Katheyondu Shuruvagide: ಯುವರಾಜನ ಸೇಡು.. ಸ್ಟೋರ್ ರೂಮಿನಲ್ಲಿಯೇ ಕೃತಿಯ ವಾಸ!
ಕೃತಿ ಬಾಳಲ್ಲಿ ಈಗ ಕಥೆ ಶುರುವಾಗಿದೆ ಎಂದುಕೊಳ್ಳುವಾಗಲೇ ಬಾಳು ಬಯಸದೆ ಇದ್ದಂತ ಟರ್ನಿಂಗ್ ತೆಗೆದುಕೊಂಡು ಬಿಟ್ಟಿದೆ. ಕನಸನ್ನು ಕಂಡವಳಲ್ಲ, ಆಸೆಯನ್ನು ಪಟ್ಟವಳಲ್ಲ, ಯುವರಾಜನನ್ನು ಮೊದಲೇ ಬಯಸಿದವಳಲ್ಲ. ಆದರೂ ವಿಧಿ ಲಿಖಿತಕ್ಕೆ ಕೊರಳೊಡ್ಡಲೇಬೇಕಾಗಿತ್ತು.
ಎಲ್ಲರ ಸಮ್ಮುಖದಲ್ಲಿ ಮದುವೆ ಏನೋ ನಡೆದು ಹೋಯಿತು. ಈಗ ಕೃತಿಯ ಬದುಕು ದುಸ್ತರವಾಗಿದೆ. ನೋವಾದಾಗ ಸಮಾಧಾನಿಸಲು ತವರನ್ನು ನಿರೀಕ್ಷೆ ಮಾಡುವಂತಿಲ್ಲ. ತವರಿಗೆ ಶಾಂತಲಾ ಕತ್ತರಿ ಹಾಕಿದ್ದಾಳೆ. ಈಗ ಕೃತಿಯ ಬದುಕು ಸ್ಟೋರ್ ರೂಮಿನತ್ತ ಸಾಗಿದೆ.

ಅತ್ತೆಯ ಮಾತಿಗೆ ಒಪ್ಪಿದ್ಯಾಕೆ ಕೃತಿ..?
ಕೃತಿಯದ್ದು ಮಧ್ಯಮ ವರ್ಗದ ಕುಟುಂಬ. ಸಣ್ಣ ಕಿರಾಣಿ ಅಂಗಡಿಯನ್ನಿಟ್ಟುಕೊಂಡು ಇಡೀ ಸಂಸಾರವನ್ನು ನಡೆಸುತ್ತಿದ್ದಳು. ಆದರೆ ಅದ್ಯಾವಾಗ ಅಮ್ಮನಿಗೆ ಆಸೆ ಹೆಚ್ಚಾಗುತ್ತಾ ಹೋಯಿತೋ ಅಲ್ಲಿ ಕೆಲವೊಂದು ಸಮಸ್ಯೆ ಶುರುವಾಯ್ತು. ವರ್ಣಿಕಾ ಜಾಗದಲ್ಲಿ ಕೃತಿ ಕೂರುವಂತೆ ಆಯಿತು. ಒಲ್ಲದ ಮನಸ್ಸಲ್ಲಿ ಯುವರಾಜನನ್ನು ಮದುವೆಯೂ ಆಗಿದ್ದಾಯ್ತು. ಈಗ ಅತ್ತೆ ತನ್ನ ಅಧಿಕಾರ ಚಲಾಯಿಸಲು ಆರಂಭಿಸಿದ್ದಾಳೆ. ಅದಕ್ಕೆಂದೆ ಕೃತಿಗೆ ಹೊಸದಾಗಿ ಕಂಡೀಷನ್ ಕೂಡ ಹಾಕಿದ್ದಾಳೆ.

ಇಂಥ ನಿರ್ಧಾರಕ್ಕೆ ಕೃತಿ ಬಂದಿದ್ಯಾಕೆ..?
ಕೃತಿಗೆ ಏನೇ ಕಷ್ಟ ಆದರೂ ಮನೆಯವರ ಸಂತೋಷಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಳು. ಆದರೆ ಈಗ ಗಂಡನ ಮನೆಗೆ ಬಂದ ಮೇಲೆ ತವರನ್ನು ಸಂಪೂರ್ಣವಾಗಿ ಬಿಡಬೇಕು ಎಂಬ ಕಂಡೀಷನ್ ಅತ್ತೆಯದ್ದು. ಕೃತಿ ಈ ಕಂಡೀಷನ್ ಕೇಳಿ ಒಂದು ಕ್ಷಣ ಶಾಕ್ ಆದಳು. ಒಂದು ಕ್ಷಣ ನಿಂತು ಬಿಟ್ಟಳು. ಆದರೆ ಮನಸ್ಸಿಗೆ ಅದೇನು ಆಲೋಚನೆ ಬಂತೋ ಏನೋ..? ಮುಂದಿನ ನಿರ್ಧಾರವನ್ನು ಲೀಲಾಜಾಲವಾಗಿ ಹೇಳಿದ್ದಾಳೆ. "ನನ್ನ ತವರು ಮನೆಯಿಂದ ದೂರವೇ ಇರುತ್ತೀನಿ. ಯಾರೊಂದಿಗೂ ಸಂಪರ್ಕದಲ್ಲಿ ಇರುವುದಿಲ್ಲ" ಎಂದಿದ್ದಾಳೆ.

