Neenadhe Naa: ವಿಕ್ರಮ್ ಬದಲಾಗ್ತೀನಿ ಅಂದ್ರು ರೌಡಿ ಕಳಂಕ ಬಿಡ್ತಾ ಇಲ್ಲ..ಮುಂದೇನು?
ಮೇಷ್ಟ್ರ ಮನೆಯಲ್ಲಿ ಬಡತನ. ಒಬ್ಬ ಮಗ ದುಡೀತಾನೆ. ಆದರೆ, ಮನೆಗೆ ಖರ್ಚು ಮಾಡುವುದಕ್ಕೆ ಆತನ ಹೆಂಡತಿ ಒಪ್ಪಲ್ಲ. ಇನ್ನೊಬ್ಬ ಚೆನ್ನಾಗಿ ಓದಿದ್ದಾನೆ. ಅದಕ್ಕೆ ತಕ್ಕ ಕೆಲಸ ಇಲ್ಲ ಅಂತ ಎಲ್ಲೂ ಹೋಗುತ್ತಿಲ್ಲ. ಇನ್ನು ಚಿಕ್ಕ ಮಗನ ದುಡಿಮೆಯ ಹಣ ಪಾಪದ ಹಣ ಎಂದು ನಂಬಿರುವ ಮೇಷ್ಟ್ರು ಬಿಡಿಗಾಸು ಮುಟ್ಟಲ್ಲ. ಹೀಗಿರುವಾಗ ಮೇಷ್ಟ್ರು ತನ್ನಿಂದ ಸಿಗುವ ಅಷ್ಟೋ ಇಷ್ಟೋ ಹಣದಿಂದಾನೆ ಸಂಸಾರ ನಡೆಸುತ್ತಿದ್ದಾರೆ.
ವಿಕ್ರಂ ಬಳಿ ಕೈತುಂಬ ಹಣ ಇದೆ. ಆದರೆ, ಅಪ್ಪ ಮುಟ್ಟಲ್ಲ. ವಿಕ್ರಂಗೆ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಈಗ ಆ ದಾರಿಯನ್ನು ವೇದಾ ಸುಗಮ ಮಾಡಿಕೊಡುತ್ತಿದ್ದಾಳೆ. ವಿಕ್ರಂಗೆ ಹತ್ತಿರವಾಗಿರುವ ವೇದಾ, ನಿಧಾನವಾಗಿ ತಂದೆ ಮಗನನ್ನು ಹತ್ತಿರವಾಗಿಸುವ ಪ್ಲ್ಯಾನ್ ಮಾಡಿದ್ದಾಳೆ. ಅದು ಸಕ್ಸಸ್ ಆಗುವ ಹಾದಿಯಲ್ಲಿ ಇದೆ.

ತಂದೆಗೆ ತಕ್ಕ ಮಗನಾಗುತ್ತಾನಾ ವಿಕ್ರಂ?
ವಿಕ್ರಂನನ್ನು ಕಂಡರೆ ತಂದೆಗೆ ಇನ್ನಿಲ್ಲದ ಪ್ರೀತಿ. ಯಾಕಂದ್ರೆ, ಚಿಕ್ಕವನು ಇದ್ದಾಗಿನಿಂದ ವಿಕ್ರಂ ಬುದ್ದಿವಂತನಾಗಿದ್ದ. ಓದುವುದರಲ್ಲೂ ಮುಂದಿದ್ದ. ಅಪ್ಪನಿಗೆ ಬೆಸ್ಟ್ ಫ್ರೆಂಡ್ ಆಗಿದ್ದ. ಆದರೆ, ಅದ್ಯಾವ ಕೆಟ್ಟ ಕಣ್ಣು ಬಿತ್ತೋ, ರೌಡಿ ಗೆಳೆಯರ ಬಳಗ ಸೇರಿದ. ಅಂದಿನಿಂದ ತಂದೆಗೆ ದುಷ್ಮನ್ ಆದ. ತಂದೆಯಿಂದ ಪ್ರೀತಿ ಬಯಸಿದರೂ ಸಿಗದಂತೆ ಕಾಣೆ ಆಯ್ತು. ಈಗ ತಂದೆಯೂ ಯಾವಾಗ ನನ್ನ ಮಗನಾಗಿ ಬದಲಾಗುತ್ತಾನೆ ಎಂದು ಕಾಯುತ್ತಿದ್ದಾರೆ.
ವೇದಾಳ ಮಾತು ಕೇಳುತ್ತಿರುವ ವಿಕ್ರಂ
ವೇದಾಳನ್ನು ಕಂಡರೆ ಮೊದ ಮೊದಲಿಗೆ ವಿಕ್ರಂ ಕೆಂಡಕಾರುತ್ತಿದ್ದ. ಆದರೆ, ಈಗೀಗ ವೇದಾಳ ಮಾತನ್ನೇ ವೇದ ವಾಕ್ಯ ಮಾಡಿಕೊಂಡಿದ್ದಾನೆ. ಅವಳು ಹೇಳುವ ಮಾತು ಸರಿ ಎನಿಸುವುದಕ್ಕೆ ಶುರುವಾಗಿದೆ. ಅದರಲ್ಲೂ ಅಪ್ಪ ಅಮ್ಮನ ಬಗ್ಗೆ ಹೇಳಿದ್ದು ನಿಜ ಎನಿಸಿದೆ. ಅಪ್ಪ ಅಮ್ಮನಿಗೆ ಇಷ್ಟವಾದದ್ದನ್ನು ಮಾಡೋಣಾ ಎಂದು ತೀರ್ಮಾನ ಮಾಡಿದ್ದಾನೆ. ವೇದಾಳ ಮಾತಿಗೆ ಬೆಲೆ ಕೊಟ್ಟಿದ್ದಾನೆ.

