ನುಡಿದಂತೆ ನಡೆದ ತೇಜಸ್: 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಗೆದ್ದ ಹಣ ಸರ್ಕಾರಿ ಶಾಲೆಗೆ.!
ತಾವು ವಿದ್ಯೆ ಕಲಿತ ಶಾಲೆಯನ್ನು ಉಳಿಸಿ, ಬೆಳೆಸುವ ಮನಃಸ್ಥಿತಿ ಈಗಿನ ಕಾಲದಲ್ಲಿ ಯಾರಿಗಿದೆ ಹೇಳಿ.? ದುಡ್ಡೇ ದೊಡ್ಡಪ್ಪ ಎನ್ನುವ ಈ ಯುಗದಲ್ಲಿ ಶಾಲೆಗೆ ಒಳಿತು ಮಾಡುವ ಗುಣ ಹೊಂದಿರುವವರು ತೀರಾ ಅಪರೂಪ. ಅಂತಹ ಅಪರೂಪದ ಹುಡುಗ ಕಾಣಿಸಿಕೊಂಡಿದ್ದು 'ಕನ್ನಡದ ಕೋಟ್ಯಧಿಪತಿ' ವೇದಿಕೆಯಲ್ಲಿ.
ಹಾಟ್ ಸೀಟ್ ಮೇಲೆ ಕೂತು ಹೆಚ್ಚು ಹಣ ಗೆದ್ದರೆ, ತಾನು ಓದುತ್ತಿರುವ ಶಾಲೆಗೆ ಕಾಂಪೌಂಡ್ ಕಟ್ಟಿಸುವೆ ಎಂದು ಸಾಲಿಗ್ರಾಮದ ಕೆಡಗ ಹುಡುಗ ತೇಜಸ್ ಹೇಳಿದ್ದ. ಆಡಿದ ಮಾತಿನಂತೆ ತನಗೆ ಸಿಕ್ಕ ಬಹುಮಾನ ಹಣದಲ್ಲಿ ತನ್ನ ಶಾಲೆಗೆ ತೇಜಸ್ ಪಾಲು ನೀಡಿದ್ದಾನೆ.
ಪುನೀತ್ ರಾಜ್ ಕುಮಾರ್ ಮುಂದೆ ಕೂತು ಹೇಳಿದ ಮಾತನ್ನ ತೇಜಸ್ ನಿಜ ಮಾಡಿದ್ದಾನೆ. ತನ್ನ ಶಾಲೆಗೆ ಕಾಂಪೌಂಡ್ ಕಟ್ಟಿಸಲು ಹಣ ಸಹಾಯ ಮಾಡಿ ಎಲ್ಲರ ಮನಗೆದ್ದಿದ್ದಾನೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ನೋಡಿ...

ಯಾರು ಈ ತೇಜಸ್.?
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಸಾರವಾದ 'ಕನ್ನಡದ ಕೋಟ್ಯಧಿಪತಿ' ವಿಶೇಷ ಸಂಚಿಕೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಸರ್ಕಾರಿ ಪ್ರೌಢಶಾಲೆ, ಕಟ್ಟಾಯದಲ್ಲಿ ಓದುತ್ತಿರುವ ತೇಜಸ್ ಪಾಲ್ಗೊಂಡಿದ್ದ. ಹತ್ತನೇ ಕ್ಲಾಸ್ ಓದುತ್ತಿರುವ ತೇಜಸ್ ಎರಡನೇಯವನಾಗಿ ಹಾಟ್ ಸೀಟ್ ಮೇಲೆ ಕುಳಿತ.

ಡಾಕ್ಟರ್ ಆಗುವ ಕನಸು
ತೇಜಸ್ ಮೂಲತಃ ಸಾಲಿಗ್ರಾಮದ ಕೆಡಗ ಗ್ರಾಮದವನು. ಈತನ ತಂದೆ-ತಾಯಿ ಜಮೀನಿನಲ್ಲಿ ಕೂಲಿ ಮಾಡುತ್ತಾರೆ. ತಾಯಿಗೆ ಕಣ್ಣಿಲ್ಲ. ತಂದೆಗೆ ಬುದ್ಧಿ ಕಮ್ಮಿ. ಹೀಗಾಗಿ, ಹಾಸನದಲ್ಲಿ ಸಂಬಂಧಿಕರ ಮನೆಯಲ್ಲಿ ತೇಜಸ್ ಮತ್ತು ಆತನ ಅಕ್ಕ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಿಪ್ಪ ತೇಜಸ್ ಗೆ ಡಾಕ್ಟರ್ ಆಗಬೇಕೆನ್ನುವ ಕನಸಿದೆ. ಜೊತೆಗೆ ಜಮೀನು ಖರೀದಿ ಮಾಡಿ ಸ್ವಂತ ಬಿಸಿನೆಸ್ ಮಾಡುವ ಇಚ್ಛೆ ಇದೆ.

