Lakshmibaramma: ಕೀರ್ತಿ ವಿರುದ್ಧ ರೊಚ್ವಿಗೆದ್ದ ಕಾವೇರಿ.. ವೈಷ್ಣವ್ ಕಂಡರೆ ಏನಾಗುತ್ತೋ..?
ಕಾವೇರಿಗೆ ಮಗನ ಮೇಲೆ ಸಿಕ್ಕಾಪಟ್ಟೆ ಮೋಹ. ಮಗ ಎಲ್ಲಿಯೇ ಹೋದರೂ ತನಗೇ ಹೇಳಿಯೇ ಹೋಗಬೇಕು. ಏನೇ ಬೇಕು ಅಂದ್ರು ಅಮ್ಮನನ್ನೇ ಕೇಳಬೇಕು ಎಂಬ ಆಸೆ. ಅದಕ್ಕಾಗಿಯೇ ಮಗ ಪ್ರೀತಿಸುತ್ತಿದ್ದವಳನ್ನು ದೂರ ಮಾಡಿ, ಲಕ್ಷ್ಮೀಯನ್ನು ಮನೆ ಸೊಸೆಯಾಗಿ ತಂದಳು. ಆದರೆ ಈಗ ಲಕ್ಷ್ಮೀ ಮತ್ತು ವೈಷ್ಣವ್ ಹೊಂದಾಣಿಕೆ ಕಂಡು ಕಾವೇರಿಗೆ ತಡೆಯುವುದಕ್ಕೆ ಆಗುತ್ತಿಲ್ಲ.
ಒಂದು ಕಡೆ ಲಕ್ಷ್ಮೀ -ವೈಷ್ಣವ್ ಹತ್ತಿರವಾಗುತ್ತಿರುವುದನ್ನು ಸಹಿಸದ ಕಾವೇರಿಗೆ ಕೀರ್ತಿಯ ಕಾಟ ಬೇರೆ. ಎಲ್ಲಿಯೇ ಹೋದರೂ, ಎಲ್ಲಿಯೇ ಬಂದರೂ ಹಿಂಬಾಲಿಸಿಕೊಂಡು ಬರುತ್ತಾಳೆ. ಮನೆಗೆ ಬರುತ್ತಾಳೆ, ಮೆಸೇಜ್ ಮಾಡ್ತಾಳೆ. ವೈಷ್ಣವ್-ಲಕ್ಷ್ಮೀ ಡಿವೋರ್ಸ್ ಯಾವಾಗ ಅಂತ ಕೇಳ್ತಾಳೆ. ಇದು ಕಾವೇರಿಯ ಪಿತ್ತ ನೆತ್ತಿಗೇರುವಂತೆ ಮಾಡಿದ್ರೆ, ಆ ಕಡೆ ಮತ್ತೊಂದು ಕಾವೇರಿ ಕೆಂಡಾಮಂಡಲವಾಗುವ ವಿಡಿಯೋ ಲೀಕ್ ಆಗಿದೆ.

ಕೀರ್ತಿಗೆ ಹಿಗ್ಗಾಮುಗ್ಗಾ ಜಾಡಿಸಿದ ಕಾವೇರಿ
ಸುಪ್ರೀತಾ ಕೊಟ್ಟ ಶಾಕ್ಗೆ ಲಕ್ಷ್ಮೀ ಹಾಗೂ ವೈಷ್ಣವ್ ಜಾತಕ ಹಿಡಿದು ಕಾವೇರಿ ಜ್ಯೋತಿಷಿ ಬಳಿ ಓಡಿದ್ದಾಳೆ. ಅಲ್ಲಿ ಜ್ಯೋತಿಷಿಗಳು ಹೇಳಿದ ಮಾತಿಗೆ ಆತಂಕಗೊಂಡಿದ್ದಳು. ಅದಕ್ಕೆ ಇನ್ನಷ್ಟು ಕೋಪ ತರಿಸುವ ಕೆಲಸವನ್ನು ಕೀರ್ತಿ ಮಾಡಿದ್ದಾಳೆ. ಕಾವೇರಿಯನ್ನೇ ಹಿಂಬಾಲಿಸಿಕೊಂಡು ಬಂದ ಕೀರ್ತಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾಳೆ. "ತಾಳ್ಮೆಯಿಂದ ಇದ್ದರೆ ಎಲ್ಲಾ ಕೆಲಸ ಆಗುತ್ತೆ. ಇಲ್ಲ ಅಂದ್ರೆ ವೈಷ್ಣವ್ನನ್ನು ಕಳೆದುಕೊಳ್ಳಬೇಕಾಗುತ್ತದೆ. ನಂಗೆ ನಿನ್ನ ಕಿರಿಕಿರಿ ತಡೆದುಕೊಳ್ಳುವುದಕ್ಕೆ ಆಗಲ್ಲ" ಎಂದು ಕಾರು ಹತ್ತಿ ಹೊರಟೆ ಹೋಗಿದ್ದಾಳೆ.
ಗಂಡ ಹೆಂಡತಿಯಿಂದ ವ್ಯಾಪಾರ ಶುರು
ಆ ಕಡೆ ಅಳಿಮೈತನಕ್ಕೆ ಹೋಗಿರುವ ವೈಷ್ಣವ್ ಅಮ್ಮನನ್ನು ಮರೆತು ಅಲ್ಲಿನ ಜೀವನವನ್ನು ಎಂಜಾಯ್ ಮಾಡುತ್ತಿದ್ದಾನೆ. ಹೆಂಡತಿಯ ಆಸೆಗೆ ಅಡ್ಡಿಯಾಗದೆ, ಅದು ಸಣ್ಣಪುಟ್ಟ ಕೆಲಸವಾದರೂ ಸರಿ ಅದನ್ನು ಖುಷಿ ಖುಷಿಯಾಗಿ ಎಂಜಾಯ್ ಮಾಡುತ್ತಾನೆ. ಈಗ ಹೆಂಡತಿ ಜೊತೆಗೆ ಕಿರಾಣಿ ಅಂಗಡಿಯಲ್ಲಿ ನಿಂತು ವ್ಯಾಪಾರ ಬೇರೆ ಶುರು ಮಾಡಿದ್ದಾನೆ. ಲಕ್ಷ್ಮೀ ಈ ಹಿಂದೆಯೇ ಕನಸು ಕಂಡಿದ್ದಳು. ಗಂಡ ಹೆಂಡತಿ ಹೀಗೆ ಇರಬೇಕು ಅಂತ. ಅದು ವೈಷ್ಣವ್ ಕಡೆಯಿಂದ ನೆರವೇರುತ್ತಿದೆ.

