Karimani: 3 ಗಂಟು ಹಾಕೋ ಹೊತ್ತಲ್ಲಿ ನಂಟು ಬಿಡಿಸುವ 'ಕರಿಮಣಿ' ಇಂದಿನಿಂದ ಆರಂಭ..!
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ ಮುಗಿದ ಮೇಲೆ ಹಲವು ಧಾರಾವಾಹಿಗಳು ಶುರುವಾಗುತ್ತಿವೆ. ಅದ್ದೂರಿಯಾಗಿ ಧಾರಾವಾಹಿಗಳನ್ನು ವಾಹಿನಿ ಪರಿಚಯ ಮಾಡುತ್ತಿದೆ. ಈಗಾಗಲೇ 'ಶ್ರೀಗೌರಿ' ವಿಭಿನ್ನ ಕಥೆಯನ್ನು ಹೊತ್ತು, ಭಾವನಾತ್ಮಕತೆಯಿಂದ ಸೆಳೆಯುವಂತ ಧಾರಾವಾಹಿಯಾಗಿದೆ. ಈ ಧಾರಾವಾಹಿಯಲ್ಲಿ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಅಮೂಲ್ಯ, ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಟೈಟಲ್ನಿಂದಾನೇ ಸದ್ದು ಮಾಡಿದ್ದಂತ ಧಾರಾವಾಹಿ 'ಕರಿಮಣಿ'. 'ಉಪೇಂದ್ರ ಸಿನಿಮಾದ 'ಕರಿಮಣಿ ಮಾಲೀಕ ನೀನಲ್ಲ' ಸಾಂಗ್ ವೈರಲ್ ಆಗಿದ್ದ ಕಾರಣ, ಈ ಧಾರಾವಾಹಿಯ ಟೈಟಲ್ ಮತ್ತಷ್ಟು ಚಾಲ್ತಿಗೆ ಬಂದಿತ್ತು. ಇದೀಗ ಈ ಹೊಸ ಧಾರಾವಾಹಿ ಇಂದಿನಿಂದ ಶುರುವಾಗುತ್ತಿದೆ.

ಮದುವೆಯ ಸಂಭ್ರಮದಲ್ಲಿ ಸಾಹಿತ್ಯಾ
'ಕರಿಮಣಿ' ಧಾರಾವಾಹಿ ಕಥೆ ಮದುವೆಯಿಂದ ಶುರುವಾಗಿದೆ. ಸಾಹಿತ್ಯಾಳೇ ಮುಖ್ಯ ಇಲ್ಲಿ. ಇಂದಿನಿಂದ ಶುರುವಾಗುತ್ತಿರುವ ಈ ಧಾರಾವಾಹಿಯಲ್ಲಿ ಸಾಹಿತ್ಯಾಳ ಅರಿಶಿನ ಶಾಸ್ತ್ರ ಶುರುವಾಗಿದೆ. ಮಂಟಪವನ್ನು ಅದ್ದೂರಿಯಾಗಿ ಅಲಂಕಾರ ಮಾಡಲಾಗಿದೆ. ಸ್ಪೆಷಲ್ ಆಗಿ ಸಿಂಗಾರಗೊಂಡಿರುವುದರ ನಡುವೆ ಸಾಹಿತ್ಯಾ, ಅರಿಶಿನ ಶಾಸ್ತ್ರವನ್ನು ಮಾಡಿಕೊಳ್ಳುತ್ತಿದ್ದಾಳೆ. ಸಾಹಿತ್ಯಾಳ ಈ ಶಾಸ್ತ್ರಕ್ಕೆ ಸ್ನೇಹಿತೆಯರೆಲ್ಲ ಒಂದುಗೂಡಿದ್ದಾರೆ. ಕಲರ್ ಫುಲ್ ಆಗಿ ಸೆಟ್ ರೆಡಿ ಮಾಡಿರುವ ಕಲರ್ಸ್ ಕನ್ನಡ, ಅಷ್ಟೇ ಕಲರ್ ಫುಲ್ ಆಗಿ ವಿಡಿಯೋ ಕೂಡ ಬಿಟ್ಟಿದೆ. ಮೊದಲ ಸಂಚಿಕೆಯೇ ಅದ್ದೂರಿಯಿಂದ ತೆರೆ ಕಂಡಿದೆ.
ಘಟಾನುಘಟಿ ಕಲಾವಿದರ ದಂಡು
ಇತ್ತಿಚೆಗೆ ಬರುತ್ತಿರುವ ಧಾರಾವಾಹಿಗಳು ಯಾವ ಬಿಗ್ ಬಜೆಟ್ ಸಿನಿಮಾಗಳಿಗೂ ಕಡಿಮೆ ಏನು ಇಲ್ಲ. ಸಣ್ಣ ಸಣ್ಣ ಕಾರ್ಯಕ್ರಮವನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ಇದೀಗ 'ಕರಿಮಣಿ' ಧಾರಾವಾಹಿಯನ್ನು ಅಷ್ಟೇ ವಿಜೃಂಭಣೆಯಿಂದ ಮಾಡಲಾಗಿದ್ದು, ಘಟಾನುಘಟಿ ಕಲಾವಿದರ ದಂಡು ಧಾರಾವಾಹಿಯಲ್ಲಿ ಕಂಡು ಬಂದಿದೆ. ಅದರಲ್ಲೂ ಸುಚೇಂದ್ರ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಸಾಹಿತ್ಯಾಳ ಅಪ್ಪನ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಬಿ. ಸುರೇಶ್ ಕೂಡ ಈ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಹಿರಿಯ ಕಲಾವಿದರೆಲ್ಲಾ 'ಕರಿಮಣಿ'ಯಲ್ಲಿ ಅಭಿನಯಿಸಿದ್ದಾರೆ.

