'ಎಲ್ರ ಕಾಲೆಳೆಯುತ್ತೆ ಕಾಲ' ಎನ್ನುತ್ತಲೇ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಎಂದ ರ್ಯಾಪರ್ ಚಂದನ್ ಶೆಟ್ಟಿ
ರ್ಯಾಪರ್ ಚಂದನ್ ಶೆಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ!? ತಮ್ಮ ಕನ್ನಡದ ರ್ಯಾಪ್ ಸಾಂಗ್ಗಳೊಂದಿಗೆ ಯುವ ಮನಸ್ಸನ್ನು ಗೆದ್ದಿರುವ ಈಗ ಗಾಯಕ ಇದೀಗ ಬೆಳ್ಳಿ ತೆರೆಗೆ ಕಾಲಿಟ್ಟಿರುವುದು ವಿಶೇಷ. ಬಿಗ್ ಬಾಸ್ಗೆ ಬಂದ ನಂತರ ಚಂದನ್ ಶೆಟ್ಟಿ ಬಹಳಷ್ಟು ಜನಪ್ರಿಯತೆ ಪಡೆದಿದ್ದರು. ನಂತರ ನಿವೇದಿತಾ ಗೌಡ ಅವರನ್ನು ಮದುವೆಯಾಗಿ ಸುದ್ದಿಯಲ್ಲಿದ್ದರು. ಹಾಗೇ ಹಲವಾರು ರಿಯಾಲಿಟಿ ಶೋ ಹಾಗೂ ಸೋಶಿಯಲ್ ಮೀಡಿಯಾ ರೀಲ್ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಚಂದನ್ ಶೆಟ್ಟಿ ಇದೀಗ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಎಂದು ಹೇಳುತ್ತಾ ಸಿನಿಮಾ ಹೀರೋನೇ ಆಗಿದ್ದಾರೆ.
ಹೌದು! ಚಂದನ್ ಶೆಟ್ಟಿ ಅವರು ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಮುಖ ಪಾತ್ರದಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಅರುಣ್ ಅಮುಕ್ತ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಚಂದನ್ ಶೆಟ್ಟಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಯುವ ಮನಸುಗಳು ಅಂದರೆ ಕಾಲೇಜು ಸ್ಟೂಡೆಂಟ್ಗಳಿಗೆ ಬಹಳ ಹತ್ತಿರವಾದ ಕಥೆಯುಳ್ಳ ಸಿನಿಮಾ ಆಗಿದೆ.

ಸಿನಿಮಾ ಶೂಟಿಂಗ್ ಕೊನೆ ಹಂತದಲ್ಲಿದ್ದು, ಸದ್ಯದಲ್ಲೇ ಸಿನಿಮಾ ಬಿಡುಗಡೆಯ ದಿನ ಬಹಿರಂಗ ಬಹಿರಂಗ ಪಡಿಸಲಿದೆ ಸಿನಿಮಾ ತಂಡ. ಅಂದ ಹಾಗೆ, ಸಿನಿಮಾದಲ್ಲಿ ಮೂರು ಸಂಗೀತ ನಿರ್ದೇಶಕರಿದ್ದು, ವಾಸು ದೀಕ್ಷಿತ್, ಶಶಾಂಕ್ ಶೇಷಗಿರಿ ಹಾಗೂ ವಿಜೇತ್ ಕೃಷ್ಣ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ಹೊಸ ನಟರ ಜೊತೆಗೆ ಕೆಲ ಚಿರಪರಿಚಿತ ನಟರು ಇದ್ದಾರೆ.
ವರ್ಚುಯಲ್ ರಿಯಾಲಿಟಿ ಬಳಕೆ ಮಾಡಿ ಸಿನಿಮಾ ಪೋಸ್ಟರ್ಗಳನ್ನು ಬಿಡುಗಡೆ ಮಾಡುತ್ತಿರುವ ಅರುಣ್ ಅಮುಕ್ತ ಅವರು ಈ ಮೂಲಕ ವಿದ್ಯಾರ್ಥಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಯುವಕರನ್ನೇ ಮುಖ್ಯ ಟಾರ್ಗೆಟ್ ಮಾಡಿಕೊಂಡಿರುವ ಈ ಸಿನಿಮಾ ಏನನ್ನು ಹೇಳ ಹೊರಟಿದೆ ಎಂಬುದನ್ನು ಸದ್ಯಕ್ಕೆ ಕುತೂಹಲ.

ಇನ್ನು ಇದೇ ಶಿವರಾತ್ರಿಯಂದು ಚಂದನ್ ಶೆಟ್ಟಿ ಹೊಸ ಪೋಸ್ಟರ್ ಒಂದನ್ನು ರಿಲೀಸ್ ಮಾಡಿತ್ತು. ಅದರಲ್ಲಿ ಚಂದನ್ ಶೆಟ್ಟಿಯವರ ಪಾತ್ರದ ಲುಕ್ ಅನ್ನು ಕೂಡಾ ಸಿನಿ ತಂಡ ರಿವೀಲ್ ಮಾಡಿದೆ. ಒಟ್ಟಿನಲ್ಲಿ ರ್ಯಾಪ್ ಗಾಯಕನಾಗಿ ಗುರುತಿಸಿಕೊಂಡಿರುವ ಚಂದನ್ ಶೆಟ್ಟಿ ನಟನಾಗಿ ಭಡ್ತಿಯನ್ನು ಕೂಡಾ ಪಡೆದಿದ್ದಾರೆ. ತಮ್ಮ ನೆಚ್ಚಿನ ಗಾಯಕನನ್ನು ನಟನಾಗಿ ತೆರೆಯ ಮೇಲೆ ನೋಡುತ್ತಿರುವುದು ಚಂದನ್ ಅವರ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಬಹಳ ಸಂತಸ ತಂದಿದೆ.
'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾಗೂ ಮುನ್ನ 'ಎಲ್ರ ಕಾಲೆಳೆಯುತ್ತೆ ಕಾಲ' ಅನ್ನೋ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಈ ಸಿನಿಮಾ ಅದ್ಧೂರಿಯಾಗಿಯೇ ಸೆಟ್ಟೇರಿತ್ತು. ಆದರೆ, ಸದ್ಯಕ್ಕೆ ಈ ಬಗ್ಗೆ ಯಾವುದೇ ಸುಳಿವು ಇಲ್ಲ. ಮುಂದಿನ ದಿನಗಳಲ್ಲಿ ಈ ಸಿನಿಮಾ ಬಗ್ಗೆನೂ ಸುಳಿವು ಸಿಗಬಹುದು.


Click it and Unblock the Notifications











