ಕನ್ನಡ ಬಿಗ್ ಬಾಸ್ ಮೊದಲ ದಿನದ ಮಸಲತ್ತುಗಳು
ಕನ್ನಡ ಕಿರುತೆರೆಯಲ್ಲಿ ಭಾರಿ ಸಂಚಲನ ಮೂಡಿಸಿರುವ ರಿಯಾಲಿಟಿ ಶೋ 'ಬಿಗ್ ಬಾಸ್'. ಮೊದಲ ದಿನ (ಮಾ.25) ಮೌನ ಎಂಬಂತೆ ಕಾರ್ಯಕ್ರಮ ಆರಂಭವಾಯಿತು. ಬರುಬರುತ್ತಾ ಕಾರ್ಯಕ್ರಮ ಕಾವೇರುವ ಸೂಚನೆಗಳನ್ನು ನೀಡಿದೆ.
ಒಂದೇ ಮನೆಯಲ್ಲಿ ಹನ್ನೆರಡು ಮಂದಿ ಸ್ಪರ್ಧಿಗಳು. ಹನ್ನೆರಡು ವಿಭಿನ್ನ ಮನೋಭಾವದ ಜನ ಒಂದೇ ಮನೆಯಲ್ಲಿದ್ದರೆ ಏನೆಲ್ಲಾ ಆಗುತ್ತದೆ. ಕಿತ್ತಾಟ, ಜಗಳ, ಮನಸ್ತಾಪ, ಕೋಪ ತಾಪ ಇದ್ದಿದ್ದೇ. ಮೊದಲ ದಿನ ಎಲ್ಲಾ ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿದರು.
ಕೆಲವರು ಎಲ್ಲರೊಂದಿಗೂ ಬೆರೆತರೆ, ಕೆಲವರು ಸ್ವಲ್ಪ ಮಂದಿ ಜೊತೆಗೆ ಮಾತ್ರ ಕ್ಲೋಸ್. ಇನ್ನು ಬೃಹತ್ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಮಾತ್ರ ತಮ್ಮ ಪಾಡಿಗೆ ತಾವು ದಿನವೆಲ್ಲಾ ಕಾಲಯಾಪನೆ ಮಾಡುತ್ತಿದ್ದರು. ಅವರು ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ.

ಅಪರ್ಣಾ ಅವರಿಗೆ ಮಾತು ಬೆಳ್ಳಿ ಮೌನ ಬಂಗಾರ
ಇರುವುದರಲ್ಲಿ ಪಟಪಟ ಎಂದು ಮಾತನಾಡುತ್ತಿದ್ದದ್ದು ಮಾತ್ರ ಅನುಶ್ರೀ. ನರ್ಸ್ ಜಯಲಕ್ಷ್ಮಿ ಅವರು ಅಷ್ಟೇ ಸಾಧ್ಯವಾದಷ್ಟು ಎಲ್ಲರೊಂದಿಗೂ ಬೆರೆಯಲು ಪ್ರಯತ್ನಿಸುತ್ತಿದ್ದರು. ಅಪರ್ಣಾ ಅವರಿಗಂತೂ ಮಾತು ಬೆಳ್ಳಿ ಮೌನ ಬಂಗಾರ.

ಜಯಲಕ್ಷ್ಮಿ, ಶರ್ಮಾ ನಡುವೆ ಹಗ್ಗ ಜಗ್ಗಾಟ
ನರೇಂದ್ರ ಬಾಬು ಶರ್ಮಾ ಹಾಗೂ ನರ್ಸ್ ಜಯಲಕ್ಷ್ಮಿ ಅವರನ್ನು ಮನೆಯಿಂದ ಹೊರಹಾಕುವ ಪ್ರಯತ್ನಗಳು ಉಳಿದ ಸ್ಪರ್ಧಿಗಳಿಂದ ಎದುರಾಗಿದೆ. ಅವರು ಮನೆಯಲ್ಲೇ ಉಳಿಯಬೇಕು ಎಂದರೆ ವಾಹಿನಿಯ ವೀಕ್ಷಕರೇ ಕಾಪಾಡಬೇಕು. ಅವರು ಕಳುಹಿಸುವ ಎಸ್ಎಂಎಸ್ ಗಳ ಆಧಾರದ ಮೇಲೆ ಇವರಿಬ್ಬರ ಎಲಿಮಿನೇಷನ್ ಅವಲಂಬಿಸಿರುತ್ತದೆ.

