ವಯಸ್ಸಿಗೂ ಮೀರಿದ ಪಾತ್ರದಲ್ಲಿ ಮೋಡಿ ಮಾಡಿ 25 ವರ್ಷಗಳ ನಟನೆ ಜರ್ನಿ ಪೂರೈಸಿದ ನಂದಿನಿ: ಹಿನ್ನೆಲೆಯೇನು?
ನಟಿ ನಂದಿನಿ ಕಿರುತೆರೆ ಪ್ರೇಕ್ಷಕರಿಗೆ ಚೆನ್ನಾಗಿ ಪರಿಚಯವಿದೆ. ಅವರೇ ಹೇಳಿದಂತೆ ಕಳೆದ 25 ವರ್ಷದಿಂದ ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ ನಂದಿನಿ ಅವರು ಇದುವರೆಗೂ 50 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಮೂಡಲ ಮನೆ', 'ಮುಕ್ತ ಮುಕ್ತ', 'ಮಂಥನ', 'ಕ್ಷಣ ಕ್ಷಣ', 'ನಂದಗೋಕುಲ', 'ಮಿಂಚು', 'ಮಾಯಾಮೃಗ', 'ದಿಬ್ಬಣ', ಮುಂತಾದ ಹಲವಾರು ಪಾಪ್ಯುಲರ್ ಧಾರಾವಾಹಿಗಳಲ್ಲಿ ಬಹಳ ಪ್ರಮುಖ ಪಾತ್ರವನ್ನು ನಿರ್ವಹಿಸಿ ಜನಮನ ಗೆದ್ದವರಿವರು.
ಹೀಗಿರುವಾಗ 'ಶ್ರೀ ಗೌರಿ' ಧಾರಾವಾಹಿಯಲ್ಲಿ ತಮ್ಮ ವಯಸ್ಸಿಗೂ ಮೀರಿದ ಪಾತ್ರವನ್ನು ಆಯ್ದುಕೊಂಡಿರುವ ಇವರು ಇದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಶ್ರೀ ಗೌರಿ ಧಾರಾವಾಹಿಯಲ್ಲಿನ ಮಂಗಳಮ್ಮ ಪಾತ್ರ ಸಿಕ್ಕಾಗ ಮೊದಲಿಗೆ ನಂದಿನಿಯವರಿಗೆ ಬಹಳ ಹಿಂಜರಿಕೆಯಾಗಿತ್ತಂತೆ. ಇಂತಹ ದೊಡ್ಡ ಪಾತ್ರವನ್ನು ಹೇಗೆ ಮಾಡುವುದೆಂಬ ಸಂಶಯವೂ ಮೂಡಿತ್ತಂತೆ. ಮಾತು ನಟನೆ ಅಷ್ಟೇ ಅಲ್ಲದೆ ಹಾವ ಭಾವ, ಉಡುಗೆ ತೊಡುಗೆ ಎಲ್ಲದರಲ್ಲೂ ನಾನು ಆ ಪಾತ್ರಕ್ಕೆ ಹೊಂದಾಣಿಕೆಯಾಗುತ್ತೇನಾ ಎಂಬ ಅನುಮಾನವೂ ಕೂಡಾ ಆಕೆಗೆ ಕಾಡಿತ್ತಂತೆ.