ವೈಷ್ಣವ್ ನೋಡಲು ಬಂದ ಅಭಿಮಾನಿಗಳು
ವೈಷ್ಣವ್ ಹೇಳಿ ಕೇಳಿ ದೊಡ್ಡ ಸಿಂಗರ್. ಅವನನ್ನು ನೋಡುವುದಕ್ಕೆ ಸಿಕ್ಕರೆ ಜನ ಇರುವೆಯಂತೆ ಮುತ್ತಿಕೊಳ್ಳುತ್ತಾರೆ. ಈಗ ಅದೇ ಆಗಿದ್ದು. ವೈಷ್ಣವ್ ಅಂಗಡಿಯಲ್ಲಿ ಇದ್ದದ್ದು ಕಂಡು ಜನರೆಲ್ಲಾ ಗುಂಪು ಗುಂಪಾಗಿ ಬರುತ್ತಿದ್ದಾರೆ. ವ್ಯಾಪಾರ ಮಾಡುವುದರ ಜೊತೆಗೆ, ವೈಷ್ಣವ್ ಜೊತೆಗೆ ಫೋಟೋ ತೆಗೆಸಿಕೊಳ್ಳಬಹುದು ಎಂಬ ಆಸೆಯಿಂದ. ಹೀಗಾಗಿ ವ್ಯಾಪಾರ ಅಂದುಕೊಳ್ಳುವುದಕ್ಕಿಂತ ಜಾಸ್ತಿಯೇ ಆಗುತ್ತಿದೆ. ಈ ಕಡೆ ಪೂಜಾ ಮತ್ತೆ ಸುನಂದಾ ಮಾತ್ರ ಮನೆ ಹತ್ರ ಹೋಗಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.
ಕಾವೇರಿಗೆ ಗೊತ್ತಾದರೆ ಲಕ್ಷ್ಮೀ ಕಥೆ ಅಷ್ಟೇ..!
ಪೂಜಾಳಿಗೆ ಜನ ಅಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದು ಕಂಡು, ವೈಷ್ಣವ್ ವ್ಯಾಪಾರ ಮಾಡಿದ್ದನ್ನು ಕಂಡು ಸುಮ್ಮನೆ ಇರಲಾರದೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾಳೆ. ಅದು ಊರವರಿಗೆಲ್ಲಾ ತಿಳಿದಿದ್ದು ಅಲ್ಲದೆ, ವೈಷ್ಣವ್ ಮನೆಗೂ ತಲುಪಿದೆ. ವಿಧಿ ಅದನ್ನು ಕಂಡು ಅತ್ತೆ ಸುಪ್ರೀತಾಗೆ ತೋರಿಸಿದ್ದಾಳೆ. ಆ ಕಡೆ ಸುಪ್ರೀತಾಳ ಮಗ ಮತ್ತು ಶಾಂತಾ ಅದನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಅದೇ ಸಮಯಕ್ಕೆ ಕಾವೇರಿ ಕೂಡ ಮನೆಗೆ ಬಂದಿದ್ದಾಳೆ. ಮೊದಲೇ ಕೀರ್ತಿಯ ತಲೆ ನೋವಿನಿಂದ ಬಂದ ಕಾವೇರಿಗೆ ಸುಪ್ರೀತಾ ಹಾಗೂ ವಿಧಿಯ ಒಗಟು ಮಾತು ಇನ್ನಷ್ಟು ಪಿತ್ತ ನೆತ್ತಿಗೇರಿಸಿದೆ. ಇನ್ನು ವೈಷ್ಣವ್ ಕಿರಾಣಿ ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡಿದ್ದನ್ನು ಕಂಡರೆ ಏನಾಗಬಹುದು..?


Click it and Unblock the Notifications