ಇನ್ನೂ ಒಂದಷ್ಟು ಎಡವಟ್ಟುಗಳಿವೆ
ಇನ್ನು ಮೊದಲ ದಿನದ ಶೋ ನೋಡಿದಾಗ ಅಪಸವ್ಯಗಳೇ ಹೆಚ್ಚಾಗಿ ಕಂಡುಬಂದವು. ಪರದೆ ಮೇಲಿನ ಸನ್ನಿವೇಶಗಳಿಗೂ ಅವರ ಮಾತಿಗೂ ಹೊಂದಾಣಿಕೆಯಾಗುತ್ತಿರಲಿಲ್ಲ. ಧ್ವನಿ ಸಿಂಕ್ ಆಗದೆ ಇಡೀ ಕಾರ್ಯಕ್ರಮ ಗೊಂದಲ ಮೂಡಿಸಿತು.

ಬಿಗ್ ಬಾಸ್ ವಾಯ್ಸ್ ಬದಲಾಗಿದೆ
ಮೊದಲ ದಿನದ ಬದಲಾವಣೆ ಎಂದರೆ 'ಬಿಗ್ ಬಾಸ್' ವಾಯ್ಸ್ ಬದಲಾಗಿದೆ. ಇದಕ್ಕೆ ಯಾರು ಧ್ವನಿಯಾಗಿದ್ದಾರೆ ಎಂಬ ಕುತೂಹಲ ಇದ್ದೇ ಇದೆ. ಬಿಗ್ ಬಾಸ್ ವಾಯ್ಸ್ ಈಗ ಕೇಳಲು ಪರ್ವಾಗಿಲ್ಲ ಅನ್ನಿಸುತ್ತದೆ.

ಬಿಗ್ ಬಾಸ್ ಆಜ್ಞೆಗೆ ಎಲ್ಲರೂ ಬದ್ಧ
ಬೆಳಗ್ಗೆ 6ಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಹಾಸಿಗೆಯಿಂದ ಏಳಬೇಕು. ರಾತ್ರಿ ಮಲಗಬೇಕಾದರೆ 'ಬಿಗ್ ಬಾಸ್' ಆಜ್ಞೆಗಾಗಿ ಕಾಯಬೇಕು. ರಾತ್ರಿ 11.30ಕ್ಕೆ ಸರಿಯಾಗಿ ಬಿಗ್ ಬಾಸ್ ಲೈಟ್ ಆಫ್ ಮಾಡಿದ. ಎಲ್ಲರೂ ತಮ್ಮ ತಮ್ಮ ಕೋಣೆಗಳಿಗೆ ಹೋಗಿ ಮಲಗಿದರು. ಮೊದಲ ದಿನ ಗಮನಸೆಳೆದ ಕೆಲವು ಸಂಗತಿಗಳು.

ಸೋಮಾರಿಯಂತೆ ಕಂಡುಬಂದ ಶರ್ಮಾ
ನರೇಂದ್ರ ಬಾಬು ಶರ್ಮಾ ಅವರಂತೂ ಸೋಮಾರಿಯಂತೆ ಕಂಡುಬಂದರು. ಎಲ್ಲರೂ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೆ. ಸ್ವಾಮೀಜಿಗಳು ಮಾತ್ರ ತಮ್ಮ ದೇಹವನ್ನು ಸ್ವಲ್ಪವೂ ಬಗ್ಗಿಸಲಿಲ್ಲ. ಆದರೆ ಊಟಕ್ಕೆ ಮಾತ್ರ ಹಾಜರಾಗುತ್ತಿದ್ದರು.

