Katheyondu Shuruvagide: ಕೃತಿಗೆ ಪ್ರಪೋಸ್ ಮಾಡಿದ ಯುವರಾಜ್.. ಕನಸೋ ಇದು.. ನನಸೋ ಇದು..!
ಇವತ್ತು ಪ್ರೇಮಿಗಳ ದಿನಾಚರಣೆ. ತಮ್ಮ ತಮ್ಮ ಪ್ರೇಮಿಗಳಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುವುದಕ್ಕೆ ಈ ದಿನವನ್ನೇ ಕಾಯುತ್ತಿರುತ್ತಾರೆ. ಏನೇ ಜಗಳವಾಗಿದ್ದರು, ಏನೇ ಮನಸ್ತಾಪಗಳು ಇದ್ದರೂ ಈ ದಿನ ಅದೆಲ್ಲಕ್ಕೂ ಮುಕ್ತಿ ಸಿಗಲಿದೆ. ತಮ್ಮ ಪ್ರೀತಿ ಇನ್ನು ಗಟ್ಟಿಯಾಗುತ್ತದೆ. ಈ ದಿನ ಪ್ರೇಮಿಗಳಿಗೆ ತುಂಬಾ ವಿಶೇಷವಾದ ದಿನವಾಗಿದೆ. ಈ ವಿಶೇಷ ಕೃತಿಯ ಬದುಕಲ್ಲೂ ಹೊಸತನವನ್ನು ತಂದಿದೆ.
ಬಹದ್ದೂರ್ ಮನೆಯ ಯುವರಾಜ್ ಕೋಪದಲ್ಲಿ ನಂಬರ್ ಒನ್. ನಗು ಕಡಿಮೆ ಯಾವಾಗಲೂ ಸಿಟ್ಟು ಬೇಗ ಬರುತ್ತೆ. ಅಮ್ಮನಿಗೆ ಸಿಕ್ಕಾಪಟ್ಟೆ ಭಯಪಡುವ ಗುಣದವನು. ಆದರೆ ಈಗ ಮದುವೆಯಾಗಿದೆ. ಹೆಂಡತಿಯನ್ನು ಕಂಡರೆ ಕೆಂಡಾಮಂಡಲನಾಗುತ್ತಾನೆ. ಈಗ ಇದ್ದಕ್ಕಿದ್ದ ಹಾಗೇ ರೋಸ್ ಕೊಟ್ಟು ನನ್ನ ಮನದೊಳಗೆ ಬಾ ಎಂದು ಕರೆಯುತ್ತಿದ್ದಾನೆ.

ಕೃತಿ ಬದುಕಲ್ಲಿ ಎಲ್ಲವೂ ಸರಿ ಆಯ್ತಾ ?
ವರ್ಣಿಕಾಳನ್ನು ಮನಸಾರೆ ಪ್ರೀತಿ ಮಾಡುತ್ತಿದ್ದ ಯುವರಾಜ್ ಅನಿವಾರ್ಯ ಕಾರಣಗಳಿಂದ ಕೃತಿಯನ್ನು ಮದುವೆಯಾಗಬೇಕಾಯಿತು. ಇದು ಕೃತಿಗೂ ಬೇಕಾಗಿರಲಿಲ್ಲ. ಆದರೆ ಸಮಯ, ಸಂದರ್ಭ ಎಲ್ಲದನ್ನೂ ಲಾಕ್ ಮಾಡಿ ಆಗಿತ್ತು. ಹೀಗಾಗಿ ಪರಿಸ್ಥಿತಿಗೆ ಕಟ್ಟು ಬಿದ್ದು ಹೊಸ ಜೀವನಕ್ಕೆ ಕಾಲಿಟ್ಟರು. ಆದರೆ ಬಹದ್ದೂರ್ ಮನೆಗೆ ಬಂದಾಗಿನಿಂದ ಕೃತಿ ಬದುಕು ದುಸ್ತರವಾಗಿದೆ. ಹೆಜ್ಜೆ ಹೆಜ್ಜೆಗೂ ಯುವರಾಜ್ ಅವಮಾನವನ್ನೇ ಮಾಡುತ್ತಾ ಬರುತ್ತಿದ್ದಾನೆ. ಆದ್ರೆ ಅದ್ಯಾಕೋ ಇದ್ದಕ್ಕಿದ್ದ ಹಾಗೇ ಬದಲಾಗಿದ್ದಾನೆ ಯುವರಾಜ್.

