ಶಿವರಾಜ್ ಪಾಟೀಲ್ ಪ್ರಶ್ನೆಗೆ ವಿಕ್ರಂ ತಿಣುಕಾಡಿದ್ದು ಅಕ್ಷಮ್ಯ

ಹಾಗೆಂದ ತಕ್ಷಣ ಕನ್ನಡನಾಡಿನ ಪ್ರಸಿದ್ಧ ವ್ಯಕ್ತಿಯ ಬಗ್ಗೆ ಎಲ್ಲರೂ ತಿಳಿದುಕೊಂಡಿರಬೇಕು ಎಂದಲ್ಲ. ಆದರೂ ಯಾಕೋ... ಬೇಜಾರಾಗುತ್ತದೆ. ಕರ್ನಾಟಕದ ಇಂದಿನ ಲೋಕಾಯುಕ್ತ ಯಾರು ಎಂದು ಕೇಳಿದ್ದ ಪ್ರಶ್ನೆ ಅದು. ದೌರ್ಭಾಗ್ಯವೆಂದರೆ, ವಿಕ್ರಂ ಅವರ ಫೋನ್ ಎ ಫ್ರೆಂಡ್ ವಿ. ಮಂಜುನಾಥ್ ಸಹ ಇದಕ್ಕೆ ಸರಿಯಾದ ಉತ್ತರ ನೀಡಲಿಲ್ಲ. ಕೊನೆಗೆ ತಮ್ಮ ಅಂತಃಸತ್ವವನ್ನು ಬಡಿದೆಬ್ಬಿಸುವ ರೀತಿಯಲ್ಲಿ ಸ್ವತಃ ವಿಕ್ರಂ ಅವರೇ ಶಿವರಾಜ್ ವಿ ಪಾಟೀಲ್ ಎಂದು ಹೇಳಿ, ಸಮಾಧಾನದ ಉತ್ತರ ನೀಡಿದರು.
ಓಕೆ! ಲವ್ ಅಂಡ್ ವಾರಿನಲ್ಲಿ ಎಲ್ಲವೂ ನಡೆಯುತ್ತದೆ. ಭದ್ರವಾತಿಯಲ್ಲಿ ಹುಟ್ಟಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಿಕ್ರಂ ಕನ್ನಡಿಗರ ಬಗ್ಗೆ ಕೇಳಲಾದ ಪ್ರಶ್ನೆಗೆ ಸರಿಯಾದ ಉತ್ತರ ನೀಡಲಿಲ್ಲವೆಂದು ಅವರನ್ನು ಹೀಗೆಳೆಯುವ ಹಾಗಿಲ್ಲ. ಏಕೆಂದರೆ ಅವರದು ನಿಜಕ್ಕೂ ಅದ್ಭುತ ಸಾಧನೆಯೇ. ಅಮಿತಾಭ್ ಎದುರಿಗೆ ಹಾಟ್ ಸೀಟಿನಲ್ಲಿ ವಿರಾಜಮಾನರಾಗಬೇಕು ಎಂಬುದು ಕೋಟಿ ಕೋಟಿ ಜನರ ಕನಸು. ಅಂಥಾದ್ದರಲ್ಲಿ ಈ ವಿಕ್ರಮ ...
ಎಷ್ಟೂ ಕಠಿಣ ಪ್ರಶ್ನೆಗಳು ಬುದ್ಧಿವಂತ ವಿಕ್ರಂಗೆ ನೀರು ಕುಡಿದಷ್ಟು ಸುಲಭವಾಗಿದ್ದವು. 5 ಕೋಟಿ ರೂಪಾಯಿ ಬಹುಮಾನದ ಕೆಬಿಸಿ ಕ್ವಿಜ್ ಕಾರ್ಯಕ್ರಮದಲ್ಲಿ ಒಟ್ಟು 13 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದರಲ್ಲಿ ವಿಕ್ರಂ 11 ಪ್ರಶ್ನೆಗಳಿಗೆ ಸರಿಯಾದ ಉತ್ತರ ಲಾಕ್ ಮಾಡಿ ಜಯಭೇರಿ ಬಾರಿಸಿದರು. ವಿಕ್ರಂ ಅವರ ಕಂಪ್ಯಾನಿಯನ್ ಆಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅವರಪ್ಪ ಲಕ್ಷೀಕಾಂತ ಕುಳಿತಲ್ಲಿಯೇ ಆನಂದಭಾಷ್ಪ ಸುರಿಸಿದರು. ಪುತ್ರನ ಯಶಸ್ಸು ಕಂಡು ಅವರ ಬಾಯಿಂದ ಶಬ್ದಗಳೇ ಹೊರಡಲಿಲ್ಲ... ಬರೀ ಆನಂದಭಾಷ್ಪ.
ಪುರೋಹಿತರಾಗಿದ್ದುಕೊಂಡು ಮಗನಿಗೆ ಉತ್ತಮ ಶಿಕ್ಷಣ ಕೊಡಿಸಬಹುದು ಎಂಬ ಎಣಿಕೆ ಎಲ್ಲೋ ತಪ್ಪುತ್ತಿದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಜವಾಬ್ದಾರಿಯುತ ತಂದೆಯಾಗಿ ಎಸ್ ಟಿಡಿ ಬೂತೊಂದನ್ನು ತೆರೆದು ಮಗನ ವ್ಯಾಸಂಗವೇ ತನ್ನ ಜೀವನದ ಪರಮೋಚ್ಛ ಗುರಿ ಎಂದವರು ಲಕ್ಷ್ಮಿಕಾಂತ. ಕಷ್ಟಪಟ್ಟು ಮಗನನ್ನು ಇಂಜಿನಿಯರನ್ನಾಗಿ ಮಾಡಿಸಿದರು. ಅದೂ ಎಂಥಾ ಕಂಪನಿಯಲ್ಲಿ ಎನ್ನುತ್ತೀರಿ? ಮೈಕ್ರೋಸಾಫ್ಟ್ ಎಂಬ ದೈತ್ಯ ಕಂಪನಿಯಲ್ಲಿ. ಹೆಮ್ಮೆಯ ಪುತ್ರ ವಿಕ್ರಂ 2011ನೇ ಸಾಲಿನಲ್ಲಿ ಕೆಬಿಸಿ-5ನಲ್ಲಿ 50 ಲಕ್ಷ ಗೆದ್ದಿದ್ದಕ್ಕೆ ಕನ್ನಡಿಗರ ಹೃದಯಪೂರ್ವಕ ಅಭಿನಂದನೆಗಳು.


Click it and Unblock the Notifications











