'ಕರಿಮಣಿ' ನನ್ನ ಮೊದಲ ಧಾರಾವಾಹಿ, ಆದರೂ ಬಹಳಷ್ಟು ಕಾನ್ಫಿಡೆನ್ಸ್ ಕೊಟ್ಟಿದೆ" ನಟಿ ಕೀರ್ತನಾ ರಾಜ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಕರಿಮಣಿ'ಯೂ ಒಂದು. ಬೆಂಗಳೂರಿನ ಹುಡುಗಿಯಾಗಿರುವ ನಟಿ ಕೀರ್ತನಾ ರಾಜ್ ಕರಿಮಣಿ ಧಾರಾವಾಹಿಯಲ್ಲಿ ಸಿಂಚನಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕ ನಟ ಕರ್ಣನ ಅತ್ತೆ ಮಗಳಾದ ಸಿಂಚನಾ ಚಿಕ್ಕ ವಯಸ್ಸಿನಿಂದಲೂ ಕರ್ಣನನ್ನು ಬಹಳ ಪ್ರೀತಿಸುತ್ತಿದ್ದಳು. ಆದರೆ ಈಗ ಕರ್ಣನ ಪ್ರೀತಿ ತನ್ನೆಡಗಿಲ್ಲ ಎಂಬುದು ಗೊತ್ತಾದ ಮೇಲೆ ಭಗ್ನ ಪ್ರೇಮಿಯಾಗಿದ್ದಾಳೆ ಸಿಂಚನಾ. ಈ ರೀತಿಯ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಕೀರ್ತನಾ ರಾಜ್.
ಕಿರುತೆರೆ ಪ್ರಪಂಚಕ್ಕೆ ತಾವು ಕಾಲಿಟ್ಟಿರುವುದರ ಬಗ್ಗೆ ನಟಿ ಕೀರ್ತನ ರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. ಏಳೆಂಟು ವರ್ಷಗಳ ಹಿಂದೆ ನಾನು ಆಡಿಶನ್ ಕೊಟ್ಟಿದ್ದೆ. ಹೌದು, ಫೇಸ್ ಬುಕ್ನಲ್ಲಿ ನನ್ನ ಫೋಟೋಗಳನ್ನು ನೋಡಿ ನನಗೆ ಎರಡು ಮೂರು ವಾಹಿನಿ ಹಾಗೂ ಧಾರಾವಾಹಿಗಳಿಂದ ಆಡಿಶನ್ಗೆ ಕರೆ ಬಂದಿತ್ತು. ಎಲ್ಲಾದಕ್ಕೂ ಆಡಿಶನ್ ಕೊಟ್ಟರೂ ಯಾವುದರಲ್ಲೂ ಸೆಲೆಕ್ಟ್ ಆಗಿರಲಿಲ್ಲ. ಮೂಲತಃ ನಟನೆ ನನ್ನ ಕ್ಷೇತ್ರ ಅಲ್ಲ. ಹಾಗಾಗಿ ಇದನ್ನೆಲ್ಲ ಮರೆತು ಕೆಲಸಕ್ಕೆ ಸೇರಿದ್ದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೀರ್ತನಾ ರಾಜ್ ಹೇಳಿಕೊಂಡಿದ್ದಾರೆ.

ಬಿಕಾಂ ಓದಿರುವ ನಾನು ಏವಿಯೇಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಇದೇ ಹೊತ್ತಿಗೆ ಮತ್ತೊಂದು ಧಾರಾವಾಹಿಯಿಂದ ಆಡಿಶನ್ಗೆ ಕರೆ ಬಂದಾಗ ಹೆಚ್ಚಿನ ತಯಾರಿಲ್ಲದೆ ಆಡಿಶನ್ ನೀಡಿದೆ. ನನ್ನ ಅದೃಷ್ಟಕ್ಕೆ, ಸಿಂಚನಾ ಪಾತ್ರಕ್ಕೆ ನಾನು ಸೆಲೆಕ್ಟ್ ಆದೆ. ನಟನೆ ನನಗೆ ಬಹಳ ಹೊಸ ವಿಷಯ. ಆದರೆ ನಮ್ಮ ಧಾರಾವಾಹಿಯ ನಿರ್ದೇಶಕರು ಸಹ ನಟರು ನನಗೆ ಬಹಳಷ್ಟು ಧೈರ್ಯ ತುಂಬಿ ನಟನೆಯನ್ನು ಹೇಳಿಕೊಡುತ್ತಿದ್ದಾರೆ ಎಂದಿದ್ದಾರೆ ಕೀರ್ತನಾ ರಾಜ್.
