twitter
    For Quick Alerts
    ALLOW NOTIFICATIONS  
    For Daily Alerts

    ಗೋವಿಂದಾಯ ನಮಃ ಗಲಾಟೆಗೆ ಕೊನೆಗೂ ಸಿಕ್ತು ಮುಕ್ತಿ!

    By ಶ್ರೀರಾಮ್ ಭಟ್
    |

    ಗೋವಿಂದಾಯ ನಮಃ ಚಿತ್ರದ ಗಲಾಟೆ ಇದೀಗ ಸುಖಾಂತ್ಯ ಕಂಡಿದೆ. ಚಿತ್ರೀಕರಣ ಮುಗಿಯುತ್ತಿದ್ದಂತೆ ಸಣ್ಣದಾಗಿ ಪ್ರಾರಂಭವಾಗಿದ್ದ ಜಗಳ ಬಿಡುಗಡೆಯ ನಂತರವೂ ಮುಂದುವರಿದಿತ್ತು. ಚಿತ್ರದ ಸ್ಯಾಟಲೈಟ್ ಪ್ರಸಾರದ ಹಕ್ಕುಗಳನ್ನು ನಿರ್ಮಾಪಕ ಸುರೇಶ್, ಜೀ ಕನ್ನಡಕ್ಕೆ ಮಾರಾಟ ಮಾಡಿದ್ದರು. ಅದರಂತೆ ಕಳೆದ ಜೂನ್ 30 ರಂದು (30 ಜೂನ್ 2012) ಚಿತ್ರದ ಪ್ರಸಾರಕ್ಕೆ ಜೀ ಕನ್ನಡ ಸಿದ್ಧವಾಗಿತ್ತು. ಆದರೆ ಆಗಿದ್ದೇ ಬೇರೆ.

    'ಚಿತ್ರ ಥೀಯೇಟರಿನಲ್ಲಿ ಇನ್ನೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು 100 ದಿನಗಳ ಸಮೀಪ ಬಂದಿದೆ. ಈಗ ಚಿತ್ರವನ್ನಿ ಟಿವಿಯಲ್ಲಿ ಪ್ರಸಾರ ಮಾಡಿದರೆ ಚಿತ್ರದ ವಿತರಕರಿಗೆ ಭಾರಿ ನಷ್ಟವಾಗುತ್ತದೆ' ಎಂದು ವಿತರಕರು ನ್ಯಾಯಲಯದ ಮೊರೆ ಹೋಗಿದ್ದರು. ವಿತರಕರ ಮೊರೆಗೆ ಸ್ಪಂದಿಸಿದ ಕೋರ್ಟ್, ಜುಲೈ 25 ರವರೆಗೆ ಚಿತ್ರವನ್ನು ಪ್ರಸಾರ ಮಾಡದಂತೆ ಆದೇಶ ಹೊರಡಿಸಿತ್ತು. ಈಗ ಇದೇ ಆಗಸ್ಟ್ 18 ರಂದು (18 ಆಗಸ್ಟ್ 2012, ಸಂಜೆ 5.30ಕ್ಕೆ) ಮತ್ತೆ ಪ್ರಸಾರ ಘೋಷಣೆಯಾಗಿದೆ.

    ಇದೀಗ ಮತ್ತೆ ಪ್ರಸಾರ ಘೋಷಿಸಿರುವ ಜೀ ಕನ್ನಡದ ವಿರುದ್ಧ ಕೋಮಲ್ ಪತ್ನಿ ಅನುಸೂಯಾ, ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. "ಸದ್ಯಕ್ಕೆ ಪ್ರಕರಣ ನ್ಯಾಯಾಲಯದಲ್ಲಿದ್ದು ಇನ್ನೂ ಕೋರ್ಟ್ ಅಂತಿಮ ಆದೇಶ ಹೊರಡಿಸಿಲ್ಲ. ಚಿತ್ರದ ನಿರ್ಮಾಪಕರಾದ ಸುರೇಶ್, ಒಂದು ವರ್ಷದೊಳಗೆ ಪ್ರಸಾರ ಮಾಡಲಾಗುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ.

