ವರ್ಷ ಪೂರೈಸಿದ ಕಸ್ತೂರಿ ನ್ಯೂಸ್, ನೀವೇನಂತೀರಾ?

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಒಡೆತನದ 'ಕಸ್ತೂರಿ ನ್ಯೂಸ್ 24' ವಾಹಿನಿ ಏನೋ ಹೊಸದನ್ನು ಕೊಡುತ್ತದೆ ಎಂದು ನಿರೀಕ್ಷಿಸಿದ್ದ ವೀಕ್ಷಕರಿಗೆ ಭಾರಿ ಆಘಾತವನ್ನೇ ನೀಡಿದೆ. ವಿಭಿನ್ನ ಸುದ್ದಿಗಳಿಗಾಗಿ ಹಂಬಲಿಸುತ್ತಿದ್ದ ವೀಕ್ಷಕ ಬಳಗಕ್ಕೆ ತೀವ್ರ ನಿರಾಸೆ ಮೂಡಿಸಿದ್ದಂತೂ ನಿಜ.
"ಮುಕ್ತ ನಿರ್ಭೀತ ನ್ಯಾಯಸಮ್ಮತ" ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾದ ಕಸ್ತೂರಿ ನ್ಯೂಸ್ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಾಡಿನ ಗಣ್ಯರಿಂದ ಶುಭಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ವರ್ಷ ಟಿಆರ್ ಪಿ ರೇಟಿಂಗ್ ನಲ್ಲಿ ಕಸ್ತೂರಿ ಗಮನಾರ್ಹ ಸಾಧನೆಯೇನು ದಾಖಲಿಸಿಲ್ಲದಿರುವುದು ಮತ್ತೊಂದು ನಿರಾಶಾದಾಯಕ ಸಂಗತಿ.
ಕಸ್ತೂರಿ ನ್ಯೂಸ್ ವಾಹಿನಿಯನ್ನು ನೋಡಿದರೆ ಕ್ರಿಯೇಟೀವ್ ಹೆಡ್ ಗಳು, ಸಮರ್ಥ ಸಂಪಾದಕೀಯ ಬಳಗ, ನುರಿತ ತಂತ್ರಜ್ಞರ ಕೊರತೆ ಎದುರಿಸುತ್ತಿದೆ ಎಂಬ ಸಂದೇಹ ಬರುತ್ತದೆ. ಇನ್ನೂ ಒಂದು ವರ್ಷದ ಕೂಸಾಗಿರುವ 'ಕಸ್ತೂರಿ ನ್ಯೂಸ್' ಮುಂಬರುವ ದಿನಗಳಲ್ಲಿ ಕನ್ನಡಿಗರ ಮನ ಗೆದ್ದೇಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದೆ. ಅವರ ವಿಶ್ವಾಸ ಆದಷ್ಟು ಬೇಗ ನಿಜವಾಗಲಿ ಎಂದು ಬಯಸೋಣ.
ಡಾಕ್ಟರ್ಸ್ ಕಾರ್ನರ್, ಕರ್ನಾಟಕ ಇಂದು, ಕಾಮಿಡಿ ಹಲ್ ಬಿಡಿ, ಐದೊಂದ್ಲ 5, ಇಂಡಿಯಾ ಟುಡೆ, ಗ್ರಹಣ ಗಂಡಾಂತರ, ಬೆಂಗಳೂರು ಸೆಂಟ್ರಲ್, ನಿಗೂಢ ವಿಸ್ಮಯ...ಮುಂತಾದ ಕಾರ್ಯಕ್ರಮಗಳು ದಿನೇ ದಿನೇ ವೀಕ್ಷಕರ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿವೆ. "ಮುಕ್ತ ನಿರ್ಭೀತ ನ್ಯಾಯಸಮ್ಮತ" ಎಂಬ ಮಾತನ್ನು ಅಕ್ಷರಶಃ ಪಾಲಿಸಿದರೆ ನಿಜಕ್ಕೂ ಕಸ್ತೂರಿ ನ್ಯೂಸ್ ಗಮನಾರ್ಹ ಸಾಧನೆ ದಾಖಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವೇನಂತೀರಾ? (ಒನ್ಇಂಡಿಯಾ ಕನ್ನಡ)


Click it and Unblock the Notifications











