BBK 12: ಸುದೀಪ್- ಪ್ರಿಯಾ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಬಿಗ್ಬಾಸ್ ಬಿಗ್ ಸರ್ಪ್ರೈಸ್
ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ 24ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಸುದೀಪ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ಪರದಾಡುತ್ತಿದ್ದ ಸಮಯದಲ್ಲೇ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಇದೀಗ 25 ವರ್ಷಕ್ಕೆ ಅವರ ದಾಂಪತ್ಯ ಜೀವನ ಕಾಲಿಟ್ಟಿದೆ. ಬಿಗ್ಬಾಸ್ ವೇದಿಕೆಯಲ್ಲಿ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆ ನಡೆದಿದೆ.
ಬಿಗ್ಬಾಸ್ 12 ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚನಿಗೆ ಸರ್ಪ್ರೈಸ್ ಕಾದಿತ್ತು. ಸುದೀಪ್ ಅವರನ್ನು ಕೂರಲು ಹೇಳಿ ಪತ್ನಿ ಪ್ರಿಯಾ ಅವರನ್ನು ವೇದಿಕೆಗೆ ಕರೆದು ಬಿಗ್ಬಾಸ್ ಅಚ್ಚರಿ ಮೂಡಿಸಿದ್ದಾರೆ. ಬಳಿಕ ಇಬ್ಬರು ವಿವಾಹ ವಾರ್ಷಿಕೋತ್ಸವ ವಿಚಾರ ನೆನಪಿಸಿದ್ದಾರೆ. ಸುದೀಪ್ ತಂದೆ ಸಂಜೀವ್ ಸೊಸೆಯ ಬಗ್ಗೆ ಮಾತನಾಡಿರುವ ವೀಡಿಯೋ ಪ್ಲೇ ಆಗಿದೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಇದೀಗ ವೈರಲ್ ಆಗುತ್ತಿದೆ.

ಮಾವ ಸಂಜೀವ ಅವರ ಮಾತು ಕೇಳಿ ಪ್ರಿಯಾ ಸುದೀಪ್ ಭಾವುಕರಾಗಿದ್ದಾರೆ. "ಈ ದಿನದ ವಿಶೇಷ ಏನು ಅಂದ್ರೆ, ಕಳೆದ ವರ್ಷ ನನ್ನ ತಾಯಿ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಜೀವಂತವಾಗಿ ಮಾತನಾಡಿದ್ದು ಕೊನೆ ದಿನ" ಎಂದು ಸುದೀಪ್ ತಮ್ಮ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದಾರೆ. 'ನಗೂ ಎಂದಿದೆ ಮಂಜಿನ ಬಿಂದು' ಹಾಡನ್ನು ಪ್ರಿಯಾ ವೇದಿಕೆ ಮೇಲೆ ಹಾಡಿದ್ದಾರೆ.
ಪುಟಾಣಿ ಮಕ್ಕಳು ಗುಲಾಬಿ ಹೂ ತಂದು ಕೊಟ್ಟು ಕ್ಯೂಟ್ ಆಗಿ ಸುದೀಪ್- ಪ್ರಿಯಾ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ. ನಟ ಸುದೀಪ್ ಹಾಗೂ ಪ್ರಿಯಾ ಅಕ್ಟೋಬರ್ 18, 2001ರಂದು ಮದುವೆ ಆಗಿದ್ದರು. ದಂಪತಿಗೆ ಸಾನ್ವಿ ಎಂಬ ಮಗಳು ಇದ್ದಾಳೆ. ಗಾಯಕಿಯಾಗಿ ಆಕೆ ಗಮನ ಸೆಳೆದಿದ್ದು ಚಿತ್ರರಂಗಕ್ಕೆ ಬರುವ ಪ್ರಯತ್ನದಲ್ಲಿದ್ದಾರೆ. ನಟನೆಯ ತರಬೇತಿ ಕೂಡ ಪಡೆಯುತ್ತಿದ್ದಾರೆ.
