ಮುಕ್ತಾಯದ ಹಂತ ತಲುಪಿದ ವೀಕ್ಷಕರ ನೆಚ್ಚಿನ ಧಾರಾವಾಹಿ
ಗಟ್ಟಿಮೇಳ ಧಾರಾವಾಹಿಯ ವೀಕ್ಷಕರಿಗೆ ಕಹಿ ಸುದ್ದಿಯೊಂದು ಎದುರಾಗುವ ಸಮಯ ಬಂದಿದೆ. ಧಾರಾವಾಹಿ ಶುರುವಾಗಿ ಐದು ವರ್ಷ ತುಂಬುವ ಮೊದಲೇ ಮುಕ್ತಾಯಗೊಳ್ಳುವ ಸೂಚನೆ ಸಿಕ್ಕಿದೆ.
ವೀಕ್ಷಕರ ನೆಚ್ಚಿನ ಧಾರಾವಾಹಿ ಗಟ್ಟಿಮೇಳವೂ ಈಗಾಗಲೇ ಯಶಸ್ವಿ 1238 ಸಂಚಿಕೆಗಳನ್ನು ಪೂರೈಸಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೌಟುಂಬಿಕ ಕಥಾಹಂದರವನ್ನೊಳಗೊಂಡ ಗಟ್ಟಿಮೇಳ ಈಗ ಮುಗಿಯುವ ಹಂತ ತಲುಪಿದೆ.
ಗಟ್ಟಿಮೇಳ ಧಾರಾವಾಹಿ ಮೊದಲಿನಿಂದಲೂ ಎಂಟು ಗಂಟೆಯ ಸ್ಲಾಟ್ ಕಿಂಗ್ ಆಗಿ ಮೋಡಿ ಮಾಡಿದೆ. ಟಿಆರ್ಪಿ ರೇಟಿಂಗ್ನಲ್ಲಂತೂ ಎಂದೂ ಕಾಂಪ್ರಮೈಸ್ ಮಾಡಿಕೊಂಡಿದ್ದೇ ಇಲ್ಲ.

ಟಾಪ್ ರೇಟಿಂಗ್ನ ಧಾರಾವಾಹಿ
ಗಟ್ಟಿಮೇಳ ಧಾರಾವಾಹಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಧಾರಾವಾಹಿ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಪ್ರತಿನಿತ್ಯವೂ ಕಥೆಯಲ್ಲಿ ಟ್ವಿಸ್ಟ್ ನೀಡುವ ಮೂಲಕ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದೆ. ಪಾತ್ರವರ್ಗದ ಮೂಲಕವೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ವೇದ್ಯಾ ಎಂಬ ಹೆಸರಿನ ಮೂಲಕ ಧಾರಾವಾಹಿ ವೀಕ್ಷಕರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನಾಯಕ ವೇದಾಂತ್ ಹಾಗೂ ನಾಯಕಿ ಅಮೂಲ್ಯ ಅಭಿನಯಕ್ಕೆ ಮನಸೋಲದವರಿಲ್ಲ. ವೇದ್ಯಾ ಜೋಡಿ ಮೋಡಿ ನವಿರಾದ ಪ್ರೇಮಕಥೆಯ ಜೊತೆಗೆ ಒಂಚೂರು ರೊಮ್ಯಾನ್ಸ್, ಒಂಚೂರು ಎಮೋಷನ್ ಜೊತೆಗೆ ಈ ಮುದ್ದು ಜೋಡಿಗಳ ತರಲೆ ತುಂಟಾಟಗಳು ವೀಕ್ಷಕರ ಕಣ್ಮನ ಸೆಳೆಯುತ್ತದೆ. ವೇದ್ಯಾ ಜೋಡಿ ಕಂಡು ಫಿದಾ ಆಗಿದ್ದಾರೆ.