ನಿಖಿತಾ ಜೊತೆಗೆ ಶರ್ಮಾ ಪಟ್ಟಾಂಗ
ಅದ್ಯಾಕೋ ಏನೋ ಬ್ರಹ್ಮಾಂಡ ಸ್ವಾಮೀಜಿಗಳು ಯಾರ ಜೊತೆಗೂ ಹೆಚ್ಚಾಗಿ ಇರದಿದ್ದರೂ ನಿಖಿತಾ ತುಕ್ರಲ್ ಜೊತೆಗೆ ಮಾತ್ರ ಪಟ್ಟಾಂಗ ಹೊಡೆಯುತ್ತಿದ್ದರು. ಆಕೆಗೂ ಭವಿಷ್ಯ ಹೇಳುತ್ತಿದ್ದರು. ನಿಮ್ಮ ಮನೆಯಲ್ಲಿ ನೀರು ಯಾವ ದಿಕ್ಕಿನಲ್ಲಿದೆ ಎಂದು ಅದೂ ಇದೂ ಕೇಳಿ ತಲೆತಿನ್ನುತ್ತಿದ್ದರು. ಆಕೆಗೋ ಕನ್ನಡ ಬರಲ್ಲ. ಇವರಿಗೆ ಇಂಗ್ಲಿಷ್ ಬರಲ್ಲ.

ತೆಲುಗಿನಲ್ಲೇ ಶರ್ಮಾ ಸಂಭಾಷಣೆ
ಕಡೆಗೆ ಬ್ರಹ್ಮಾಂಡ ಸ್ವಾಮೀಜಿಗಳು ನಿಖಿತಾ ಜೊತೆ ತೆಲುಗಿನಲ್ಲೇ ಮಾತನಾಡಲು ಶುರುವಚ್ಚಿಕೊಂಡರು. ಬಿಗ್ ಬಾಸ್ ನಿಯಮಗಳ ಪ್ರಕಾರ ಎಲ್ಲರೂ ಕನ್ನಡದಲ್ಲೇ ಸಂಭಾಷಣೆ ಮಾಡಬೇಕು. ಸ್ವಾಮೀಜಿಗಳು ಮೊದಲ ದಿನವೇ ಎಡವಿದರು.

Pessimist ಮುಂಡೆಮಕ್ಕಳು ಎಂದ ಶರ್ಮಾ
ಇಲ್ಲೂ ತಮ್ಮ ಸಂಸ್ಕೃತ ಭಾಷೆಯನ್ನು ಬಿಡಲಿಲ್ಲ. "Pessimist (ನಿರಾಶಾವಾದಿ) ಮುಂಡೆಮಕ್ಕಳು" ಎಂಬ ಪದಪ್ರಯೋಗವನ್ನು ಮಾಡಿದರು. ಬಳಿಕ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ತಮಗೆ ದೂರದ ಸಂಬಂಧಿ ಎಂದು ಹೇಳಿಕೊಂಡರು.

ನರ್ಸ್ ಜಯಲಕ್ಷ್ಮಿ ಮನದಾಳದ ಮಾತುಗಳು
ಇನ್ನು ನರ್ಸ್ ಜಯಲಕ್ಷ್ಮಿ ಅವರಂತೂ ತಾವು ಮಗುವೊಂದನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದರು. ಆಕೆಗೆ ಜಮ್ಮು ಕಾಶ್ಮೀರದ ಮಕ್ಕಳೆಂದರೆ ಬಹಳ ಇಷ್ಟವಂತೆ. ಅಲ್ಲಿನ ಮಗುವನ್ನೇ ದತ್ತು ಪಡೆಯುತ್ತಾರಂತೆ. ಕಾಶ್ಮೀರದ ಸೇಬಿನಂತಿರುವ ಅಲ್ಲಿನ ಮಕ್ಕಳನ್ನು ನೋಡುತ್ತಿದ್ದರೆ ಹಾಗೆಯೇ ಎತ್ತಾಕಿಕೊಂಡು ಬರೋಣ ಅನ್ನಿಸುತ್ತದೆ ಎಂದರು.

