Amruthadhare:ಅಣ್ಣನ ಬಳಿ ಓಡೋಡಿ ಬಂದ ಸುಧಾ; ತಂಗಿಯ ವಿರುದ್ಧ ಗೌತಮ್ಗೆ ಯಾಕೆ ಕೋಪ?
ಗೌತಮ್ ದಿವಾನ್ ಟೆಂಡರ್ ಫೈಲ್ ಭೂಪತಿ ಕೈ ಸೇರಿದೆ. ಸುಧಾ ತನ್ನ ತಾಯಿಯ ಹೆಚ್ಚಿನ ಚಿಕಿತ್ಸೆಗಾಗಿ ಭೂಪತಿ ಜೊತೆ ಸೇರಿಕೊಳ್ಳುತ್ತಾಳೆ. ಆಕೆಗೆ ಗೌತಮ್ ದಿವಾನ್ ಹಿಂದೆ ಪಿತೂರಿ ನಡೆಸುವುದು ಸ್ವಲ್ಪವೂ ಇಷ್ಟವಿಲ್ಲ. ಈ ಬಗ್ಗೆ ಭೂಪತಿ ಬಳಿ ಹೇಳಿದ್ದಕ್ಕೆ ಆಕೆಯ ಮಾತನ್ನು ಕೇಳಲು ಭೂಪತಿ ರೆಡಿ ಇರಲಿಲ್ಲ. ತಾಯಿಯ ಆರೋಗ್ಯದ ಚಿಕಿತ್ಸೆಗಾಗಿ ತನ್ನ ಬಳಿ ಹಣ ಕೇಳಿದ್ದಿಯಾ, ಗೌತಮ್ಗೆ ಟೆಂಡರ್ ಸಿಕ್ಕ ಫೈಲ್ ನನಗೆ ಕೊಟ್ಟು ಉಪಕಾರ ಮಾಡಿದ್ದೀಯಾ ಎಂದು ಹೇಳಿ ಸುಧಾಳನ್ನು ಅಟ್ಟಕ್ಕೇರಿಸಿ ಮಾತನಾಡುತ್ತಾನೆ. ಆದರೆ ಸುಧಾಗೆ ತಾನು ಮಾಡುತ್ತಿರುವುದು ತಪ್ಪು ಎನ್ನುವ ಅರಿವು ಮೂಡುತ್ತದೆ.
ಭೂಪತಿ ಬಳಿ ಆಕೆ ಹಣಕ್ಕಾಗಿ ಆಸೆ ಪಡದೆ ತನ್ನ ಪಾಡಿಗೆ ತಾನು ಇರುತ್ತೇನೆ ಎಂದು ಹೇಳಿರುತ್ತಾಳೆ. ಆದರೆ ಜೈ ದೇವ್ ಕಿತಾಪತಿಯಿಂದಾಗಿ ಸುಧಾ ಸಂಕಷ್ಟಕ್ಕೆ ಸಿಲುಕುವ ಲಕ್ಷಣ ಎದ್ದು ಕಾಣುತ್ತಿದೆ. ಸುಧಾ ಯಾವಾಗ ಗೌತಮ್ ತಂಗಿ ಎಂದು ತಿಳಿಯಿತೋ ಅಂದಿನಿಂದ ಜೈ ದೇವ್, ಸುಧಾ ಮೇಲೆ ಒಂದು ಕಣ್ಣು ಇಟ್ಟಿರುತ್ತಾನೆ. ಸುಧಾಗೆ ಎಲ್ಲಿ ಗೌತಮ್ ತನ್ನ ಅಣ್ಣ ಎಂದು ತಿಳಿಯುತ್ತೋ ಎನ್ನುವ ಭಯದಲ್ಲಿ ಇರುತ್ತಾನೆ. ಆದರೆ, ಇದೀಗ ಭೂಪತಿ ಸಹವಾಸ ಮಾಡಿದ ಸುಧಾ ಎಲ್ಲರ ಕೆಂಗಣ್ಣಿಗೆ ಗುರಿ ಆಗುವ ಸಾಧ್ಯತೆ ಇದೆ. ಜೈ ದೇವ್ ಭೂಪತಿ ಮನೆಗೆ ಆಗಮಿಸುತ್ತಾನೆ. ಆತನನ್ನು ನೋಡಿದ ಭೂಪತಿ ಬಹಳಷ್ಟು ಖುಷಿ ಪಡುತ್ತಾನೆ.

