ದೂರು ಪ್ರತಿದೂರು ; ಹಣದ ಮುಂದೆ ಸಂಬಂಧಕ್ಕೆ ಇಲ್ಲ ಬೆಲೆ-ರಾಧಾರಮಣ ಕಾವ್ಯ ಗೌಡ ಮನೆಯಲ್ಲಿ ರಂಪ-ರಾಮಾಯಣ
ಹಣ ಎಂದರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ಹಣದ ಮುಂದೆ ಸಂಬಂಧಕ್ಕೆ ಬೆಲೆ ಇಲ್ಲ. ಪ್ರೀತಿ .. ನಂಬಿಕೆ.. ವಿಶ್ವಾಸ .. ಗೌರವ.. ಕೌಟುಂಬಿಕ ಮೌಲ್ಯಗಳಿಗಿಂತ ಈಗ ಬ್ಯಾಂಕ್ ಬ್ಯಾಲೆನ್ಸ್ ಮುಖ್ಯ. ರಕ್ತ ಸಂಬಂಧಕ್ಕಿಂತ ಆಸ್ತಿ-ಪಾಸ್ತಿ ಮುಖ್ಯ. ಆಸ್ತಿಗೋಸ್ಕರ.. ಒಂದು ಅರ್ಧ ಸೈಟ್ ಗೋಸ್ಕರ.. ಮನೆಯಲ್ಲಿಯೇ ಬಿರುಕು ಮೂಡುತ್ತೆ. ವೈರತ್ವ ಬೆಳೆಯುತ್ತೆ.
ತಂದೆ -ಮಗ ಇರಬಹುದು.. ಅತ್ತೆ-ಸೊಸೆ ಇರಬಹುದು.. ಗಂಡ-ಹೆಂಡತಿ ಇರಬಹುದು.. ಅಕ್ಕ-ತಮ್ಮ ಅಥವಾ ಅಣ್ಣ ತಂಗಿಯೇ ಆಗಿರಬಹುದು. ಹಣದ ಮುಂದೆ ಸಂಬಂಧಗಳು ಕಳಚಿ ಬೀಳುತ್ತವೆ. ಹಣ ಮತ್ತು ಆಸ್ತಿಯ ಮೇಲಿನ ವ್ಯಾಮೋಹದಿಂದ ಸಂಬಂಧಗಳು ಮಣ್ಣು ಪಾಲಾಗುತ್ತವೆ. ಮನೆಯ ಘನತೆ ಮೂರು ಕಾಸಿಗೆ ಹರಾಜು ಆಗುತ್ತೆ. ಇದಕ್ಕೆ ಕಾವ್ಯ ಗೌಡ ಅವರ ಪ್ರಕರಣ ಸದ್ಯದ ತಾಜಾ ಉದಾಹರಣೆ.

ಹೌದು, ಕಾವ್ಯ ಗೌಡ.. ಕನ್ನಡ ಕಿರುತೆರೆಯ ಚೆಲುವೆ. ''ಮೀರಾ ಮಾಧವ''.. ''ಗಾಂಧಾರಿ''.. ''ರಾಧಾ ರಮಣ''.. ಇವರ ಪ್ರಖ್ಯಾತ ಧಾರಾವಾಹಿಗಳು. 2021ರಲ್ಲಿ ಸೋಮಶೇಖರ್ ಅವರನ್ನು ಮದುವೆಯಾದ ಕಾವ್ಯ ಗೌಡ ಸದ್ಯ ಕಿರುತೆರೆಯಿಂದ ಅಂತರ ಕಾಪಾಡಿಕೊಂಡಿದ್ದಾರೆ. ಹೀಗಿರುವಾಗ ಇವರ ಮನೆಯ ಜಗಳ ಬೀದಿಗೆ ಬಂದಿದೆ. ದೂರು-ಪ್ರತಿ ದೂರು ದಾಖಲಾಗಿದೆ.
