ಅಭಿಮಾನಿಗಳಿಗೆ ಗುಡ್ ನ್ಯೂಸ್; ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಅನುಶ್ರೀ
ಕನ್ನಡ ನಿರೂಪಕಿ, ನಟಿ ಅನುಶ್ರೀ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಇದೇ ಮೊದಲ ಬಾರಿಗೆ ಅನುಶ್ರೀ ಈ ಬಗ್ಗೆ ಮಾತನಾಡಿದ್ದಾರೆ. ಇಷ್ಟು ದಿನ ಮದುವೆ ಬಗ್ಗೆ ಪ್ರಶ್ನೆ ಕೇಳಿದರೆ ಜಾರಿಕೊಳ್ಳುತ್ತಿದ್ದರು. ಆದರೆ ಇದೇ ವರ್ಷ ಹಸೆಮಣೆ ಏರುವುದಾಗಿ ಇದೀಗ ಹೇಳಿದ್ದಾರೆ.
ಡಾಲಿ ಧನಂಜಯ್ ನಿರ್ಮಾನದ 'ವಿದ್ಯಾಪತಿ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ನಾಗಭೂಷಣ್ ಹಾಗೂ ಮಲೈಕಾ ವಸುಪಾಲ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಚಾರದ ಭಾಗವಾಗಿ ಅನುಶ್ರೀ ಜೊತೆ ಇನ್ನೂ ಇನ್ಸ್ಟಾಗ್ರಾಮ್ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅನುಶ್ರೀ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಆದರೆ ನುಣುಚಿಕೊಳ್ಳದೇ ನೇರವಾಗಿ ಮಾತನಾಡಿದ್ದಾರೆ.

ಮಲೈಕಾ ಮಾತನಾಡುತ್ತಾ ಅಕ್ಕ ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಾರೆ. ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಅನುಶ್ರೀ "ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದಾರೆ. "ಈ ವರ್ಷ ನನ್ನ ಮದುವೆ ಗ್ಯಾರೆಂಟಿ" ಎಂದು ಅನುಶ್ರೀ ಹೇಳಿರುವುದು ವೈರಲ್ ಆಗ್ತಿದೆ.
ಮಂಗಳೂರು ಪ್ರಾದೇಶಿಕ ವಾಹಿನಿ 'ನಮ್ಮ ಟಿವಿ'ಯಲ್ಲಿ 'ಟೆಲಿ ಅಂತ್ಯಾಕ್ಷರಿ' ಎಂಬ ಫೋನ್-ಇನ್ ಮ್ಯೂಸಿಕ್ ಶೋನಲ್ಲಿ ನಿರೂಪಕಿಯಾಗಿ ಅನುಶ್ರೀ ಪರಿಚಿತರಾಗಿದ್ದರು. ಬಳಿಕ ಈಟಿವಿಯಲ್ಲಿ ಪ್ರಸಾರವಾಗಿದ್ದ 'ಡಿಮ್ಯಾಂಡಪ್ಪೋ ಡಿಮ್ಯಾಂಡು' ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಬಳಿಕ ನಿಧಾನವಾಗಿ ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ದೊಡ್ಡ ದೊಡ್ಡ ಕಾರ್ಯಕ್ರಮಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡರು.
ಹರಳು ಹುರಿದಂತೆ ಪಟ ಪಟ ಮಾತನಾಡುವ ಅನುಶ್ರೀ ತಮ್ಮ ವಾಕ್ ಚಾತುರ್ಯದಿಂದ ವೀಕ್ಷಕರ ಮನಗೆದ್ದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜೀ ಕನ್ನಡ ವಾಹಿಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾ ಬರ್ತಿದ್ದಾರೆ. 'ಸರಿಗಮಪ', 'ಕಾಮಿಡಿ ಕಿಲಾಡಿಗಳು', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರೀತಿಯ ಶೋಗಳು ಆಕೆಗೆ ನೇಮು ಫೇಮು ತಂದುಕೊಟ್ಟವು. ಕೆಲ ಕನ್ನಡ ಸಿನಿಮಾಗಳಲ್ಲಿ ಕೂಡ ಅನುಶ್ರೀ ಬಣ್ಣ ಹಚ್ಚಿ ನಟಿಸಿದ್ದಾರೆ.