ಭೂಪತಿಗೆ ಗೌತಮ್ ವಂಶವನ್ನೇ ನಿರ್ವಂಶ ಮಾಡಬೇಕು ಎನ್ನುವ ಆಸೆ. ಆತನಿಗೆ ಯಾರು ಜೊತೆಯಾಗಿ ನಿಲ್ಲಬಾರದು ಎಂದುಕೊಂಡಿರುತ್ತಾನೆ. ಇದೀಗ ಜೈ ದೇವ್ ಕೂಡ ಭೂಪತಿ ಜೊತೆ ಒಂದಾಗಿದ್ದಾನೆ. ಆಗ ಭೂಪತಿ ಸುಧಾ ಬಗ್ಗೆ ಕೆಲವು ಮಾತುಗಳನ್ನು ಹೇಳುತ್ತಾನೆ. ನಿಮ್ಮ ಮನೆಗೆ ನಮ್ಮಾಕೆ ಒಬ್ಬಳು ಕೆಲಸಕ್ಕೆ ಎಂದು ಹೋಗಿದ್ದಾಳೆ ಎಂದು ಹೇಳುತ್ತಾನೆ. ಆಗ ಜೈ ದೇವ್ಗೆ ಯಾರೆಂದು ತಿಳಿಯದಾಗುತ್ತೆ. ಕೊನೆಗೆ ಭೂಪತಿ ಸುಧಾಗೆ ಕರೆ ಮಾಡಿ ನಿಮ್ಮ ಅಮ್ಮನ ಆಪರೇಶನ್ಗೆ ಹಣ ಕೇಳಿದ್ಯಲ್ಲ ತೆಗೆದುಕೊಂಡು ಹೋಗು ಎಂದು ಹೇಳುತ್ತಾರೆ.
ಸುಧಾ ಬಗ್ಗೆ ಅನುಮಾನ
ಭೂಪತಿ ಫೋನ್ ಮಾಡಿದ್ದಕ್ಕೆ ಸುಧಾ ಒಲ್ಲದ ಮನಸಿನಿಂದ ಬರುತ್ತಾಳೆ. ಆ ಕೂಡಲೇ ಜೈ ದೇವ್ ಬಳಿ ಭೂಪತಿ ಹೇಳುತ್ತಾನೆ. ನೀನು ಆ ಕಿಟಕಿಯ ಸಂಧಿಯಲ್ಲಿ ಇದ್ದು ಇದೆಲ್ಲವನ್ನು ನೋಡು ಎಂದು ಹೇಳುತ್ತಾನೆ. ಹಾಗೆ ಜೈ ದೇವ್ ಭೂಪತಿ ಹೇಳಿದ ಹಾಗೆಯೇ ಕಿಟಕಿಯ ಸಂಧಿಯ ಬಳಿ ನಿಂತುಕೊಳ್ಳುತ್ತಾನೆ. ಆದರೆ ಒಳಗೆ ಬಂದ ಸುಧಾಳನ್ನು ನೋಡಿದ ಜೈ ದೇವ್ಗೆ ಶಾಕ್ ಆಗುತ್ತೆ. ಭೂಪತಿ ಕೈ ಯಿಂದ ಸುಧಾ ದುಡ್ಡು ತೆಗೆದುಕೊಳ್ಳುವುದನ್ನು ವಿಡಿಯೋ ಮಾಡಿ ಗೌತಮ್ ಗೆ ಕಳುಹಿಸಲು ನಿರ್ಧಾರ ಮಾಡುತ್ತಾನೆ. ಸುಧಾ ಗೌತಮ್ ಮನೆಗೆ ಬಂದ ಬಳಿಕ ಭೂಮಿಕಾ ತನ್ನ ಅತ್ತೆಯ ಫೋಟೋವನ್ನು ಒರೆಸಿ ಇಡುವಂತೆ ಸುಧಾ ಬಳಿ ಕೊಟ್ಟು ಹೊರಟು ಹೋಗುತ್ತಾಳೆ.

ಅಮ್ಮನ ಫೋಟೋ ನೋಡಿ ಸುಧಾ ಶಾಕ್
ಭೂಮಿಕಾ ಕೊಟ್ಟ ಫೋಟೋ ಯಾರದ್ದು ಎಂದು ತಿಳಿಯದೇ ಆ ಫೋಟೋವನ್ನು ಒರೆಸುತ್ತಾ ಇರುವಾಗ ಆಕೆಗೆ ಶಾಕ್ ಆಗುತ್ತದೆ. ತಾನು ಒರೆಸುತ್ತಿರುವ ಫೋಟೋ ತನ್ನ ಅಮ್ಮನದ್ದೇ ಅಂತ ಗೊಂದಲಕ್ಕೆ ಬೀಳುತ್ತಾಳೆ. ಮನಸ್ಸಿನಲ್ಲಿ ಬಹಳ ಖುಷಿ ಆಗುತ್ತದೆ. ತಾನು ಓಡಿಕೊಂಡು ಬಂದು ಅಮ್ಮನ ಬಳಿ ಆ ಖುಷಿ ಸುದ್ದಿಯನ್ನು ಹಂಚಿಕೊಳ್ಳುತ್ತಾಳೆ. ತಾನು ಇರುವುದು ತನ್ನ ಅಣ್ಣನ ಮನೆಯಲ್ಲಿಯೇ ಎಂದು ಬಹಳಷ್ಟು ಖುಷಿ ಪಡುತ್ತಾಳೆ. ಆದರೆ ಭಾಗ್ಯಾಗೆ ಅದೆಲ್ಲ ಅರ್ಥವೇ ಆಗುವುದಿಲ್ಲ. ಇತ್ತ ಗೌತಮ್ ಬರುವುದನ್ನೇ ಕಾಯುತ್ತ ಕುಳಿತ ಸುಧಾ, ಅಣ್ಣ ಬಂದ ಕೂಡಲೇ ಸಣ್ಣ ಮಗುವಿನ ಹಾಗೆ ಓಡೋಡಿ ಅಣ್ಣನ ಬಳಿ ಹೋಗುತ್ತಾಳೆ. ಆದರೆ ಗೌತಮ್ ಮಾತ್ರ ಬಹಳಷ್ಟು ಕೋಪದಲ್ಲಿ ಇರುತ್ತಾನೆ.


Click it and Unblock the Notifications