ರೌಡಿಯಾಗಿದ್ದ ಕಾರಣ ಕೆಲಸ ಸಿಗುತ್ತಿಲ್ಲ
ವಿಕ್ರಂ ಪ್ರೀತಿಯಿಂದ ಬಟ್ಟೆ ತಂದುಕೊಟ್ಟರು ಅಪ್ಪ ಅಮ್ಮ ತೆಗೆದುಕೊಳ್ಳಲಿಲ್ಲ. ಕಾರಣ ದುಡಿದ ಹಣವಾಗಿರಲಿಲ್ಲ. ವಿಕ್ರಂ ದುಡಿದು ತಂದುಕೊಟ್ಟರೆ ಅವರಿಗೆ ಖುಷಿ. ಇದನ್ನೇ ವೇದಾ ಬಿಡಿಸಿ ಹೇಳಿದಾಗ, ವಿಕ್ರಂಗೆ ಮನವರಿಕೆಯಾಗಿದೆ. ಈಗ ದುಡಿಯುವುದಕ್ಕೆ ಹೊರಟಿದ್ದಾನೆ. ಆದರೆ, ನಾಯಕರ ಹುಡುಗ ಎಂಬ ಹಣೆ ಪಟ್ಟಿ ಇರುವ ಕಾರಣ ಕೆಲಸ ಅಷ್ಟು ಸುಲಭವಾಗಿ ಸಿಗುತ್ತಿಲ್ಲ. ಒಬ್ಬರ ಬಳಿ ಪರಿಚಯವೇ ಇಲ್ಲವೆಂಬಂತೆ ಕೆಲಸ ಕೇಳಲು ಹೋಗಿದ್ದ. ಅಲ್ಲಿ ವಿಕ್ರಂನನ್ನು ಕಂಡ ಮಾಲೀಕ, ನೀವೂ ನಾಯಕರ ಕಡೆಯವರು ಅಲ್ವಾ. ನಿಮಗೆ ನಾವೂ ಕೆಲಸ ಕೊಡೋದು ಅಂದ್ರೆ ಏನು? ಈಗಾಗಲೇ ಎಲ್ಲಾ ಸೆಟಲ್ ಮಾಡಿದ್ದೀವಿ. ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಡಪ್ಪ ಎಂದು ಕಾಲಿಗೆ ಬಿದ್ದಿದ್ದಾನೆ.
ಮುಖ ಮುಚ್ಚಿಕೊಂಡು ಕೆಲಸಕ್ಕೆ ಸೇರಿದ ವಿಕ್ರಂ
ವಿಕ್ರಂ ತಾನು ಕೆಲಸ ಮಾಡುತ್ತೀನಿ ಅಂದ್ರು ಕೆಲಸ ಸಿಗುತ್ತಿಲ್ಲ. ಕಾರಣ ರೌಡಿಯಾಗಿದ್ದ ಎಂಬ ಕಾರಣಕ್ಕೆ. ಅದೇ ಮುಖ ಇಟ್ಟುಕೊಂಡು ಕೆಲಸ ಹುಡುಕಿದರೆ ಸಿಗುವುದಿಲ್ಲ ಎಂಬುದಂತೂ ಕಾತರಿ ಆಯ್ತು. ಆದರೆ, ಕೆಲಸ ಮಾಡಲೇಬೇಕಾದ ಅನಿವಾರ್ಯತೆಯೂ ಇತ್ತು. ಹೀಗಾಗಿ ಮುಖ ಮುಚ್ಚಿಕೊಂಡು ಕೆಲಸ ಹುಡುಕಿದ್ದಾನೆ. ಕಷ್ಟಪಟ್ಟು ಮೂಟೆ ಹೊತ್ತಿದ್ದಾನೆ. ಅದೊಂಥರ ನೆಮ್ಮದಿಯ ಬದುಕು ಎನಿಸಿದೆ. ಇದರಿಂದ ವಿಕ್ರಂಗೆ ತಂದೆ ತಾಯಿಯ ಪ್ರೀತಿಯೂ ಸಿಗುವ ಸಾಧ್ಯತೆ ಇದೆ.


Click it and Unblock the Notifications











