Kiran Raj: ಜೀವನದಲ್ಲಿ ತಾಳ್ಮೆ ಮತ್ತು ನಂಬಿಕೆ ಮುಖ್ಯ ಎಂದು ಕಲಿಸಿಕೊಟ್ಟದ್ದು 'ಕನ್ನಡತಿ' : ಕಿರಣ್ ರಾಜ್
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಕನ್ನಡತಿ' ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ತನ್ನ ಟೈಟಲ್ ಮಾತ್ರವಲ್ಲದೇ ಕಥಾವಸ್ತು, ಅಭಿನಯ ಹಾಗೂ ಅದ್ಭುತ ಕಲಾವಿದರ ತಂಡದ ಮೂಲಕ ಕರುನಾಡ ಜನಮನ ಸೆಳೆದ ಧಾರಾವಾಹಿ ಕಳೆದ ವಾರ ಮುಕ್ತಾಯಗೊಂಡಿದೆ.
ಅದ್ಭುತವಾಗಿ ಪ್ರಸಾರವಾಗುತ್ತಿದ್ದ 'ಕನ್ನಡತಿ' ಧಾರಾವಾಹಿಯು ಇತ್ತೀಚೆಗಷ್ಟೇ ಯಶಸ್ವಿ 800 ಸಂಚಿಕೆ ಪೂರೈಸಿದ್ದು ಕಳೆದ ಶುಕ್ರವಾರ ತನ್ನ ಪ್ರಸಾರ ನಿಲ್ಲಿಸಿದೆ. ಧಾರಾವಾಹಿಯಲ್ಲಿ ನಾಯಕ ಹರ್ಷ ಎಂಬ ಪಾತ್ರವನ್ನು ಮಾಡುತ್ತಿದ್ದ ಕಿರಣ್ ರಾಜ್ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
'ಕನ್ನಡತಿ' ಧಾರಾವಾಹಿಯ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ನಕುಲ್ ಆಗಿ ನಟಿಸಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಕಿರಣ್ ರಾಜ್ ಕಿರುತೆರೆಯಲ್ಲಿ ಮಗದಷ್ಟು ಫೇಮಸ್ಸು ಆಗಿದ್ದು ಕನ್ನಡತಿಯಿಂದಾಗಿ. ತಮ್ಮ ಅಭಿನಯದ ಮೂಲಕ ಸಾವಿರಾರು ಕಿರುತೆರೆ ಪ್ರಿಯರ ಮನೆ ಮಗನಾಗಿರುವ ಕಿರಣ್ ರಾಜ್ ಅವರು ತಮ್ಮ ಧಾರಾವಾಹಿಯ ಬಗ್ಗೆ ಮನದ ಮಾತನ್ನು ಹಂಚಿಕೊಂಡಿದ್ದಾರೆ.

ಜೀವನದಲ್ಲಿ ತಾಳ್ಮೆ ಮತ್ತು ನಂಬಿಕೆ ಮುಖ್ಯ
"ಕನ್ನಡತಿ ಧಾರವಾಹಿಯ ಮೊದಲು ನಾನು ಅಭಿನಯ ಮಾಡುತ್ತಿದ್ದರೂ ನನಗೆ ಯಾವುದೇ ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿರಲಿಲ್ಲ. ಆದರೆ 'ಕನ್ನಡತಿ' ಧಾರಾವಾಹಿಯಿಂದ ಮೂರು ಬಾರಿ ನಾನು ಅನುಬಂಧ ಅವಾರ್ಡ್ಸ್ ನಂತಹ ದೊಡ್ಡ ದೊಡ್ಡ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಾಯಿತು. ಆ ಮಟ್ಟಿಗೆ ನಾನು ಸಂತೋಷವಾಗಿದ್ದೇನೆ. ನನ್ನ ಪ್ರಕಾರ ಒಳ್ಳೆಯ ಕಾರ್ಯಗಳು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಅದಕ್ಕಾಗಿ ನಾವು ತಾಳ್ಮೆಯಿಂದ ನಂಬಿಕೆ ಇಟ್ಟು ಕಾಯಬೇಕಷ್ಟೆ. ನಮ್ಮಲ್ಲಿ ನಮಗೆ ನಂಬಿಕೆ ಇದ್ದರೆ ಯಾವುದನ್ನು ಬೇಕಾದರೂ ಮಾಡಲು ಸಾಧ್ಯ. ತಾಳ್ಮೆ ಹಾಗೂ ನಂಬಿಕೆ ಜೀವನದಲ್ಲಿ ಬಹಳ ಮುಖ್ಯ ಎಂಬುದನ್ನು ನಾನು ಕನ್ನಡತಿ ಧಾರಾವಾಹಿ ಹಾಗೂ ಅದರಿಂದ ಸಿಕ್ಕಿರುವ ಯಶಸ್ಸಿನಿಂದ ಕಲಿತಿದ್ದೇನೆ"

