ಬಿಗ್ ಬಾಸ್ ನಲ್ಲಿ ನರ್ಸ್ ಜಯಲಕ್ಷ್ಮಿ ಕುಚಿಕು ಕುಚಿಕು!
ಕನ್ನಡ ರಿಯಾಲಿಟಿ ಶೋ 'ಬಿಗ್ ಬಾಸ್' ಮೂರನೇ ದಿನ ಒಂದಷ್ಟು ತಮಾಷೆ ಪ್ರಸಂಗಗಳಿಗೆ ವೇದಿಕೆಯಾಯಿತು. ಎಲ್ಲರೂ ಆದಷ್ಟು ಕನ್ನಡದಲ್ಲೇ ಮಾತನಾಡಬೇಕೆಂಬ ಕಟ್ಟಪ್ಪಣೆಯನ್ನು ಬಿಗ್ ಬಾಸ್ ಮಾಡಿದ್ದಾನೆ. ಒಂದು ಮನೆ ಎಂದ ಮೇಲೆ ಎಲ್ಲರೂ ಹೊಂದಿಕೊಂಡು ಹೋಗಬೇಕಲ್ಲವೆ?
ಆದರೆ ಇಲ್ಲಿ ನಾನಾ ಪಿತೂರಿಗಳು ನಡೆಯುತ್ತಿವೆ. ವಿನಾಯಕ ಜೋಶಿ ಅವರಂತೂ ಉಳಿದ ಸ್ಪರ್ಧಿಗಳ ಕಿವಿಗೆ ಗುಲಾಬಿ ಹೂವನ್ನೇ ಇಟ್ಟಿದ್ದಾರೆ. ಹುಡುಗಿಯೊಬ್ಬಳನ್ನು ಲವ್ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದಾರೆ. ಸ್ಪರ್ಧಿಗಳು ಒಂದರ್ಥದಲ್ಲಿ ಜೋಶಿ ಅವರ ಕಾಗಕ್ಕ ಗುಬ್ಬಕ್ಕ ಕಥೆಯನ್ನು ನಂಬಿದ್ದಾರೆ.
ಇನ್ನು ನರೇಂದ್ರ ಬಾಬು ಶರ್ಮಾ ಮೂರನೆ ದಿನ ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾದರು. ಯಾವುದೇ ಕಾರಣಕ್ಕೂ ತಾವು ಸೂಚನೆ ಕೊಡುವ ತನಕ ಮಲಗಬಾರದು ಎಂದು ಎಚ್ಚರಿಸಿದ್ದರೂ ಮಟಮಟ ಮಧ್ಯಾಹ್ನವೇ ಶರ್ಮಾ ಅವರು ನಿದ್ದೆಗೆ ಜಾರಿದ್ದರು.

ಶರ್ಮಾ ಅವರ ಬ್ರಹ್ಮಾಂಡ ರಹಸ್ಯ ಬಯಲು
ತಾವು ಟಿವಿ ವಾಹಿನಿಗೆ ಅಡಿಯಿಟ್ಟದ್ದು, ಟಿಆರ್ ಪಿಯನ್ನೂ ಹೆಚ್ಚಿಸಿದ್ದು ಎಲ್ಲವನ್ನೂ ಶರ್ಮಾ ಹೇಳಿಕೊಂಡರು. ತಾವು ಚಿಕ್ಕಂದಿನಿಂದಲೂ ಏನಾದರೂ ಚೆನ್ನಾಗಿದೆ ಎಂದು ಹೇಳಬೇಕಾದರೆ ಬ್ರಹ್ಮಾಂಡವಾಗಿದೆ ಎನ್ನುತ್ತಿದ್ದೆ. ಹಾಗಾಗಿ ತಮ್ಮ ಕಾರ್ಯಕ್ರಮಗಳಿಗೆ 'ಬ್ರಹ್ಮಾಂಡ' ಎಂಬ ಪದ ಪರ್ಮನೆಂಟ್ ಆಗಿ ಇಟ್ಟುಕೊಂಡೆ ಎಂದರು.

ಟಿಆರ್ ಪಿ ಮೇಲಕ್ಕೆತ್ತಿದ್ದೇ ನನ್ನ ಬ್ರಹ್ಮಾಂಡ
ವಾಹಿನಿಯೊಂದರಲ್ಲಿ ಇವರ ಬ್ರಹ್ಮಾಂಡ ಕಾರ್ಯಕ್ರಮದಿಂದ ದಿನಕ್ಕೆ ರು.16 ಲಕ್ಷ ರೂಪಾಯಿ ಜಾಹೀರಾತು ರೂಪದಲ್ಲಿ ಹರಿದುಬರುತ್ತಿತ್ತಂತೆ. ತಳಕಚ್ಚಿದ್ದ ಸಾಕಷ್ಟು ಟಿವಿ ವಾಹಿನಿಗಳ ಟಿಆರ್ ಪಿಯನ್ನು ಮೇಲಕ್ಕೆತ್ತಿದ್ದೇ ತಮ್ಮ ಘನಂದಾರಿ ಕೆಲಸ ಎಂಬಂತೆ ಹೇಳಿಕೊಂಡರು.

