Karimani: ಸಾಹಿತ್ಯಾ ಜವಾಬ್ದಾರಿ ಹೊತ್ತ ಕರ್ಣ: ಮದುವೆ ಮಾಡಿಸ್ತಾನಾ, ಆಗ್ತಾನಾ..?
ಕಲರ್ಸ್ ಕನ್ನಡದಲ್ಲಿ 'ಕರಿಮಣಿ' ಧಾರಾವಾಹಿ ಆರಂಭವಾಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕುತೂಹಲವನ್ನು ಹುಟ್ಟು ಹಾಕುತ್ತಿದೆ. ಕರ್ಣ ಹೆಸರಿಗೆ ತಕ್ಕನಾದ ಗುಣದವನು. ಯಾರಿಗೂ ನೋವು ಆಗುವುದಕ್ಕಾಗಲೀ, ಅನ್ಯಾಯವಾಗುವುದಕ್ಕಾಗಲಿ ಬಿಡುವುದಿಲ್ಲ. ಅಷ್ಟು ಒಳ್ಳೆಯ ಮನಸ್ಥಿತಿ ಅವನದ್ದು. ಕರ್ಣನ ಮುಂದೆ ಯಾರೇ ಕಷ್ಟದಲ್ಲಿದ್ದರು ಅವರಿಗೆ ಸಹಾಯ ಮಾಡುತ್ತಾನೆ. ಸಾಹಿತ್ಯಾಳ ಅಪ್ಪನ ಪ್ರಾಣವನ್ನು ಒಮ್ಮೆ ಉಳಿಸಿದ್ದು ಇದೇ ಕರ್ಣ.
ಸ್ನೇಹಿತನ ಜೀವನ ಹಾಳಾಗಬಾರದು ಎಂಬ ಕಾರಣಕ್ಕೆ, ಯಾರದ್ದೋ ಮದುವೆ ನಿಲ್ಲಿಸಲು ಹೋಗಿ, ಇನ್ಯಾರದ್ದೋ ಮದುವೆಯನ್ನು ನಿಲ್ಲಿಸಿ ಬಂದಿದ್ದಾನೆ. ಅದರಿಂದಾದ ಪ್ರಮಾದವನ್ನು ಈಗ ತಾನೇ ಸರಿ ಮಾಡಲು ಮುಂದೆ ಬಂದಿದ್ದು, ತಾನೇ ಆ ಜವಾಬ್ದಾರಿಯಲ್ಲಿ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.

ವಿಶ್ವನಾಥನನ್ನು ಹುಡುಕಿದ ಕರ್ಣ
ವಿಶ್ವನಾಥ್ ಅಂಡ್ ಫ್ಯಾಮಿಲಿ ಮರ್ಯಾದೆಗೆ ಬೆಲೆ ಕೊಡುವ ಕುಟುಂಬ. ಮಗಳನ್ನು ಮನೆತನದ ಗೌರವಕ್ಕೆ ತಕ್ಕಂತೆ ಬೆಳೆಸಿದ್ದಾರೆ. ಕೂಡು ಕುಟುಂಬದಲ್ಲಿ ಬೆಳೆದ ಸಾಹಿತ್ಯಾ ಕೂಡ, ತಂದೆಯ ಗೌರವಕ್ಕೆ ಧಕ್ಕೆ ತಂದವಳೇ ಅಲ್ಲ. ಮನೆಯಲ್ಲಿ ಎಲ್ಲರೂ ಸಂಭ್ರಮ ಪಟ್ಟಿದ್ದರು. ಮಗಳ ಮದುವೆಯೆಂದು ಕುಣಿದಿದ್ದರು. ಆದರೆ ಅಂಥ ಮದುವೆ ಸುಮ್ಮನೆ ನಿಂತು ಹೋಗಿದ್ದಲ್ಲ,ಮಾಡದೆ ಇರುವ ಅಪರಾಧವನ್ನು ಸಾಹಿತ್ಯ ತಲೆಮೇಲೆ ಹಾಕಿಕೊಂಡಿದ್ದಳು. ಮದುವೆಯೇ ಆಗದೇ ಡಿವೋರ್ಸ್ ಪೇಪರ್ ತಂದು ನಿಂತಿದ್ದ ಕರ್ಣ. ಮದುವೆಗೆ ಬಂದಿದ್ದ ಅತಿಥಿಗಳ ಮುಂದೆಯೂ ಮರ್ಯಾದೆ ಹೋಗಿದೆ. ಇದು ವಿಶ್ವನಾಥನಿಗೆ ಸಹಿಸಲು ಆಗದೇ ಆಸ್ಪತ್ರೆಯಿಂದ ಎದ್ದು ಬಂದು, ಯಾರಿಗೂ ಸಿಗದಂತೆ ಒಬ್ಬನೇ ಕುಳಿತಿದ್ದ.
ಅಪ್ಪ ಕಾಣದೇ ಸಾಹಿತ್ಯಾ ಕಂಗಾಲು
ಅಪ್ಪ ಆಸ್ಪತ್ರೆಯಲ್ಲಿ ಇಲ್ಲ ಎಂದಾಗ ಸಾಹಿತ್ಯಾ ಮತ್ತು ಮನೆಯವರಿಗೆ ಗಾಬರಿಯಾಗಿದೆ. ಆಸ್ಪತ್ರೆಯಲ್ಲ ಹುಡುಕಿದರೂ ಸಿಗಲಿಲ್ಲ, ಮನೆಗೆ ಹೋಗಿ ತಡಕಾಡಿದರೂ ಸಿಗಲಿಲ್ಲ. ಇದೇ ನೋವಲ್ಲಿ ಕರ್ಣನ ಮನೆಗೆ ನ್ಯಾಯ ಕೇಳಲು ಬಂದ ಸಾಹಿತ್ಯಾ, ಅವನನ್ನು ಕ್ಷಮಿಸದೆ ಅಲ್ಲಿಂದ ಹೊರಟೆ ಹೋಗಿದ್ದಾಳೆ. ಕರ್ಣ ಅದೇ ಪಶ್ಚಾತ್ತಾಪದಲ್ಲಿ ಇದ್ದು, ಈ ಸಮಸ್ಯೆಯನ್ನು ಸರಿ ಮಾಡುವ ತನಕ ನೆಮ್ಮದಿಯಿಲ್ಲ ಎಂದು ಮನೆಯಿಂದ ಹೊರಟಿದ್ದಾನೆ.