ಮೊದ ಮೊದಲಿಗೆ ಜಿಯೋ ಸಿನೆಮಾದಲ್ಲಿ ನನ್ನ ನಟನೆಯನ್ನೇ ನೋಡಿ ಅದನ್ನು ಹೇಗೆಲ್ಲ ಇಂಪ್ರೂವ್ ಮಾಡಬಹುದು ಎಂದು ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದೆ. ಕನ್ನಡ ಮುಂದೆ ನಿಂತು ಡೈಲಾಗ್ ಪ್ರಾಕ್ಟೀಸ್ ಮಾಡುತಿದ್ದೆ. ನಮ್ಮ ತಂಡದ ಅನುಭವಿಗಳು ಹಿರಿಯ ಕಲಾವಿದರು ಎಲ್ಲರೂ ನನಗೆ ಬಹಳಷ್ಟು ಒಳ್ಳೆಯ ರೀತಿಯಲ್ಲಿ ಗೈಡ್ ಮಾಡಿದರು. ಈಗಂತೂ ನಾನು ಈ ಕ್ಷೇತ್ರದಲ್ಲಿ ಬಹಳ ಕಾನ್ಫಿಡೆಂಟ್ ಆಗಿದ್ದೇನೆ ಎಂದಿದ್ದಾರೆ ನಟಿ ಕೀರ್ತನಾ ರಾಜ್.
ಇನ್ನು ತಮ್ಮ ಮೊದಲ ದಿನದ ಚಿತ್ರಿಕರಣದ ಅನುಭವವನ್ನು ನೆನೆದ ನಟಿ ಕೀರ್ತನ ರಾಜ್ ಮೊದಲ ದಿನ ನಾನು ಬಹಳಷ್ಟು ಹೆದರಿಕೊಂಡಿದ್ದೆ. ಮೊದಲ ಬಾರಿಗೆ ಕ್ಯಾಮರಾ ಫೇಸ್ ಮಾಡುತ್ತಿದ್ದ ನನಗೆ ಇದೆಲ್ಲ ಸಾಧ್ಯವಿಲ್ಲ ಎನ್ನುವಷ್ಟು ಭೀತಿ ಹುಟ್ಟಿತ್ತು. ಇದುವರೆಗೂ ನಾನು ಟಿವಿ ಯಲ್ಲಿ ಮಾತ್ರ ನೋಡಿದ ಬಹಳಷ್ಟು ಹಿರಿಯ ಕಲಾವಿದರು ನನ್ನ ಮುಂದೆ ನಿಂತಿದ್ದರು. ಅವರೆಲ್ಲರ ಮುಂದೆ ಮುಜುಗರ ಭಯ ಆಗಿತ್ತು. ಎಷ್ಟು ಭಯಕ್ಕೆ ಒಳಗಾಗಿದ್ದೆ ಎಂದರೆ ಅಳುವುದನ್ನು ಬಾಕಿ ಇತ್ತಷ್ಟೇ. ಇದೇ ಸಂದರ್ಭದಲ್ಲಿ ಅವರೆಲ್ಲರೂ ನನ್ನನ್ನು ಬಹಳ ಚೆನ್ನಾಗಿ ಪ್ರೋತ್ಸಾಹಿಸಿದರು ಎಂದು ಆಕೆ ಹೇಳಿಕೊಂಡಿದ್ದಾರೆ.

ಹಿರಿಯರಾದರೂ, ಅನುಭವಿಗಳಾದರೂ ಸಹ ಭಯ ಪಡಬೇಡ ನೀನು ಚೆನ್ನಾಗೆ ಮಾಡುತ್ತಿದ್ದೀಯಾ ಭಯ ಬಿಟ್ಟು ಬಿಡುವಾಗ ಡೈಲಾಗ್ ನೆನಪಿರುತ್ತದೆ, ಎಂದು ಹೇಳಿದರು. ಅವರ ಪ್ರೀತಿ ನೋಡಿ ನನಗೂ ಧೈರ್ಯ ಬಂತು. ಮೊದಲ ದಿನ ಆರಂಭವಾದ ಭೀತಿ ಅಲ್ಲೇ ಉಡುಗಿ ಹೋಯಿತು. ಆಮೇಲಿಂದ ಎಲ್ಲವೂ ಸಲ್ಲಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.