ತವರು ಮನೆಗೆ ಆಸರೆ ಯಾರು..?
ಕೃತಿ ದುಡಿಯುತ್ತಾ ಇದ್ದದ್ದು ಸಣ್ಣ ಕಿರಾಣಿ ಅಂಗಡಿಯಲ್ಲಿ. ಅದರಿಂದ ಬರುವ ಹಣ ಸಾಕಾಗುತ್ತಾ ಇರಲಿಲ್ಲ. ಅದರ ಜೊತೆಗೆ ಡಿಸೈನರಿ ವರ್ಕ್ ಕೂಡ ಮಾಡುತ್ತಿದ್ದಳು. ಅದರಿಂದ ಬರುವ ಸಣ್ಣ ಪುಟ್ಟ ಹಣ ಬೇರೆ ಕಮಿಟ್ಮೆಂಟ್ಸ್ ಗೆ ಸರಿಯಾಗುತ್ತಾ ಇತ್ತು. ಆದರೆ ಈಗ ಅಪ್ಪ ಇಬ್ಬರೆ ದುಡಿಯಬೇಕಾಗಿದೆ. ಈ ಕಡೆ ಮಗಳಿಂದ ಏನನ್ನು ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ. ವರ್ಣಿಕಾ ದೊಡ್ಡ ಮನೆ ಸೊಸೆಯಾದರೆ, ಆ ಮೂಲಕ ನಾವೂ ಶ್ರೀಮಂತರಾಗಬಹುದು ಎಂದು ಬಯಕೆ ಹೊಂದಿದ್ದ ಪುಷ್ಪಾಗೆ ಎಲ್ಲವೂ ಉಲ್ಟಾ ಆಗಿದೆ. ಬಡತನ ಹೋಗಲಿ ಎಂದುಕೊಂಡಿದ್ದ ಪುಷ್ಪಾ ಈಗ ಮತ್ತಷ್ಟು ಆಳಕ್ಕೆ ಬಿದ್ದಿದ್ದಾಳೆ.

ಯುವರಾಜನಿಂದ ಕೃತಿಗೆ ಶಿಕ್ಷೆ
ಯುವರಾಜ್ಗೆ ಕೃತಿಯನ್ನು ಕಂಡರೆ ಆಗುವುದಿಲ್ಲ. ಈಗ ಮತ್ತಷ್ಟು ಕೋಪ ಹೆಚ್ಚಾಗಿದೆ. ಹೆಂಡತಿಯಾಗಿ ತಾಳಿ ಕಟ್ಟಿ ಕರೆದುಕೊಂಡು ಬಂದಿದ್ದು, ಅವಳ ಮೇಲಿನ ಕೋಪಕ್ಕೆ, ದ್ವೇಷಕ್ಕೆ. ಈಗ ಮನೆಯೊಳಗೇನೋ ಬಂದಳು. ಆದರೆ ಅವಳಿಗೆ ಅಂತ ಯಾವ ಸ್ಥಾನವನ್ನು ನೀಡುವುದಕ್ಕೆ ಸಿದ್ಧವಿಲ್ಲ. "ಇನ್ನು ಮುಂದೆ ನಿಂಗೆ ಇದೆ ಹಬ್ಬ" ಎಂದೇ ಯುವರಾಜ ವಾರ್ನಿಂಗ್ ಕೊಟ್ಟು ಹೋಗಿದ್ದಾನೆ. ಅಷ್ಟು ದೊಡ್ಡ ಅರಮನೆಯಲ್ಲಿ ಕೃತಿಗಾಗಿ ಉಳಿದುಕೊಳ್ಳಲು ಜಾಗ ನೀಡದ ಯುವರಾಜ್ ಬಹದ್ದೂರ್, ಅವಳನ್ನು ಒಂದು ಸ್ಟೋರ್ ರೂಮಿಗೆ ಹಾಕಿದ್ದಾನೆ. ನೋವು ಆದರೂ ಯಾರ ಬಳಿಯೂ ಹೇಳಿಕೊಳ್ಳದ ಸ್ಥಿತಿ ಕೃತಿಯದ್ದಾಗಿದೆ. ಆ ಸ್ಟೋರ್ ರೂಮಿನಲ್ಲಿ ಜಾಗವೇ ಇಲ್ಲದೆ ಒದ್ದಾಡುತ್ತಿದ್ದಾಳೆ.


Click it and Unblock the Notifications











