ಸುದೀಪ್ ಜೊತೆ ಬಿಗ್ಬಾಸ್ ಮನೆಗೆ ಸ್ಪರ್ಧಿಗಳಾಗಿ ಹೋಗೋದು ಯಾರ್ಯಾರು? ಗೆಲ್ಲೋದು ಇವ್ರೇ?
ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿದಿದೆ. ಹನುಮಂತ ಲಮಾಣಿ ಗೆದ್ದು 50 ಲಕ್ಷ ರೂ. ಬಹುಮಾನ ಪಡೆದಿದ್ದಾರೆ. ಇನ್ು ಸುದೀಪ್ ಕೂಡ ಶೋ ನಿರೂಪಣೆಗೆ ಬ್ರೇಕ್ ಹಾಕಿದ್ದಾರೆ. ಮುಂದಿನ ಸೀಸನ್ ಯಾರು ನಿರೂಪಣೆ ಮಾಡುತ್ತಾರೆ? ಎನ್ನುವ ಪ್ರಶ್ನೆ ಎದ್ದಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರ ಹೆಸರು ವೈರಲ್ ಆಗುತ್ತಿದೆ.
ವಿವಿಧ ಕ್ಷೇತ್ರಗಳ 15 ವಿಭಿನ್ನ ಮನಸ್ಥಿತಿಯ ಜನರನ್ನು ಒಂದು ದೊಡ್ಡ ಮನೆಯಲ್ಲಿ ಕೂಡಿ ಹಾಕಿ 100 ದಿನಗಳ ನಡೆಸುವ ಶೋ ಬಿಗ್ಬಾಸ್. ಅವರಿಗೆ ದೈಹಿಕವಾಗಿ, ಮಾನಸಿಕವಾಗಿ ಟಾಸ್ಕ್ಗಳನ್ನು ಕೊಟ್ಟು ಆಟ ಆಡಿಸಲಾಗುತ್ತದೆ. ವಾರಕ್ಕೆ ಒಬ್ಬರು ಎಲಿಮಿನೇಟ್ ಆಗುತ್ತಾರೆ. 100 ದಿನಗಳ ಬಳಿಕಮನೆಯಲ್ಲಿ ಉಳಿದ ಐವರು ಫಿನಾಲೆ ಏರುತ್ತಾರೆ. ವೀಕ್ಷಕರ ಮತಗಳನ್ನು ಆಧರಿಸಿ ಯಾರು ಮನೆ ಉಳಿಯಬೇಕು, ಕೊನೆಗೆ ಯಾರು ವಿನ್ನರ್ ಎಂದು ನಿರ್ಧರಿಸಲಾಗುತ್ತಿದೆ.

ಬಿಗ್ಬಾಸ್ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿದೆ. ಹಿಂದಿಯಲ್ಲಿ ಬಿಟ್ಟರೆ ಕನ್ನಡದಲ್ಲೇ ಹೆಚ್ಚು ಸೀಸನ್ ನಡೆದಿರೋದು. ಹೆಚ್ಚು ಜನಪ್ರಿಯತೆ ಗಳಿಸಿರುವುದು. ಸಲ್ಮಾನ್ ಖಾನ್ಗಿಂತಲೂ ಕಿಚ್ಚ ಚೆನ್ನಾಗಿ ನಿರೂಪಣೆ ಮಾಡಿ ವೀಕ್ಷಕರ ಮನಗೆದ್ದಿದ್ದಾರೆ. ಆದರೆ ಮುಂದಿನ ವರ್ಷದಿಂದ ಅವರನ್ನು ವೀಕ್ಷಕರು ಮಿಸ್ ಮಾಡಿಕೊಳ್ಳಲಿದ್ದಾರೆ. ಇದೆಲ್ಲದರ ನಡುವೆ ಸ್ವತಃ ಸುದೀಪ್ ಬಿಗ್ಬಾಸ್ ಮನೆಗೆ ಸ್ಪರ್ಧಿಗಳಾಗಿ ಹೋದರೆ ಹೇಗೆ? ಈ ಪ್ರಶ್ನೆಗೆ ಸ್ವತಃ ಕಿಚ್ಚ ಉತ್ತರಿಸಿದ್ದಾರೆ.
ಕೆಲ ದಿನಗಳ ಹಿಂದೆ 'ಮಿರ್ಚಿ ಕನ್ನಡ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟ ಕಿಚ್ಚ ಸುದೀಪ್ ಮಾತನಾಡಿದ್ದರು. ಒಂದು ವೇಳೆ ಮುಂದಿನ ಸೀಸನ್ಗೆ ಸುದೀಪ್ ಅವರು ಸ್ಪರ್ಧಿ ಆಗಿ ಹೋದರೆ ಹೇಗೆ? ಎನ್ನುವ ಪ್ರಶ್ನಗೆ ಸುದೀಪ್, ನಾನು ಒಳಗೆ ಹೋದರೆ ಸಹ ಸ್ಪರ್ಧಿಗಳಾಗಿ ಯಾರು ಇರ್ತಾರೆ? ಎಂದು ಹೇಳಿದ್ದಾರೆ. ಆ ನಿರೂಪಕ ಒಬ್ಬೊಬ್ಬರ ಹೆಸರು ಹೇಳುತ್ತಾ ಹೋಗಿದ್ದಾರೆ.

