Katheyondu Shuruvagide: ತವರನ್ನೇ ಕಳೆದುಕೊಳ್ಳಲು ಕಂಡೀಷನ್ ಕೃತಿ..ಮುಂದೇನು?
ಮಾತಿಗೆ ಮುಂಚೆ ಜಗಳವಾಡುತ್ತಿದ್ದವರು ಯುವರಾಜ್ ಅಂಡ್ ಕೃತಿ. ಈ ಇಬ್ಬರ ನಡುವೆ ಇನ್ಯಾವತ್ತು ಬಾಂಧವ್ಯವೇ ಬೆಳೆಯುವುದಿಲ್ಲವೇನೋ ಎಂಬಷ್ಟು ಹಗೆತನವಿತ್ತು. ಇಬ್ಬರು ಒಂದಾದರೆ ಹೇಗಪ್ಪ ಎಂಬಷ್ಟು ಆತಂಕ ಪಡಬೇಕು ಎನ್ನುವಷ್ಟು ಜಗಳವಾಡುತ್ತಿದ್ದರು. ಆದರೆ, ದೇವರ ಆಟವೇ ಬೇರೆಯಾಗಿತ್ತು. ಇಬ್ಬರಿಗೂ ಮದುವೆಯನ್ನೇ ಮಾಡಿಸಿಬಿಟ್ಟಿದ್ದಾನೆ.
ಬೇಡದ ವರವಾಗಿದ್ದ ಯುವರಾಜ್, ಕನಸಲ್ಲೂ ನೆನೆಸದೆ ಬಂಧವಾಗಿತ್ತು ಆ ಮದುವೆ. ಆದರೆ ಆಸೆಗಳನ್ನು, ನಿರಾಕರಣೆಗಳನ್ನು ಕೇಳುವವರು ಯಾರು. ಬದಲಿಗೆ ಅನಿವಾರ್ಯತೆ, ಘನತೆಗಾಗಿ ಕೊರಳೊಡ್ಡಿದ್ದು.ಈಗ ತನ್ನವರನ್ನೇ ತೊರೆದು ಬದುಕಬೇಕಾಗಿದೆ ಕೃತಿ.

ಅತ್ತೆ ಮನೆಗೆ ಬಂದ ಕೃತಿ
ಕೃತಿಗೆ ಗೊತ್ತೋ ಗೊತ್ತಿಲ್ಲದೇನೋ ಮದುವೆಯ ಎಲ್ಲಾ ಶಾಸ್ತ್ರಗಳು ಶಾಸ್ತ್ರೋಕ್ತವಾಗಿ ನಡೆದಿದೆ. ಅದು ವರ್ಣಿಕಾಳ ಪಾಲಿಗೆ ನಡೆಯಬೇಕಾದ ಶಾಸ್ತ್ರಗಳು ಕೃತಿಯ ಪಾಲಾಗಿತ್ತು.ಮದುವೆಯೂ ಅಷ್ಟೇ ಸುಮ್ಮನೆ ಅಲ್ಲ ಶಾಸ್ತ್ರೋಕ್ತವಾಗಿ ನಡೆದಿದೆ. ಈಗ ಮನೆ ತುಂಬಿಸಿಕೊಳ್ಳುವ ಶಾಸ್ತ್ರದಲ್ಲೂ ಬಹದ್ದೂರು ಮನೆಯವರೆಲ್ಲಾ ಸಂಪ್ರದಾಯವನ್ನು ಫಾಲೋ ಮಾಡಿದ್ದಾರೆ. ಮಂಟಪದಲ್ಲಿ ಆದ ಅವಾಂತರವನ್ನು ನೋಡಿದ ಬಹದ್ದೂರ್ ಫ್ಯಾಮಿಲಿ ಮದುವೆ ಬೇಡ ಎಂದೇ ಅಂದುಕೊಂಡಿದ್ದರು. ಆದರೆ ಯುವರಾಜನೇ ಹಠ ಮಾಡಿ ಮದುವೆಯಾಗಿದ್ದ ಕಾರಣ, ಮನೆಯವರೆಲ್ಲಾ ಸುಮ್ಮನೆ ಆಗಿದ್ದಾರೆ.

ಶಾಂತಲಾ ಒಪ್ಪಿಗೆ ಸಿಕ್ಕೇ ಬಿಡ್ತು
ಯುವರಾಜನ ಅಮ್ಮ ಶಾಂತಲಾಗೆ ಮಗನ ಮೇಲೆ ಪ್ರೀತಿ ಜಾಸ್ತಿನೇ. ಮಗನ ಮದುವೆಯನ್ನು ಹೇಗೆಲ್ಲಾ ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಹೊತ್ತುಕೊಂಡಿದ್ದರು. ಆದರೆ ನಾನಾ ಕಾರಣದಿಂದ ಮದುವೆಗೆ ಹೋಗುವುದಕ್ಕೆ ಆಗಿರಲಿಲ್ಲ. ಆದರೆ ಮದುವೆ ಮನೆಯಿಂದ ವರ್ಣಿಕಾಳೆ ಸೊಸೆಯಾಗಿ ಬರುತ್ತಾಳೆ ಎಂದುಕೊಂಡಿದ್ದ ಶಾಂತಲಾಗೆ, ಮನೆ ಬಾಗಿಲಿನಲ್ಲಿ ಕೃತಿಯನ್ನು ಕಂಡು ಶಾಕ್ ಆಗಿದ್ದಳು. ವರ್ಣಿಕಾಳೇ ಬೇಕೆಂದು ಹಠ ಮಾಡಿದಳು. ಆದರೆ ಕಡೆಗೆ ಕೃತಿಯನ್ನೇ ಒಪ್ಪಿಕೊಂಡಳು.