ಏನೋ ಕೇಳಿ ನಾಲಿಗೆ ಕಚ್ಚಿಕೊಂಡ ಅನುಶ್ರೀ
ಇನ್ನು ಅನುಶ್ರೀ ಅವರಂತೂ ಜಯಲಕ್ಷ್ಮಿ ಅವರನ್ನು ನಿಮಗೆಷ್ಟೆ ಮಕ್ಕಳು ಎಂದು ಕೇಳಿ ನಾಲಿಗೆ ಕಚ್ಚಿಕೊಂಡರು. ಅಯ್ಯೋ ಸಾರಿ ನಿಮಗೆ ಮದುವೆಯಾಗಿಲ್ಲ ಎಂಬ ವಿಚಾರ ನನಗೆ ಗೊತ್ತಿಲ್ಲ ಕ್ಷಮಿಸಿ ಎಂದು ಅಂಗಲಾಚಿ ಬೇಡಿಕೊಂಡಿದ್ದೂ ಆಯಿತು.

ತಿಲಕ್ ಮೇಲೆ ಸಂಜನಾಗೆ ಏನೋ ಒಂಥರಾ
ಇನ್ನು ಗಂಡಹೆಂಡತಿ ಸಂಜನಾ ಅವರಿಗಂತೂ ತಿಲಕ್ ತಮ್ಮ ಸಂಗಡ ಇರುವುದು ಸುತಾರಾಂ ಇಷ್ಟವಿಲ್ಲ. ಇಬ್ಬರೂ ಜೊತೆಯಲ್ಲೇ ಇದ್ದರೆ ಇನ್ನೇನು ಗಾಸಿಪ್ ಗಳು ಹಬ್ಬುತ್ತವೋ ಎಂಬ ಭಯ ಸಂಜನಾರನ್ನು ಕಾಡುತ್ತಿತ್ತು. ತಿಲಕ್ ರನ್ನು ಮನೆಯಿಂದ ಆದಷ್ಟು ಬೇಗ ಹೊರದಬ್ಬುವ ಮಸಲತ್ತು ಅವರದು.

ಎರಡನೇ ದಿನ ಕಾದಿದೆ ಬಿಗ್ ಫೈಟ್
ಇನ್ನು ಶ್ವೇತಾ ಪಂಡಿತ್, ಅರುಣ್ ಸಾಗರ್, ವಿಜಯ ರಾಘವೇಂದ್ರ, ವಿನಾಯಕ ಜೋಶಿ ಹಾಗೂ ಚಂದ್ರಿಕಾ ಅವರು ಅಷ್ಟೇ ತಮ್ಮ ಪಾಡಿಗೆ ತಾವಿದ್ದರು. ಹೆಚ್ಚು ಮಾತಿಲ್ಲ ಕಥೆಯಿಲ್ಲ. ಏನು ಮಾತನಾಡಿದರೆ ಇನ್ನೇನಾಗುತ್ತದೋ ಎಂಬ ಭಯದಲ್ಲೇ ದಿನ ನೂಕಿದರು. ಎರಡನೇ ದಿನ ನರೇಂದ್ರ ಬಾಬು ಅವರಿಗೂ ಅನುಶ್ರೀ ಅವರಿಗೂ ಬಿಗ್ ಫೈಟ್ ಕಾದಿದೆ. ಅದರ ವಿವರಗಳನ್ನು ನಿರೀಕ್ಷಿಸಿ.


Click it and Unblock the Notifications











