BBK12: ಗಿಲ್ಲಿಗೆ ಅಭಿನಂದನೆ; ಅಶ್ವಿನಿಗೆ ಪರೋಕ್ಷವಾಗಿ ತಿರುಗೇಟು ಕೊಟ್ಟ ಕಾವ್ಯಾ ಶೈವ
ಬಿಗ್ಬಾಸ್ ಟ್ರೋಫಿ ಗೆದ್ದ ಗಿಲ್ಲಿಗೆ ಕಾವ್ಯಾ ಅಭಿನಂದನೆ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಜೊತೆಗೆ ಅಶ್ವಿನಿ ಗೌಡಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಬಡವರ ಮಕ್ಕಳು ಬೆಳೆಯಬೇಕು ನಿಜ. ಆದರೆ ಗಿಲ್ಲಿ ಬಡವ ಅಲ್ಲ, ಬಡವರ ಥರ ಗೆಟಪ್ ಹಾಕಿಕೊಂಡು ಆಟ ಆಡಿದ ಎಂದು ಅಶ್ವಿನಿ ಹೇಳಿದ್ದಾರೆ. ಅದಕ್ಕೆ ಕಾವ್ಯಾ ಪ್ರತಿಕ್ರಿಯಿಸಿದಂತಿದೆ.
ಬಿಗ್ಬಾಸ್ ಮನೆಯಿಂದ ಗಿಲ್ಲಿ ತಮ್ಮ ಮನೆಗೆ ಹೋಗುವುದು ಕಷ್ಟ ಎನ್ನುವಂತಾಗಿಬಿಟ್ಟಿತು. ಟ್ರೋಫಿ ಗೆದ್ದ ಕ್ಷಣದಿಂದ ಸಂಭ್ರಮಾಚರಣೆ ನಡೀತಿದೆ. ಅಭಿಮಾನಿಗಳು ಮೆರವಣಿಗೆ ಮಾಡುತ್ತಿದ್ದಾರೆ. ಹೋದಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಇನ್ನು ಬಿಗ್ಬಾಸ್ ಮನೆಯಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮೊದಲ ದಿನದಿಂದ ಸ್ನೇಹಿತರಾಗಿದ್ದರು. ಆಕೆ 3ನೇ ರನ್ನರ್ ಅಪ್ ಎನಿಸಿಕೊಂಡರು. ಆಕೆ ಮನೆಯಿಂದ ಹೊರ ಬಂದ ಬಳಿಕ ಸುದೀಪ್ ಹೋಗಿ ಇನ್ನುಳಿದ ಮೂವರನ್ನು ವೇದಿಕೆಗೆ ಕರೆತಂದರು.

ಅಂತಿಮವಾಗಿ ಗಿಲ್ಲಿ ವಿಜೇತ ಎಂದು ಘೋಷಣೆ ಆಯಿತು. ವೇದಿಕೆಯಲ್ಲಿ ಸಹ ಸ್ಪರ್ಧಿಗಳು ಅಭಿನಂದಿಸಿದ್ದರು. ಅಲ್ಲೇ ನಟ ಸುದೀಪ್ ಕ್ಲಿಕ್ಕಿಸಿದ ಸೆಲ್ಫಿಗೆ ಗಿಲ್ಲಿ, ಕಾವ್ಯಾ ಎಲ್ಲರೂ ಪೋಸ್ ಕೊಟ್ಟಿದ್ದರು. ಇದೇ ಮೊದಲ ಬಾರಿಗೆ ಬಹಿರಂಗವಾಗಿ ಗಿಲ್ಲಿ ಗೆಲುವಿಗೆ ಕಾವ್ಯಾ ಪ್ರತಿಕ್ರಿಯಿಸಿದ್ದಾರೆ.
ಗಿಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಿರುವ ಕಾವ್ಯಾ "ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ .. ಹೇ ಗಿಲ್ಲಿ ಕಂಗ್ರಾಟ್ಸ್ ಕಣೋ. ನೀನು ಇದಕ್ಕೆ ಅರ್ಹ. ಜೀರೊದಿಂದ ಹೀರೋ ಈಗ.. ಇನ್ನು ಸಾಕಷ್ಟು ಸಾಧಿಸಬೇಕು. ಆದಷ್ಟು ಬೇಗ ಆಕ್ಷನ್ ಕಟ್ ಹೇಳುವಂತಾಗಲಿ. ತುಂಬಾ ತುಂಬ ಒಳ್ಳೇದಾಗ್ಲಿ" ಎಂದು ಕಾವ್ಯಾ ಬರೆದುಕೊಂಡಿದ್ದಾರೆ.
"ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ" ಎನ್ನುವ ಸಾಲು ಅಶ್ವಿನಿಗೆ ಗೌಡಗೆ ಕೌಂಟರ್ ಕೊಡಲು ಬಳಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮೊದಲಿನಿಂದಲೂ ಅಶ್ವಿನಿಗೂ ಕಾವ್ಯಾಗೂ ಅಷ್ಟಕ್ಕಷ್ಟೆ. 110 ದಿನ ಮನೆ ಒಳಗೆ ಇದ್ದರೂ ಕಾವ್ಯಾ ಹೇಗೆ ಅಂತ ಅರ್ಥವಾಗಲಿಲ್ಲ ನನಗೆ ಎಂದು ಸುದೀಪ್ ಎದುರು ಅಶ್ವಿನಿ ಹೇಳಿದ್ದರು.
ಮೊದಲಿನಿಂದಲೂ ಗಿಲ್ಲಿ ಹಾಗೂ ಕಾವ್ಯಾ ಸೇರಿ ಅಶ್ವಿನಿ ಅವರನ್ನು ಗೋಳುಹೋಯ್ದುಕೊಂಡಿದ್ದರು. ಇದೇ ಕಾರಣಕ್ಕೆ ಆರಂಭದಲ್ಲಿ ಭಾರೀ ಸಂಘರ್ಷ ಏರ್ಪಟ್ಟಿತ್ತು. ಗಿಲ್ಲಿ ಇಲ್ಲ ಅಂದ್ರೆ ಕಾವ್ಯಾ ಜೀರೊ ಎಂದು ಅಶ್ವಿನಿ ಹೇಳಿದ್ದರು. ಗಿಲ್ಲಿ ಹಾಗೂ ಕಾವ್ಯಾ ಜಂಟಿ ಸ್ಪರ್ಧಿಗಳಾಗಿ ಮನೆ ಒಳಗೆ ಹೋಗಿದ್ದರು. ಇಬ್ಬರೂ ಸ್ನೇಹಿತರಾಗಿದ್ದರು. ಪದೇ ಪದೆ ಜಗಳ ಆಡುತ್ತಿದ್ದರು. ಟಾಮ್ ಅಂಡ್ ಜೆರಿ ರೀತಿ ಇವರ ಜಗಳ ವೀಕ್ಷಕರಿಗೂ ಮನರಂಜನೆ ಕೊಟ್ಟಿತ್ತು.
ಗಿಲ್ಲಿ ಕಾರಣಕ್ಕೆ ಕಾವ್ಯಾ ಶೈವ ಫಿನಾಲೆವರೆಗೂ ಬಂದ್ರು ಎನ್ನುವವರು ಇದ್ದಾರೆ. ಇನ್ನು ಕೊನೆವರೆಗೂ ಕಾವ್ಯಾ ಅವರನ್ನು ಗಿಲ್ಲಿ ಬಿಟ್ಟು ಕೊಡಲಿಲ್ಲ. ನಡುವೆ ಒಮ್ಮೆ ಕಾವ್ಯಾ, ಗಿಲ್ಲಿ ವಿರುದ್ಧ ನಿಂತಿದ್ದರು. ನನ್ನನ್ನು ರೇಗಿಸಬೇಡ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದರು. ಕೊನೆಗೆ ನಾಮಿನೇಟ್ ಕೂಡ ಮಾಡಿದ್ದರು. ಆದರೂ ಗಿಲ್ಲಿ ನಟ ಮಾತ್ರ ಹಿಂದಡಿ ಇಡಲಿಲ್ಲ. ಆಕೆಯ ಜೊತೆ ಸ್ನೇಹ ಮುಂದುವರೆಸಿದ್ದರು.
3ನೇ ರನ್ನರ್ ಅಪ್ ಎನಿಸಿಕೊಂಡ ಕಾವ್ಯಾಗೆ 10 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. ಕೆಂಡಸಂಪಿಗೆ ಎಂಬ ಧಾರಾವಾಹಿಯಲ್ಲಿ ನಟಿಸಿದ್ದ ಕಾವ್ಯಾ ಕೆಲ ಕಿರುತೆರೆ ಕಾರ್ಯಕ್ರಮಗಳಲ್ಲಿ ಮಿಂಚಿದ್ದರು. 'ಕೊತ್ತಲವಾಡಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಿಗ್ಬಾಸ್ ಮನೆಯಲ್ಲಿ 110 ದಿನಗಳ ಕಾಲ ಇದ್ದು ಫಿನಾಲೆವರೆಗೂ ಬಂದಿದ್ದರು. ಕೊನೆಗೆ ಅದೃಷ್ಟ ಕೈಹಿಡಿಯಲಿಲ್ಲ. ಅಶ್ವಿನಿ ಸೆಕೆಂಡ್ ರನ್ನರ್ ಅಪ್ ಎನಿಸಿಕೊಂಡರೆ ರಕ್ಷಿತಾ ರನ್ನರ್ ಅಪ್ ಆಗಿ ಅಚ್ಚರಿ ಮೂಡಿಸಿದರು.


Click it and Unblock the Notifications











