ಸದ್ದಿಲ್ಲದೇ ಹೊಸ ಬಾಳಿಗೆ ಕಾಲಿಟ್ಟ 'ಅಮೃತವರ್ಷಿಣಿ' ಧಾರಾವಾಹಿ ಖ್ಯಾತಿಯ ರಜಿನಿ
ನಾವಿಬ್ಬರು ಪ್ರೇಮಿಗಳಲ್ಲ, ಜಸ್ಟ್ ಫ್ರೆಂಡ್ಸ್, ಬೆಸ್ಟ್ ಫ್ರೆಂಡ್ಸ್ ಎನ್ನುವವರ ಬಳಿಕ ಮದುವೆ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಕನ್ನಡ ಕಿರುತೆರೆ ನಟಿ ರಜನಿ ಹಾಗೂ ಜಿಮ್ ಟ್ರೈನರ್ ಅರುಣ್ ನಡುವೆ ಲವ್ವಿಡವ್ವಿ ನಡೀತಿದೆ ಎನ್ನುವ ಊಹಾಪೋಹ ಇತ್ತು. ಆತರ ಏನು ಇಲ್ಲ, ನಾವು ಫ್ರೆಂಡ್ಸ್ ಮಾತ್ರ ಎಂದು ರಜಿನಿ ಹೇಳಿದ್ದರು. ಇದೀಗ ಸದ್ದಿಲ್ಲದೇ ಇಬ್ಬರೂ ಮದುವೆ ಆಗಿದ್ದಾರೆ.
ಪೋಷಕರು ಹಾಗೂ ಆಪ್ತರ ಸಮ್ಮುಖದಲ್ಲಿ ನಟಿ ರಜಿನಿ ಹಾಗೂ ಅರುಣ್ ವೆಂಕಟೇಶ್ ಮದುವೆ ನಡೆದಿದೆ. ಇಬ್ಬರು ಇನ್ಸ್ಟಾಗ್ರಾಮ್ನಲ್ಲಿ ಫನ್ನಿ ರೀಲ್ಸ್ ಮಾಡುತ್ತಾ ಗಮನ ಸೆಳೆಯುತ್ತಿದ್ದರು. ಅದನ್ನು ನೋಡಿದಾಗಲೇ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಈಗ ಇಬ್ಬರು ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗ್ತಿದೆ.

'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ನಟಿಸಿ ರಜಿನಿ ಮನೆ ಮಾತಾಗಿದ್ದರು. ಬಳಿಕ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಅಂತರ ಪಾತ್ರದಲ್ಲಿ ಗಮನ ಸೆಳೆದಿದ್ದರು. ಇತ್ತೀಚೆಗೆ 'ನೀ ಇರಲು ಜೊತೆಯಲ್ಲಿ' ಎಂಬ ಹೊಸ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಅದೇ ಸಮಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ನಾನು, ಅರುಣ್ ಫ್ರೆಂಡ್ಸ್ ಅಷ್ಟೇ ಎಂದು ಹೇಳಿದ್ದರು.
ಇಬ್ಬರೂ ಮದುವೆ ಆಗಿದ್ದಾರೆ ಎಂದು ಸಾಕಷ್ಟು ಜನ ಭಾವಿಸಿದ್ದರು. ಗಂಡ ಹೆಂಡತಿ ಸೇರಿ ಒಟ್ಟಿಗೆ ರೀಲ್ಸ್ ಮಾಡ್ತಿದ್ದಾರೆ ಎಂದುಕೊಂಡಿದ್ದರು. ಈ ಬಗ್ಗೆ ಕೇಳಿದ ಪ್ರಶ್ನೆಗೆ "ಯಾರನ್ನೂ ಕರೆಯದೇ ಮದ್ವೆ ಆಗ್ತೀನಾ? ಕದ್ದು ಮುಚ್ಚಿ ಮದ್ವೆ ಯಾಕೆ ಆಗಬೇಕು? ಮದ್ವೆ ಅನ್ನೋದು ಖುಷಿಯ ವಿಚಾರ, ಎಲ್ಲರಿಗೂ ಹೇಳ್ತೀನಿ. ಇನ್ನು ಮದ್ವೆ ಆಗಿಲ್ಲ, ಅದೆಲ್ಲಾ ಬರೀ ಗಾಸಿಪ್ ಅಷ್ಟೆ. ನಾವಿಬ್ಬರು ಗಂಡ-ಹೆಂಡತಿ ಅಲ್ಲ, ಫ್ರೆಂಡ್ಸ್ ಅಷ್ಟೆ, ರೀಲ್ಸ್ ಮಾಡೋಕೆ ವೀಡಿಯೋ ಪಾರ್ಟ್ನರ್ ಅಷ್ಟೆ" ಎಂದು ರಜಿನಿ ಹೇಳಿದ್ದರು.