ವೀಕ್ಷಕರ ನೆಚ್ಚಿನ ಪಾತ್ರಗಳು
ಧಾರಾವಾಹಿಯಲ್ಲಿ ಕೇವಲ ನಾಯಕ ನಾಯಕಿ ಪಾತ್ರವಲ್ಲದೇ ಆರತಿ - ವಿಕ್ಕಿ, ಅದಿತಿ - ಧ್ರುವ, ಅಂಜಲಿ, ವೈದೇಹಿ, ವೈಜಯಂತಿ, ಸಾರ್ಥಕ್ - ಆದ್ಯಾ, ಖಳನಾಯಕಿ ಸುಹಾಸಿನಿ, ಪರಿಮಳಾ - ಮಂಜುನಾಥ್, ಖಳನಾಯಕ ಅಗ್ನಿ, ತೇಜಸ್, ಬೆಟ್ಟಪ್ಪ ಸೇರಿದಂತೆ ಪ್ರತಿಯೊಂದು ಪಾತ್ರಗಳು ಕೂಡಾ ವೀಕ್ಷಕರಿಗೆ ತುಂಬಾ ಹತ್ತಿರ ಎನಿಸಿಬಿಟ್ಟಿದೆ. ಇದರ ಜೊತೆಗೆ ಗಟ್ಟಿಮೇಳದ ಕೇಂದ್ರಬಿಂದು ಎಂದರೆ ಅದು ಕಾಂತ ಪಾತ್ರ. ಪ್ರತಿ ಸಂಚಿಕೆಯಲ್ಲೂ ನವಿರಾದ ಹಾಸ್ಯದ ಮೂಲಕ ಪ್ರೇಕಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಕಾಂತ ಪಾತ್ರಕ್ಕೂ ಕೂಡಾ ಅಭಿಮಾನಿ ವರ್ಗವಿದೆ. ಪ್ರತಿ ವರ್ಷ ಜೀ ಕುಟುಂಬ ಅವಾರ್ಡ್ಸ್ನಲ್ಲಿ ಜನ ಮೆಚ್ಚಿದ ಧಾರಾವಾಹಿ, ನಾಯಕ ನಟಿ, ನಾಯಕ ನಟ ಹಾಗೂ ಅತ್ಯುತ್ತಮ ರೇಟೆಡ್ ಸೀರಿಯಲ್ ಅವಾರ್ಡ್ಗಳನ್ನು ಪಡೆದುಕೊಂಡಿರುವ ಗಟ್ಟಿಮೇಳ ಧಾರಾವಾಹಿ ಇಡೀ ಧಾರವಾಹಿಗಳ ಇತಿಹಾಸದಲ್ಲಿ ಸಾವಿರಕ್ಕೂ ಅಧಿಕ ಅಭಿಮಾನಿಗಳ ಪೇಜ್ಗಳನ್ನು ಹೊಂದಿದೆ. ಆರಂಭದ ದಿನಗಳಿಂದಲೂ ಟಿಆರ್ಪಿ ರೇಟಿಂಗ್ನಲ್ಲಿಯೂ ಮುಂದಿರುವ ಧಾರಾವಾಹಿಯು ಅತಿ ಹೆಚ್ಚು ಬಾರಿ ನಂಬರ್ 1 ಸ್ಥಾನ ಪಡೆದ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೊನೆಯ ಹಂತ ತಲುಪಿದ ಧಾರಾವಾಹಿ
ಇನ್ನು ಇತ್ತೀಚೆಗೆ ವೇದ್ಯಾ ಜೋಡಿ ವೀಕ್ಷಕರಿಂದ ದೂರಾಗಿದೆ. ಕುಟುಂಬದಲ್ಲಾಗಿರುವ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಈಗ ಮನೆಯವರೆಲ್ಲಾ ಹೋರಾಡುತ್ತಿದ್ದಾರೆ. ವೈದೇಹಿ ಮಕ್ಕಳು ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿದ್ದಾರೆ. ಧ್ರುವ ಅಗ್ನಿ ಮತ್ತು ಬೆಟ್ಟಪ್ಪನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಗಟ್ಟಿಮೇಳ ಧಾರಾವಾಹಿ ವೀಕ್ಷಕರಿಗೆ ಕುತೂಹಲ ಮೂಡಿಸುತ್ತಿರುವ ಈ ಸಂದರ್ಭದಲ್ಲೇ ಮುಕ್ತಾಯ ಕಾಣುವ ಸಮಯ ಬಂದಿದೆ ಎನ್ನಲಾಗುತ್ತಿದೆ. ಈಗಾಗಲೇ ಕುಟುಂಬಕ್ಕೆ ಇಷ್ಟು ವರ್ಷ ತಿಳಿಯದೇ ಇದ್ದ ಸತ್ಯ ಬಯಲಾಗಿದೆ.
ಕೊನೆಯ ದಿನದ ಶೂಟ್
ಇನ್ನೇನಿದ್ದರೂ ಸೂರ್ಯನಾರಾಯಣ, ವೇದಾಂತ್, ವಿಕ್ಕಿ, ಎಲ್ಲರೂ ಮನೆ ಸೇರಬೇಕಿದೆ. ಅಗ್ನಿ ಮತ್ತು ಬೆಟ್ಟಪ್ಪನಿಗೆ ಶಿಕ್ಷೆ ನೀಡಬೇಕಿದೆ ಅಷ್ಟೇ. ಧಾರಾವಾಹಿಯು ಕೊನೆಯ ಹಂತವನ್ನು ತಲುಪಿದ್ದು, ಕೊನೆಯ ದಿನದ ಶೂಟಿಂಗ್ ಕೂಡ ಮುಕ್ತಾಯಗೊಂಡಿದೆ. ಈ ಬಗ್ಗೆ ಧಾರಾವಾಹಿಯ ನಟಿಯರು ಮಾಹಿತಿ ನೀಡಿದ್ದಾರೆ. ಕೊನೆಯ ದಿನದ ಶೂಟಿಂಗ್ ಸೆಟ್ನಲ್ಲಿ ಪಾತ್ರಧಾರಿಗಳು ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ನಟಿ ಸ್ವಾತಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಟಿ ಪ್ರಿಯಾ ಜೆ ಆಚಾರ್ ಅಲಿಯಾಸ್ ಅಧಿತಿ ಕೂಡ ಅಧಿತಿಯಂತೆ ಕೊನೆಯ ಬಾರಿಗೆ ತಯಾರಾಗುತ್ತಿದ್ದೇನೆ ಎಂದು ತಾವು ಮೇಕಪ್ ಮಾಡಿಕೊಳ್ಳುವ ವೀಡಿಯೋ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











