Kannada Serials TRP Rating: ಪ್ರೇಕ್ಷಕರ ಮನಸ್ಸಲ್ಲಿ 'ಗಟ್ಟಿಮೇಳ' ಗಟ್ಟಿ.. 'ಜೊತೆ ಜೊತೆಯಲಿ' ಕಥೆಯೇನು?
ವಾರಕ್ಕೊಮ್ಮೆ ಟಿವಿ ಧಾರಾವಾಹಿಯ ಟಿಆರ್ಪಿ ಮೇಲೆಯೇ ಎಲ್ಲರ ಗಮನ ಇರುತ್ತದೆ. ಯಾಕಂದ್ರೆ ನೋಡುಗರು ಯಾವ ಧಾರಾವಾಹಿಯನ್ನು ಇಷ್ಟಪಡುತ್ತಿದ್ದಾರೆ..? ಯಾವ ಧಾರಾವಾಹಿಯನ್ನು ಫಾಲೋ ಮಾಡುತ್ತಿದ್ದಾರೆ..? ಎಂಬುದು ಅರ್ಥವಾಗುವುದು. ಇದೀಗ ಈ ವಾರದ ಕಿರುತೆರೆಯ ಟಿಆರ್ಪಿ ಬಂದಿದ್ದು, 'ಗಟ್ಟಿಮೇಳ' ಧಾರಾವಾಹಿಗೆ ಜನ ಅಸ್ತು ಎಂದಿದ್ದಾರೆ.
ಜನ ಇತ್ತೀಚೆಗೆ ಧಾರಾವಾಹಿಗೆ ತುಂಬಾ ಅಡಿಕ್ಟ್ ಆಗಿದ್ದಾರೆ. ಧಾರಾವಾಹಿಯ ಪಾತ್ರಗಳನ್ನು ತಮ್ಮ ಸುತ್ತಮುತ್ತಲಿನ ಕಥೆಯೇನೋ ಎಂಬಂತೆ ಫೀಲ್ ಮಾಡುತ್ತಾರೆ. ಕಥೆಯಲ್ಲಿ ಹೀಗೆ ಆಗಬೇಕು ಎಂಬ ನಿರೀಕ್ಷೆ ಇರುತ್ತದೆ. ನಿರ್ದೇಶಕರು ಆ ನಿರೀಕ್ಷೆಯನ್ನು ಫುಲ್ ಫಿಲ್ ಮಾಡದೆ ಹೋದಲ್ಲಿ, ಆ ಧಾರಾವಾಹಿ ಬಿಟ್ಟು ಮತ್ತೊಂದು ಧಾರಾವಾಹಿಗೆ ಜಂಪ್ ಆಗುತ್ತಾರೆ. ಆ ರೀತಿ ಜಂಪ್ ಆಗದಂತೆ ಕಾಪಾಡಿಕೊಳ್ಳಲು, ಧಾರಾವಾಹಿ ನಿರ್ದೇಶಕರು ಮತ್ತು ಚಾನೆಲ್ಗಳು ಪೈಪೋಟಿಗೆ ಬೀಳುತ್ತವೆ.

ಮೊದಲ ಸ್ಥಾನ ಕಾಪಾಡಿಕೊಂಡ 'ಗಟ್ಟಿಮೇಳ'
'ಗಟ್ಟಿಮೇಳ' ಧಾರಾವಾಹಿ ಶುರುವಾಗಿ ಎರಡು ವರ್ಷದ ಮೇಲಾಗಿದೆ. ಆರಂಭದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದ 'ಗಟ್ಟಿಮೇಳ' ಬಳಿಕ ಹಿಂದೆ ಸರಿದಿತ್ತು. ಹೊಸ ಧಾರಾವಾಹಿ ಬಂದಾಗೆಲ್ಲಾ ಅದಕ್ಕೆ ಸ್ಥಾನ ಬಿಟ್ಟುಕೊಟ್ಟು ಕೊಂಚ ಹಿಂದೆ ಹೋಗುತ್ತಿತ್ತು. ಆದರೆ ಕಳೆದ ಎರಡ್ಮೂರು ವಾರದಿಂದ ಮರಳಿ ತನ್ನ ಸ್ಥಾನಕ್ಕೆ ಬಂದಿದೆ. ಮೊದಲ ಸ್ಥಾನಕ್ಕೆ ಬಂದು ನಿಂತಿದ್ದು, 9.8 ಟಿಆರ್ಪಿಯನ್ನು ಪಡೆದುಕೊಂಡಿದೆ. ಸತ್ಯದ ಹುಡುಕಾಟದಲ್ಲಿ ವೇದಾಂತ್ ಇದ್ದಾನೆ. ರೀಲ್ ಅಮ್ಮನನ್ನು ಜೈಲಿಗೆ ಕಳುಹಿಸುವ ಉದ್ದೇಶದಿಂದ ರಿಯಲ್ ಅಮ್ಮನನ್ನು ಮನೆ ಬಿಟ್ಟು ಕಳುಹಿಸಿದ್ದಾನೆ ವೇದಾಂತ್. ಈ ಕಥೆ ಜನರನ್ನು ಹಿಡಿದಿಟ್ಟಿದೆ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೂ ಮೊದಲ ಸ್ಥಾನ
ಇನ್ನು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಕೂಡ ತನ್ನ ಮೊದಲ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಬದಲಿಗೆ ಇಲ್ಲಿಯೂ 9.8 ಟಿಆರ್ಪಿಯೇ ಬಂದಿದೆ. ಮುರುಳಿ ಮತ್ತು ಸಹನಾ ನಿಶ್ಚಿತಾರ್ಥದ ಜೊತೆಗೆ ಕಂಠಿ ಮತ್ತು ಸ್ನೇಹಾ ಲವ್ ಸ್ಟೋರಿಯೂ ಜೋರಾಗಿ ನಡೆಯುತ್ತಿದೆ. ಇದರ ಹೊರತಾಗಿ, 'ಶ್ರೀರಸ್ತು ಶುಭಮಸ್ತು' 8.8 ಪಾಯಿಂಟ್ ತೆಗೆದುಕೊಳ್ಳುವ ಮೂಲಕ ಮೂರನೇ ಸ್ಥಾನ ಪಡೆದಿದೆ. 'ಸತ್ಯ' ನಾಲ್ಕನೇ ಸ್ಥಾನ, 'ಹಿಟ್ಲರ್ ಕಲ್ಯಾಣ' ಐದನೇ ಸ್ಥಾನ ಪಡೆದುಕೊಂಡಿದೆ. 'ಜೊತೆ ಜೊತೆಯಲಿ' ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

