ಹೆಣ್ಣು ಮಗುವಿಗೆ ತಂದೆಯಾದ 'ಕಾವೇರಿ ಕನ್ನಡ ಮೀಡಿಯಂ ನಟ ರಕ್ಷಿತ್ ಅರಸ್ ಗೋಪಾಲ್
'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯನ್ನು ವೀಕ್ಷಿಸುವವರಿಗೆಲ್ಲಾ ನಾಯಕಿ ಕಾವೇರಿ ಮತ್ತು ನಾಯಕ ಅಗಸ್ತ್ಯರ ಬಂಧದ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಸುಂದರ ದೃಶ್ಯಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಮನೋರಂಜನೆಯನ್ನು ನೀಡುತ್ತಿರುವ ಸೀರಿಯಲ್ನಲ್ಲಿ ಈಗಾಗಲೇ ಮನೆಯವರಿಗೆ ಗೊತ್ತಿಲ್ಲದೆಯೇ ಇವರಿಬ್ಬರ ಮದುವೆಯೂ ಆಗಿದೆ. ಆದರೂ ಅಕ್ಕನಿಗೋಸ್ಕರ ಎರಡನೇ ಮದುವೆಯ ಸಿದ್ಧತೆಯಲ್ಲಿರುವ ಅಗಸ್ತ್ಯನ ಪರಿಸ್ಥಿತಿಯ ಸುತ್ತ ಸದ್ಯ ಕಥೆಯು ಸುತ್ತುತ್ತಿದೆ.
ನಟನೆಯನ್ನು ಹೊರತುಪಡಿಸಿದ ಒಂದು ಜೀವನ ಪ್ರತಿ ಕಲಾವಿದನಿಗೂ ಇರುತ್ತದೆ ಅಲ್ಲವೇ? ಸುಂದರವಾದ ಬದುಕನ್ನು ಕಟ್ಟಿಕೊಂಡು ಚಂದದ ಸಂಸಾರವನ್ನು ನಡೆಸುವ ಅವರು ಕೂಡ ಎಲ್ಲರಂತೆಯೇ ಬದುಕುವ ಕನಸನ್ನು ಕಟ್ಟಿಕೊಂಡವರೇ ಆಗಿರುತ್ತಾರೆ.

ಈಗ ಇಲ್ಲಿ ಫ್ಯಾಮಿಲಿ ಮ್ಯಾಟರ್ ಯಾಕಪ್ಪಾ ಅಂದ್ರೆ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯ ನಾಯಕ ಅಗಸ್ತ್ಯ ನಿಜ ಜೀವನದಲ್ಲಿ ತಂದೆಯಾಗಿದ್ದಾರೆ. ಈ ನಟನ ನಿಜವಾದ ಹೆಸರು ರಕ್ಷಿತ್ ಅರಸ್ ಗೋಪಾಲ್. ರಕ್ಷಿತ್ ಮತ್ತು ಅವರ ಧರ್ಮಪತ್ನಿ ಮನೋರಂಜಿತಾ ಇಬ್ಬರೂ ಕೆಲವು ವರ್ಷಗಳ ಕಾಲ ಪ್ರೀತಿಸಿ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟಂತಹ ಜೋಡಿ.
ಎಲ್ಲರ ಲೈಫ್ನಲ್ಲಿ ಶುಭಘಳಿಗೆ ಎನ್ನುವ ಹಾಗೆ ಇವರು ಕೂಡ ತಮ್ಮ ಸುಂದರ ಬದುಕಿನ ಭಾಗವಾಗಿ ಮಗುವನ್ನು ಸ್ವಾಗತಿಸಿದ್ದಾರೆ. ತಮ್ಮ ನೆಚ್ಚಿನ ನಟ ತಂದೆಯಾಗಿರುವುದಕ್ಕೆ ಅಭಿಮಾನಿಗಳು ಕೂಡ ಸಂತಸಗೊಂಡಿದ್ದಾರೆ.
ಇತ್ತೀಚೆಗಷ್ಟೇ ಸೀಮಂತ ಕಾರ್ಯಕ್ರಮವನ್ನು ಮುಗಿಸಿದ್ದ ಮನೋರಂಜಿತಾ, ಜುಲೈ 28ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟ ''ನಮ್ಮ ಮನೆಯ ರಾಜಕುಮಾರಿಯನ್ನು ಸ್ವಾಗತಿಸಿದ್ದೇವೆ. ಇಟ್ಸ್ ಅ ಬೇಬಿ ಗರ್ಲ್'' ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳಿಂದಲೂ ಸಾಕಷ್ಟು ಶುಭ ಹಾರೈಕೆಗಳನ್ನು ಪಡೆದುಕೊಳ್ಳುತ್ತಿರುವ ದಂಪತಿ ಮಗುವಿನೊಂದಿಗೆ ಆರೋಗ್ಯಕರವಾದ ಸುಂದರ ಬದುಕನ್ನು ಸಾಗಿಸುವಂತಾಗಲಿ ಎಂದು ಆಶಿಸೋಣ.


Click it and Unblock the Notifications











