Sujata Akshaya: "ಕಥೆಯೊಂದು ಶುರುವಾಗಿದೆ ನನ್ನ ವೃತ್ತಿ ಬದುಕಿಗೆ ಹೊಸ ಮೈಲುಗಲ್ಲು" ಸುಜಾತಾ ಅಕ್ಷಯ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಕಥೆಯೊಂದು ಶುರುವಾಗಿದೆ' ಯಶಸ್ವಿ 200 ಸಂಚಿಕೆ ಪೂರೈಸಿದೆ. ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ ಕಥೆಯೊಂದು ಶುರುವಾಗಿದೆ ಧಾರಾವಾಹಿ. ಧಾರಾವಾಹಿಯಲ್ಲಿ ನಾಯಕಿ ಕೃತಿ ಅವರ ತಾಯಿ ಪುಷ್ಪ ಪಂಡಿತ್ ಆಗಿ ನಟಿಸುತ್ತಿರುವ ಸುಜಾತಾ ಅಕ್ಷಯ್ ಸಂತಸ ವ್ಯಕ್ತಪಡಿಸಿದ್ದಾರೆ.
"ಕಥೆಯೊಂದು ಶುರುವಾಗಿದೆ' ಧಾರಾವಾಹಿಯು ಇನ್ನೂರು ಸಂಚಿಕೆ ಪೂರೈಸಿದೆ. ನನಗೆ ಇದನ್ನು ನಂಬಲಾಗುತ್ತಿಲ್ಲ. ನಿಜಕ್ಕೂ ತುಂಬಾ ಸಂತಸವಾಗುತ್ತಿದೆ. ಈಗಲೂ ನನಗೆ ಧಾರಾವಾಹಿಯ ಪ್ರೋಮೋ ಶೂಟಿಂಗ್ ಮಾಡಿದ ದಿನವೇ ಕಣ್ಣ ಮುಂದೆ ಬರುತ್ತದೆ. ಇದು ನನ್ನ ಪಾಲಿಗೆ ಮೈಲಿಗಲ್ಲನ್ನೇ ಸೃಷ್ಟಿ ಮಾಡಿದ ಪ್ರಾಜೆಕ್ಟ್ ಎಂದರೆ ತಪ್ಪಾಗಲಾರದು" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ಹಂಚಿಕೊಳ್ಳುತ್ತಾರೆ ಸುಜಾತಾ ಅಕ್ಷಯ್.

ತುಂಬಾ ಎಫರ್ಟ್ ಹಾಕಿದ ಪಾತ್ರವಿದು
ಇದರ ಜೊತೆಗೆ "ನಾನು ಈ ಧಾರಾವಾಹಿಯಲ್ಲಿ ಪುಷ್ಪ ಪಂಡಿತ್ ಆಗಿ ಅಭಿನಯಿಸುತ್ತಿದ್ದೇನೆ. ಈ ಪಾತ್ರಕ್ಕಾಗಿ ನಾನು ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದೇನೆ. ಮಾತ್ರವಲ್ಲದೇ ತುಂಬಾನೇ ಕಷ್ಟಪಟ್ಟಿದ್ದೇನೆ. ನಾನು ಈ ಧಾರಾವಾಹಿಯ ನಟಿಸುವಾಗ ನಕ್ಕಿದ್ದೇನೆ, ಅತ್ತಿದ್ದೇನೆ, ಅವಮಾನ ಅನುಭವಿಸಿದ್ದೇನೆ. ಅನೇಕ ಸವಾಲನ್ನು ಸ್ವೀಕರಿಸಿದ್ದೇನೆ. ಮುಖ್ಯವಾಗಿ ಆಟೋ ಓಡಿಸುವುದನ್ನು ಕೂಡಾ ಕಲಿತಿದ್ದೇನೆ. ಒಟ್ಟಿನಲ್ಲಿ 200% ಎಫರ್ಟ್ ಹಾಕಿರುವುದಂತೂ ನಿಜ" ಎಂದು ಹೇಳುತ್ತಾರೆ ಸುಜಾತ ಅಕ್ಷಯ್.
ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿ
ಸದ್ಯ ಪುಷ್ಪ ಪಂಡಿತ್ ಆಗಿ ತಮ್ಮ ನಟನೆಯ ಮೂಲಕ ವೀಕ್ಷಕರನ್ನು ಸೆಳೆಯುತ್ತಿರುವ ಸುಜಾತಾ ಅಕ್ಷಯ ನಿರೂಪಕಿ ಎಂಬ ವಿಚಾರ ಈಗಿನವರಿಗೆ ತಿಳಿದಿರಲಿಕ್ಕಿಲ್ಲ. ಹೌದು, ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗ ಸಿಹಿ ಕಹಿ ಚಂದ್ರು ಹಾಗೂ ಸಿಹಿ ಕಹಿ ಗೀತಾ ನಡೆಸಿಕೊಡುತ್ತಿದ್ದ "ದಾಳ ಗಾಳ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಜಾತಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಫಣಿ ರಾಮಚಂದ್ರ ನಿರ್ದೇಶನದ 'ಪ್ರೇಮ ಪಿಶಾಚಿಗಳು' ಧಾರಾವಾಹಿಯಲ್ಲಿ ರಾಮಚಂದ್ರ ಅವರು ಹೇಳುವ ಕಥೆಯನ್ನು ಕೇಳುವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟರು ಸುಜಾತಾ.

