Lakshmi Baramma: ಲಕ್ಷ್ಮಿ-ವೈಷ್ಣವ್ ಪಾಪಾ.. ಕಾವೇರಿ ಸುಳ್ಳಿ.. ಕೀರ್ತಿಯದ್ದು ನಾಟಕ ಅಂತಿರೋ ನೆಟ್ಟಿಗರು!
ವೈಷ್ಣವ್ ಹಾಗೋ ಹೀಗೋ ಲಕ್ಷ್ಮೀಯ ದೊಡ್ಡಪ್ಪನನ್ನು ಸಮಾಧಾನ ಮಾಡಿ ಕಳುಹಿಸಿಬಿಟ್ಟ. ಇರುವ ಸತ್ಯವನ್ನೆಲ್ಲಾ ಹೇಳಿ, ಈಗ ಹಳೆ ಪ್ರೀತಿಯೆಲ್ಲಾ ಬರೀ ನೆನಪು ಅಂತ ಹೇಳಿ ಸಾಗಾಕಿ ಬಿಟ್ಟಿದ್ದಾನೆ. ಈಗ ನಿಜವಾಗಲು ಧೈರ್ಯ ಮಾಡಬೇಕಿರುವುದು ಲಕ್ಷ್ಮೀ ಮುಂದೆ ನಿಲ್ಲುವುದಕ್ಕೆ. ಲಕ್ಷ್ಮೀ ತಲೆಯಲ್ಲಿ ಓಡುತ್ತಿರುವ ಸಾವಿರ ಪ್ರಶ್ನೆಗಳಿಗೆ ಉತ್ತರ ಕೊಡುವ ಮನಸ್ಸು ವೈಷ್ಣವ್ ಮಾಡಬೇಕಿದೆ.
ವೈಷ್ಣವ್, ಕೀರ್ತಿಯನ್ನು ಅದೆಷ್ಟು ಸ್ಟ್ರಾಂಗ್ ಆಗಿ ಪ್ರೀತಿ ಮಾಡ್ತಾ ಇದ್ದ ಅಂದ್ರೆ, ಕಡೆ ಗಳಿಗೆಯಲ್ಲೂ ತಾಳಿ ತಂದಿದ್ದ, ಇಬ್ಬರು ಮದುವೆಯಾಗೋಣಾ ಬಾ ಅಂದಿದ್ದ. ಅಂದು ವೈಷ್ಣವ್ ಪ್ರೀತಿಗಿಂತ, ಕಾವೇರಿ ಮಾತಿನ ಮೇಲೆಯೇ ಕೀರ್ತಿಗೆ ಅಪಾರವಾದ ನಂಬಿಕೆ ಇತ್ತು. ಹೀಗಾಗಿಯೇ ಅಂದು ವೈಷ್ಣವ್ನನ್ನು ದೂರ ಮಾಡಿದ್ದಳು.

ಕೀರ್ತಿಯಿಂದ ಕಾವೇರಿ ಲಾಕ್
ಕಾವೇರಿ ಈ ಬಾರಿ ಕೀರ್ತಿಗೆ ಪಾಠ ಕಲಿಸಲೇಬೇಕೆಂದುಕೊಂಡು ಮನೆಗೆ ಬಂದಳು. ಯಾವ ರೇಂಜಿಗೆ ಅಂದ್ರೆ ಕೀರ್ತಿಗೆ ನೇರವಾಗಿಯೇ ಹೇಳಿದಳು, ನಿನ್ನ ಮಗ ನಿನಗೆ ಸಿಗಲ್ಲ. ಅದೇನು ಮಾಡಿಕೊಳ್ಳುತ್ತಿಯೋ ಮಾಡಿಕೋ ಎನ್ನುವ ಲೆವೆಲ್ಗೆ ಹೋಗಿದ್ದಳು. ಆದರೆ, ಕೀರ್ತಿ ಕೇಳಿಸಿದ ಒಂದೇ ಒಂದು ಆಡಿಯೋಗೆ ಕಾವೇರಿಯ ಧೈರ್ಯವೆಲ್ಲಾ ಠುಸ್ ಪಟಾಕಿ ಮಾಡಿತ್ತು. ರೋಷಾವೇಷವೆಲ್ಲ ನೆಲಸಮವಾಗಿತ್ತು. ಮತ್ತೆ ಕೀರ್ತಿಯ ಬಲೆಗೆ ಸಿಲುಕಿದ್ದಳು.
ವೈಷ್ಣವ್ ಜಾತಕ ತೋರಿಸಿದ ಕೀರ್ತಿ
ಕೀರ್ತಿ ಸಿಕ್ಕಾಪಟ್ಟೆ ಆತುರದಲ್ಲಿದ್ದಾಳೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ವೈಷ್ಣವ್ ಜೊತೆಗೆ ಮದುವೆಯಾಗಬೇಕೆಂಬ ಬಯಕೆ ಅವಳದ್ದು. ಈಗ ವೈಷ್ಣವ್ ಮನಸ್ಸಲ್ಲಿ ಜಾಗ ಖಾಲಿ ಇಲ್ಲ ಅನ್ನೋದು ಗೊತ್ತಿದೆ. ಆದರೂ, ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಹೇಗಾದರೂ ಮಾಡಿ ವೈಷ್ಣವ್ನ ಪಡೆಯಬೇಕು. ವೈಷ್ಣವ್ ನನ್ನವನು ಎಂಬ ಹಠಕ್ಕೆ ಬಿದ್ದಿರುವ ಕೀರ್ತಿ, ಜಾತಕ ತೋರಿಸಲು ಜ್ಯೋತಿಷ್ಯರನ್ನೇ ಮನೆಗೆ ಕರೆಸಿದ್ದಾಳೆ. ಮುತುವರ್ಜಿವಹಿಸಿ, ಎಲ್ಲಾ ಕೆಲಸಗಳನ್ನು ಮುಂದೆ ನಿಂತು ಮಾಡುತ್ತಿದ್ದಾಳೆ.