ಫಹಾದ್ ಫಾಸಿಲ್ ಎಂದಾಗ ಸುದೀಪ್ ಓಕೆ ಎಂದಿದ್ದಾರೆ. ಶಿವಣ್ಣ ಎಂದಾಗ "ಅವರಿದ್ದರೆ ನಾವೇ ಗೆಲ್ಲಿಸ್ತೀವಿ. ಅವರು ಕಷ್ಟ ಪಡುವುದು ಬೇಕಿಲ್ಲ ಎಂದಿದ್ದಾರೆ. ಧ್ರುವ ಸರ್ಜಾ ಹೆಸರು ತೆಗೆದುಕೊಂಡಾಗ "ನಾನು ಅವರನ್ನು ಕರೆದು ಹೇಳ್ತೀನಿ ನಾವು ಗೆಲ್ಬೇಕು, ಸುಮ್ನೆ ಸೈಡ್ಗೆ ಬಾ ಅಂತ ಅವ್ರು ಸೈಲೆಂಟ್ ಆಗುತ್ತಾರೆ" ಅಂತ ಸುದೀಪ್ ನಕ್ಕಿದ್ದಾರೆ. ರಮ್ಯಾ ಹೆಸರು ಹೇಳುತ್ತಿದ್ದಂತೆ "ನಾನು ಬಿಗ್ಬಾಸ್ ಮನೆಯ ಒಂದು ಕೀ ಇಟ್ಟುಕೊಂಡಿರುತ್ತೀನಿ. ಯಾಕಂದ್ರೆ ಇಲ್ಲಾ ಅವರು ಓಡಿ ಹೋಗ್ತಾರೆ, ಇಲ್ಲ ನಾನು ಓಡಿಹೋಗ್ತೀನಿ, ಒಂದಂತೂ ನಿಜ ನಾವಿಬ್ಬರು ಒಳ್ಳೆ ಫ್ರೆಂಡ್ಸ್" ಎಂದು ಹೇಳಿದ್ದಾರೆ.
"ಉಪ್ಪಿ ಸರ್ ಇದ್ದರೆ ಬಿಗ್ಬಾಸ್ಗೆ ಕೆಲಸ ಇರಲ್ಲ, ಯಾಕಂದ್ರೆ ಬಿಗ್ಬಾಸ್ ಏನೋ ಹೇಳಿದರೆ ಉಪ್ಪಿ ಸರ್, ಹಾಗಲ್ಲ ಹೀಗೆ ಎನ್ನುತ್ತಾರೆ. ಉಪ್ಪಿ ಸರ್ ಒಳಗೆ ಇದ್ದರೆ ಎಲ್ಲಾ 17 ಸ್ಪರ್ಧಿಗಳು ಕಳಪೆ ಪಟ್ಟಿಯಲ್ಲಿ ಇರುತ್ತಾರೆ" ಎಂದು ಸುದೀಪ್ ತಿಳಿಸಿದ್ದಾರೆ. ಹುಚ್ಚ ವೆಂಕಟ್ ಬಂದರೆ ಹೇಗೆ ಎನ್ನವ ಪ್ರಶ್ನೆಗೆ "ವೆಂಕಟ್ ಅವ್ರು ಬಹಳ ಒಳ್ಳೆ ವ್ಯಕ್ತಿ. ಅವರಿಗೆ ಸಹಾಯ ಬೇಕು, ಅದು ಬಿಟ್ಟರೆ ಒಳ್ಳೆ ವ್ಯಕ್ತಿ, ಕೆಟ್ಟವರಂತೂ ಅಲ್ಲ" ಎಂದು ಸುದೀಪ್ ವಿವರಿಸಿದ್ದಾರೆ.
ಸದ್ಯ ಸುದೀಪ್ ಮಾತನಾಡಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಸುದೀಪ್ ಬಳಿಕ ರಿಷಬ್ ಶೆಟ್ಟಿ, ಗಣೇಶ್, ರಮೇಶ್ ಅರವಿಂದ್ ಶೋ ನಿರೂಪಣೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಅಕ್ಟೋಬರ್ ವೇಳೆಗೆ ಬಿಗ್ಬಾಸ್ ಕನ್ನಡ ಸೀಸನ್ 12 ಆರಂಭವಾಗಲಿದೆ.


Click it and Unblock the Notifications










