Kiran Raj: ಮೆಸೇಜ್ ಕೊಡುವಾಗಲೂ ಮನರಂಜನೆ ಇರ್ಬೇಕು.. 'ಕನ್ನಡತಿ' ಖ್ಯಾತಿಯ ಕಿರಣ್ ರಾಜ್
ಕನ್ನಡ ಕಿರುತೆರೆ ನಟ ಕಿರಣ್ ರಾಜ್ ಈಗ ಸಿನಿಮಾಗಳಲ್ಲಿ ತುಂಬಾನೇ ಹೆಸರು ಮಾಡುತ್ತಿದ್ದಾರೆ. 'ಕನ್ನಡತಿ' ಧಾರಾವಾಹಿ ಕಿರಣ್ ರಾಜ್ ಹಾಗೂ ನಟಿ ರಂಜಿನಿ ರಾಘವನ್ಗೆ ದೊಡ್ಡ ಬ್ರೇಕ್ ಕೊಟ್ಟಿದ್ದಂತೂ ಹೌದು. ಈ ರೀತಿ ಕಿರುತೆಯಲ್ಲಿ ಬಹಳ ಪೀಕ್ ಅಲ್ಲಿ ಇರುವಾಗಲೇ ಸಿನಿಮಾಗೆ ಹಾರಿರುವ ನಟ ಕಿರಣ್ ರಾಜ್ ಪ್ರಸ್ತುತ ತಮ್ಮ ಸಿನಿಮಾ ರಾನಿ ರಿಲೀಸ್ ವಿಚಾರವಾಗಿ ಓಡಾಡುತ್ತಿದ್ದಾರೆ.
ಧಾರಾವಾಹಿ ಹಾಗೂ ಸಿನಿಮಾ ಕ್ಷೇತ್ರಗಳೆರಡು ಬಹಳ ವಿಭಿನ್ನ. 'ಕನ್ನಡತಿ' ಧಾರಾವಾಹಿಯ ಮೊದಲು 'ಕಿನ್ನರಿ' ಹಾಗೂ ಮತ್ತೆರಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು ಕಿರಣ್ ರಾಜ್. ಕಿರುತೆರೆ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಕಿರಣ್ ರಾಜ್ಗೆ ಯಾವಾಗಲೂ ಹಿರಿತೆರೆಗೆ ಬರಬೇಕೆಂಬುದೇ ಆಸೆಯಾಗಿತ್ತು. ಆದರೆ ಕಿರಣ್ ರಾಜ್ಗೆ ಯಾವುದೇ ಚಲನಚಿತ್ರದ ಬ್ಯಾಗ್ರೌಂಡ್ ಇಲ್ಲದ ಕಾರಣ ನಟನೆಯಲ್ಲಿ ಗಟ್ಟಿಯಾಗಿ ನೆಲೆಗೊಳ್ಳಲು ಒಂದು ವೇದಿಕೆ ಬೇಕಿತ್ತು. ಆ ಕಾರಣದಿಂದ ಕಿರಣ್ ರಾಜ್ ಧಾರಾವಾಹಿಗಳಿಗೆ ಕಾಲಿಟ್ಟರು.

