"ಮಂಡ್ಯ ರವಿ ಲುಕ್ನಲ್ಲೇ ಇನ್ನೊಬ್ಬರನ್ನ ತಿಂದಾಕಿ ಬಿಡುತ್ತಾನೆ": ಭಾವುಕರಾದ ನಟಿ ನಂದಿನಿ
ಸುಮಾರು 15 ವರ್ಷಗಳಿಂದ ಕಿರುತೆರೆಯಲ್ಲಿ ನಟಿಸಿದ್ದ ಮಂಡ್ಯ ರವಿ ನಿನ್ನೆ (ಸಪ್ಟೆಂಬರ್ 14) ರಂದು ವಿಧಿವಶರಾಗಿದ್ದಾರೆ. ಬಾಲ್ಯದಲ್ಲಿಯೇ ನಟನೆ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಮಂಡ್ಯ ರವಿ ಅವರು ತಮ್ಮ ಶಿಕ್ಷಣದ ಬಳಿಕ ನಟನೆಯ ಹಾದಿ ಹಿಡಿದಿದ್ದರು. ಕಿರುತೆರೆ ಲೋಕದಲ್ಲಿ ಯಶಸ್ವಿ ನಟನಾಗಿ ಹೊರ ಹೊಮ್ಮಿದ್ದ ಮಂಡ್ಯ ರವಿ ಅನೇಕ ಸಿನಿಮಾಗಳಲ್ಲೂ ನಟಿಸಿದ್ದರು.
ಕಿರುತೆರೆ ಸೇರಿದಂತೆ ನಟನಾ ಕ್ಷೇತ್ರದಲ್ಲಿ ಅಪಾರ ಸ್ನೇಹಿತರನ್ನು ಗಳಿಸಿರೋ ಮಂಡ್ಯ ರವಿ ಅವರೆಲ್ಲರನ್ನೂ ಬಿಟ್ಟು ಅಗಲಿದ್ದಾರೆ. ಆತ್ಮೀಯ ಗೆಳೆಯನನ್ನು ಕಳೆದುಕೊಂಡ ಬಗ್ಗೆ ಕಿರುತೆರೆಯ ಖ್ಯಾತ ನಟಿ ನಂದಿನಿ ಫಿಲ್ಮಿ ಬೀಟ್ ಜೊತೆ ಮಾತನಾಡಿದ್ದಾರೆ.
ಮಂಡ್ಯ ರವಿ ಅದ್ಭುತ ಕಲಾವಿದ..!
"ರವಿ ಪ್ರಸಾದ್ ಮಂಡ್ಯ ಅವರ ಬಗ್ಗೆ ಏನು ಹೇಳಲಿ, ನನಗೆ ರವಿ ಅವರು ನನಗೆ ಅವರ ವೃತ್ತಿ ಜೀವನದ ಆರಂಭದಿಂದ ಪರಿಚಯ. ನಾನು ಅವರು ಸಾಕಷ್ಟು ಧಾರಾವಾಹಿಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನನಗೆ ಅವರು 15 ವರ್ಷಗಳಿಂದ ಪರಿಚಯ. ನಾವು 'ಮಿಂಚು', 'ಮುಕ್ತ ಮುಕ್ತ', 'ಚಿತ್ರಲೇಖ' ಹೀಗೆ ಅನೇಕ ಧಾರಾವಾಹಿಗಳನ್ನು ಒಟ್ಟಿಗೆ ಮಾಡಿದ್ದೇವೆ. ರವಿ ತುಂಬಾ ಒಳ್ಳೆ ಮನುಷ್ಯ. ತುಂಬಾ ನಿಷ್ಟಾವಂತ. ಅವರು ಒಬ್ಬ ಅದ್ಭುತ ಕಲಾವಿದ. ಇಂತಹ ಒಂದು ಕಲಾವಿದನನ್ನು ಕಳೆದುಕೊಂಡಿರುವುದು ಕಿರುತೆರೆಗೆ ದೊಡ್ಡ ನಷ್ಟ." ಎನ್ನುತ್ತಾರೆ ನಟಿ ನಂದಿನಿ.

