Katheyondu Shuruvagide: ಬಹದ್ದೂರ್ ವಂಶದ ಕುಡಿ ಹೊತ್ತ ವರ್ಣಿಕಾ.. ಸಾಮ್ರಾಟ್ ಮೋಸ ಬಯಲು ಮಾಡೋದೇಗೆ?
ಸಾಮ್ರಾಟ್ ಗೆ ಒಂದು ಕಡೆ ಯುವನನ್ನು ಮೀರಿ ಬೆಳೆಯಬೇಕೆಂಬ ಬಯಕೆ. ಅವನು ಹೋಗುವ ದಾರಿಯಲ್ಲೆಲ್ಲಾ ನಾನು ಮುಂದೆ ಇರಬೇಕು ಎಂಬುದು. ಅದಕ್ಕಾಗಿಯೇ ಯುವ ಮದುವೆಯಾಗಬೇಕಿದ್ದ ವರ್ಣಿಕಾಳ ಮನಸ್ಸನ್ನು ಹಾಳು ಮಾಡಿದ್ದು, ಅವಳನ್ನು ಮಂಟಪದಿಂದ ಹೊರ ಬರುವಂತೆ ಮಾಡಿದ್ದು. ಇದಕ್ಕೆಲ್ಲಾ ಅವರ ಅಮ್ಮ ಮಾತಂಗಿಯ ಬೆಂಬಲ ಬಹಳ ಇದೆ.
ವರ್ಣಿಕಾಳ ಲೈಫ್ನಲ್ಲಿ ಆಟ ಆಡಿದ್ದು ಅಲ್ಲದೆ ಇನ್ನು ಸುಮಾರು ಜನರ ಮನಸ್ಸನ್ನು ನೋಯಿಸಿದ್ದಾನೆ. ಪ್ರೀತಿ ನಾಟಕವಾಡಿದ್ದಾನೆ. ಆದರೆ ಎಲ್ಲಿಯೂ ತನ್ನ ಸಾಕ್ಷಿಗಳನ್ನು ಉಳಿಸಿಲ್ಲ. ವರ್ಣಿಕಾ ಕೂಡ ಸೋತಿದ್ದು ಅಲ್ಲಿಯೇ. ಸಾಮ್ರಾಟ್ ಕೊಟ್ಟ ಗಿಫ್ಟ್, ಭರವಸೆ ಎಲ್ಲವೂ ಸುಳ್ಳು. ಹೀಗಾಗಿ ಸಾಮ್ರಾಟ್ ಮಾಡಿದ ಮೋಸವನ್ನು ಪ್ರೂವ್ ಮಾಡುವುದಕ್ಕೆ ಆಗದೆ ಸೋತಿದ್ದಾಳೆ. ಆದರೆ ಅವನ ಕುಡಿ ಈಗ ವರ್ಣಿಕಾಳ ಹೊಟ್ಟೆಯಲ್ಲಿ ಬೆಳೆಯುತ್ತಿದೆ.

