ಕೊಟ್ಯಾಧಿಪತಿ ವೇದಿಕೆಗೆ ಸೆಂಚುರಿ ಸ್ಟಾರ್ ಎಂಟ್ರಿ; ಕಾದಿದೆ ಭರ್ಜರಿ ಮನರಂಜನೆ
ಹಿಂದಿಯಲ್ಲಿ ಜನಪ್ರಿಯವಾದ 'ಕೌನ್ ಬನೇಗಾ ಕರೋಡ್ಪತಿ' ಶೋ ಮುಂದೆ ದಕ್ಷಿಣದ ಭಾಷೆಗಳಲ್ಲಿ ಕೂಡ ಯಶಸ್ವಿಯಾಗಿತ್ತು. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿ ಜನಮನ ಗೆದ್ದರು. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕೋಟಿ ಗೆಲ್ಲುವ ವೇದಿಕೆ ಏರುತ್ತಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ನಟ ಶಿವರಾಜ್ಕುಮಾರ್ ಶೀಘ್ರದಲ್ಲೇ ಅಮೆರಿಕಾಗೆ ತೆರಳುತ್ತಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಅದಕ್ಕೂ ಮುನ್ನ ತಿರುಪತಿಗೆ ಭೇಟಿ ನೀಡಿ ಶಿವಣ್ಣ- ಗೀತಾ ದಂಪತಿ ಮುಡಿ ಕೊಟ್ಟು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು.

ಇತ್ತೀಚೆಗೆ ಶಿವಣ್ಣ ನಟನೆಯ 'ಭೈರತಿ ರಣಗಲ್' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ತಾವೇ ಸ್ವತಃ ಚಿತ್ರವನ್ನು ನಿರ್ಮಿಸಿ ಗೆದ್ದಿದ್ದಾರೆ. ಚಿತ್ರದ ಪ್ರಚಾರ ಹಾಗೂ ವಿಜಯಯಾತ್ರೆಯಲ್ಲಿ ಕೂಡ ಶಿವಣ್ಣ ಭಾಗಿ ಆಗಿದ್ದರು. ಅನಾರೋಗ್ಯದ ನಡುವೆಯೇ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇದೀಗ 'ಕೌನ್ ಬನೇಗಾ ಕರೋಡ್ಪತಿ' ವೇದಿಕೆ ಏರುತ್ತಿದ್ದಾರೆ.
'ಕೌನ್ ಬನೇಗಾ ಕರೋಡ್ಪತಿ' ಸೀಸನ್ 16 ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಮತ್ತೊಮ್ಮೆ ಬಿಗ್ಬಿ ಅಮಿತಾಬ್ ಬಚ್ಚನ್ ಶೋ ನಡೆಸಿಕೊಡುತ್ತಿದ್ದಾರೆ. ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿ ಗೆದ್ದವರು ಕೋಟಿ ರೂ. ಗೆಲ್ಲುವ ಅವಕಾಶ ಇಲ್ಲಿದೆ. ಜನಸಾಮಾನ್ಯರ ಜೊತೆಗೆ ಸೆಲೆಬ್ರೆಟಿಗಳು ಕೂಡ ಆಗಾಗ್ಗೆ ಈ ಶೋನಲ್ಲಿ ಭಾಗವಹಿಸುತ್ತಾರೆ. ಇದೀಗ ಶಿವಣ್ಣ ಶೋನಲ್ಲಿ ಪಾಲ್ಗೊಳ್ಳುವ ಸುದ್ದಿ ಬಂದಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಂದು(ಡಿಸೆಂಬರ್ 10) ಶಿವಣ್ಣ 'ಕೌನ್ ಬನೇಗಾ ಕರೋಡ್ಪತಿ' ಶೋ ಚಿತ್ರೀಕರಣದಲ್ಲಿ ಭಾಗಿ ಆಗಬೇಕಿತ್ತು. ಅಮಿತಾಬ್ ಬಚ್ಚನ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿರುವುದರಿಂದ ಚಿತ್ರೀಕರಣ ಮುಂದೂಡಲಾಗಿದೆ. ಡಿಸೆಂಬರ್ 18ಕ್ಕೆ ಶಿವರಾಜ್ಕುಮಾರ್ ಅಮೆರಿಕಾ ಫ್ಲೈಟ್ ಏರಲಿದ್ದಾರೆ. ಅದಕ್ಕೂ ಮುನ್ನ ಬಿಗ್ಬಿ ಎದುರು ಹಾಟ್ ಸೀಟ್ನಲ್ಲಿ ಕೂತು ಕೋಟಿ ಗೆಲ್ಲುವ ಆಟ ಆಡಲಿದ್ದಾರೆ.