ಆದರೆ, ಧಾರಾವಾಹಿ ತಂಡದ ಸಹಕಾರ ಹಾಗೂ ಪ್ರೋತ್ಸಾಹದಿಂದ ಇದು ಸುಲಭದಲ್ಲಿ ಸಾಧ್ಯವಾಯಿತಂತೆ. ಈಗಂತೂ ಸ್ವತಃ ನಂದಿನಿಯವರಿಗೆ ಈ ಪಾತ್ರ ಬಹಳ ಇಷ್ಟವಾಗಿದೆಯಂತೆ. ಮಾತ್ರವಲ್ಲದೇ ಜನರು ಕೂಡಾ ಮಂಗಳಮ್ಮ ಪಾತ್ರವನ್ನು ಖುಷಿಯಿಂದ ಒಪ್ಪಿಕೊಂಡಿದ್ದಾರೆ ಎಂದು ನಂದಿನಿ ಕೂಡಾ ನಂಬಿದ್ದಾರೆ.
ಪಾತ್ರಗಳು ಬಹಳ ವಿಭಿನ್ನವಾಗಿರಬೇಕು. ಪಾತ್ರಕ್ಕೆ ಸರಿಯಾದ ಬೆಲೆ ಇರಬೇಕು ಎಂಬುದು ನಂದಿನಿ ಅವರ ಅಭಿಪ್ರಾಯ. ನಂದಿನಿ ಅವರು ಯಾವುದೇ ಪಾತ್ರವನ್ನು ಒಪ್ಪಿಕೊಳ್ಳುವ ಮೊದಲು ಈ ಎರಡು ವಿಚಾರಗಳನ್ನು ಗಮನದಲ್ಲಿಸುತ್ತಾರೆ. ಅದಕ್ಕೆ ತನ್ನ ವೃತ್ತಿ ಬದುಕಿನ ಯಶಸ್ಸು ಎನ್ನುತ್ತಾರೆ.
ನಂದಿನಿ ಅವರ ವೃತ್ತಿ ಬದುಕಿಗೆ ಇದೀಗ ಇಪ್ಪತ್ತೈದರ ಹರೆಯ. :ಸರಿಯಾದ ಸಮಯದಲ್ಲಿ ಸರಿಯಾದ ತಂಡದೊಂದಿಗೆ ನನ್ನ ಧಾರಾವಾಹಿ ಜರ್ನಿಯನ್ನು ಶುರು ಮಾಡಿದ್ದಕ್ಕೆ ನನಗೆ ಬಹಳ ಸಂತೋಷವಿದೆ. ಆ ಕಾರಣದಿಂದಲೇ ನಾನು ಇಷ್ಟು ದೂರ ಬರಲು ಸಾಧ್ಯವಾಗಿದೆ ಎಂದು ನಂಬಿದ್ದೇನೆ. ನನ್ನಲ್ಲಿರುವ ನಟನ ಸಾಮರ್ಥ್ಯವನ್ನು ಗುರುತಿಸಿ ಬಹಳ ಒಳ್ಳೊಳ್ಳೆ ನಿರ್ದೇಶಕರು ನನಗೆ ಒಳ್ಳೊಳ್ಳೆ ಪಾತ್ರಗಳನ್ನು ನೀಡಿದ್ದಾರೆ. ಯಾವುದೇ ನಟನ ಹಿನ್ನೆಲೆಯಿಂದ ಬಾರದಿದ್ದರೂ ಇಷ್ಟು ದೂರ ಈ ಕ್ಷೇತ್ರದಲ್ಲಿ ಮುಂದುವರಿದಿರುವುದಕ್ಕೆ ನನಗೆ ಹೆಮ್ಮೆ ಇದೆ." ಎಂದು ಈ ಹಿಂದೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ನಟಿ ನಂದಿನಿ ಗೌಡ.

ಶ್ರೀ ಗೌರಿ ಎಂಬ ವಿಭಿನ್ನ ಕಥೆಯುಳ್ಳ ಧಾರಾವಾಹಿಯಲ್ಲಿ ಇದೀಗ ಇವರು ಮಂಗಳಮ್ಮ ಎನ್ನುವ ವಯಸ್ಸಾದ ಪಾತ್ರವನ್ನು ಮಾಡುತ್ತಿದ್ದು, ಧಾರಾವಾಹಿ ಕಥಾನಾಯಕನ ತಾಯಿಯ ಪಾತ್ರ ಇದಾಗಿದೆ. ಇದುವರೆಗೂ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ನಂದಿನಿ ಅವರು ತಮ್ಮ ಇಷ್ಟದ ಪಾತ್ರಗಳ ಬಗ್ಗೆ ಹೇಳಿ ಎಂದು ಕೇಳಿದಾಗ "ಅರ್ಧಸತ್ಯ ಧಾರಾವಾಹಿಯ ಉಷಾ, ಬೆಳದಿಂಗಳಾಗಿ ಬಾ ಧಾರಾವಾಹಿಯ ಪೂರ್ಣಿಮಾ, ಮುಕ್ತ ಮುಕ್ತ ಧಾರಾವಾಹಿಯ ಅರುಂಧತಿ, ಮಂಥನ ಧಾರಾವಾಹಿಯ ನಂದಿನಿ ಜಾಧವ್, ಜೋಗುಳ ಧಾರಾವಾಹಿಯ ಯಶೋದೆ, ಚಿತ್ರಲೇಖಾ ಧಾರಾವಾಹಿಯ ತೇಜು ಮತ್ತು ಈಗ ಶ್ರೀಗೌರಿ ಧಾರಾವಾಹಿಯ ಮಂಗಳಮ್ಮ ಪಾತ್ರ ಬಹಳ ಖುಷಿಕೊಟ್ಟಿದೆ" ಎಂದಿದ್ದಾರೆ.


Click it and Unblock the Notifications