ಸದಾ ಹೊಸ ವಿಚಾರ ಕಲಿಯುತ್ತೇನೆ
ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಕಿರಣ್ ರಾಜ್ ಅಭಿನಯಿಸುತ್ತಿದ್ದು ತುಂಬಾ ಖುಷಿಯಲ್ಲಿದ್ದಾರೆ. ಸಿನಿಮಾದಲ್ಲಿ ಕಿರಣ್ ರಾಜ್ ತನ್ನ ಅಭಿನಯದ ಮೂಲಕ ಪ್ರೇಕ್ಷಕರ ಮುಂದೆ ಮಾರಾಟವಾಗಿ ಇಟ್ಟುಕೊಳ್ಳುವ ಬದಲು ಪ್ರತಿದಿನ ಪ್ರತಿಯೊಂದರಿಂದಲೂ ಹೊಸ ವಿಚಾರಗಳನ್ನು ಕಲಿಯುತ್ತಾ ತನ್ನನ್ನು ತಾನು ಒಳ್ಳೆಯ ಸ್ಥಾನಕ್ಕೆ ಕೊಂಡೊಯ್ಯಲು ಆಶಿಸುತ್ತಾರೆ ಕಿರಣ್ ರಾಜ್. ಇದರಿಂದ ನಿರ್ದೇಶಕ ನಿರ್ಮಾಪಕರಿಗೂ ಲಾಭವಾಗುತ್ತದೆ ಎಂಬುದು ಕಿರಣ್ ರಾಜ್ ಅಭಿಪ್ರಾಯ.
ಸಂದೇಶಗಳು ಮನೋರಂಜನೆಯಿಂದ ಇರಬೇಕು
'ರಾನಿ' ಸಿನಿಮಾ ಮೊದಲು ಸಹ ಕಿರಣ್ ರಾಜ್ ಎರಡು ಬೇರೆ ಸಿನಿಮಾಗಳಲ್ಲಿ ನಟಿಸಿದ್ದರು. 'ಬಡ್ಡಿಸ್' ಹಾಗೂ 'ಜೀವನಾನೆ ನಾಟಕ ಸ್ವಾಮಿ' ಎಂಬ ಚಿತ್ರಗಳಾಗಿದ್ದವು. ಇವು ಸಂದೇಶ ಭರಿತ ಚಿತ್ರಗಳಾಗಿದ್ದರು ಅಷ್ಟೇನು ಹಿಟ್ ಆಗಲಿಲ್ಲ. ಜೀವನ ಸಂದೇಶಗಳೇನಿದ್ದರೂ ವಾಟ್ಸಾಪ್ ಸ್ಟೇಟಸ್ಗೆ ಚೆಂದ, ಅದನ್ನು ಸಿನಿಮಾದಲ್ಲಿ ತೋರಿಸುವುದು ಅಷ್ಟು ಪ್ರಸ್ತುತವಲ್ಲ. ಹಾಗೆಂದ ಮಾತ್ರಕ್ಕೆ ಕಿರಣ್ ರಾಜ್ ಅವರು ಸಿನಿಮಾದಲ್ಲಿ ಒಳ್ಳೆಯ ಸಂದೇಶಗಳನ್ನು ತೋರಿಸಬಾರದು ಎಂದೇನು ಹೇಳುತ್ತಿಲ್ಲ. ಆದರೆ ಅದನ್ನು ಮನೋರಂಜನಾತ್ಮಕವಾಗಿ ತೋರಿಸಿದರೆ ಮಾತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನುವುದು ಕಿರಣ್ ರಾಜ್ ಅಭಿಪ್ರಾಯ.
ಕಿರುತೆರೆ ವೀಕ್ಷಕರನ್ನು ಹಿರಿತೆರೆಗೆ ಕರೆತರಬೇಕು
ಇಷ್ಟು ವರ್ಷಗಳ ಕಾಲ ಕಿರಣ್ ರಾಜ್ ಕಿರುತೆರೆಯಲ್ಲಿ ಜನರನ್ನು ಬಹಳಷ್ಟು ಮನರಂಜಿಸಿದ್ದಾರೆ. ಬಹಳಷ್ಟು ಜನರಿಂದ, ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹೀಗೆ ಸಿನಿಮಾಗೆ ಬಂದಿರುವುದರಿಂದ ಕಿರುತೆರೆಯ ಪ್ರೇಕ್ಷಕರನ್ನು ಕರೆಯುವುದು ಮುಖ್ಯ. ಪ್ರೇಕ್ಷಕರು ಅವರವರ ಸೌಕರ್ಯದ ಮನೆ ಟಿವಿ ಮುಂದಿನಿಂದ ಎದ್ದು ಥಿಯೇಟರ್ಗೆ ಬರುವ ಹಾಗೆ ಮಾಡಬೇಕೆಂದರೆ ಸಿನಿಮಾ ಪ್ರೊಡಕ್ಷನ್, ಕಥೆ, ನಟರು, ಅಭಿನಯ ಎಲ್ಲವೂ ಅಷ್ಟೇ ಅಚ್ಚುಕಟ್ಟಾಗಿ ಚೆನ್ನಾಗಿರಬೇಕು. ಆ ನಿಟ್ಟಿನಲ್ಲಿ ಕಿರಣ್ ರಾಜ್ ನಡೆಯುತ್ತಿದ್ದಾರೆ.

'ರಾನಿ' ಥ್ರಿಲ್ಲರ್ ಆಕ್ಷನ್ ಸಿನಿಮಾ
ಇವರ ಸಿನಿಮಾ ರಾನಿ ಥ್ರಿಲ್ಲರ್ ಆಕ್ಷನ್ ಸಿನಿಮಾ ಆಗಿದ್ದು ನಿರ್ದೇಶಕ ಗುರುತೇಜ ಶೆಟ್ಟಿ ಅವರು ನಿರ್ದೇಶಿಸಿದ್ದಾರೆ. ಸಿನಿಮಾ ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗ್ಡೆ ನಿರ್ಮಿಸಿದ್ದಾರೆ ಮತ್ತು ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ ಯಶ್ ಶೆಟ್ಟಿ, ಧರ್ಮಣ್ಣ, ರವಿಶಂಕರ್, ಬಿ ಸುರೇಶ್, ಉಗ್ರಂ ರವಿ ಮುಂತಾದವರಿದ್ದಾರೆ.


Click it and Unblock the Notifications