ಸೋಮಶೇಖರ್ ಅವರ ಅಣ್ಣ ನಂದೀಶ್ ಅವರ ಪತ್ನಿ ಪ್ರೇಮಾ ಮತ್ತು ಅವರ ತಂದೆ ರವಿಕುಮಾರ್ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ, ನನ್ನ ಗಂಡ ಸೋಮಶೇಖರ್ ಅವರ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡುವ ಯತ್ನ ಮಾಡಿದ್ದಾರೆ, ನನ್ನ ಮೇಲೆ ಕೂಡ ಹಲ್ಲೆ ಮಾಡಿ ನನ್ನ ಖಾಸಗಿ ಭಾಗಕ್ಕೆ ಒದ್ದಿದ್ದಾರೆ, ಅ*ತ್ಯಾಚಾರ ಮಾಡುವ ಬೆದರಿಕೆಯನ್ನು ಕೂಡ ಹಾಕಿದ್ದಾರೆ, ಎಂದು ಕಾವ್ಯ ಗೌಡ ದೂರು ಸಲ್ಲಿಸಿದರೆ, ನಮ್ಮ ಮೇಲೆ ಸೋಮಶೇಖರ್ ಹಲ್ಲೆ ಮಾಡಿದ್ದಾರೆ, ಇದೆಲ್ಲ ಆಸ್ತಿಗೋಸ್ಕರ ನಡೆಯುತ್ತಿರುವ ರಂಪ-ರಾಮಾಯಣ, ನನ್ನ ಮಗಳನ್ನು ಆ ಮನೆಯಿಂದ ಹೊರಗಡೆ ಹಾಕುವುದೇ ಅವರ ಉದ್ದೇಶ ಎಂದು ಪ್ರೇಮಾ ಅವರ ತಂದೆ ರವಿಕುಮಾರ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸೋಮಶೇಖರ್ ಅವರ ವಿರುದ್ಧ ಅವರ ಸ್ವಂತ ಅಣ್ಣ ನಂದೀಶ್ ಕೂಡ ದೂರು ದಾಖಲಿಸಿದ್ದಾರೆ.

ನನಗೆ ರಾಜಕೀಯದಲ್ಲಿ ಎಲ್ಲರೂ ಗೊತ್ತು. ನೂರು ಜನರ ಮುಂದೆ ಅ*ತ್ಯಾಚಾರ ಮಾಡಿ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನನ್ನ ರೇ*ಪ್ ಮಾಡೋದಕ್ಕೆ ಅವರು ಯಾರು? ರೇಪ್ ಅಂದ್ರೆ ಅಷ್ಟು ಸುಲಭ ಅಂದ್ಕೊಂಡು ಬಿಟ್ಟಿದ್ದಾರಾ. ಕಾನೂನು ಅಷ್ಟು ಸುಲಭವಾಗಿದ್ಯಾ..? ಎಂದು ಕಾವ್ಯ ಗೌಡ ಮಾಧ್ಯಮದವರ ಎದುರು ಗುಡುಗಿದರೆ ನನ್ನ ಅಳಿಯನನ್ನು ಕುಳ್ಳ ಎಂದು ಕಾವ್ಯಾ ಕರೆದಿದ್ದಾರೆ. ಸುಖಾ ಸುಮ್ಮನೆ ಕೆಣಕಿದ್ದಾರೆ. ಜನವರಿ 26 ರಂದು ಮಧ್ಯಾಹ್ನ ಮನೆಯಲ್ಲಿ ಪ್ರೇಮಾ, ನಂದೀಶ್ ಊಟ ಮಾಡುತ್ತಿದ್ದರು. ಈ ವೇಳೆ ಇದು ನಮ್ಮ ಮನೆ . ನೀವು ಹೊರಗೆ ಹೋಗಿ ಎಂದು ಕಾವ್ಯ ಹೇಳಿದ್ದಾರೆ ಎಂದು ಪ್ರೇಮಾ ಅವರ ತಂದೆ ರವಿಕುಮಾರ್ ಹೇಳಿದ್ದಾರೆ. ನನ್ನ ತಂದೆ ರವಿಕುಮಾರ್ಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ, ನನ್ನ ಸಹೋದರಿ ಕಸ್ತೂರಿ ಮೇಲೆ ಕಾವ್ಯ ಹಾಗೂ ಸಂಬಂಧಿಕರು ಹಲ್ಲೆ ಮಾಡಿದ್ದಾರೆ, ಕಾವ್ಯ ಸಹೋದರಿ ಭವ್ಯಾ ನನ್ನನ್ನು ಮತ್ತೆ ನನ್ನ ಗಂಡ ನಂದೀಶ್ ಅವರನ್ನು ಚಪ್ಪಲಿಯಿಂದ ಹೊಡೆದಿದ್ದಾರೆ, ಅಲ್ಲದೇ ಮಾಂಗಲ್ಯ ಸರವನ್ನು ಕಿತ್ತು ಹಾಕಿದ್ದಾರೆ ಎಂದು ಕಾವ್ಯಾ ಅವರ ವಾರಗಿತ್ತಿ ಪ್ರೇಮಾ ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಇದರ ನಡುವೆ ಸೋಮಶೇಖರ್ ಅವರ ವಿಡಿಯೋ ಕೂಡ ಒಂದು ವೈರಲ್ ಆಗಿದೆ.
ಒಟ್ನಲ್ಲಿ ಕಾವ್ಯ ಗೌಡ ಅವರ ಮನೆಯ ವಿಚಾರ ಸದ್ಯ ಬೀದಿಗೆ ಬಂದಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲು ಆಗಿದೆ. ಮುಂದೆ ಈ ಪ್ರಕರಣ ಇನ್ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