ಸಾಮ್ರಾಟ್ ಮೋಸವನ್ನು ಪ್ರೂವ್ ಮಾಡಲು ಆಗಲಿಲ್ಲ
ಸಾಮ್ರಾಟ್ ಸುಳ್ಳುಗಾರ, ಮೋಸಗಾರ, ನನ್ನ ಅಕ್ಕನಿಗೆ ಮೋಸ ಮಾಡಿದ್ದಾನೆ ಅಂತ ಯುವರಾಜ್ ಮುಂದೆ ಕೃತಿ ಹೇಳಿದ್ದಳು. ಆದ್ರೆ, ಯುವ ಸಾಕ್ಷಿಗಳಿಲ್ಲದೆ ಏನನ್ನು ನಂಬುವುದಿಲ್ಲ. ಕೃತಿ ಹೇಳಿದ ವಿಚಾರವನ್ನು ಕೂಡ. ಪ್ರೂವ್ ಮಾಡಲು ಹೇಳಿದ. ಅಕ್ಕನನ್ನು ಕರೆಸಿದಳು. ಈ ಕಡೆಯಿಂದ ವರ್ಣಿಕಾ ಕಳುಹಿಸಿದ್ದ ವಾಯ್ಸ್ ನೋಟ್ ಇತ್ತೇ ವಿನಃ ಆ ಕಡೆಯಿಂದ ಸಾಮ್ರಾಟ್ ಕಳುಹಿಸಿದ್ದ ವಾಯ್ಸ್ ನೋಟ್ ಡಿಲೀಟ್ ಆಗಿತ್ತು. ಎಕ್ಸ್ಕ್ಲೂಸಿವ್ ನೆಕ್ಲೇಸ್ ಅಂತ ಕೊಟ್ಟಿದ್ದು ನಕಲಿಯಾಗಿತ್ತು. ಎಲ್ಲಾ ಮಾರ್ಗಗಳು ಮುಚ್ಚಿದ್ದವು ಸತ್ಯ ಸುಳ್ಳಾಗಿತ್ತು. ಸುಳ್ಳು ಸತ್ಯವಾಗಿತ್ತು. ಅದಕ್ಕೆ ಕೃತಿ ಕೊಟ್ಟ ಮಾತಿನಂತೆ ಬಹದ್ದೂರ್ ಮನೆಯಿಂದ ಹೊರ ಬಂದಳು.
ವರ್ಣಿಕಾ ಮೊದಲೇ ಮದುವೆ ಮನೆಯಿಂದ ಓಡಿ ಹೋಗಿ ಅವಮಾನ ಮಾಡಿದ್ದಾಳೆ. ಮನೆ ಮರ್ಯಾದೆ ಕಳೆದಿದ್ದಾಳೆ ಎಂಬುದು ಪುಷ್ಪಾಳ ನೋವು. ಅದಕ್ಕೆ ಮತ್ತೆ ಜನರ ಬಾಯಿಗೆ ಆಹಾರವಾಗಬಾರದು ಎಂದುಕೊಂಡು ಗಂಡು ಹುಡುಕಿದ್ದಳು. ಮದುವೆಯ ಎಲ್ಲ ತಯಾರಿ ನಡೆದಿದೆ. ಆ ಕಡೆ ವರ್ಣಿಕಾ, ಗಂಡಿಗೆ ಎಲ್ಲಾ ಸತ್ಯವನ್ನು ಹೇಳಿದ್ದಾಳೆ. ಆದರೆ ಪುಷ್ಪಾ ಮದುವೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾಳೆ.
ವರ್ಣಿಕಾ ಈಗ ಗರ್ಭಿಣಿ
ವರ್ಣಿಕಾ ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಕೃತಿ ಮತ್ತು ಸಹನಾ ಕಾಪಾಡಿದ್ದಾರೆ. ಅವಳಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ. ಅವನನ್ನು ಮರೆಯುವುದಕ್ಕೆ ಸಲಹೆಗಳನ್ನು ನೀಡಿದ್ದಾರೆ. ಆಗ ವರ್ಣಿಕಾ ಸತ್ಯವನ್ನು ಹೇಳಿದ್ದಾಳೆ. ನಾನೀಗ ಗರ್ಭಿಣಿ ಎಂದಾಗ ಸಹನಾ ಮತ್ತು ಕೃತಿ ಶಾಕ್ ಆಗಿದ್ದಾರೆ. ಅದೇ ಸಮಯಕ್ಕೆ ಅಮ್ಮ ಕೂಡ ಬಂದಿದ್ದಾರೆ. ಕೃತಿ ಮುಚ್ಚಿಡುವುದಕ್ಕೆ ಪ್ರಯತ್ನ ಪಟ್ಟರು ಕೂಡ, ವರ್ಣಿಕಾ ಸುಮ್ಮನೆ ಇರದೆ ಸತ್ಯ ಹೇಳಿ ಬಿಟ್ಟಿದ್ದಾಳೆ. ಪುಷ್ಪಾಗೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಗಿದೆ.

ಆ ಕಡೆ ಸತ್ಯವನ್ನು ಪ್ರೂವ್ ಮಾಡುವುದಕ್ಕೆ ಆಗದೆ ಮನೆಯಿಂದ ಹೊರ ಬಂದಿದ್ದಾಳೆ ಕೃತಿ. ಯುವರಾಜ್ ತಡೆಯುವುದಕ್ಕೆ ಟ್ರೈ ಮಾಡಿದರು ಕೃತಿ ಮಾತು ಕೇಳಲಿಲ್ಲ. ಆದರೆ ಈಗ ವರ್ಣಿಕಾ ಗರ್ಭಿಣಿ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಈಗ ಸಾಮ್ರಾಟ್ ಮೋಸದ ಮುಖವನ್ನು ಕಳಚಲೇಬೇಕಿದೆ. ಕೃತಿಯ ರೌದ್ರವತಾರ ಗೊತ್ತಲ್ವಾ, ಅಕ್ಕನಿಗೋಸ್ಕರ ಚಾಮುಂಡಿಯಾಗಿ ಬಿಡುತ್ತಾಳೆ.


Click it and Unblock the Notifications











