ್ತೇನೆ" ಎಂದು ಹೇಳಿಕೊಳ್ಳುತ್ತಾರೆ ಕೃತಿಕಾ ರವೀಂದ್ರ.
"ಗಿರಿಜಾ ಪಾತ್ರ ದಿನದಿಂದ ದಿನಕ್ಕೆ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗುತ್ತಿದೆ. ಗಿರಿಜಾ ಪಾತ್ರದಿಂದ ಕೃತಿಕಾ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾಳೆ, ಕಲಿಯುತ್ತಿದ್ದಾಳೆ. ಅಂತ ಪಾತ್ರವನ್ನು ಗುರುತಿಸಿದ ಜೀ ಕನ್ನಡ ವಾಹಿನಿಗೆ ನಾನು ಥ್ಯಾಂಕ್ಸ್ ಹೇಳ್ತೇನೆ. ಗಿರಿಜಾ ಪಾತ್ರ ಹೀಗೆ ಬರಬೇಕು ಎಂದು ಎಲ್ಲರೂ ಶ್ರಮಿಸಿದ್ದಾರೆ. ಈ ಅವಾರ್ಡ್ 'ಭೂಮಿಗೆ ಬಂದ ಭಗವಂತ' ತಂಡಕ್ಕೆ, ಕಲಾವಿದರುಗಳಿಗೆ, ಟೆಕ್ನಿಷಿಯನ್ಗಳಿಗೆ ಅರ್ಪಿಸುತ್ತೇನೆ. ಜೊತೆಗೆ ನನ್ನ ಚಾನೆಲ್ಗೂ ನಾನು ಯಾವಾಗಲೂ ಆಭಾರಿ. ಕೊನೆಯದಾಗಿ ಅಭಿಮಾನಿಗಳಿಗೂ ಧನ್ಯವಾದ ಹೇಳುತ್ತೇನೆ. ಅವರಿಲ್ಲ ಎಂದಾದರೆ ನಾನು ಖಂಡಿತಾ ಜೀರೋ. ಅವರು ಗಿರಿಜಾನಾ ಇಷ್ಟಪಡುತ್ತಿರುವುದಕ್ಕೆ, ದಿನೇ ದಿನೆ ಮೆಚ್ಚಿಕೊಳ್ಳುತ್ತಿರುವುದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸವನ್ನು ಕಿರುತೆರೆ ನಟಿ ಕೃತಿಕಾ ರವೀಂದ್ರ ಹಂಚಿಕೊಂಡಿದ್ದಾರೆ.


Click it and Unblock the Notifications