ಕಥೆಯ ಬಗ್ಗೆ ಕುತೂಹಲ ಹೆಚ್ಚು
ಈಗಾಗಲೇ ಪ್ರೋಮೋ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿತ್ತು. ಅದರ ಜೊತೆಗೆ ಟ್ರೆಂಡಿಂಗ್ ಜೊತೆಗೆ ಕರಿಮಣಿ ಮಾಲೀಕ ಈತನೇ ಇರಬೇಕು ಎಂದೆಲ್ಲಾ ವೈರಲ್ ಆಗಿತ್ತು. ಕಥೆಯ ಬಗ್ಗೆ ಸಹಜವಾಗಿಯೇ ಕುತೂಹಲವೂ ಇದೆ. ಕರ್ಣ ಪಾತ್ರದ ಬಗ್ಗೆ ಹೆಚ್ಚು ಕ್ಯೂರಿಯಾಸಿಟಿ ಇದೆ. ಸಾಹಿತ್ಯಾಳನ್ನು ಅವನೇ ಮದುವೆಯಾಗುತ್ತಾನಾ..? ಬೇರೊಬ್ಬ ಕರಿಮಣಿ ಮಾಲೀಕ ಇದ್ದಾನಾ..? ಸಾಹಿತ್ಯಾಳ ನಿಜವಾದ ಕರಿಮಣಿ ಮಾಲೀಕ ಯಾರು ಎಂಬೆಲ್ಲಾ ಪ್ರಶ್ನೆಗಳು ಸೀರಿಯಲ್ ಆರಂಭಕ್ಕೂ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು.
ಮದುವೆ ಮುರಿಯುವ ಕರ್ಣ ಯಾರು..?
ಈಗಾಗಲೇ ಒಂದಷ್ಟು ಕಥೆಯ ಲಿಂಕನ್ನು ಪ್ರೋಮೋ ಮೂಲಕ ಬಿಡಲಾಗಿದೆ. ಸಾಹಿತ್ಯಾಳ ಮದುವೆಯಾಗುತ್ತಿರುತ್ತದೆ. ಇನ್ನೇನು ತಾಳಿ ಕಟ್ಟಬೇಕು, ಅಷ್ಟರಲ್ಲಿ ಹೆಲಿಕಾಪ್ಟರ್ನಿಂದ ಇಳಿದ ಕರ್ಣ, ಡಿವೋರ್ಸ್ ಪೇಪರ್ ಎಸೆಯುತ್ತಾನೆ. ಸಾಹಿತ್ಯಾಳಿಗೆ ಆ ವ್ಯಕ್ತಿಯ ಪರಿಚಯವೇ ಇಲ್ಲ. ಇನ್ನೆಲ್ಲಿ ಮದುವೆಯಾಗಿದ್ದು, ಮಗಳ ಮದುವೆಯ ಕನಸು ಕಾಣುತ್ತಿದ್ದ ತಂದೆಗೆ ಇದು ಅರಗಿಸಿಕೊಳ್ಳಲಾಗುತ್ತಿಲ್ಲ, ತಾಯಿಗೆ ಏನು ಮಾಡಬೇಕೆಂಬುದು ತೋಚುತ್ತಿಲ್ಲ. ಅಂಥ ಪರಿಸ್ಥಿತಿಯನ್ನು ಕರ್ಣ ಹುಟ್ಟುಹಾಕಿದ್ದಾನೆ. ಹಾಗಾದರೆ ಈ ಪರಿಸ್ಥಿತಿಗೆ ಕಾರಣ ಏನಿರಬಹುದು ಎಂಬುದಕ್ಕೆ ಉತ್ತರ ಕಂಡುಕೊಳ್ಳಲು 'ಕರಿಮಣಿ' ಧಾರಾವಾಹಿಯನ್ನ ನೋಡಲೇಬೇಕಿದೆ. ಇದರ ಜೊತೆಗೆ ಅಭಿಮಾನಿಗಳು ಈ ಹೊಸ ಧಾರಾವಾಹಿಯನ್ನು ರಾತ್ರಿ 8 ಗಂಟೆಗೆ ಹಾಕಿ ಎಂಬ ಬೇಡಿಕೆ ಇಟ್ಟಿದ್ದರು.


Click it and Unblock the Notifications











