ಸುಧಾರಾಣಿ ಎಂಟ್ರಿ ಕೊಟ್ಟಾಯ್ತು: ಇನ್ನಾದ್ರೂ ಅತ್ತೆ-ಸೊಸೆ ಜಗಳ ನಿಲ್ಲುತ್ತಾ?
ಜೀ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳ ಆಗಮನವಾಗುತ್ತಿರುತ್ತೆ. ಅದರಲ್ಲೂ ಇಡೀ ಕುಟುಂಬ ಕುಳಿತು ನೋಡುವಂತ, ಕೌಟುಂಬಿಕ ಕಥೆಗೆ ಹೆಚ್ಚು ಒತ್ತು ಕೊಡುತ್ತಾರೆ. ಸದ್ಯ ಮಧ್ಯಾಹ್ನದಿಂದ ಆರಂಭವಾಗಿ ರಾತ್ರಿ 10 ಗಂಟೆಯವರೆಗೂ ಅಚ್ಚುಮೆಚ್ಚಿನ ಧಾರಾವಾಹಿಗಳನ್ನೇ ನೀಡುತ್ತಿದೆ.
ಯಾವುದೂ ಕೂಡ ಟಿಆರ್ಪಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಹೀಗಿರುವಾಗ ಹೊಸ ಧಾರಾವಾಹಿಯೊಂದು ಸೇರ್ಪಡೆಯಾಗುತ್ತಿದೆ. ಹೊಸ ಧಾರಾವಾಹಿಯ ಪ್ರೋಮೊ ನೋಡಿನೇ ಎಲ್ಲರ ಮನಸ್ಸು ಮತ್ತೆ ಮತ್ತೆ ಹೌದಲ್ವಾ ಇಂಥದ್ದೊಂದು ವಿಚಾರವನ್ನು ಗಮನಿಸಿಯೇ ಇರಲಿಲ್ಲವಲ್ಲ ಎಂದು ಹೇಳುತ್ತಿದೆ
ಸಾಮಾನ್ಯವಾಗಿ ಧಾರಾವಾಹಿಗಳು ಕೂಡು ಕುಟುಂಬ, ಸಣ್ಣ ಕುಟುಂಬ, ಜೀವನ ಹೀಗೆ ನಾನಾ ಮಗ್ಗುಲಿನಲ್ಲಿ ಸಾಗುತ್ತೆ. ನಮ್ಮ ಸುತ್ತ ಮುತ್ತ ನಡೆಯುವಂತ ವಿಚಾರವನ್ನೇ ಒತ್ತಿ ಒತ್ತಿ ಹೇಳಲಾಗುತ್ತದೆ. ಅದರಲ್ಲೂ ಧಾರಾವಾಹಿಯಲ್ಲಿ ನಡೆದದ್ದು ನಮ್ಮ ಮನೆ ಪಕ್ಕದಲ್ಲಿಯೇ ನಡೆಯಿತೇನೋ ಎಂಬಂತೆ ಫೀಲ್ ಆಗುವ ರೀತಿಯಲ್ಲಿ ಇತ್ತೀಚಿನ ಧಾರಾವಾಹಿಗಳು ಇರುತ್ತವೆ. ಅದಕ್ಕೂ ಮೀರಿ ಒಂದೊಳ್ಳೆ ಬದಲಾವಣೆ ತರುವಂತ ಧಾರಾವಾಹಿಯೊಂದು ಅತಿ ಶೀಘ್ರದಲ್ಲಿಯೇ ಜೀ ಕನ್ನಡದಲ್ಲಿ ಮೂಡಿ ಬರಲಿದೆ.

