ನಿರೂಪಕನಾಗಿ ಕನ್ನಡಿಗರ ಮನಗೆದ್ದಿರುವ ಅಕುಲ್ ಬಾಲಾಜಿ ನಟಿಸಿದ ಮೊದಲ ಸಿನಿಮ ಯಾವುದು?
ಒಂದೂವರೆ ವರ್ಷದ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡಿದ್ದ 'ಭರ್ಜರಿ ಬ್ಯಾಚುಲರ್ಸ್' ಶೋವಿನ ನಿರೂಪಣೆ ಮಾಡಿದ್ದ ಅಕುಲ್ ನಟನೆಯ ಹೊರತಾಗಿ ನಿರೂಪಣೆಯ ಜಗತ್ತಿನಲ್ಲಿ ಗುರುತಿಸಿಕೊಂಡಿರುವವರು. ಕಳೆದ ವರ್ಷ ಪ್ರಸಾರವಾಗುತ್ತಿದ್ದ 'ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್'ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಇವರು ಒಂದು ತಂಡವನ್ನು ಲೀಡ್ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಬರೋಬ್ಬರಿ ಹದಿನೆಂಟು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಣಿಯೋಣು ಬಾರ'ಶೋ ವನ್ನು ನಿರೂಪಣೆ ಮಾಡುವ ಮೂಲಕ ನಿರೂಪಕರಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು ಅಕುಲ್ ಬಾಲಾಜಿ. ನಂತರ ಕಾಮಿಡಿ ಕಿಲಾಡಿಗಳು ಶೋವಿನ ನಿರೂಪಣೆ ಮಾಡಿದ್ದ ಇವರು ಮುಂದೆ ಕುಣಿಯೋಣು ಬಾರಾ ಬಾಯ್ಸ್ ವರ್ಸಸ್ ಗರ್ಲ್ಸ್ ಸಿರೀಸ್ನಲ್ಲಿ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು.

ಮುಂದೆ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಸೀಸನ್ 1, 2 ಮತ್ತು 3, 'ಹಳ್ಳಿ ಹೈದ ಪ್ಯಾಟೆಗ್ ಬಂದ', 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಸೀಸನ್ 1 ಮತ್ತು 2, 'ಹೊಸ ಲವ್ ಸ್ಟೋರಿ', 'ನೋಡಿ ಸ್ವಾಮಿ ನಾವಿರೋದೇ ಹೀಗೆ', 'ಮನೆ ಮುಂದೆ ಮಹಾಲಕ್ಷ್ಮಿ', 'ಇಂಡಿಯನ್', 'ತಕಧಿಮಿತಾ ಡ್ಯಾನ್ಸಿಂಗ್ ಸ್ಟಾರ್', 'ಡ್ಯಾನ್ಸಿಂಗ್ ಸ್ಟಾರ್' ಸೀಸಸ್ಗಳು, 'ಡ್ಯಾನ್ಸಿಂಗ್ ಸ್ಟಾರ್ ಜ್ಯೂನಿಯರ್', 'ಸೂಪರ್ ಜೋಡಿ', 'ಸ್ಟಾರ್ ಸುವರ್ಣ ಡ್ಯಾನ್ಸ್ ಡ್ಯಾನ್ಸ್', 'ಕಿಕ್', 'ಸೂಪರ್ ಜೋಡಿ' ಸೀಸನ್ 2, 'ಕುಕ್ಕು ವಿಥ್ ಕಿರಿಕ್ಕು' ಹೀಗೆ ಇಪ್ಪತ್ತಕ್ಕೂ ಹೆಚ್ಚಿನ ಶೋಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಇನ್ನು ಇದರ ಜೊತೆಗೆ ಕನ್ನಡ ಮಾತ್ರವಲ್ಲದೇ ತೆಲುಗಿನ ಒಂದೆರಡು ಶೋಗಳ ನಿರೂಪಕರಾಗಿ ಕಾಣಿಸಿಕೊಂಡಿರುವ ಅಕುಲ್ ಬಾಲಾಜಿ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಓಹಲು ಗುಸಾಗುಸಲಾಡೆ' ಧಾರಾವಾಹಿಯಲ್ಲಿ ನಾಯಕ ಅಭಿರಾಮ್ ಆಗಿ ಬಣ್ಣ ಹಚ್ಚಿದವರು. ಸಂತೋಷದ ವಿಷಯವೆಂದರೆ ಈ ಧಾರಾವಾಹಿ 'ಪುನರ್ ವಿವಾಹ' ಎಂಬ ಹೆಸರಿನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು.