    ಹೀಗಿರುವಾಗ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಇದೇ ಆಗಸ್ಟ್ 18ರ ಶನಿವಾರ ಝೀ ಟಿವಿ ಚಿತ್ರವನ್ನು ಪ್ರಸಾರ ಮಾಡಲು ಹೊರಟಿದ್ದು ತಪ್ಪು" ಎಂದಿದ್ದರು ಅನುಸೂಯಾ. ಚಿತ್ರ ಬಿಡುಗಡೆ 50 ದಿನಗಳ ನಂತರ ನಿರ್ಮಾಪಕರು ವಿತರಣೆ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ. ಅಷ್ಟೇ ಅಲ್ಲ, ನಾಯಕ ಕೋಮಲ್‌ ಅವರಿಗೆ ಸಂಭಾವನೆ ಬದಲಾಗಿ ವಿತರಣೆ ಹಕ್ಕುಗಳನ್ನು ಸುರೇಶ್ ನೀಡಿದ್ದಾರೆ. ಈಗಲೇ ಟಿವಿಯಲ್ಲಿ ಪ್ರಸಾರವಾದರೆ ವಿತರಕರಿಗೆ ನಷ್ಟವಾಗುತ್ತದೆ ಅನ್ನೋದು ವಾದದ ತಿರುಳು.

    ಅಂದಹಾಗೆ, ವಿತರಣೆ ಹಕ್ಕುಗಳನ್ನು ಪಡೆದುಕೊಂಡಿರುವವರು 'ಸೌಂದರ್ಯ ಲಹರಿ ಕಂಬೈನ್ಸ್' ಮಾಲೀಕರಾಗಿರುವ ಕೋಮಲ್ ಪತ್ನಿ ಅನುಸೂಯಾ. ಟಿವಿಯಲ್ಲಿ ಈಗಲೇ ಚಿತ್ರದ ಪ್ರಸಾರದ ಬಗ್ಗೆ ಬೇಸರ ವ್ಯಕ್ತಪಡಿಸಿ ಅದನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನಂತರ ಜೀ ಕನ್ನಡ ಹಾಗೂ ವಿತರಕರ ಮಧ್ಯೆ ನಡೆದ ಮಾತುಕತೆ ಫಲಪ್ರದವಾಗಿ ದೂರನ್ನು ವಾಪಸ್ ಪಡೆದು ಚಿತ್ರದ ಪ್ರಸಾರಕ್ಕೆ ತಾವು ಒಪ್ಪಿಕೊಂಡಿದ್ದಾಗಿ ಸ್ವತಃ ಕೋಮಲ್ 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

    ಹೀಗಾಗಿ ಗೋವಿಂದಾಯ ನಮಃ ಗಲಾಟೆ ಈಗ ಸುಖಾಂತ್ಯ ಕಂಡಿದೆ. ಘೋಷಣೆಯಂತೆ, ಇದೇ ಶನಿವಾರ (18 ಆಗಸ್ಟ್ 2012) ಸಂಜೆ 5-30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ 'ಗೋವಿಂದಾಯ ನಮಃ' ಚಿತ್ರ ಪ್ರಸಾರವಾಗಲಿದೆ. ಕೆಎ ಸುರೇಶ್ ನಿರ್ಮಾಣದ ಈ ಚಿತ್ರದಲ್ಲಿ ಕೋಮಲ್‌ ನಾಯಕರು. ಪಾರುಲ್ ಯಾದವ್, ರೇಖಾ, ಮಧುಲಿಕಾ ಹಾಗೂ ಅನಾ ಜಾರ್ಜಿಯಾ ನಾಯಕಿಯರು. 'ಪ್ಯಾರ್ಗೆ ಆಗ್ಬಿಟ್ಟೈತೆ' ಹಾಡಿನಿಂದ ಜನಪ್ರಿಯವಾದ ಚಿತ್ರ ಬಾಕ್ಸಾಫೀಸ್ ನಲ್ಲೂ ಗೆದ್ದಿದೆ. ಪವನ್ ಒಡೆಯರ್ ಇದರ ನಿರ್ದೇಶಕರು. (ಒನ್ ಇಂಡಿಯಾ ಕನ್ನಡ)

    English summary
    Komal Movie Govindaya Namaha telecasts on 18th August 2012 at 5.30 PM in Zee Kannada Channel. Now all controversy about the telecast came to an end and telecast confirmed by Actor Komal himself to Oneindia Kannada. 
 
    Friday, August 17, 2012, 9:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X