ಕಿರುತೆರೆಗೆ ಎಂಟ್ರಿಯಾದ ಸುಧಾರಾಣಿ
80-90ರ ದಶಕದಲ್ಲಿ ಟಾಪ್ ನಟಿಯರ ಪೈಕಿ ಸುಧಾರಾಣಿ ಕೂಡ ಮೊದಲಿಗರೇ ಆಗಿದ್ದರು. ಅವರ ಸಿನಿಮಾ ಎಂದರೆ ನಾ ಮುಂದು ತಾ ಮುಂದು ಎಂದು ಥಿಯೇಟರ್ಗೆ ಬರುವ ಜನರು ಇದ್ದರು. ಈಗಲೂ ಸುಧಾರಾಣಿ ಡಿಮ್ಯಾಂಡ್ ಏನು ಕಡಿಮೆಯಾಗಿಲ್ಲ. ಅಂದಿನಿಂದ ಇಂದಿನವರೆಗೂ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಎಂದರೆ ಅದು ಸುಧಾರಾಣಿ. ಇತ್ತೀಚೆಗೆ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ನಿಭಾಯಿಸಿದ್ದಾರೆ. ಇದೀಗ ಧಾರಾವಾಹಿಗೆ ಬಂದಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಸಂಪೂರ್ಣ ಧಾರಾವಾಹಿ ಇವರ ಮೇಲೆ ನಿಂತಿದೆ. ಸುಧಾರಾಣಿ ಅವರೇ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ.

ತಾಯಿ ಮನೆಯಲ್ಲಿ ಹೇಗಿರುತ್ತಾರೆ?
ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಲೇಬೇಕಾಗುತ್ತದೆ. ಇತ್ತೀಚೆಗೆ ಸೊಸೆಯಾಗಿ ಹೋದ ಹೆಣ್ಣು ಮಕ್ಕಳು ಕೂಡ ಕೆಲಸಕ್ಕೆ ಹೋಗುವುದು, ರಾಯಲ್ ಲೈಫ್ ಲೀಡ್ ಮಾಡುವುದು ಸಾಮಾನ್ಯವಾಗಿದೆ. ಇದು ಸೊಸೆಯಾಗಿ ಬಂದಾಗಿನ ಮಾತು. ಆದರೆ ಆಕೆಯೇ ತಾಯಿಯಾದಾಗ ಅದೆಷ್ಟು ಜವಾಬ್ದಾರಿಗಳು ತನ್ನ ಜೀವನಕ್ಕೆ ಸೇರಿಕೊಳ್ಳುತ್ತದೆ. ಮಗುವಿನ ಬೆಳವಣಿಗೆ ನೋಡುತ್ತಲೇ ತನ್ನೆಲ್ಲಾ ಖುಷಿಯನ್ನು ಮರೆಯುತ್ತಾಳೆ. ಮಗುವಿನ ಜವಾಬ್ದಾರಿಯಷ್ಟೇ ಆಕೆಗೆ ಮುಖ್ಯವಾಗುತ್ತದೆ. ಆತ ದೊಡ್ಡವನಾದರೂ, ಕೆಲಸಕ್ಕೆ ಹೋಗುವವನಂತಾದರೂ, ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವವನಾದರೂ ತಾಯಿಯೇ ಆತನ ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತಾಳೆ. ಆದರೆ ತಾಯಿ ಮನೆಯಲ್ಲಿದ್ದಾಗ ಮಾಡುವ ಕೆಲಸ, ತಮಗಾಗಿ ದುಡಿಯುವ ಸಮಯವನ್ನು ಒಂದೇ ಒಂದು ಬಾರಿಯೂ ಮನೆಯ ಪುರುಷರು ಯೋಚಿಸುವುದಿಲ್ಲ. ಇದು ಆಕೆಯ ಕೆಲಸ ಎಂಬಂತೆಯೇ ನಿರ್ಧರಿಸಿ, ತಮಗೇನು ಬೇಕೋ, ಅಷ್ಟನ್ನು ತೆಗೆದುಕೊಂಡು ಸುಮ್ಮನಾಗಿ ಬಿಡುತ್ತಾರೆ. ಅದೆಲ್ಲವನ್ನು ಸಾರುವ ಧಾರಾವಾಹಿಯಲ್ಲಿ ಸುಧಾರಾಣಿ ಕಾಣಿಸಿಕೊಳ್ಳುತ್ತಿದ್ದಾರೆ.