ಜಯಲಕ್ಷ್ಮಿ ಕುಚಿಕು ಕುಚಿಕು ಸ್ಟೋರಿ
ಇನ್ನು ಸರ್ಸ್ ಜಯಲಕ್ಷ್ಮಿ ಅವರು ತಮ್ಮ ಹಳೆ ಲವ್ ಸ್ಟೋರಿಯನ್ನು ನಿಖಿತಾ ಜೊತೆ ಹಂಚಿಕೊಂಡರು. ಅವರು ತಮ್ಮ ಸ್ಟೋರಿಗೆ ಕುಚಿಕು ಕುಚಿಕು ಸ್ಟೋರಿ ಎಂದರು. ಇಷ್ಟಕ್ಕೂ ಕುಚಿಕು ಕುಚಿಕು ಎಂದರೆ ಅದೇನು ಅರ್ಥವೋ ಏನೋ. ಪ್ರೊ.ಜಿ.ವೆಂಕಟ ಸುಬ್ಬಯ್ಯನವರ ಪದಕೋಶದಲ್ಲೂ ಈ ಪದಕ್ಕೆ ಅರ್ಥ ಸಿಗಲ್ಲ.

ಮಾಜಿ ಪ್ರಿಯತಮನ ನೆನೆಸಿಕೊಂಡ ಜಯಲಕ್ಷ್ಮಿ
ಅವರು ತಮ್ಮ ಮಾಜಿ ಪ್ರಿಯತಮನ ಹೆಸರನ್ನು ಹೇಳಿಕೊಳ್ಳದೆ ಅಬಕಾರಿ ಸಚಿವ ಎಂದು ಹೇಳಿಕೊಂಡರು. ತಾವು ನರ್ಸಿಂಗ್ ಕಾಲೇಜಿಗಾಗಿ ಅರ್ಜಿ ಸಲ್ಲಿಸಿದ್ದು, ಬಳಿಕ ಅವರ ಪ್ರೀತಿಗೆ ಪಾತ್ರರಾಗಿದ್ದನ್ನು ಆಳವಾಗಿ ಹೇಳಿಕೊಳ್ಳದೆ ಮೇಲ್ಮೆಲೆ ತೇಲಿಸಿ ಹೇಳಿಕೊಂಡರು.

ಬ್ರಹ್ಮಾಂಡ ಶರ್ಮಾ ತಮಾಷೆ ಪ್ರಸಂಗ
ಬ್ರಹ್ಮಾಂಡ ಶರ್ಮಾರಿಂದ ಇನ್ನೊಂದು ತಮಾಷೆ ಪ್ರಸಂಗವೂ ಈ ಸಂದರ್ಭದಲ್ಲಿ ನಡೆಯಿತು. ಮುಖ ತೊಳೆದುಕೊಳ್ಳಲು ಹೋದ ಶರ್ಮಾ ಅವರು ಅಲ್ಲಿದ್ದ ಮೌತ್ ವಾಶ್ ಕೈಗೆತ್ತಿಕೊಂಡು ಇದರಿಂದ ಮುಖ ತೊಳೆದುಕೊಳ್ಳುವುದೇಗೆ ಎಂದು ವಿಜಯ ರಾಘವೇಂದ್ರ ಅವರನ್ನು ಕೇಳಿದರು.

ನೀವು ಬಗ್ಗಿ ಅವರು ತಗ್ಗುತ್ತಾರೆ ಎಂದ ಶರ್ಮಾ
ಅಯ್ಯೋ ಮುಖ ತೊಳೆದುಕೊಳ್ಳುವ ಕ್ರೀಮಲ್ಲ ಗುರೂಜಿ ಅದು ಮೌತ್ ವಾಶ್ ಎಂದು ಹೇಳಿ ಅದನ್ನು ಬಳಸುವ ವಿಧಾನವನ್ನೂ ತಿಳಿಸಿದರು. ಇನ್ನೊಂದು ಸಂದರ್ಭದಲ್ಲಿ ಬಿಗ್ ಬಾಸ್ ಮನೆಯಲ್ಲಿ ನಾವು ತಗ್ಗಿಬಗ್ಗಿ ನಡೆಯಬೇಕು ಎಂದು ಜಯಲಕ್ಷ್ಮಿ ಹೇಳಿದರು. ಅದಕ್ಕೆ ಶರ್ಮಾ ಸಾಹೇಬರು ನೀವು 'ಬಗ್ಗಿ' ಅವರು 'ತಗ್ಗು'ತ್ತಾರೆ ಎಂದು ಹಾಸ್ಯ ಚಟಾಕಿಯನ್ನೂ ಸಿಡಿಸಿದರು.


Click it and Unblock the Notifications