ಗೆದ್ದ ಹಣದಲ್ಲಿ ಏನು ಮಾಡುತ್ತಾನೆ.?
'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ತಾಯಿಗೆ ಆಪರೇಶನ್ ಮಾಡಿಸುವ ಯೋಚನೆ ತೇಜಸ್ ಗಿತ್ತು. ಜೊತೆಗೆ ಸ್ಕೂಲ್ ಗೆ ಕಾಂಪೌಂಡ್ ಕಟ್ಟಿಸುವ ಆಸೆ ಇತ್ತು. ''ಸ್ಕೂಲ್ ಗೆ ಒಂದು ಸೈಡ್ ಕಾಂಪೌಂಡ್ ಇಲ್ಲ. ಪ್ರತಿ ವರ್ಷ ಪರಿಸರ ದಿನಾಚರಣೆ ಪ್ರಯುಕ್ತ 150ಕ್ಕೂ ಹೆಚ್ಚು ಗಿಡ-ಮರಗಳನ್ನು ನೆಡುತ್ತೇವೆ. ಆದರೂ ಒಂದೂ ಉಳಿಯಲ್ಲ. ದನ-ಕರುಗಳು ಗಿಡಗಳನ್ನು ತಿನ್ನುತ್ತವೆ. ಹೀಗಾಗಿ ಕಾಂಪೌಂಡ್ ಕಟ್ಟಿಸಬೇಕು. ಅಕ್ಕನನ್ನು ಚೆನ್ನಾಗಿ ಓದಿಸಿ, ಮದುವೆ ಮಾಡಬೇಕು. ಜಮೀನು ತೆಗೆದುಕೊಳ್ಳಬೇಕು, ಹಸು ಸಾಕಬೇಕು, ಊರಿಗೆ ಸಹಾಯ ಮಾಡಬೇಕು. ಹೀಗಾಗಿ 25 ಲಕ್ಷ ಗೆಲ್ಲಬೇಕು'' ಎಂದು ತೇಜಸ್ ಹೇಳಿದ್ದನು.

640,000 ಗೆದ್ದ ತೇಜಸ್
ಜೋಪಾನವಾಗಿ ಪ್ರಶ್ನೆಗಳಿಗೆ ಉತ್ತರಿಸಿದ ತೇಜಸ್, ತನ್ನ ಬಳಿ ಇದ್ದ ಎಲ್ಲಾ ಲೈಫ್ ಲೈನ್ ಗಳನ್ನು ಬಳಸಿಕೊಂಡು 640,000 ರೂಪಾಯಿಗಳನ್ನು ಪಡೆದನು. 12,50,000 ರೂಪಾಯಿಯ ಪ್ರಶ್ನೆಯನ್ನೂ ತೇಜಸ್ ನೋಡಿದನು. ಆದ್ರೆ, ರಿಸ್ಕ್ ತೆಗೆದುಕೊಳ್ಳದ ತೇಜಸ್ 640,000 ರೂಪಾಯಿಗೆ ತೃಪ್ತಿ ಪಟ್ಟುಕೊಂಡನು. ಇದೇ ಹಣದಲ್ಲಿ ತಾನು ಓದುತ್ತಿರುವ ಶಾಲೆಗೆ ಕಾಂಪೌಂಡ್ ಕಟ್ಟಿಸಲು ತೇಜಸ್ ಪಾಲು ನೀಡಿದ್ದಾನೆ. ನುಡಿದಂತೆ ನಡೆದ ತೇಜಸ್ ಇಡೀ ಶಾಲೆಗೆ ಮಾದರಿ ಆಗಿದ್ದಾನೆ. ಶಾಲೆಯ ಹೆಮ್ಮೆ ಹೆಚ್ಚಿಸಿದ ತೇಜಸ್ ಗೆ ಅಭಿನಂದನೆಯ ಮಹಾಪೂರ ಹರಿದುಬರುತ್ತಿದೆ.
ಚಿತ್ರಕೃಪೆ: ಕಲರ್ಸ್ ಕನ್ನಡ/ವೂಟ್


Click it and Unblock the Notifications