ಸ್ನೇಹಿತನನ್ನೇ ಮದುವೆ ಆಗಬಹುದಾ ಎನ್ನುವ ಪ್ರಶ್ನೆಗೆ " ಅದರಲ್ಲಿ ತಪ್ಪೇನಿಲ್ಲ. ಸ್ನೇಹಿತರೇ ಬಹಳ ಅರ್ಥ ಮಾಡಿಕೊಳ್ಳುವುದು. ಸ್ನೇಹಿತರೇ ಮದುವೆ ಆದರೆ ತಪ್ಪಿಲ್ಲ. ಅವರನ್ನು ಬಿಟ್ಟು ಬೇರೆಯವರನ್ನು ಆದರೂ ತಪ್ಪಿಲ್ಲ. ಆದಾಗ ನೋಡೋಣ" ಎಂದು ರಜಿನಿ ಹೇಳಿ ನಕ್ಕಿದ್ದರು. ಹೇಳಿದಂತೆ ಈಗ ಸ್ನೇಹಿತ ಅರುಣ್ನನ್ನು ಮದುವೆ ಆಗಿದ್ದಾರೆ.
'ಅಮೃತವರ್ಷಿಣಿ' ಧಾರಾವಾಹಿಯ ಅಮೃತಾ ಪಾತ್ರ ರಜಿನಿಗೆ ಒಳ್ಳೆ ಹೆಸರು ತಂಡುಕೊಟ್ಟಿತ್ತು. 2012ರಲ್ಲಿ ಈ ಧಾರಾವಾಹಿ ಪ್ರಸಾರವಾಗಿತ್ತು. ಹೇಮಾ ಚೌಧರಿ ಸೇರಿ ಹಲವರು ಈ ಧಾರಾವಾಹಿಯಲ್ಲಿ ಮಿಂಚಿದ್ದರು. ಬಳಿಕ 'ಆತ್ಮಬಂಧನ' ಎಂಬ ಮತ್ತೊಂದು ಧಾರಾವಾಹಿ ಅವಕಾಶವೂ ಸಿಕ್ಕಿತ್ತು. 'ಅಂಬುಜ' ಎಂಬ ಸಿನಿಮಾದಲ್ಲಿ ಕೂಡ ರಜಿನಿ ನಟಿಸಿದ್ದರು. ಲಂಬಾಣಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅಂದಹಾಗೆ 'ಸೂಪರ್ ಕ್ವೀನ್' ರಿಯಾಲಿಟಿ ಶೋನಲ್ಲಿ ತಮಗೂ ಒಬ್ಬ ಗೆಳೆಯ ಇರುವುದಾಗಿ ರಜಿನಿ ಹೇಳಿಕೊಂಡಿದ್ದರು. ಆದರೆ ಅದು ಯಾರು ಎನ್ನುವುದನ್ನು ರಿವೀಲ್ ಮಾಡಿರಲಿಲ್ಲ. ಕೊನೆಗೂ ಆ ಗೆಳೆಯ ಅರುಣ್ ವೆಂಕಟೇಶ್ ಎನ್ನುವುದು ಈಗ ಜಗಜ್ಜಾಹೀರಾಗಿದೆ. 'ಸ್ಟಾರ್ ಸಿಂಗರ್', 'ಡ್ಯಾನ್ಸಿಂಗ್ ಸ್ಟಾರ್ಸ್', 'ಮಜಾ ಟಾಕೀಸ್', 'ಸೂಪರ್ ಕ್ವೀನ್' ಸೇರಿ ಕೆಲ ಶೋಗಳಲ್ಲಿ ಕೂಡ ರಜಿನಿ ಮಿಂಚಿದ್ದರು.
'ಅಂಬುಜ' ಚಿತ್ರದ ಜೊತೆಗೆ 'ಅಸುರನ ಕೈಯಲ್ಲಿ ಪಾರಿಜಾತ', 'ಡವ್ ಮಂಜ' ಎಂಬ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದು ಇದೆ. ನಿರೂಪಕಿಯಾಗಿಯೂ ಕೆಲವೊಮ್ಮೆ ರಜಿನಿ ಗಮನ ಸೆಳೆದಿದ್ದರು. ಸಿರಿ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ 'ನಾರಿಗೊಂದು ಸೀರೆ' ಕಾರ್ಯಕ್ರಮ ನಿರೂಪಣೆ ಮಾಡಿದ್ದರು.


Click it and Unblock the Notifications