ಮಗಳ ಮದುವೆ ಆಗಬೇಕೆಂಬ ಆಸೆ
ವಿಶ್ವನಾಥ್ ಆರೋಗ್ಯ ಸರಿ ಇಲ್ಲ. ಆದರೂ ತನ್ನ ಜೀವ ಹಿಡಿದು ಕೊಂಡಿರುವುದು ಮಗಳ ಮದುವೆಗಾಗಿ. ಆದರೆ ಮಗಳ ಮೇಲೆ ಇಷ್ಟು ದೊಡ್ಡ ಆರೋಪ ಬಂದಿದ್ದು, ಆತನಿಂದ ಸಹಿಸಲು ಅಸಾಧ್ಯವಾಗಿದೆ. ಅದೇ ನೋವಲ್ಲಿ, ಕೈಯಲ್ಲಿ ತಾಳಿ ಹಿಡಿದು ಎಲ್ಲೋ ಬಂದು ಕುಳಿತಿದ್ದ. ಕರ್ಣ ಹುಡುಕುತ್ತಾ ಬಂದವ, ಕಡೆಗೂ ವಿಶ್ವನಾಥ್ನ ಕಂಡಿದ್ದಾನೆ. ಅವರ ಸ್ಥಿತಿ ಸರಿ ಇರಲಿಲ್ಲ. ಕ್ಷಮೆ ಕೇಳಲು ಹೋಗಿ ಕಪಾಳಕ್ಕೆ ಒದೆ ತಿಂದಿದ್ದಾನೆ. ಹಾಗಂತ ಬೇಜಾರು ಮಾಡಿಕೊಳ್ಳದೇ, ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳುವುದಕ್ಕೆ ಹೊರಟಿದ್ದಾನೆ. ಮೊದಲು ವಿಶ್ವನಾಥ್ನನ್ನು ಆಸ್ಪತ್ರೆಗೆ ಸೇರಿಸಲು ಹೊರಟಿದ್ದಾನೆ.
ಕರ್ಣನೇ ಮದುವೆಯಾಗ್ತಾನಾ..?
ವಿಶ್ವನಾಥ್ ಕನಸ್ಸನ್ನು ಈಗ ಕರ್ಣ ತನ್ನ ಹೆಗಲಿಗೆ ಹಾಕಿಕೊಂಡಿದ್ದಾನೆ. ತಾನೇ ನಿಲ್ಲಿಸಿದ ಮದುವೆಯನ್ನು ತಾನೇ ಮುಂದೆ ನಿಂತು ಮಾಡಿಸುವುದಾಗಿ ಪ್ರಮಾಣ ಮಾಡಿದ್ದಾನೆ. ವಿಶ್ವನಾಥ್ ಬಳಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾನೆ. ಬಳಿಕವೇ ವಿಶ್ವನಾಥ್ ಕರ್ಣನ ಜೊತೆಗೆ ಹೋಗುವುದಕ್ಕೆ ಸಿದ್ಧರಾಗಿದ್ದರು. ಈಗ ಕರ್ಣ, ಮದುವೆ ಮಾಡಿಸಬೇಕಲ್ಲ ಅಂತ ಯಾರ್ಯಾರನ್ನೋ ಕರೆದುಕೊಂಡು ಬರುವಂತೆ ಇಲ್ಲ. ಸಾಹಿತ್ಯಾಗೆ ಒಪ್ಪಿಗೆಯಾಗಬೇಕು. ಇದರಿಂದ ಬಚಾವ್ ಆಗಲು ಹೋಗಿ, ಕರ್ಣನೇ ಲಾಕ್ ಆಗುವ ಎಲ್ಲಾ ಸಾಧ್ಯತೆಯೂ ಇರಲಿದೆ.


Click it and Unblock the Notifications











