Katheyondu Shuruvagide: ಮಾತಂಗಿ ಆಯ್ತು.. ಈಗ ಮಗಳು ಝಾನ್ಸಿಯ ಬಣ್ಣ ಬಯಲು ಮಾಡಲು ಹೊರಟ ಕೃತಿ..!
ಬಹದ್ದೂರ್ ಮನೆಗೆ ಸೊಸೆಯಾಗಿ ಬಂದಾಗಿನಿಂದ ಕೃತಿ ಸುಖ ಅನುಭವಿಸಿದ್ದಕ್ಕಿಂತ ದುಃಖ ಪಟ್ಟಿದ್ದೇ ಹೆಚ್ಚು. ಒಂದು ಕಡೆ ಅತ್ತೆಯಿಂದ ನಿಂದನೆ ಮತ್ತೊಂದು ಕಡೆ ಮಾತಂಗಿಯಿಂದ ಕಿತಾಪತಿ. ಕೃತಿಗೆ ಸದಾ ಇವರುಗಳನ್ನು ಸಂಭಾಳಿಸಿಕೊಂಡು ಹೋಗುವುದೆ ಕೆಲಸವಾಗಿ ಬಿಟ್ಟಿದೆ. ಆದರೂ ಕೃತಿಗೆ ಕೆಲವೊಂದು ಸಮಸ್ಯೆಗಳು ತಪ್ಪುತ್ತಿಲ್ಲ. ಈಗ ಹೊಸದೊಂದು ಸಮಸ್ಯೆಗೆ ಸಿಲುಕಿದ್ದಾಳೆ.
ಬಹದ್ದೂರ್ ಮನೆಗೆ ಕೃತಿ ಯಾವತ್ತು ಸೊಸೆಯಾಗಿ ಬರಬೇಕೆಂದು ಬಯಸಿದವಳಲ್ಲ. ಅದರಲ್ಲೂ ಯುವನನ್ನು ಮದುವೆಯಾಗಬೇಕೆಂದು ಯಾವತ್ತಿಗೂ ಆಸೆ ಪಟ್ಟಿರಲಿಲ್ಲ. ಅನಿವಾರ್ಯತೆಯ ಜೀವನಕ್ಕೆ ಅಣಿಯಾಗಿ ಮದುವೆಯೇನೋ ಆಗಿ ಬಿಟ್ಟಳು. ಆದ್ರೆ ಈಗೀಗ ಎಲ್ಲಾ ಸರಿ ಆಗ್ತಿದೆ ಎನ್ನುವಾಗಲೇ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ.

ಸಂಕಟದಲ್ಲಿ ಸಿಲುಕಿದ ಕೃತಿ..!
ಕೃತಿಯ ಬಾಳಲ್ಲಿ ಎದ್ದಿದ್ದ ಬಿರುಗಾಳಿ ಈಗ ತಗ್ಗಿದೆ. ಶಿವರಾತ್ರಿಯ ಸಂಭ್ರಮದಿಂದ ಎಲ್ಲವೂ ಸರಿಯಾಗಿದೆ. ಕೃತಿಯನ್ನು ಕಂಡರೆ ರೇಗುತ್ತಿದ್ದ ಯುವರಾಜ್ ಈಗೀಗ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದಾನೆ. ಆದರೆ, ಅದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಯುವನಿಗೆ ಗೊತ್ತಾಗಬೇಕು. ಆದರೂ ಕೃತಿಗೆ ಕೊಂಚಮಟ್ಟಿಗೆ ನೆಮ್ಮದಿ ಸಿಕ್ಕಂತಾಗಿದೆ. ತಪ್ಪೇ ಮಾಡದ ಕೃತಿ ಮದುವೆಯಾಗಿದ್ದ ಕಾರಣಕ್ಕೆ ತವರು ಮನೆಯಿಂದ ದೂರ ಉಳಿದಿದ್ದಳು. ಆದ್ರೆ ಅದೃಷ್ಟವೆಂಬಂತೆ ಯುವರಾಜ್ ಬದಲಾವಣೆ, ಕೃತಿಯನ್ನು ತವರು ಮನೆಗೂ ಕರೆದುಕೊಂಡು ಹೊರಟಿತ್ತು.