'ಕರಿಮಣಿ' ಧಾರಾವಾಹಿಯಲ್ಲಿ ತಮ್ಮ ಸಿಂಚನಾ ಎಂಬ ಪಾತ್ರದ ಬಗ್ಗೆಯೂ ಮಾತನಾಡಿರುವ ನಟಿ ಕೀರ್ತನಾ ರಾಜ್ ನನಗೆ ಸಿಂಚನಾ ಪಾತ್ರ ಬಹಳ ಹಿಡಿಸಿದೆ. ನನ್ನ ನಿಜ ಜೀವನಕ್ಕೂ ಸಿಂಚನಾ ಪಾತ್ರಕ್ಕೂ ಬಹಳಷ್ಟು ವ್ಯತ್ಯಾಸವಿದ್ದರೂ ಸಹ, ಸೆಟ್ನಲ್ಲಿ ನಾನು ಸಿಂಚನಾ ಪಾತ್ರ ಕೇಳಿದ ನಂತರ ಬೇರೆ ಯಾವುದನ್ನೂ ಯೋಚನೆ ಮಾಡುವುದಿಲ್ಲ. ಸಿಂಚನಾ ಕರ್ಣನ ಅತ್ತೆ ಮಗಳು. ಚಿಕ್ಕಂದಿನಿಂದಲೂ ಸಿಂಚನಾ ಕರ್ಣನನ್ನು ತುಂಬಾ ಪ್ರೀತಿಸಿದ್ದಳು. ಆದರೆ ಕರ್ಣ ಸಾಹಿತ್ಯಗಳನ್ನು ಪ್ರೀತಿಸಿದ. ಸಿಂಚನಾ ಹಾಗೂ ಸಾಹಿತ್ಯಾ ಇಬ್ಬರು ಬೆಸ್ಟ್ ಫ್ರೆಂಡ್ಸ್. ಇದೀಗ ಕರ್ಣನ ಪ್ರೀತಿ ತನ್ನ ಕಡೆ ಇಲ್ಲ ಎಂದು ಸಿಂಚನಾ ಭಗ್ನ ಪ್ರೇಮಿಯಂತಾಗಿದ್ದಾಳೆ. ಈ ಪಾತ್ರದಲ್ಲಿ ನನಗೆ ನಟನೆಗೆ ಬಹಳಷ್ಟು ಸ್ಕೋಪ್ ಇದೆ. ಹಾಗಾಗಿ ಈ ಪಾತ್ರವನ್ನು ನಾನು ಬಹಳಷ್ಟು ಎಂಜಾಯ್ ಮಾಡುತ್ತಿದ್ದೇನೆ ಎಂದರು.
ನನಗೆ ನಟನೆಯಲ್ಲಿ ಮುಂದುವರಿಯಬೇಕೆಂಬ ಆಸೆ ಹುಟ್ಟಿದೆ. ಬಹಳ ಒಳ್ಳೆಯ ಟೀಮ್ನಲ್ಲಿ ನಾನಿರುವುದರಿಂದ, ಎಲ್ಲರ ಸಹಕಾರ ಹಾಗೂ ಗೈಡೆನ್ಸ್ ನನ್ನ ಜೊತೆ ಇದೆ. ಮುಂದೆ ಇನ್ನೂ ಹಲವು ರೀತಿಯ ಪಾತ್ರಗಳಲ್ಲಿ ನಟಿಸುವ ಆಸೆಯಲ್ಲಿದ್ದೇನೆ. ಸಾಧ್ಯವಾದರೆ ಸಿನಿಮಾ ಕಡೆಗೂ ಹೋಗುವ ಹಂಬಲವಿದೆ. ಇದು ನನ್ನ ಮೊದಲ ಧಾರಾವಾಹಿಯಾದರೂ ನನಗೆ ಬಹಳಷ್ಟು ಕಾನ್ಫಿಡೆನ್ಸ್ ನೀಡಿದ ಈ ಧಾರಾವಾಹಿ ಎಂದಿದ್ದಾರೆ ನಟಿ ಕೀರ್ತನಾ ರಾಜ್.


Click it and Unblock the Notifications