ಅತಿ ಶೀಘ್ರದಲ್ಲಿ ಶ್ರೀರಸ್ತು ಶುಭಮಸ್ತು ಆರಂಭ
ಈ ಹಿಂದೆ ಕೂಡ ಜೀ ಕನ್ನಡದಲ್ಲಿಯೇ 'ಶ್ರೀರಸ್ತು ಶುಭಮಸ್ತು' ಎಂಬ ಟೈಟಲ್ನಲ್ಲಿ ಧಾರಾವಾಹಿಯೊಂದು ಎಲ್ಲರನ್ನು ರಂಜಿಸಿತ್ತು. ಅದು ಆರು ಅತ್ತೆಯಂದಿರ ಮುದ್ದಿನ ಸೊಸೆಯ ಕಥೆಯಾಗಿತ್ತು. ಆದರೆ ಈ ಬಾರಿ ಮೂಡಿ ಬರುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಕಥೆಯೇ ವಿಭಿನ್ನವಾಗಿದೆ. ಗೃಹಿಣಿಯಾಗಿ ಮನೆಯಲ್ಲಿ ಕೂರುವ ಮಹಿಳೆಯ ಮನಸ್ಥಿತಿ ಹೇಗಿರುತ್ತೆ? ಯಾಕೆ ತನ್ನಲ್ಲಿರುವ ಆಸೆ, ಆಕಾಂಕ್ಷೆಗಳನ್ನೆಲ್ಲಾ ತನ್ನಲ್ಲೇ ಅದುಮಿಟ್ಟುಕೊಳ್ಳುತ್ತಾಳೆ? ಮನೆಯೇ ಪ್ರಪಂಚ ಎಂದುಕೊಳ್ಳುವ ಗೃಹಿಣಿ ಅದೆಷ್ಟು ತ್ಯಾಗಗಳನ್ನು ಮಾಡುತ್ತಾಳೆ ಎಂಬ ಸತ್ಯವನ್ನು ತೋರಿಸಲು ಬರುತ್ತಿರುವ ಧಾರಾವಾಹಿ 'ಶ್ರೀರಸ್ತು ಶುಭಮಸ್ತು' ಆಗಿದೆ. ಈಗಾಗಲೇ ಪ್ರೋಮೊ ಬಿಟ್ಟು ನೋಡುಗರಿಗೆ ಒಂದಷ್ಟು ಖುಷಿ ಜೊತೆಗೆ, ಗೃಹಿಣಿಯರಿಗೆ ನಿಮ್ಮದೇ ಕಥೆ ಹೊತ್ತು ನಗು ಮೂಡಿಸುತ್ತಿದೆ.
ದೀಪಕ್ ಗೌಡ ನೋಡಿದ ಖುಷಿಯಲ್ಲಿ ಫ್ಯಾನ್ಸ್
ಈ ಹಿಂದೆ ಖಾಸಗಿ ಚಾನೆಲ್ ಒಂದರ ಧಾರಾವಾಹಿಯಲ್ಲಿ ಯುವರಾಜನಾಗಿ ದೀಪಕ್ ಗೌಡ ಎಲ್ಲರ ಅಚ್ಚುಮೆಚ್ಚಾಗಿದ್ದರು. ಅವರ ಫ್ಯಾನ್ಸ್ ಪೇಜ್ಗಳು ಸಾಕಷ್ಟಿವೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಟನ್ ಸುಧಾರಾಣಿಯ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೋಮೊ ನೋಡಿದ ಸಾಕಷ್ಟು ಮಂದಿ ಹೀರೊ ಈಸ್ ಬ್ಯಾಕ್ ಎಂದೇ ಖುಷಿ ವ್ಯಕ್ತಪಡಿಸಿದ್ದಾರೆ. ಆಲ್ ದಿ ಬೆಸ್ಟ್ ಬ್ರೋ ಅಂತ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಈಗಾಗಲೇ ಈ ಧಾರಾವಾಹಿ ಮಲೆಯಾಳಂನಲ್ಲಿ ಹಿಟ್ ಆಗಿದ್ದು, ಕನ್ನಡದಲ್ಲಿಯೂ ಮನೆ ಮನ ಮುಟ್ಟುವುದರಲ್ಲಿ ಅನುಮಾನವಿಲ್ಲ ಎಂಬುದು ಪ್ರೋಮೊ ನೋಡಿದಾಗಲೇ ಸಾಬೀತಾಗುತ್ತಿದೆ.


Click it and Unblock the Notifications











