Krishna Janmashtami 2023: ಕೃಷ್ಣ ಜನ್ಮಾಷ್ಟಮಿಯಂದು ನಾವು ಕಂಡ ಬಾಲಕೃಷ್ಣ, ರಾಧಾ ಕೃಷ್ಣ, ರಾಜಕೃಷ್ಣರನ್ನು ನೆನೆಯೋಣ
ದೇಶದೆಲ್ಲೇಡೆ ಇಂದು (ಸೆಪ್ಟೆಂಬರ್ 6) ಭಗವಾನ್ ಶ್ರೀ ಕೃಷ್ಣನ ಜನ್ಮದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇವರ ಮನೆಗಳಲ್ಲಿ ಮಾತ್ರವಲ್ಲದೆ ಶ್ರೀ ಕೃಷ್ಣನ ನಮ್ಮ ಸಿನಿ ಪರದೆಯ ಮೇಲೂ ರಾರಾಜಿಸಿದ್ದಾರೆ. ಭಗವಾನ್ ಶ್ರೀ ಕೃಷ್ಣನಿಗೆ ಸಂಬಂಧಿಸಿದ ಅನೇಕ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳು ಬಂದಿವೆ. ಇವುಗಳಲ್ಲಿ ಕೃಷ್ಣನ ವಿವಿಧ ರೂಪಗಳನ್ನು ವೀಕ್ಷಕರಿಗೆ ಪರಿಚಯಿಸಲಾಗಿದೆ. ಈ ಜನ್ಮಾಷ್ಟಮಿಯಂದು ಶ್ರೀಕೃಷ್ಣನ ಜೀವನಾಧಾರಿಸಿ ಮಾಡಿದ ಕೆಲವು ಧಾರಾವಾಹಿಗಳನ್ನು ನೆನಪಿಸಿಕೊಳ್ಳೊಣ.
ಬಾಲ ಕೃಷ್ಣನಿಂದ ಹಿಡಿದು ಮಹಾಭಾರತದ ಭೀಕರ ಯುದ್ಧದವರೆಗೆ ವಿಭಿನ್ನ ಕಥೆಗಳು ತೆರೆಯ ಮೇಲೆ ಬಂದಿದೆ. ಈ ಮೂಲಕ ಶ್ರೀಕೃಷ್ಣನ ವಿಭಿನ್ನ ರೂಪಗಳು ವೀಕ್ಷಕರನ್ನು ತಲುಪಿವೆ. ಹಿರಿತೆರೆ ಮತ್ತು ಕಿರುತೆರೆಯಲ್ಲಿಯೂ ಶ್ರೀಕೃಷ್ಣನ ಜೀವನ ಮತ್ತು ಲೀಲೆಗಳನ್ನು ಹಲವು ಬಾರಿ ತೋರಿಸಲಾಗಿದೆ.

ಮಹಾಭಾರತ
'ಮಹಾಭಾರತ' ಭಾರತೀಯ ದೂರದರ್ಶನದ ಅತ್ಯಂತ ಐತಿಹಾಸಿಕ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಧಾರಾವಾಹಿಯು 2 ಅಕ್ಟೋಬರ್ 1988 ರಿಂದ ಪ್ರಸಾರ ಪ್ರಾರಂಭಿಸಿತ್ತು. ಬಿಆರ್ ಚೋಪ್ರಾ ನಿರ್ದೇಶನದ ಮಹಾಭಾರತದ ಕಥೆಯು ಮುಖ್ಯವಾಗಿ ಕೌರವರು ಮತ್ತು ಪಾಂಡವರ ನಡುವಿನ ಯುದ್ಧದ ಸುತ್ತಲಿನ ಘಟನೆಗಳನ್ನು ತೋರಿಸುತ್ತದೆ.
ಈ ಧಾರಾವಾಹಿಯಲ್ಲಿ ಗಮನ ಸೆಳೆದಿದ್ದು ನಿತೀಶ್ ಭಾರದ್ವಾಜ್. ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರತಿ ಮನೆಯಲ್ಲೂ ಜನಪ್ರಿಯರಾದರು. ಧಾರಾವಾಹಿಯ ಒಟ್ಟು 94 ಕಂತುಗಳು ಪ್ರಸಾರವಾಗಿವೆ.
ಶ್ರೀ ಕೃಷ್ಣ
ಶ್ರೀ ಕೃಷ್ಣ ಧಾರಾವಾಹಿಯು ದೂರದರ್ಶನದಲ್ಲಿ 18 ಜುಲೈ 1993 ರಿಂದ ಪ್ರಸಾರವನ್ನು ಪ್ರಾರಂಭಿಸಿತು. ರಮಾನಂದ ಸಾಗರ್ ಅವರು ಭಾಗವತ ಪುರಾಣವನ್ನು ಆಧರಿಸಿ ಈ ಧಾರಾವಾಹಿ ಮಾಡಿದ್ದರು. ಈ ಧಾರಾವಾಹಿಯಲ್ಲಿ ಶ್ರೀಕೃಷ್ಣನ ಜೀವನವನ್ನು ತೆರೆಯ ಮೇಲೆ ಬಹಳ ಉತ್ತಮವಾಗಿ ತೋರಿಸಲಾಗಿದೆ. ಸರ್ವದಮನ್ ಡಿ ಬ್ಯಾನರ್ಜಿ ಶ್ರೀ ಕೃಷ್ಣನ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರು. ಧಾರಾವಾಹಿಯ 221 ಸಂಚಿಕೆಗಳು ಪ್ರಸಾರವಾದವು.