ಪ್ರಿಯಾ ಸುದೀಪ್ ಈಗ ನಿರ್ಮಾಪಕಿಯಾಗಿಯೂ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಐದಾರು ವರ್ಷ ಸ್ನೇಹಿತರಾಗಿದ್ದವರು ಬಳಿ ಪ್ರೀತಿಸಿ ಮದುವೆ ಆಗಿದ್ದರು. ಪ್ರಿಯಾ ಓದುತ್ತಿದ್ದ ಕಾಲೇಜಿನಲ್ಲಿ ನಾಟಕ ತರಬೇತಿಗೆ ಸುದೀಪ್ ಸೇರಿಕೊಂಡಿದ್ದರು. ಅಲ್ಲೇ ಇಬ್ಬರ ಸ್ನೇಹ ಶುರುವಾಗಿತ್ತು. ಗಗನಸಖಿಯಾಗಿ ಒಂದಷ್ಟು ದಿನ ಕೆಲಸ ಮಾಡಿದ್ದ ಪ್ರಿಯಾ ಬಳಿಕ ಬ್ಯಾಂಕ್ ಉದ್ಯೋಗಿ ಆಗಿದ್ದರು. ಸುದೀಪ್ ಚಿತ್ರರಂಗದಲ್ಲಿ ಅವಕಾಶಗಳ ಹುಡುಕಾಟದಲ್ಲಿದ್ದಾಗ ಪ್ರಿಯಾ ಸಹಾಯ ಮಾಡುತ್ತಿದ್ದರು. ಈ ವಿಚಾರವನ್ನು ಸ್ವತಃ ಕಿಚ್ಚ ಸಾಕಷ್ಟು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಬಿಗ್ಬಾಸ್ 12 ಫಿನಾಲೆ ವಿಚಾರಕ್ಕೆ ಬಂದರೆ ಮೊದಲ ದಿನ(ಅಕ್ಟೋಬರ್ 18) ಇಬ್ಬರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅಶ್ವಿನಿ ಎಸ್. ಎನ್ ಹಾಗೂ ಮಂಜುಭಾಷಿಣಿ ಮನೆಯಿಂದ ಎಲಿಮಿನೇಟ್ ಆಗಿ ಅಚ್ಚರಿ ಮೂಡಿಸಿದ್ದಾರೆ. ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಆರ್ಭಟಕ್ಕೆ ಸುದೀಪ್ ಕ್ಲಾಸ್ ತಗೊಂಡಿದ್ದಾರೆ. ರಕ್ಷಿತಾ ಪರ ಮಾತನಾಡುತ್ತ ಬಂದ ಗಿಲ್ಲಿಗೂ ಸುದೀಪ್ ಚಪ್ಪಾಳೆ ಸಿಕ್ಕಿದೆ.
ಇವತ್ತು(ಅಕ್ಟೋಬರ್ 19) ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೊಸದಾಗಿ ಕೆಲವರು ಬಿಗ್ಬಾಸ್ ಮನೆ ಸೇರುತ್ತಿದ್ದಾರೆ. 'ಕ್ವಾಟ್ಲೆ ಕಿಚನ್' ಶೋ ವಿನ್ನರ್ ರಾಘವೇಂದ್ರ, ನಟಿ ರಿಷಾ ಹಾಗೂ ಸೂರಜ್ ಸಿಂಗ್ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.
ಅಂದಹಾಗೆ ಕಾಕ್ರೋಚ್ ಸುಧಿ ಬಿಗ್ಬಾಸ್ 12ರ ಮಿನಿ ಫಿನಾಲೆ ಗೆದ್ದಿದ್ದಾರೆ. ಅವರಿಗೆ ವಿಶೇಷ ಪವರ್ ಬಳಸುವ ಅವಕಾಶ ಕೂಡ ಸಿಕ್ಕಿತ್ತು. ಇದರಿಂದ ಸುಧಿ ಒಮ್ಮೆ ನಾಮಿನೇಷನ್ನಿಂದ ಸ್ವತಃ ಇಮ್ಯೂನಿಟಿ ಪಡೆಯಬಹುದು. ಅಥವಾ ಬೇರೊಬ್ಬ ಸ್ಪರ್ಧಿಯನ್ನು ಸೇವ್ ಮಾಡುವ ಅವಕಾಶ ಸಿಕ್ಕಿದೆ. ಇದರಿಂದ ಬಿಗ್ಬಾಸ್ ಮನೆಯಲ್ಲಿ ಸುಧಿ ಸ್ಥಾನ ಮತ್ತಷ್ಟು ಭದ್ರವಾದಂತಾಗಿದೆ.


Click it and Unblock the Notifications