'ಭಾಗ್ಯಲಕ್ಷ್ಮೀ' ಮೆಚ್ಚಿಕೊಂಡ ಜನ
ಕಲರ್ಸ್ ಕನ್ನಡ ವಾಹಿನಿಯಲ್ಲೂ ಒಳ್ಳೊಳ್ಳೆ ಧಾರಾವಾಹಿ ಮೂಡಿ ಬರುತ್ತಿದೆ. ಅದರಲ್ಲೂ 'ಭಾಗ್ಯಲಕ್ಷ್ಮೀ' ಹಾಗೂ 'ಕೆಂಡಸಂಪಿಗೆ' ಎಲ್ಲರ ಮನೆಗಳಲ್ಲೂ ನಡೆಯುವಂತ ಕಥೆಯಾಗಿದೆ. ಅಕ್ಕ ತಂಗಿಯರ ಬಾಂಧವ್ಯ, ಸಂಸಾರದ ಮಹತ್ವ ಸಾರುವಂತ ಈ ಎರಡು ಧಾರಾವಾಹಿಯನ್ನು ಜನ ಮೆಚ್ಚಿದ್ದಾರೆ. 'ಭಾಗ್ಯಲಕ್ಷ್ಮೀ'ಗೆ 7.3 ಪಾಯಿಂಟ್ ಬಂದಿದ್ದು, 'ಕೆಂಡಸಂಪಿಗೆ'ಗೆ 5.5 ಪಾಯಿಂಟ್ ಬಂದಿದೆ. ಇನ್ನು ಹೊಸದಾಗಿ ಶುರುವಾಗಿರುವ 'ತ್ರಿಪುರ ಸುಂದರಿ' ಹಾಗೂ 'ಪುಣ್ಯವತಿ' ಜನರ ಮನಸ್ಸನ್ನು ಕಡಿಮೆ ಹಂತದಲ್ಲಿ ತಲುಪಿವೆ.

'ರಾಧಿಕಾ', 'ಸಿದ್ದಲಿಂಗೇಶ್ವರ' ಧಾರಾವಾಹಿ ಬೆಸ್ಟ್
ಇನ್ನು ಸ್ಟಾರ್ ಸುವರ್ಣ ವಾಹಿನಿ ಹಾಗೂ ಉದಯ ಟಿವಿಯಲ್ಲೂ ವಿಭಿನ್ನವಾದ ಧಾರಾವಾಹಿಗಳು ಬರುತ್ತಿವೆ. ಅದರಲ್ಲಿ ಉದಯದಲ್ಲಿ ಮೂಡಿ ಬರುತ್ತಿರುವ 'ರಾಧಿಕಾ' ಮೊದಲ ಸ್ಥಾನ ಅಲಂಕರಿಸಿದ್ದರೆ, 'ಸುಂದರಿ', 'ಸೇವಂತಿ', 'ನಯನತಾರ' ಅದರ ನಂತರದ ಸ್ಥಾನ ಅಲಂಕರಿಸಿವೆ. ಇನ್ನು ಸ್ಟಾರ್ ಸುವರ್ಣದಲ್ಲಿ 'ಎಡೆಯೂರು ಶ್ರೀ ಸಿದ್ದಲಿಂಗೇಶ್ವರ' ಮೊದಲ ಸ್ಥಾನದಲ್ಲಿದ್ದರೆ ಉಳಿದಂತೆ 'ಮನಸ್ಸೆಲ್ಲಾ ನೀನೆ', 'ಮುದ್ದುಮಣಿಗಳು', 'ಜೇನುಗೂಡು', 'ಬೆಟ್ಟದ ಹೂ' ಕ್ರಮವಾಗಿ ಸ್ಥಾನವನ್ನು ಅಲಂಕರಿಸಿವೆ.


Click it and Unblock the Notifications