ಜಯ ಶ್ರೀಕೃಷ್ಣ
ಜಯ ಶ್ರೀಕೃಷ್ಣ ಧಾರಾವಾಹಿಯು ಶ್ರೀಕೃಷ್ಣನ ಬಾಲ್ಯದ ಕಥನವನ್ನು ನಮ್ಮ ಮುಂದಿಡುತ್ತದೆ. 21 ಜುಲೈ 2008 ರಿಂದ ಕಲರ್ಸ್ ಗ್ರೂಪ್ ಇದರ ಪ್ರಸಾರವನ್ನು ಪ್ರಾರಂಭಿಸಿತ್ತು. ಬಾಲಗೋಪಾಲನ ಲೀಲೆಗಳು, ಕೀಟಲೆಗಳು, ಸಂಹಾರಸೇರಿದಂತೆ ಯಶೋದೆ, ಗೋಕುಲವನ್ನು ಅದ್ಭುತವಾಗಿ ತೋರಿಸಲಾಗಿತ್ತು.
ಧೃತಿ ಭಾಟಿಯಾ ಈ ಧಾರಾವಾಹಿಯಲ್ಲಿ ಶ್ರೀ ಕೃಷ್ಣನ ಮಗುವಿನ ಪಾತ್ರವನ್ನು ನಿರ್ವಹಿಸಿದ್ದಾರೆ. ತಮ್ಮ ಮುಗ್ಧ ನಟನೆಯಿಂದ ಜನಮನ ಗೆದ್ದಿದ್ದರು. ಧಾರಾವಾಹಿಯ ಒಟ್ಟು 285 ಸಂಚಿಕೆಗಳು ಪ್ರಸಾರವಾಗಿವೆ. ಕೊರೋನಾ ಸಮಯದಲ್ಲಿ ಈ ಧಾರಾವಾಹಿ ಕನ್ನಡದಲ್ಲಿಯೂ ಪ್ರಸಾರವಾಗಿತ್ತು.
ಕೃಷ್ಣ ಕನ್ಹಯ್ಯಾ
SAB TV ಯಲ್ಲಿ 29 ಜೂನ್ 2015 ರಿಂದ ಪ್ರಸಾರವಾದ ಕೃಷ್ಣ ಕನ್ಹಯ್ಯಾ ಧಾರಾವಾಹಿಯಲ್ಲಿ ಶ್ರೀ ಕೃಷ್ಣನು ಇಂದಿನ ಯುಗದಲ್ಲಿ ಭೂಮಿಗೆ ಬಂದು ಜನರಿಗೆ ಗೀತಾ ಜ್ಞಾನವನ್ನು ವಿವರಿಸುತ್ತಿರುವುದನ್ನು ಕಾಣಬಹುದು. ಈ ಕಥೆ ಕಾಲ್ಪನಿಕವಾಗಿದ್ದು, ಗಮಭೀರ ಕಥೆಗೆ ಹಾಸ್ಯದ ಸ್ಪರ್ಶ ನೀಡಲಾಗಿದೆ. ಧಾರಾವಾಹಿಯಲ್ಲಿ ಸಿದ್ಧಾರ್ಥ್ ಅರೋರಾ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದಾರೆ.

ರಾಧಾ ಕೃಷ್ಣ
ಈ ಧಾರಾವಾಹಿಯು 1 ಅಕ್ಟೋಬರ್ 2018 ರಿಂದ 21 ಜನವರಿ 2023 ರವರೆಗೆ ಸ್ಟಾರ್ ಭಾರತ್ ಟಿವಿಯಲ್ಲಿ ಪ್ರಸಾರವಾಯಿತು. ಶ್ರೀ ಕೃಷ್ಣ ಮತ್ತು ರಾಧೆಯ ಪ್ರೇಮ, ವಿರಹವನ್ನು ಅತ್ಯಂತ ಸುಮದರವಾಗಿ ಕಟ್ಟುಕೊಟ್ಟ ಧಾರಾವಾಹಿ ಇದು. 1145 ಸಂಚಿಕೆಗಳ ಧಾರಾವಾಹಿ ಕನ್ನಡದಲ್ಲೂ ಹೆಚ್ಚು ಖ್ಯಾತಿ ಗಳಿಸಿತ್ತು.
ದ್ವಾರಕಾಧೀಶ - ಭಗವಾನ್ ಶ್ರೀ ಕೃಷ್ಣ
ಇಮ್ಯಾಜಿನ್ ಟಿವಿಯಲ್ಲಿ 4 ಜುಲೈ 2011 ರಿಂದ 12 ಏಪ್ರಿಲ್ 2012 ರವರೆಗೆ ಪ್ರಸಾರವಾದ ದ್ವಾರಕಾಧೀಶ - ಭಗವಾನ್ ಶ್ರೀ ಕೃಷ್ಣ ದ್ವಾರಕೆಯ ರಾಜನಾದ ನಂತರದ ಶ್ರೀಕೃಷ್ಣನ ಕಥೆಯನ್ನು ವೀಕ್ಷಕರಿಗೆ ತಲುಪಿಸುತ್ತದೆ. ರಾಜಕುಮಾರ ಕೃಷ್ಣನ ವಿರುದ್ಧ ಈಗಾಗಲೇ 16 ಯುದ್ಧಗಳಲ್ಲಿ ಸೋತಿರುವ ಮಗಧದ ರಾಜ ಜರಾಸಂಧನ ಮಿತ್ರನಾದ ಕಾಲಯವನ ಜೊತೆಗೆ ಕೃಷ್ಣ ಯುದ್ಧ ಮಾಡುವುದರೊಂದಿಗೆ ಧಾರಾವಾಹಿ ಪ್ರಾರಂಭವಾಗುತ್ತದೆ.


Click it and Unblock the Notifications