ಒಂದು ಪ್ರಶ್ನೆ ಕೇಳಿ ಅದನ್ನೆ 4 ಆಪ್ಷನ್ ಕೊಟ್ಟು ಸರಿಯಾದ ಉತ್ತರ ಕೊಡುವಂತೆ ಕೇಳಲಾಗುತ್ತದೆ. ಕ್ವಾಲಿಫೈಯರ್ ಸುತ್ತಿನಲ್ಲಿ ಗೆದ್ದವರು ಬಳಿಕ ಹಾಟ್ ಸೀಟ್ನಲ್ಲಿ ಕೂರುತ್ತಾರೆ. ಮೊದಲ ಪ್ರಶ್ನೆಗೆ 1000 ಬಹುಮಾನ ಸಿಗುತ್ತದೆ. ಹಂತ ಹಂತವಾಗಿ ಬಹುಮಾನದ ಮೊತ್ತ ಏರಿಕೆ ಆಗುತ್ತದೆ. ಅದರಂತೆ ಪ್ರಶ್ನೆಗಳು ಕಷ್ಟವಾಗುತ್ತಾ ಹೋಗುತ್ತದೆ. 2 ಲೈಫ್ಲೈನ್ ಸಹ ಸಿಗುತ್ತದೆ. ಈ ಬಾರಿ ಕೂಡ ಹಲವರು ಲಕ್ಷ ಲಕ್ಷ ಹಣ ಗೆದ್ದಿದ್ದಾರೆ.
ಸೀಸನ್ 16ರಲ್ಲಿ ಸಾಕಷ್ಟು ಬಾಲಿವುಡ್ ತಾರೆಯರು 'ಕೌನ್ ಬನೇಗಾ ಕರೋಡ್ಪತಿ' ಹಾಟ್ ಸೀಟ್ನಲ್ಲಿ ಕೂತಿದ್ದರು. ಗಾಯಕಿ ಶ್ರೇಯಾ ಘೋಷಾಲ್, ನಟ ಆಮೀರ್ ಖಾನ್, ವರುಣ್ ಧವನ್, ಅಭಿಷೇಕ್ ಬಚ್ಚನ್ ನಟಿ ವಿದ್ಯಾಬಾಲನ್, ನಿರ್ದೇಶಕಿ ಫರಾ ಖಾನ್ ಸಹ ಕೋಟಿ ಗೆಲ್ಲುವ ಆಟ ಆಡಿದ್ದಾರೆ. ಇದೀಗ ಕನ್ನಡ ನಟ ಶಿವಣ್ಣ ಹೋಗುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಕನ್ನಡದಲ್ಲಿ ಶೋ ನಿರೂಪಣೆ ಮಾಡಿ ಮೋಡಿ ಮಾಡಿದ್ದರು. ಒಂದು, ಎರಡು ಹಾಗೂ ನಾಲ್ಕನೇ ಸೀಸನ್ ಅನ್ನು ಅಪ್ಪು ನಡೆಸಿಕೊಟ್ಟರು. 3ನೇ ಸೀಸನ್ ರಮೇಶ್ ಅರವಿಂದ್ ಹೆಗಲೇರಿತ್ತು. ಕನ್ನಡದ ಕೊಟ್ಯಾಧಿಪತಿ ಶೋನಲ್ಲಿ ಕೂಡ ರಾಧಿಕಾ ಪಂಡಿತ್, ಜಗ್ಗೇಶ್ ಸೇರಿದಂತೆ ಕೆಲ ತಾರಾಯರು ಭಾಗಿ ಆಗಿದ್ದರು.
4 ಸೀಸನ್ ಬಳಿಕ ಕನ್ನಡದಲ್ಲಿ ಈ ಶೋ ಮುಂದುವರೆಯಲಿಲ್ಲ. ಅಪ್ಪು ಬಿಟ್ಟರೆ ಮತ್ತೆ ಯಾರು ಈ ಶೋ ಅಷ್ಟ ಸೊಗಸಾಗಿ ನಡೆಸಿಕೊಡಲು ಸಾಧ್ಯವಿಲ್ಲ ಎಂದು ಅಭಿಮಾನಿಗಳ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಮತ್ತೆ ಈ ಕಾರ್ಯಕ್ರಮ ಶುರುವಾಗುತ್ತಾ ಕಾದು ನೋಡಬೇಕಿದೆ. ಇನ್ನು ಬಿಗ್ಬಿ ಹಾಗೂ ಶಿವಣ್ಣ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ.


Click it and Unblock the Notifications