ಅಪರ್ಣಾ ಬಳಿಕ ಕನ್ನಡದ ಬಹಳ ಜನಪ್ರಿಯ ನಿರೂಪಕಿ ಎಂಬ ಹೆಗ್ಗಳಿಕೆಗೆ ಅನುಶ್ರೀ ಪಾತ್ರರಾಗಿದ್ದಾರೆ. ಆರಂಭದಲ್ಲಿ ಒಂದು ಎಪಿಸೋಡ್ ನಿರೂಪಣೆಗೆ 250 ರೂ. ಸಂಭಾವನೆ ಪಡೆಯುತ್ತಿದ್ದ ಅನುಶ್ರೀ ಇಂದು ಒಂದು ಲಕ್ಷ ರೂ.ಗೂ ಹೆಚ್ಚು ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ. ಬರೀ ಕಿರುತೆರೆ ಕಾರ್ಯಕ್ರಮ ನಿರೂಪಣೆ ಮಾತ್ರವಲ್ಲ, ದೊಡ್ಡ ದೊಡ್ಡ ಕಾರ್ಯಕ್ರಮಗಳ ನಿರೂಪಣೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.
ತಮ್ಮದೇ ಯೂಟ್ಯೂಬ್ ಚಾನಲ್ ಹೊಂದಿರುವ ಅನುಶ್ರೀ ಅಂದರಿಂದಲೂ ಒಳ್ಳೆ ಆದಾಯ ಗಳಿಸುತ್ತಿದ್ದಾರೆ. ಸುವರ್ಣ ಫಿಲ್ಮ್ ಅವಾರ್ಡ್ಸ್, ಫಿಲ್ಮ್ಫೇರ್ ಅವಾರ್ಡ್ಸ್, ಜೀ ಮ್ಯೂಸಿಕ್ ಅವಾರ್ಡ್ಸ್, ಸೈಮಾ ಅವಾರ್ಡ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕಾರ್ಯಕ್ರಮ ಸೇರಿ ಹಲವು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್-1ರ ಸ್ಪರ್ಧಿಯಾಗಿ ಅನುಶ್ರೀ ದೊಡ್ಮನೆ ಒಳಗೆ ಹೋಗಿದ್ದರು. 'ಮುರಳಿ ಮೀಟ್ಸ್ ಮೀರಾ' ಚಿತ್ರಕ್ಕೆ ಕಂಠದಾನ ಕಲಾವಿದೆಯಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು. 'ಟ್ಯೂಬ್ಲೈಟ್', 'ಬೆಂಕಿಪಟ್ನ', 'ಕಿಂಗ್ ಮಾಸ್ಟರ್', 'ಉಪ್ಪು ಹುಳಿ ಖಾರ' ಅನುಶ್ರೀ ನಟಿಸಿದ ಕೆಲ ಸಿನಿಮಾಗಳು. ಆದರೆ ಬಳಿಕ ಆಕೆ ಸಿನಿಮಾಗಳಿಂದ ದೂರವೇ ಉಳಿದುಬಿಟ್ಟರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಅನುಶ್ರೀ ಬಹಳ ಆಕ್ಟೀವ್ ಆಗಿದ್ದಾರೆ. 20 ಲಕ್ಷಕ್ಕೂ ಅಧಿಕ ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದಾರೆ. ಜಾಹೀರಾತುಗಳು ಮೂಲಕವೂ ಆದಾಯ ಗಳಿಸುತ್ತಿದ್ದಾರೆ.


Click it and Unblock the Notifications