ರವಿ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ..!
"ರವಿ ಅವರ ಸ್ಥಾನವನ್ನು ಯಾರೂ ತುಂಬಲು ಅಸಾಧ್ಯ. ಒಬ್ಬ ನಟ ಇಲ್ಲ ಅಂದ್ರೆ ಆತನ ಬದಲಿಗೆ ಮತ್ತೊಬ್ಬರನ್ನು ಕರೆತರಬಹುದು. ಆದರೆ ರವಿ ಅವರ ವಿಚಾರದಲ್ಲಿ ಅದು ಅಸಾಧ್ಯ. ರವಿ ಅವರಿಗೆ ಪರ್ಯಾಯ ಎನ್ನುವುದು ಖಂಡಿತ ಇಲ್ಲ. ಇದೊಂದು ಶಾಕಿಂಗ್ ನ್ಯೂಸ್. ಅವರು ನನಗಿನ್ನ ಎರಡು ವರ್ಷ ದೊಡ್ಡವರಿರಬಹುದು. ಅವರ ಬಗ್ಗೆ ಬೆರಳು ತೋರಿಸಿ ನಕರಾತ್ಮಕವಾಗಿ ಮಾತನಾಡಲು ಚಿಕ್ಕ ಅಂಶವೂ ಇಲ್ಲ. ಅವರ ಇಲ್ಲದ ಖಾಲಿತನವನ್ನೂ ಯಾರಿಂದಲೂ ತುಂಬಲು ಸಾಧ್ಯವಿಲ್ಲ."

ಮಂಡ್ಯ ರವಿ ತರ ನಟ ನನಗೆ ಸಿಗಲ್ಲ
"ಟಿ.ಎನ್ ಸೀತಾರಾಮ್ ಅವರ ಫೇವರಿಟ್ ನಟ ಅವರು. ಅವರ ಎಲ್ಲಾ ಧಾರಾವಾಹಿಗಳಲ್ಲೂ ಮಂಡ್ಯ ರವಿ ಅವರು ಇರುತ್ತಿದ್ದರು. ಸೀತಾರಾಮ್ ಸರ್ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಮಂಡ್ಯ ರವಿ ಜೊತೆ ಬೇರೆ ಯಾರಾದರೂ ನಟಿಸುತ್ತಾರೆ ಅಂದ್ರೆ, ಮಂಡ್ಯ ರವಿ ಲುಕ್ನಲ್ಲೇ ಇನ್ನೊಬ್ಬರನ್ನ ತಿಂದಾಕಿಬಿಡುತ್ತಾನೆ ಎನ್ನುತ್ತಿದ್ದರು. ರವಿ ಅವರ ಮಾತು, ನೋಟ, ಧ್ವನಿ ಎಲ್ಲವನ್ನೂ ಸರ್ ತುಂಬಾ ಇಷ್ಟಪಡುತ್ತಿದ್ದರು. ಮಂಡ್ಯ ರವಿ ತರ ನಟ ನನಗೆ ಸಿಗಲ್ಲ ಎಂದು ಸಹ ಹೇಳುತ್ತಿದ್ದರು. 'ಚಿತ್ರಲೇಖ'ದಲ್ಲಿ ನೆಗೆಟಿವ್ ಶೇಡ್ನಲ್ಲೂ ರವಿ, ಸೀತಾರಾಮ್ ಸರ್ಯಿಂದ ಶಹಬ್ಬಾಶ್ ಗಿರಿ ತೆಗೆದುಕೊಂಡಿದ್ದರು. ಸದ್ಯ 'ಅರ್ಧಾಂಗಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು." ಎಂದು ಮಂಡ್ಯ ರವಿ ಹಾಗೂ ಟಿ.ಎನ್ ಸೀತಾರಾಮ್ ಅವರ ಒಡನಾಟದ ಬಗ್ಗೆ ಹಂಚಿಕೊಂಡಿದ್ದಾರೆ.


Click it and Unblock the Notifications