ಹಿರಿತೆರೆ ವಿಚಾರ ಬಂದರೆ 'ಕಲ್ಲರಳಿ ಹೂವಾಗಿ' ಸಿನಿಮಾದ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಈತ ನಿರೂಪಕನಾಗಿ ಗುರುತಿಸಿಕೊಂಡಿದ್ದೇ ಹೆಚ್ಚು. ಆಂಧ್ರಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ದರೂ ಈತ ಅಪ್ಪಟ ಕನ್ನಡ ಪ್ರೇಮಿ. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ವೀಕ್ಷಕರ ಮನ ಸೆಳೆದು ಈಗ ನಿರೂಪಣಾ ಕ್ಷೇತ್ರದಲ್ಲಿ ಅಕುಲ್ ಬಾಲಾಜಿ ಮಿಂಚುತ್ತಿದ್ದಾರೆ. 'ಮಿಲನ' ಸಿನಿಮಾದಲ್ಲಿ ಅತಿಥಿಯಾಗಿ ನಟಿಸಿದ ಇವರು ಮುಂದೆ 'ಆತ್ಮೀಯ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ನಂತರ 'ಪರಮೇಶ ಪಾನ್ ವಾಲ', 'ಮೈನಾ', 'ಪ್ಯಾರ್ಗೆ ಆಗ್ಬಿಟೈತೆ', 'ಲೂಸ್ಗಳು', 'ಕ್ರೇಜಿಸ್ಟಾರ್' ಸಿನಿಮಾಗಳಲ್ಲಿ ಅಕುಲ್ ಬಾಲಾಜಿ ನಟಿಸಿದ್ದರೂ ನಟನೆಗಿಂತಲೂ ನಿರೂಪಕರಾಗಿ ಅವರು ಗುರುತಿಸಿಕೊಂಡಿದ್ದು ಹೆಚ್ಚು.
ಇನ್ನು ಮುಖ್ಯವಾದ ವಿಚಾರವೆಂದರೆ ಅಕುಲ್ ಬಾಲಾಜಿ ಒಬ್ಬ ಡ್ಯಾನ್ಸರ್ ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ತಮ್ಮ 16ನೇ ವಯಸ್ಸಿಗೆ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದ ಅಕುಲ್ ಶಾಸ್ತ್ರೋಕ್ತವಾಗಿ ಭರತನಾಟ್ಯವನ್ನು ಕಲಿತಿದ್ದಾರೆ. ಶ್ರೀಮತಿ ಉಷಾ ದತ್ತರ್ ಅವರಿಂದ ಭರತನಾಟ್ಯ ಹಾಗೂ ಮಧು ನಟರಾಜ್ ಅವರಿಂದ ಕಂಟೆಪರರಿ ನೃತ್ಯವನ್ನು ಇವರು ಕಲಿತಿದ್ದಾರೆ. ಅಷ್ಟೇ ಅಲ್ಲದೇ ಮಾಯಾ ರಾವ್ ಅವರಿಂದ ಕಥಕ್ ಕಲಿತಿರುವ ಅಕುಲ್ ಬಾಲಾಜಿ ಪ್ರತಿಭಾವಂತ ಕಲಾವಿದ ಎಂದು ಹೇಳಿದರೆ ತಪ್ಪಾಗಲಾರದು.


Click it and Unblock the Notifications