ಹರ್ಷ - ಭುವಿ ಅದ್ಭುತ ಪಾತ್ರಗಳು
'ಕನ್ನಡತಿ' ಧಾರಾವಾಹಿಯ ಕಥೆಯ ಬಗ್ಗೆ ಮಾತನಾಡಿದ ಅವರು "ಧಾರಾವಾಹಿಯ ಕಥೆಯ ಬರಹಗಾರರು ಬಹಳ ಸೂಕ್ಷ್ಮವಾಗಿ ಹರ್ಷ ಹಾಗೂ ಭುವಿ ಎಂಬ ಅದ್ಭುತ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಜೀವನದಲ್ಲಿ ನಮಗೆ ಹರ್ಷನ ಸ್ವಭಾವ ಹಾಗೆಯೇ ಭುವಿಯ ಸ್ವಭಾವ ಎರಡೂ ಬೇಕಾಗುತ್ತದೆ. ಯಾವಾಗಲೂ ನಾವು ಹರ್ಷನಂತೆಯೇ ಅಥವಾ ಯಾವಾಗಲೂ ಭುವಿಯಂತೆಯೇ ಇರಲು ಸಾಧ್ಯವಿಲ್ಲ. ಎರಡು ರೀತಿಯ ತದ್ವಿರುದ್ಧ ಸ್ವಭಾವಗಳು ನಮ್ಮಲ್ಲಿರುತ್ತವೆ ಇರಲೇಬೇಕು. ಆದರೆ ಅದನ್ನು ಯಾವ ರೀತಿ ಬ್ಯಾಲೆನ್ಸ್ ಆಗಿ ಇಟ್ಟುಕೊಳ್ಳುತ್ತೇವೆ ಎಂಬುದು ಮುಖ್ಯ. ಇಷ್ಟು ಒಳ್ಳೆ ಸೂಕ್ಷ್ಮವಾದ ಪಾತ್ರದ ಮೂಲಕ ಕರುನಾಡ ಜನರನ್ನು ರಂಜಿಸಲು ಅವಕಾಶ ದೊರೆತಿದ್ದಕ್ಕೆ ನಾನು ಸದಾ ಋಣಿ" ಎಂದರು.

'ಕನ್ನಡತಿ' ಆತ್ಮವಿಶ್ವಾಸ ತಂದುಕೊಟ್ಟಿದೆ
ಹಳೆಯದು ಮುಕ್ತಾಯವಾಗುವುದು ಹೊಸತನದ ಆಗಮನಕ್ಕಾಗಿ
ಧಾರಾವಾಹಿಯ ಮುಕ್ತಾಯದ ಬಗ್ಗೆ ಮಾತನಾಡಿದ ಅವರು "ಯಾವಾಗಲೂ ಎಂತದ್ದೇ ಒಳ್ಳೆಯದಾದರೂ ಅದು ಮುಗಿಯಲೂ ಕೂಡಾ ಒಂದು ಕಾಲ ಇದ್ದೇ ಇರುತ್ತದೆ. ಅದೇ ರೀತಿ 'ಕನ್ನಡತಿ' ಧಾರಾವಾಹಿ ಮುಗಿಯುತ್ತಿರುವುದು ಇನ್ಯಾವುದೋ ಅದ್ಭುತವಾದ ಹೊಸದೊಂದರ ಆರಂಭದ ಸೂಚನೆ ಎಂದು ನಾನು ನಂಬಿದ್ದೇನೆ. ಈ ಧಾರಾವಾಹಿ ನನಗೆ ತಂದುಕೊಟ್ಟ ಆತ್ಮವಿಶ್ವಾಸ ಹಾಗೂ ಯಶಸ್ಸಿನ ಬಗ್ಗೆ ನನಗೆ ಸದಾ ಸಂತೋಷವಿದೆ. ಇನ್ನು ಮುಂದೆ ನನ್ನನ್ನು ನಾನು ಸಿನಿಮಾಗಳಲ್ಲಿ ನೋಡಲು ಇಚ್ಚಿಸುತ್ತೇನೆ. ಅವಕಾಶಗಳು ಬಂದು ಒಳ್ಳೆಯ ಕಥೆಗಳಿದ್ದರೆ ಸಿನಿಮಾಗಳಲ್ಲಿ ಪಾತ್ರ ಮಾಡಿ ನನ್ನ ನಟನೆಯನ್ನು ಸಾಬೀತು ಮಾಡಿಕೊಳ್ಳುವ ಕಾಲ ಇದೀಗ ಬಂದಿದೆ ಎಂದು ನಂಬಿದ್ದೇನೆ"

ಜೀವನ ಮುಂದೆ ಸಾಗಲೇಬೇಕಿದೆ
ಸಹನಟರನ್ನು ಮಿಸ್ ಮಾಡುತ್ತೇನೆ ಎಂದ ಕಿರಣ್ ರಾಜ್
ಇನ್ನು "ಧಾರಾವಾಹಿ ಮುಗಿಯುವುದರಿಂದ ಹಲವಾರು ಸಹ ನಟರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಇದು ಅನಿವಾರ್ಯವಾಗಿರುವುದರಿಂದ, ಜೀವನವೂ ಇದೇ ರೀತಿ ಇರುವುದರಿಂದ ನಾವೆಲ್ಲರೂ ಇದನ್ನು ಸಮವಾಗಿ ಸ್ವೀಕರಿಸಿಕೊಂಡು ಮುಂದೆ ಹೋಗಬೇಕಿದೆ" ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ ನಟ ಕಿರಣ್ ರಾಜ್.


Click it and Unblock the Notifications