ಕೃತಿಗೆ ಪ್ರಪೋಸ್ ಮಾಡಿದ ಯುವ..!
ಕೃತಿಯನ್ನು ಕಂಡರೆ ಯಾವಗಾಲೂ ನಿಂದಿಸುತ್ತಾ ಇರುವ ಗುಣದವನು ಯುವರಾಜ್. ಕೃತಿ ತಪ್ಪೇ ಮಾಡದೆ ಇದ್ದಾಗಲೂ ಅವಳಿಗೆ ಬೈಯ್ಯಲೇಬೇಕೆಂಬ ಪಣ ತೊಟ್ಟವನು. ಆದರೆ ಅದ್ಯಾಕೋ ಇದ್ದಕ್ಕಿದ್ದ ಹಾಗೇ ಬದಲಾಗಿ ಹೋಗಿದ್ದಾನೆ. ಕೃತಿಗಾಗಿ ರೂಮನ್ನೆಲ್ಲಾ ಅಲಂಕಾರ ಮಾಡಿದ್ದಾನೆ. ಅವಳಿಗಾಗಿ ರೋಸ್ ಹಿಡಿದು ನಿಂತಿದ್ದಾನೆ. ಕ್ಷಮೆಯನ್ನು ಕೇಳಿದ್ದಾನೆ. ಪ್ರೀತಿಯನ್ನು ಬಯಸಿದ್ದಾನೆ. ಸಪ್ತಪದಿಯನ್ನಂತು ಮನಸಾರೆ ತುಳಿಯಲಿಲ್ಲ. ಈ ಏಳು ಹೂಗಳನ್ನು ತೆಗೆದುಕೊಂಡು ನನ್ನನ್ನು ಪ್ರೇಮಿಯನ್ನಾಗಿ ಸ್ವೀಕರಿಸು ಅಂತ ಅಂಗಲಾಚಿದ್ದಾನೆ. ಕೆಂಪು ಗುಲಾಬಿ ಕೊಟ್ಟು ಕೃತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.ಕೃತಿ ಜೊತೆಗೊಂದು ಡ್ಯುಯೆಟ್ ಕೂಡ ಹಾಡಿದ್ದಾನೆ.

ಕನಸೋ.. ನನಸೋ ತಿಳಿಯುತ್ತಿಲ್ಲ..!
ಯುವರಾಜ್ ಇಷ್ಟೊಂದು ಬದಲಾವಣೆ. ಅದು ಇಷ್ಟು ಕಡಿಮೆ ಸಮಯದಲ್ಲಿ ಆಗಿರುವುದು ತಕ್ಷಣಕ್ಕೆ ಯಾರಿಗೂ ನಂಬುವುದಕ್ಕೆ ಆಗುತ್ತಿಲ್ಲ. ಕೃತಿಗೂ ಇದು ಶಾಕಿಂಗ್ ಆಗಿತ್ತು. ನೀವೂ ಸತ್ಯ ಹೇಳುತ್ತಾ ಇದ್ದೀರಾ ಅಂತ ಯುವರಾಜ್ನನ್ನೇ ಕೇಳಿದ್ದಾಳೆ. ಆಗ ಯುವರಾಜ್ ಕ್ಷಮೆಯನ್ನು ಕೇಳಿ, ಕೃತಿಗೆ ಪ್ರೀತಿ ಕೊಟ್ಟಿದ್ದಾನೆ. ಆದರೆ ಇದನ್ನು ಯಾರಿಂದಾನು ನಂಬುವುದಕ್ಕೆ ಆಗುತ್ತಿಲ್ಲ. 'ಕಥೆಯೊಂದು ಶುರುವಾಗಿದೆ' ಫಾಲೋವರ್ಸ್ ಎಲ್ಲಾ ಇದು ಹೇಗೆ ಸಾಧ್ಯ..? ಇದು ನಿಜಾನಾ..? ಅಂತ ಹತ್ತು ಸಲ ಕೇಳಿದ್ದಾರೆ. ಅಂದ್ರೆ ಯುವರಾಜ್ ಬದಲಾವಣೆ ಬಯಸುತ್ತಿರುವವರಿಗೆ ಸನ್ ಶಾಕ್ ಆದಂತೆ ಆಗಿದೆ.

ಪ್ರೀತಿಯ ನಾಟಕವಾಡುತ್ತಿದ್ದಾನಾ ಯುವರಾಜ್..?
ಯುವರಾಜ್ ನಿನೆ ರಾತ್ರಿ ಕಂಠಪೂರ್ತಿಯಾಗಿ ಕುಡಿದು ಕೃತಿಯ ರೂಮಿಗೆ ಹೋಗಿದ್ದ. ಆದರೆ, ಮನೆಯವರೆಲ್ಲ ಇದಕ್ಕೂ ಕೃತಿಯನ್ನೇ ಗುರಿ ಮಾಡಿದ್ದರು. ಆ ಸಮಯದಲ್ಲಿ ಕೃತಿ ಯಾವುದನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಹೋಗಿರಲಿಲ್ಲ. ಆದರೆ, ಯತಿ ಬಂದು ಎಲ್ಲಾ ಸತ್ಯವನ್ನು ಹೇಳಿದ್ದ. ಯುವ ಕುಡಿದಿದ್ದ ಎಂಬುದನ್ನು ಮನೆಯವರಿಗೆ ಸಹಿಸಿಕೊಳ್ಳುವುದಕ್ಕೆ ಆಗಲಿಲ್ಲ. ಅದಕ್ಕೂ ಕೃತಿಯೇ ಕಾರಣ ಎಂದು, ಅವಳಿಗೊಂದು ಪಾಠ ಕಲಿಸುತ್ತೀನಿ ಅಂತ ಯುವ, ತನ್ನ ಅಮ್ಮನ ಮುಂದೆ ಪಣ ತೊಟ್ಟಿದ್ದಾನೆ. ದ್ವೇಷ ತೀರಿಸಿಕೊಳ್ಳುವ ದಾರಿಗಾಗಿ ಪ್ರೇಮದ ನಾಟಕ ಶುರು ಮಾಡಿದನಾ ಎಂಬ ಅನುಮಾನ ಒಂದು ಕಡೆಯಾದರೆ, ಇದು ಕೃತಿಯ ಕನಸು ಕೂಡ ಆಗಿರಬಹುದು ಎಂಬ ಊಹೆ ಇದೆ.


Click it and Unblock the Notifications











