'ಕರಾವಳಿ' ಬಳಿಕ ಮತ್ತೆ ತೆಲುಗು ಚಿತ್ರರಂಗಕ್ಕೆ ಹಾರಿದ ಕನ್ನಡತಿ ಸಂಪದ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ಮಿಥುನರಾಶಿ' ಕೂಡಾ ಒಂದು. ವಿಭಿನ್ನ ಕಥಾ ಹಂದರದ ಮೂಲಕ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದಿತ್ತು. 'ಮಿಥುನ ರಾಶಿ' ಧಾರಾವಾಹಿಯಲ್ಲಿ ನಾಯಕಿ ರಾಶಿಯ ಅಕ್ಕ ಸುರಕ್ಷಾ ಆಗಿ ನಟಿಸಿದ್ದ ಚೆಂದುಳ್ಳಿ ಚೆಲುವೆಯ ಹೆಸರು ಸಂಪದ. ಮೊದಲ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಸಂಪದ ಕಾಣಿಸಿಕೊಂಡಿದ್ದರೂ ಪ್ರಸ್ತುತ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.
ಸುರಕ್ಷಾ ಎನ್ನುವ ನೆಗೆಟಿವ್ ಪಾತ್ರದಲ್ಲಿ ನಟಿಸಿದ ಸಂಪದ ನಟನಾ ಲೋಕದ ನಂಟು ಬೆಳೆಸಿಕೊಂಡಿದ್ದು ಮಾಡೆಲಿಂಗ್ ಮೂಲಕ. ಮುಂದೆ ನಟಿಯಾಗಬೇಕು ಎಂಬ ನಿರ್ಧಾರ ಮಾಡಿದ ಈಕೆ ತರಬೇತಿಯನ್ನು ಕೂಡಾ ಪಡೆದುಕೊಂಡಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸಂಸ್ಥೆಗೆ ಸೇರಿದ ಸಂಪದಾ ನಟನೆಯ ಕುರಿತಾದ ತರಬೇತಿಯನ್ನು ಪಡೆದುಕೊಂಡರು. ರೀತಿ ನೀತಿಗಳನ್ನು ಕಲಿತುಕೊಂಡರು.

ಮುಂದೆ 'ಮಿಥುನರಾಶಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಈಕೆ ನಂತರ ಹಾರಿದ್ದು ಸಿನಿಮಾಗೆ. ನಿಖಿಲ್ ಕುಮಾರಸ್ವಾಮಿ ನಾಯಕನಾಗಿ ನಟಿಸಿದ 'ರೈಡರ್' ಸಿನಿಮಾದಲ್ಲಿ ಈಕೆ ನಾಯಕಿಯಾಗಿ ಮೋಡಿ ಮಾಡಿದರು.
ಮುಂದೆ ತೆಲುಗು ಸಿನಿಮಾ ರಂಗದಲ್ಲೂ ಕಾಣಿಸಿಕೊಂಡ ಈಕೆ ಅಲ್ಲೂ ತಮ್ಮ ನಟನಾ ಕಂಪನ್ನು ಪಸರಿಸಿದರು. ಗುರುದತ್ ಗಾಣಿಗ ಅವರ ಸಿನಿಮಾ 'ಕರಾವಳಿ'ಯಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶವನ್ನು ಈಕೆ ಪಡೆದುಕೊಂಡಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ 'ಕರಾವಳಿ' ಸಿನಿಮಾದಲ್ಲಿ ಈಕೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಕರಾವಳಿ' ಸಿನಿಮಾದಲ್ಲಿ ಪಶುವೈದ್ಯೆ ಪಾತ್ರವನ್ನು ಮಾಡಿರುವ ಈಕೆ ಇದೀಗ ಮಗದೊಂದು ಸಿನಿಮಾದಲ್ಲಿ ಮಿಂಚಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ 'ಮಾಸ್ ಕಾ ದಾಸ್' ಎಂದು ಫೇಮಸ್ಸು ಆಗಿರುವ ನಟ ವಿಶ್ವಕ್ ಸೇವ್ ಅವರು ತಮ್ಮ 13ನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಆ ಸಿನಿಮಾಕ್ಕೆ ನಾಯಕಿಯಾಗಿ ಕನ್ನಡತಿ ಸುರಕ್ಷಾ ಆಯ್ಕೆಯಾಗಿದ್ದಾರೆ.
ಈ ಸಿನಿಮಾಗೆ ಸದ್ಯ 'VS13' ಎಂದು ಹೆಸರಿಡಲಾಗಿದೆ. ಸ್ವಾತಂತ್ರೋತ್ಸವದ ದಿನದಂದು ಈ ಸಿನಿಮಾದ ಮುಹೂರ್ತ ನಡೆದಿದೆ. ಶ್ರೀಧರ್ ಗಂಟ ಎನ್ನುವ ಹೊಸ ನಿರ್ದೇಶಕರು ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಇನ್ನು ಸಂಪದ ಅವರು ಈ ಹಿಂದೆ 'ಶ್ರೀ ಶ್ರೀ ಶ್ರೀ ರಾಜ ವಾರು' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಮಾತ್ರವಲ್ಲದೇ ರಾಜ್ ತರುಣ್, ಸಂದೀಪ್ ಮಾಧವ್ ಅವರ 'ಮಾಸ್ ಮಹಾರಾಜು' ಸಿನಿಮಾದಲ್ಲಿಯೂ ಈಕೆ ನಾಯಕಿಯಾಗಿ ಮೋಡಿ ಮಾಡಿದ್ದರು.


Click it and Unblock the Notifications