ಕೃತಿಗೆ ಕಂಡೀಷನ್ ಹಾಕಿದ ಶಾಂತಲಾ
ಮದುವೆ ಮನೆಯಲ್ಲಿ ಏನಾಯ್ತು, ಕೃತಿಮನೆಯವರು ಎಷ್ಟು ಮೋಸ ಮಾಡಿದರು..? ಕೃತಿಯನ್ನು ಮದುವೆಯಾಗಿದ್ದು ಯಾಕೆ..? ಹೀಗೆ ಎಲ್ಲಾ ವಿಚಾರವನ್ನು ಯುವರಾಜ ಅಮ್ಮನಿಗೆ ತಿಳಿಸಿ ಹೇಳಿದಾಗ, ಶಾಂತಲಾ ದೇವಿ ಶಾಂತವಾದಳು. ಎಲ್ಲದನ್ನೂ ಮರೆತು ಸೊಸೆಯನ್ನು ಸ್ವೀಕರಿಸಿದಳು. ಆರತಿ ಮಾಡಿ ಮನೆಯೊಳಗೆ ಕರೆದುಕೊಂಡಳು. ಆದರೆ, ಮನೆಯೊಳಗೆ ನಡೆಯುತ್ತಿದ್ದ ಕೃತಿಯನ್ನು ನಡುಮನೆಯಲ್ಲಿಯೇ ತಡೆದಳು. ಇದು ಮನೆಯವರಿಗೂ ಆಶ್ಚರ್ಯವೆನಿಸಿತು. ನಂದೊಂದು ಕಂಡೀಷನ್ ಇದೆ ಎಂದಾಕ್ಷಣ ಮನೆಯವರಿಗೆ ಇದು ಮೋಸ ಅನ್ನಿಸುತ್ತೆ. ಸುಮ್ಮನೆ ಇದ್ದು ಬಿಡು ಎಂದು ಶಾಂತಲಾಗೆ ಅವರ ಅತ್ತೆ ಹೇಳಿದರು ಕೇಳಲೇ ಇಲ್ಲ. ಕೃತಿ ಬಳಿ ತನ್ನ ಕಂಡೀಷನ್ ಹೇಳಿದ್ದಾಳೆ.

ಅತ್ತೆ ಮಾತಿಗೆ ತಲೆ ಬಾಗುತ್ತಾಳಾ ಕೃತಿ..?
ಮನೆಯಲ್ಲಿ ಯಾರು ಏನೇ ಹೇಳಿದರೂ ಶಾಂತಲಾ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಬದಲಿಗೆ ತನ್ನ ಕಂಡೀಷನ್ ಹೇಳಿಯೇ ಬಿಟ್ಟಳು. ಇವಳು ಈ ಮನೆಯಲ್ಲಿ ಇರಬೇಕು ಎಂದಾದರೇ ಅವಳ ಮನೆಯವರ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು ಎಂದಳು. ಇದನ್ನು ಕೇಳಿಸಿಕೊಂಡು ನಿಂತಿದ್ದ ಯುವರಾಜ ಒಂದು ಮಾತನ್ನು ಆಡಲ್ಲ, ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಯಾಕಂದ್ರೆ, ಕೃತಿಯ ಮನೆಯವರು ಮಾಡಿದ ಮೋಸ ಯುವರಾಜನ ಕಣ್ಣಲ್ಲಿ ಇನ್ನಷ್ಟು ಕೋಪವನ್ನು ಹೊರ ಹಾಕುತ್ತಾ ಇತ್ತು. ಆ ವೇಳೆ ಅಮ್ಮ ತೆಗೆದುಕೊಂಡ ನಿರ್ಧಾರವೇ ಸರಿ ಎಂಬಂತೆ ಇತ್ತು ಯುವರಾಜನ ನಡವಳಿಕೆ. ಕೃತಿ ಈ ನಿರ್ಧಾರ ಕೇಳಿ ಒಂದು ಕ್ಷಣ ಶಾಕ್ ಆಗಿದ್ದಾಳೆ. ತವರಿಗಾಗಿಯೇ ಮದುವೆಯಾಗಿದ್ದಳು. ಈಗ ತವರನ್ನೇ ಬಿಡಬೇಕಾದ ಸ್ಥಿತಿ ಎದುರಾಗಿದೆ.


Click it and Unblock the Notifications