ಲಕ್ಷ್ಮೀಯಿಂದ ವೈಷ್ಣವ್ ಜೀವನ ಬದಲಾವಣೆ
ಕಾವೇರಿ ಬಳಿ ವೈಷ್ಣವ್ ಜಾತಕವನ್ನು ತರಿಸಿಯೇ ಬಿಟ್ಟಳು. ಕಾವೇರಿ ತುಟಿಕ್ ಪಿಟಿಕ್ ಎನ್ನುವುದಕ್ಕೆ ಸಾಧ್ಯವಾಗದಂತ ಆಡಿಯೋವೊಂದನ್ನು ಕೀರ್ತಿ ತನ್ನ ಬಳಿ ಇಟ್ಟುಕೊಂಡಿದ್ದಾಳೆ. ಅದಕ್ಕಾಗಿಯೇ ಈಗ ಕಾವೇರಿ ಮಗನ ಜಾತಕವನ್ನು ಹಿಡಿದುಕೊಂಡು ಬಂದಿದ್ದಾಳೆ. ಜ್ಯೋತಿಷ್ಯರ ಬಳಿ ಕೀರ್ತಿಯೇ ಅ ಜಾತಕ ಕೊಟ್ಟು ತೋರಿಸಿದ್ದಾಳೆ. ಜ್ಯೋತಿಷ್ಯರು ಯೋಚನೆ ಮಾಡಿದ್ದನ್ನು ನೋಡಿ, ಕೀರ್ತಿಗೆ ಆತಂಕ, ಕಾವೇರಿಗೆ ಕೊಂಚ ಸಮಧಾನ. ಆದರೆ ಜ್ಯೋತಿಷಿಗಳು, ಆ ಹುಡುಗಿಯಿಂದ ಮಗ ನೆಮ್ಮದಿಯಗಿರುತ್ತಾನೆ ಎಂದಿದ್ದಾರೆ. ಅವರೇಳಿದ್ದು ಲಕ್ಷ್ಮೀ ಬಗ್ಗೆ. ಆದರೆ ಕೀರ್ತಿ ಮಾತ್ರ ತಾನೇ ಎಂದು ತಿಳಿದುಕೊಂಡಿದ್ದಾನೆ.
ಸತ್ಯ ಹೇಳಿದರೆ ನೋವಾಗುತ್ತೆ
ವೈಷ್ಣವ್ ಬೇಗ ಮನೆಗೆ ಬಂದಿದ್ದಾನೆ. ಲಕ್ಷ್ಮೀಯನ್ನು ಸಮಾಧಾನ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾನೆ. ಲಕ್ಷ್ಮೀ ತನ್ನ ಮನಸ್ಸಲ್ಲಿದ್ದ ಅನುಮಾನಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾಳೆ. 'ನಾನು ಫ್ರೆಂಡ್ ಅಂದುಕೊಂಡಿರುವ ಕೀರ್ತಿಯೇ ನಿಮ್ಮ ಹಳೆ ಪ್ರೀತಿನಾ?' ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ತಕ್ಷಣಕ್ಕೆ ಉತ್ತರಿಸಲು ಆಗದೆ ಇರುವ ಮನಸ್ಥಿತಿಯಲ್ಲಿ ವೈಷ್ಣವ್ ಇದ್ದಾನೆ. ವೈಷ್ಣವ್ಗೆ ಈ ಪ್ರಶ್ನೆ ಅದೆಷ್ಟರ ಮಟ್ಟಿಗೆ ಕಾಡಿದೆ ಅಂದ್ರೆ, ಕೀರ್ತಿ ಇತ್ತೀಚೆಗೆ ಮತ್ತೆ ನಿನ್ನ ಪ್ರೀತಿ ಬೇಕು ಅಂತ ಬಯಸುತ್ತಿರುವ ನೆನಪುಗಳು ಕಾಡಿದೆ. ಲಕ್ಷ್ಮೀ ಈ ಪ್ರಶ್ನೆಯನ್ನು ಬಹಳ ನೋವಿನಿಂದ ಕೇಳಿದ್ದಾಳೆ. ವೈಷ್ಣವ್ಗೆ ಸತ್ಯ ಹೇಳುವ ಧೈರ್ಯ ಬರುವುದು ಕಷ್ಟ. ಹೀಗಾಗಿ ಮತ್ತೆ ಸುಳ್ಳಿನ ಮಾಲೆ ಪೋಣಿಸುತ್ತಾನೇನೋ..? ಮುಂದಿನ ಸಂಚಿಕೆಯಲ್ಲಿ ಗೊತ್ತಾಗುತ್ತೆ.


Click it and Unblock the Notifications