ಕಾಮಿಡಿ ಟೈಮ್ ಮೂಲಕ ಫೇಮಸ್ಸು!
ರೀಲ್ನಲ್ಲಿ ನಿರೂಪಕಿಯಾಗಿ ನಟಿಸಿ ಸೈ ಎನಿಸಿಕೊಂಡ ಸುಜಾತಾ ಅಕ್ಷಯ್ ಮುಂದೆ ರಿಯಲ್ನಲ್ಲಿಯೂ ನಿರೂಪಕಿಯಾಗಿ ಕಾಣಿಸಿಕೊಂಡರು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಕಾಮಿಡಿ ಟೈಮ್ ಎನ್ನುವ ಶೋವಿನ ನಿರೂಪಣೆ ಮಾಡುತ್ತಿದ್ದ ಸುಜಾತಾ ಅದರ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡರು. ಇಂದಿಗೂ ಕಾಮಿಡಿ ಟೈಮ್ಸ್ ಸುಜಾತಾ ಎಂದೇ ಕೆಲವು ಬಾರಿ ಗುರುತಿಸಿಕೊಂಡಿದ್ದ ಸುಜಾತಾ ತದ ನಂತರ ಭಡ್ತಿ ಪಡೆದು ನಟಿಯಾಗಿದ್ದಾರೆ.
ಸಾಲು ಸಾಲು ಧಾರಾವಾಹಿಗಳಲ್ಲಿ ನಟನೆ
'ನಾಕುತಂತಿ', ,ಮನೆಯೊಂದು ಮೂರು ಬಾಗಿಲು', 'ಎಲ್ಲಾ ಮರೆತಿರುವಾಗ', 'ಭೃಂಗದ ಬೆನ್ನೇರಿ', 'ಬದುಕು', 'ಸ್ವಾಭಿಮಾನ', 'ರಾಧಾ', 'ಸೃಷ್ಟಿ', 'ಪ್ರೀತಿ ಎಂದರೇನು', 'ಅರಮನೆ', 'ಮುಗಿಲು', 'ರಾಧಾ ರಮಣ', ' ಆರತಿಗೊಬ್ಬ ಕೀರ್ತಿಗೊಬ್ಬ', 'ಹೂಮಳೆ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುಜಾತಾ ಸದ್ಯ ಪುಷ್ಪ ಪಂಡಿತ್ ಆಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸುತ್ತಿದ್ದಾರೆ.


Click it and Unblock the Notifications