ಶಾಂತಲಾಳಿಂದ ತಪ್ಪಿತು ಕೃತಿಯ ಖುಷಿ
ಯುವ ಬದಲಾಗುತ್ತಿರುವುದು ಶಾಂತಲಾಳಿಗೆ ಇಷ್ಟವಿರಲಿಲ್ಲ. ಅದರಲ್ಲೂ ಕೃತಿಯನ್ನು ಕರೆದುಕೊಂಡು ತವರು ಮನೆಗೆ ಹೊರಟಿದ್ದ ಯುವನ ನಡವಳಿಕೆಗೆ ಶಾಂತಲಾ ಫುಲ್ ಗರಂ ಆಗಿದ್ದಾಳೆ. ಬೇಡ ಅಂದರೂ ಕೃತಿ ಕೂಡ ಹೊರಟು ನಿಂತಿದ್ದನ್ನು ಶಾಂತಲಾ ತಡೆಯುವ ಪ್ರಯತ್ನ ಮಾಡಿದ್ದಾಳೆ. ಅದರಲ್ಲೂ ಮಗನಿಗೆ ಬ್ಲಾಕ್ ಮೇಲ್ ಮಾಡಿದ್ದಾಳೆ. ನೀನು ಅವರ ತವರು ಮನೆಗೆ ಹೋದ್ರೆ ನಾನು ಬಹದ್ದೂರ್ ಲಾಂಚ್ ಬಿಟ್ಟು ಹೋಗ್ತೀನಿ ಅಂತ ಹಠ ಮಾಡಿದ್ದಾಳೆ. ಇದರಿಂದ ಯುವ ಕೂಡ ಕಂಗಲಾಗಿದ್ದಾನೆ. ಏನು ಮಾಡುವುದು ಎಂಬುದು ತಿಳಿಯದೆ ಸುಮ್ಮನೆ ಆಗಿದ್ದಾನೆ.

ವಂಶ ಪಾರಂಪರಿಕ ಹಾರ ಕದ್ದಳಾ ಕೃತಿ..?
ಬಹದ್ದೂರ್ ಫ್ಯಾಮಿಲಿಯಲ್ಲಿ ವಂಶಪಾರಂಪರ್ಯವಾಗಿ ಬಂದಂತ ಒಂದು ಚಿನ್ನದ ಸರವಿತ್ತು. ಆ ಸರ ಅಜ್ಜಿ ಹಾಕಿಕೊಳ್ಳುತ್ತಿದ್ದರು. ಆದರೆ ಶಿವರಾತ್ರಿಯ ಪೂಜೆ ಮುಗಿಸಿ ವಾಪಾಸ್ ಆದಾಗ ಆ ಸರ ನಾಪತ್ತೆಯಾಗಿತ್ತು. ಆ ಕಳ್ಳತನದ ಆರೋಪ ಕೃತಿಯ ಮೇಲೆ ಬಂದಿತ್ತು. ಕೃತಿ ಅದೆಲ್ಲವನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವವಳು ಅಲ್ಲ. ಹೀಗಾಗಿ ಕಳ್ಳರನ್ನು ಹಿಡಿದಿದ್ದಾಳೆ.

ಝಾನ್ಸಿ ರೂಮಲ್ಲಿ ಸಿಕ್ತು ಸರ
ಕೃತಿ ಮೇಲೆ ಕಳ್ಳತನದ ಆರೋಪ ಬಂದ ಮೇಲೆ ಇಡೀ ಮನೆಯ ಹುಡುಕಾಟ ಶುರುವಾಗಿತ್ತು. ಅದಕ್ಕೆ ಮನೆಯಲ್ಲಿರುವವರೆಲ್ಲರ ಸಹಕಾರವೂ ಸಿಕ್ಕಿತ್ತು. ಆದ್ರೆ ಕೃತಿಗೆ ಕಳ್ಳತನ ಯಾರು ಮಾಡಿದ್ದಾರೆಂದು ಅರಿವಿತ್ತು. ಹೀಗಾಗಿ ಝಾನ್ಸಿಯನ್ನು ಕರೆದುಕೊಂಡು ನೇರವಾಗಿ ಅವಳ ರೂಮಿಗೆ ಹೋದಳು. ಝಾನ್ಸಿ ಎಷ್ಟೇ ವಿರೋಧ ವ್ಯಕ್ತಪಡಿಸಿದರು ಅದನ್ನು ಕೇಳಿಸಿಕೊಳ್ಳದೆ, ಝಾನ್ಸಿಯ ಬಟ್ಟೆ ಇಡುವ ಜಾಗದಲ್ಲಿ ಹುಡುಕಿದಳು. ಕೃತಿಯ ಕೈಗೆ ಆ ಸರ ತಲುಪಿತು. ಝಾನ್ಸಿಗೆ ಸರ ಸಿಕ್ಕ ಕೂಡಲೇ ಭಯ ಶುರುವಾಗಿದೆ. ಈಗ ಕೃತಿ ತಾನು ಕಳ್ಳಿ ಅಲ್ಲ ಎಂಬುದನ್ನು ಪ್ರೂವ್ ಮಾಡಿ, ಕಳ್ಳಿ ಯಾರು ಎಂಬುದನ್ನು ಹೇಳಬೇಕಿದೆ. ಆದರೆ ಸತ್ಯ ಹೇಳಿದರೆ ಝಾನ್ಸಿಯ ಭವಿಷ್ಯಕ್ಕೆ ತೊಂದರೆ ಎಂಬುದು ಗೊತ್ತಿರುವ ಕಾರಣ ಅವಳನ್ನು ಬಚಾವ್ ಮಾಡಲು ಹೋಗಿ ಕೃತಿಯೇ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ.


Click it and Unblock the Notifications











